10 ವರ್ಷಗಳ ಬಳಿಕ 107 ಅಡಿ ಗಡಿ ದಾಟಿದ ವಾಣಿವಿಲಾಸ ಸಾಗರ

author img

By

Published : Sep 15, 2021, 11:27 AM IST

Vani Vilasa sagara

ಗುಡ್ಡ, ಬೆಟ್ಟಗಳ ಮಧ್ಯೆ ಸ್ವಾಭಾವಿಕವಾಗಿ ನಿರ್ಮಿಸಿರುವ ವಾಣಿವಿಲಾಸ ಸಾಗರಕ್ಕೆ ಈ ಬಾರಿ ಹೆಚ್ಚಿನ ನೀರು ಹರಿದು ಬಂದಿರುವುದರಿಂದ ನೋಡಲು ನಯನ ಮನೋಹರವಾಗಿದ್ದು, ಹತ್ತು ವರ್ಷಗಳ ಬಳಿಕ ನೀರಿನ ಮಟ್ಟ 107 ಅಡಿಗಳ ಗಡಿ ದಾಟಿದೆ.

ಚಿತ್ರದುರ್ಗ: ಬಯಲು ಸೀಮೆಯ ಜೀವನಾಡಿ ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ವಾಣಿವಿಲಾಸ ಸಾಗರಕ್ಕೆ ಈ ಬಾರಿ ಅಧಿಕ ಪ್ರಮಾಣದ ನೀರು ಹರಿದು ಬಂದಿದ್ದು, ಹತ್ತು ವರ್ಷಗಳ ಬಳಿಕ ನೀರಿನ ಮಟ್ಟ 107 ಅಡಿಗಳ ಗಡಿ ದಾಟಿರುವುದು ವಿಶೇಷ.

ಚಿಕ್ಕಮಗಳೂರು ಜಿಲ್ಲೆಯ ಬಾಬಬುಡನ್ ಗಿರಿ ಸುತ್ತಮುತ್ತಲಿನ, ಕಡೂರು, ಬೀರೂರು, ಅಜ್ಜಂಪುರ, ತೆರೀಕೆರೆ, ಹೊಸದುರ್ಗ ತಾಲೂಕಿನಾದ್ಯಂತ ಸುರಿದ ಮಳೆಗೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಅಜ್ಜಂಪುರ ಸಮೀಪದ ಪಂಪ್ ಹೌಸ್​ನಿಂದ ನಿತ್ಯ ನೀರನ್ನು ಲಿಫ್ಟ್ ಮಾಡುತ್ತಿರುವುದರಿಂದಾಗಿ ಅಲ್ಲಿನ ಬಹುತೇಕ ಕೆರೆ ಕಟ್ಟೆ, ಬ್ಯಾರೇಜ್​ಗಳು ಭರ್ತಿಯಾಗಿದ್ದು, ವಾಣಿವಿಲಾಸ ಸಾಗರಕ್ಕೆ ಹರಿದು ಬರುತ್ತಿರುವ ನೀರಿನ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ.

ಮುಂದಿನ ಒಂದು ವಾರದಲ್ಲಿ 110 ಅಡಿಯಷ್ಟು ನೀರು ಏರಿಕೆ ಕಾಣುವ ನಿರೀಕ್ಷೆಯಿದೆ ಎಂದು ನೀರಾವರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ವಾಣಿವಿಲಾಸ ಸಾಗರ ನೀರಿನ ಮಟ್ಟ ಹೆಚ್ಚಳ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದಿಂದ ಅಣತಿ ದೂರಕ್ಕೆ ಕ್ರಮಿಸಿ, ರಾಷ್ಟ್ರೀಯ ಹೆದ್ದಾರಿ ನಾಲ್ಕರಿಂದ ಪಶ್ಚಿಮಕ್ಕೆ ತಿರುವು ಪಡೆದು, ಹೊಸದುರ್ಗ ರಸ್ತೆಯಲ್ಲಿ 17 ಕಿಲೋ ಮೀಟರ್ ಸಾಗಿದರೆ ಸಿಗುವುದೇ ಭಾರತ ಮಾತೆಯ ಭೂಪಟ ಹೋಲುವ ಸುಂದರ ಜಲಾಶಯ ವಾಣಿವಿಲಾಸ ಸಾಗರ.

ಗುಡ್ಡ, ಬೆಟ್ಟಗಳ ಮಧ್ಯೆ ಸ್ವಾಭಾವಿಕವಾಗಿ ನಿರ್ಮಿಸಿರುವ ವಾಣಿವಿಲಾಸ ಸಾಗರಕ್ಕೆ ಹೆಚ್ಚಿನ ನೀರು ಹರಿದು ಬಂದಿರುವುದರಿಂದ ನೋಡಲು ನಯನ ಮನೋಹರವಾಗಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಡ್ಯಾಂ ಬಳಿ ಇರುವ ಔಷಧ ವನವು ನೋಡುಗರಿಗೆ ಖುಷಿ ನೀಡುತ್ತಿದ್ದು, ಜಲಾಶಯದ ಸುತ್ತಲಿನ ತಂಪಾದ ವಾತಾವರಣ, ಸೂರ್ಯೋದಯ ಮತ್ತು ಸೂರ್ಯಾಸ್ತ ಸಮಯದಲ್ಲಿ ಪ್ರವಾಸಿಗರಿಗೆ ಹೆಚ್ಚಿನ ಮನರಂಜನೆ ದೊರೆಯುತ್ತಿದೆ.

ವಾಣಿವಿಲಾಸ ಸಾಗರ
ವಾಣಿವಿಲಾಸ ಸಾಗರ

ಒಟ್ಟಿನಲ್ಲಿ ಕೊರೊನಾ ಸಂಕಷ್ಟದಲ್ಲಿ ಉದ್ಯೋಗ ಕಳೆದುಕೊಂಡು ಹಳ್ಳಿಗಳ ಕಡೆ ಮುಖ ಮಾಡಿದ ಯುವಕರಿಗೆ ತುಂಬಿ ಹರಿಯುತ್ತಿರುವ ವಾಣಿವಿಲಾಸ ಸಾಗರ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಿದೆ. ಇದರಿಂದ ತಾಲೂಕಿನಲ್ಲಿ ಮತ್ತೆ ಹಸಿರು ಕಂಗೊಳಿಸಲಿದ್ದು, ಬಯಲು ಸೀಮೆಯಾದ ಚಿತ್ರದುರ್ಗ ಇದೀಗ ಹಸಿರು ಸೀಮೆಯಾಗುವ ಕಾಲ ಸನ್ನಿಹಿತವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.