ಬೆಂಗಳೂರಿಗೆ ಸಮನಾಗಿ ಚಿಕ್ಕಬಳ್ಳಾಪುರ ಅಭಿವೃದ್ಧಿ: ಸಚಿವ ಡಾ.ಕೆ.ಸುಧಾಕರ್​

author img

By

Published : Jan 15, 2023, 7:22 AM IST

Updated : Jan 15, 2023, 7:50 AM IST

minister Sudhakar

ಚಿಕ್ಕಬಳ್ಳಾಪುರ ಉತ್ಸವಕ್ಕೆ ತೆರೆ ಬಿದ್ದಿದೆ. ಎಂಟು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಜನ ಜಾತ್ರೆಯೇ ನೆರೆದಿತ್ತು. ಈ ಸಂದರ್ಭದಲ್ಲಿ ಉತ್ಸವದ ರೂವಾರಿ ಸಚಿವ ಡಾ.ಕೆ.ಸುಧಾಕರ್ ಮಾಧ್ಯಮದೊಂದಿಗೆ ಮಾತನಾಡಿದರು.

ಚಿಕ್ಕಬಳ್ಳಾಪುರ ಉತ್ಸವದ ಬಗ್ಗೆ ಸಚಿವ ಡಾ.ಕೆ. ಸುಧಾಕರ್​ ಹೇಳಿಕೆ

ಚಿಕ್ಕಬಳ್ಳಾಪುರ: ಜಿಲ್ಲೆಯು 15 ವರ್ಷ ಪೂರೈಸುವ ಮೂಲಕ ಹದಿಹರೆಯದ ಪ್ರಾಯ ತಲುಪಿದೆ. ಮುಂದಿನ ಐದು ವರ್ಷಗಳಲ್ಲಿ ಬೆಂಗಳೂರಿಗೆ ಸರಿಸಮಾನವಾಗಿ ಜಿಲ್ಲಾ ಕೇಂದ್ರಕ್ಕೆ ಅಭಿವೃದ್ಧಿಯ ಸ್ಪರ್ಶ ನೀಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಭರವಸೆ ನೀಡಿದರು. ಚಿಕ್ಕಬಳ್ಳಾಪುರ ಉತ್ಸವದ ಸಮಾರೋಪ ಸಮಾರಂಭಕ್ಕೂ ಮುನ್ನ ನಡೆದ ಕಲಾವಿದರ ಮೆರವಣಿಗೆ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಉತ್ಸವ ಯಶಸ್ಸು ಕಂಡಿರುವುದು ಜನರಲ್ಲಿ ಧನ್ಯತಾಭಾವ ಮೂಡಿಸಿದೆ. ದಸರಾ ರೀತಿಯಲ್ಲಿ ಉತ್ಸವ ಮಾಡಬೇಕೆಂಬ ಉದ್ದೇಶದಿಂದ ಉತ್ಸವ ಆಯೋಜಿಸಿದ್ದು ನಿರೀಕ್ಷೆಗೂ ಮೀರಿ ಜನರು ಭಾಗವಹಿಸಿದ್ದು ಸಂಸತ ತಂದಿದೆ. ಚಿಕ್ಕಬಳ್ಳಾಪುರವು ರಾಜಧಾನಿ ಬೆಂಗಳೂರು ಸಮೀಪದಲ್ಲಿದ್ದರೂ ಹಿಂದುಳಿದ ಜಿಲ್ಲೆ ಎಂಬ ಭಾವನೆ ಹಲವರಲ್ಲಿ ಈವರೆಗೂ ಇತ್ತು. ರೈತರ ದುಡಿಮೆಯಿಂದ, ಯುವಕರ ಜಾಣ್ಮೆಯಿಂದ ಜಿಲ್ಲೆ ಈಗ ಎಲ್ಲಾ ರೀತಿಯಲ್ಲೂ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ. ಬತ್ತಿದ್ದ ಕೆರೆಗಳು ತುಂಬಿವೆ. ಇಂತಹ ಸಂತಸ ಮನೆಮಾಡಿರುವುದರಿಂದ ಉತ್ಸವದ ಅಗತ್ಯ ಖಂಡಿತಾ ಇತ್ತು. ಹಾಗಾಗಿಯೇ ಉತ್ಸವವನ್ನು ಜಿಲ್ಲೆಯಲ್ಲಿ ನಡೆಸಲಾಗಿದೆ ಎಂದರು.

