ಚಿತ್ರದುರ್ಗದಲ್ಲಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಮಾಡಲು ಸಿದ್ಧ: ಸಿಎಂ ಬೊಮ್ಮಾಯಿ

author img

By

Published : Oct 19, 2021, 7:08 AM IST

cm bommai and bs yadiyurappa honored by murugha sharanaru

ನಿನ್ನೆ ಮುರುಘಾ ಮಠದಲ್ಲಿ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ 'ಬಸವ ಭೂಷಣ ಪ್ರಶಸ್ತಿ' ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರಿಗೆ 'ಶರಣ ಶ್ರೀ' ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಚಿತ್ರದುರ್ಗ: ಜಿಲ್ಲಾಧಿಕಾರಿಗಳು ಒಂದು ಸಾವಿರದಿಂದ 2 ಸಾವಿರ ಎಕರೆ ಜಾಗ ಗುರುತಿಸಿದರೆ ಜಿಲ್ಲೆಯಲ್ಲಿ ಇಂಡಸ್ಟ್ರಿಯಲ್ ಟೌನ್ ಶಿಪ್ ಮಾಡಲು ಸಿದ್ಧನಿದ್ದೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಮುರುಘಾ ಮಠದಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರ ಪೀಠಾರೋಹಣದ ತೃತೀಯ ದಶಮಾನೋತ್ಸವದ ಅಂಗವಾಗಿ ನಿನ್ನೆ ಗುರುವಂದನೆ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ಸಿಎಂ ಮಾತನಾಡಿದರು.

guruvandane programme
ಗುರುವಂದನೆ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಭಾಷಣ

ಬಸವ ಭೂಷಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, 'ಬಸವ ಶರಣರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಗುರುವಂದನೆ ಮಾಡಿದರು. ಕರಾರುರಹಿತ ಪ್ರೀತಿ, ಭಕ್ತಿಯನ್ನು ಸಮರ್ಪಿಸಬೇಕು. ವೈಚಾರಿಕ ಕ್ರಾಂತಿಯೇ ಶರಣ ಸಂಸ್ಕೃತಿ, ಮನುಷ್ಯರನ್ನು ಮನುಷ್ಯರಾಗಿ ನೋಡುವುದೇ ಶರಣ ಸಂಸ್ಕೃತಿ. 12ನೇ ಶತಮಾನದ ಪ್ರತಿಪಾದನೆಯನ್ನು ಶ್ರೀಗಳು ಮಾಡುತ್ತಿದ್ದಾರೆ. ಈಗ 21ನೇ ಶತಮಾನ, ಅಂಕಿಗಳು ತಿರುಗುಮುರುಗಾಗಿವೆ. ಮನುಕುಲದ ಅಭಿವೃದ್ಧಿಯಾಗಬೇಕು. ಬಸವಣ್ಣ ಇಂದಿಗೂ ಪ್ರಸ್ತುತ. ಅಸಮಾನತೆ, ಲಿಂಗಬೇಧ ಇಂದಿಗೂ ಇದೆ. ಸಂಪೂರ್ಣವಾಗಿ ಇದನ್ನು ತೊಲಗಿಸುವ ಜವಾಬ್ದಾರಿ ಶರಣರಿಂದ ಪ್ರಾರಂಭವಾಗಿದೆ. ಇದನ್ನು ಮುಂದುವರಿಸಿಕೊಂಡು ಹೋಗುವುದು ಜನಸಾಮಾನ್ಯರ ಕರ್ತವ್ಯವಾಗಬೇಕು' ಎಂದು ತಿಳಿಸಿದರು.

'ಚಿತ್ರದುರ್ಗದಲ್ಲಿ ಇಂಡಸ್ಟ್ರಿಯಲ್ ಟೌನ್ ಶಿಪ್ ಮಾಡಲು ಸಿದ್ಧ'

ಶ್ರೀಗಳ ಬೇಡಿಕೆಗಳನ್ನು ಈಡೇರಿಸಲು ಅಧಿಕಾರಿಗಳೊಂದಿಗೆ ಮಾತನಾಡಿ ಇಂಡಸ್ಟ್ರೀಯಲ್ ಟೌನ್ ಶಿಪ್ ಮಾಡಲು ಸಿದ್ಧನಿದ್ದೇನೆ. ಜಿಲ್ಲಾಧಿಕಾರಿಗಳು ಚಿತ್ರದುರ್ಗದಲ್ಲಿ 1 ಸಾವಿರದಿಂದ 2 ಸಾವಿರ ಎಕರೆ ಭೂಮಿಯನ್ನು ಗುರುತಿಸಿದರೆ ನಾನು ಈ ಕಾರ್ಯ ಮಾಡಲು ಸಿದ್ಧನಿದ್ದೇನೆ. ಸುವರ್ಣ ಕರ್ನಾಟಕ ಕಟ್ಟಬೇಕು ಎಂಬ ಸಂಕಲ್ಪ ಮಾಡಿದ್ದೇನೆ. ಸುಭಿಕ್ಷ ಸುರಕ್ಷಿತ ಕರ್ನಾಟಕವನ್ನು ಹಾಗು ಸಮಾನತೆಯ ದಿನಾಚರಣೆಯ ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಮಾಡುತ್ತೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, 'ಜಗತ್ತಿನಲ್ಲಿ ಮೂರು ವರ್ಗದ ಜನರಿದ್ದಾರೆ. ಆಯುಷ್ಯಕ್ಕಾಗಿ ಆಯುಷ್ಯವನ್ನು ಅಳೆದು ಹಾಕುವವರು. ಇವರು ಅಸಹಾಯಕರಾಗಿರುತ್ತಾರೆ. ಇವರು ಸಾಧನೆ ಮಾಡಲು ಸಮಾಜ ಬಿಡುತ್ತಿಲ್ಲ. ಇನ್ನುಳಿದವರು ಬದುಕಿಗೆ ಆಯುಷ್ಯವನ್ನು ಅಳೆದು ಹಾಕುವವರು ಮತ್ತು ಸಾಧನೆಗೆ ಆಯುಷ್ಯವನ್ನು ಅಳೆದು ಹಾಕುವವರು. ಇದು ಸವಾಲಿನಿಂದ ಕೂಡಿದೆ. ಶರಣರು ಮೂರನೇಯ ವರ್ಗದವರಾಗಿದ್ದಾರೆ. ದಾರ್ಶನಿಕರು, ಸಂತರ ಆಯುಷ್ಯ ಕಡಿಮೆ, ಆದರೆ ಸಾಧನೆ ಅಪಾರ. ವಿವೇಕಾನಂದರು ಇದಕ್ಕೆ ಉತ್ತಮ ಉದಾಹರಣೆ' ಎಂದರು.

