ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮಳೆ ಹಾನಿ ಪ್ರದೇಶಕ್ಕೆ ಮಾಜಿ ಸಿಎಂ ಹಾಗೂ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿ, ರೈತರ ಜೊತೆ ಮಾತುಕತೆ ನಡೆಸಿದ್ದು, ಸರ್ಕಾರ ಕೂಡಲೇ ಪರಿಹಾರದ ಮೊತ್ತವನ್ನು ನೀಡುವಂತೆ ಸೂಚನೆ ನೀಡಿದ್ದಾರೆ.
ತಾಲೂಕಿನ ನುಗ್ತಹಳ್ಳಿ ಗ್ರಾಮದ ಬಳಿ ಜಾಲಾವೃತವಾದ ರೈತರ ಜಮೀನುಗಳಿಗೆ ಭೇಟಿ ನೀಡಿದ ಮಾಜಿ ಸಿಎಂ ರೈತರ ಸಂಕಷ್ಟವನ್ನ ಆಲಿಸಿದ್ದು, ಈ ವೇಳೆ ಶಿಡ್ಲಘಟ್ಟ ಶಾಸಕ ವಿ ಮುನಿಯಪ್ಪ ಗೌರಿಬಿದನೂರು ಶಾಸಕ ಹೆಚ್ ಎನ್ ಶಿವಶಂಕರ ರೆಡ್ಡಿ ಹಿರಿಯ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ, ಸರ್ಕಾರಕ್ಕೆ ಪತ್ರ ಬರೆಯುತ್ತೇನೆ. ಸರ್ಕಾರ ನಿರ್ಲಕ್ಷ ಧೋರಣೆ ಬಿಡಬೇಕು,ಕೂಡಲೇ ಮಳೆಯಿಂದ ಹಾನಿಯಾದ ಬೆಳೆಗೆ ಪರಿಹಾರ ವಿತರಣೆ ಮಾಡಬೇಕು,ಎನ್ಡಿಆರ್ಎಫ್ ನಿಯಮ ಬಿಟ್ಟು ಹೆಚ್ಚಿನ ಪರಿಹಾರ ನೀಡಬೇಕು. ನಾನು ಈ ಹಿಂದೆ ಸಿಎಂ ಆಗಿದ್ದಾಗ ಎಕರೆಗೆ 25 ಸಾವಿರ ಪರಿಹಾರ ನೀಡಿದ್ದೆ ಎಂದರು.
ರಾಜ್ಯ ಸರ್ಕಾರದ ಸಚಿವರು ಜಿಲ್ಲೆಗಳಿಗೆ ತೆರಳದೇ ಬೆಂಗಳೂರಿನಲ್ಲೆ ಇದ್ದಾರೆ ಸರ್ಕಾರ ಇನ್ನೂ ಸಚಿವರಿಗೆ ಜವಾಬ್ದಾರಿ ನೀಡಿಲ್ಲ ಎಂದು ಸರ್ಕಾರದ ವಿರುದ್ದ ಗರಂ ಆದ ಅವರು, ಯಾವ ಜಿಲ್ಲಾ ಮಂತ್ರಿಗಳು ನೆರೆ ಪೀಡಿತ ಪ್ರದೇಶಗಳಿಗೆ ಹೋಗಲ್ಲ,ಜಿಲ್ಲಾ ಮಂತ್ರಿಗಳಿಗೆ ಜಿಲ್ಲೆ ಜವಾಬ್ದಾರಿನೇ ಕೊಟ್ಟಿಲ್ಲ. ಬೆಂಗಳೂರಿನಲ್ಲೇ ಕೂತಿರ್ತಾರೆ.ನಾನು ಟೀಕೆ ಮಾಡಿದ ಮೇಲೆ ಮುಖ್ಯಮಂತ್ರಿಗಳು ಜಿಲ್ಲೆಗಳಿಗೆ ಹೋಗಿದ್ದಾರೆ. ರಾಜಕಾಲುವೆಗಳಲ್ಲಿ ಒತ್ತುವರಿಯಿಂದ ನಗರಕ್ಕೆ ನೀರು ನುಗ್ಗಿದೆ ಜಿಲ್ಲಾಡಳಿತ ಕೂಡಲೇ ರಾಜಕಾಲುವೆಗಳ ಒತ್ತವರಿ ತೆರುವುಗೊಳಿಸಬೇಕಾಗಿತ್ತು ಇದರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಕ್ರಮವಹಿಸಬೇಕಾಗಿತ್ತು ಎಂದು ಹೇಳಿದರು.