'ಬೊಮ್ಮಾಯಿ ಅದೃಷ್ಟದ ಸಿಎಂ-ಬಿಎಸ್​ವೈ ಅನುಭವದ ಸಿಎಂ'

ಬಸವರಾಜ ಬೊಮ್ಮಾಯಿಯವರು ಅದೃಷ್ಟದ ಮುಖ್ಯಮಂತ್ರಿ ಮತ್ತು ಬಿ.ಎಸ್.ಯಡಿಯೂರಪ್ಪನವರು ಅನುಭವದ ಮುಖ್ಯಮಂತ್ರಿಗಳಾಗಿದ್ದಾರೆ. ಇಬ್ಬರೂ ಸಹ ದುರ್ಗದ ಜನತೆಗೆ ಅನುಕೂಲ ಮಾಡಿಕೊಡಬೇಕೆಂದು ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ಅಲ್ಲದೇ, ಹತ್ತು ಕೆರೆಗಳಿಗೆ ನೀರನ್ನು ತುಂಬಿಸುವ ಕಾರ್ಯ ಈಗಾಗಲೇ ನಡೆದಿದೆ. ಇನ್ನೂ ಒಂದು ಟಿಎಂಸಿ ನೀರನ್ನು ಬಿಡುಗಡೆ ಮಾಡಿ ಎಂದು ಸಿಎಂ ಬಳಿ ಕೇಳಿಕೊಂಡರು. ಮುಂದಿನ ಬಜೆಟ್‍ನಲ್ಲಿ ಜಿಲ್ಲೆಯ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ನೀಡಬೇಕೆಂದು ಮನವಿ ಮಾಡಿಕೊಂಡರು.

guruvandane programme
ಗುರುವಂದನೆ ಕಾರ್ಯಕ್ರಮ

ಶರಣಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಾಜಿ ಸಿಂ ಬಿ.ಎಸ್.ಯಡಿಯೂರಪ್ಪ, ಬಸವಣ್ಣನವರ ಆದರ್ಶಗಳನ್ನು ಮುಂದಿಟ್ಟುಕೊಂಡು ಸಾಗುತ್ತಿರುವ ಈ ಮಠ ಬಸವತತ್ವವನ್ನು ಪ್ರಚಾರ ಮಾಡುತ್ತಿದೆ. ಕಳೆದ 30 ವರ್ಷದಲ್ಲಿ ತನ್ನದೇ ಆದ ವಿವಿಧ ಸಮಾಜಮುಖಿ ಕಾರ್ಯಗಳ ಮೂಲಕ ಸಮಾನತೆಯನ್ನು ಸ್ಥಾಪಿಸಿದೆ. ಪ್ರತಿ ವರ್ಷ ನಡೆಯುವ ಶರಣ ಸಂಸ್ಕೃತಿ ಉತ್ಸವ ಜನರ ಉತ್ಸವವಾಗಿದೆ. ಇದು ಜನರ ಆಶಾಕಿರಣ. ಧಾರ್ಮಿಕ ವಿಷಯಕ್ಕೆ ಸೀಮಿತವಾಗದೆ 20 ಕೋಟಿ ರೂ.ಗಳನ್ನು ಬಸವಣ್ಣ ಪುತ್ಥಳಿ ನಿರ್ಮಾಣಕ್ಕೆ ನನ್ನ ಅಧಿಕಾರದ ಅವಧಿಯಲ್ಲಿ ಮಂಜೂರು ಮಾಡಿದೆ. ಅದರಲ್ಲಿ 5 ಕೋಟಿ ರೂ. ತಲುಪಿದ್ದು, ಉಳಿದದ್ದನ್ನು ತಲುಪಿಸುವ ಜವಾಬ್ದಾರಿ ಮುಖ್ಯಮಂತ್ರಿ ಬೊಮ್ಮಾಯಿ ತೆಗೆದುಕೊಳ್ಳಬೇಕು ಎಂದರು.

ಇದನ್ನೂ ಓದಿ: ಸಿದ್ದರಾಮಯ್ಯ ಒಂದು ಕುಟುಂಬದ ಹಿಡಿತದಲ್ಲಿ ಇರುವುದಕ್ಕೆ ಬೇಸರವಾಗುತ್ತಿದೆ: ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.