ಉತ್ಸವದ 8 ದಿನವೂ ಕೂಡ ನಿರೀಕ್ಷೆಗೂ ಮೀರಿ ಜನರು ಸೇರಿದ್ದಾರೆ. ಪ್ರತಿದಿನದ ಕಾರ್ಯಕ್ರಮಗಳಲ್ಲಿ ಜನಸಾಗರವೇ ಸೇರುತ್ತಿತ್ತು. ಸಂಜೆ ನಡೆಯುತ್ತಿದ್ದ ಸಾಂಸ್ಕೃತಿಕ ರಸದೌತಣ ಜನರಿಗೆ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿದೆ. ಖ್ಯಾತ ಕಲಾವಿದರು ಆಗಮಿಸಿ ಸಂಗೀತದ ರಸದೌತಣ ನೀಡಿದ್ದಾರೆ. ಸಂಪುಟದ ಸಹದ್ಯೋಗಿಗಳು ಬಂದು ಸಹಕಾರ ನೀಡಿ ಶಕ್ತಿ ತುಂಬಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಕನ್ನಡ ಹಬ್ಬದ ರಂಗು: ಕಳೆ ನೀಡಿದ ಮೈಸೂರು ಒಡೆಯರ ಉಪಸ್ಥಿತಿ

ಎಂಟು ದಿನಗಳ ಉತ್ಸವ ಯಶಸ್ವಿ: ದಸರಾವನ್ನು ಸ್ಮರಿಸುವ ರೀತಿಯಲ್ಲಿ ನಗರದಾದ್ಯಂತ ದೀಪಾಲಂಕಾರ ವಿಶೇಷವಾಗಿತ್ತು. ಪ್ರತಿ ರಸ್ತೆಯನ್ನು ವೈಶಿಷ್ಟ್ಯಪೂರ್ಣವಾಗಿ ಅಲಂಕರಿಸಲಾಗಿತ್ತು. ಇದರಿಂದ ಹೊಸ ಚಿಕ್ಕಬಳ್ಳಾಪುರವನ್ನು ಕಾಣುವಂತಾಯಿತು. ಅಲ್ಲದೇ ಜಿಲ್ಲೆಯಲ್ಲಿ ಇತಿಹಾಸ ನಿರ್ಮಿಸುವಂತಹ ಕೆಲಸವಾಗಿದೆ. ಇನ್ನೇನಿದ್ದರೂ ಭವಿಷ್ಯವನ್ನು ಕಟ್ಟುವ ಕೆಲಸವಾಗಲಿದೆ. ಜನರೇ ಹುಮ್ಮಸ್ಸು ನೀಡುವವರು, ಹಾಗಾಗಿ ಅವರನ್ನು ಕಂಡರೆ ಆಸಕ್ತಿ ಹೆಚ್ಚಾಗಲಿದೆ. ಇತರೆ ಉತ್ಸವಗಳಿಗಿಂತ ಕಳಪೆ ಇರಬಾರದು, ಗುಣಮಟ್ಟ ಕಾಯ್ದುಕೊಳ್ಳಬೇಕು ಎಂಬ ಅನಿಸಿಕೆ ಇತ್ತು, ಅದು ಈಡೇರಿದೆ. ಸ್ಥಳೀಯ ಮುಖಂಡರು ಉತ್ಸವಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ಜಿಲ್ಲೆಯ ಪ್ರತಿ ಅಧಿಕಾರಿಯೂ ಉತ್ಸವ ತಯಾರಿ ಮತ್ತು ಎಂಟು ದಿನಗಳ ಉತ್ಸವದಲ್ಲಿ ಶ್ರಮಿಸಿದ್ದಾರೆ. ನಗರಸಭೆ ಅಧ್ಯಕ್ಷರು, ಸದಸ್ಯರು ನಗರದ ಶುಚಿತ್ವ ಕಾಪಾಡುವ ಜೊತೆಗೆ ಮೇಲ್ವಿಚಾರಣೆ ಮಾಡಿದ್ದಾರೆ. ಹೀಗೆ ಎಂಟು ದಿನಗಳು ಶ್ರಮಸಿದ ಎಲ್ಲರಿಗೂ ಸಚಿವ ಸುಧಾಕರ್‌ ಅಭಿನಂದನೆ ಸಲ್ಲಿಸಿದರು.

ಬೆಂಗಳೂರಿಗೆ ಸಮನಾಗಿ ಬೆಳೆಯುವ ಶಕ್ತಿ ಜಿಲ್ಲೆಗಿದೆ: ಸಂಕ್ರಾಂತಿಯ ಅಂಗವಾಗಿ ಶನಿವಾರದ ಉತ್ಸವದಲ್ಲಿ ಆಯೋಜಿಸಿದ್ದ ರಾಸು ಪ್ರದರ್ಶನ ಮತ್ತು ಎತ್ತಿನಗಾಡಿಗಳ ಪ್ರದರ್ಶನ ಬಾಲ್ಯವನ್ನು ನೆನಪಿಸುವಂತಿತ್ತು. ಈ ಪ್ರದರ್ಶನದಲ್ಲಿ ದೇಶೀಯ ರಾಸುಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಎತ್ತಿ ತೋರುವಂತಿತ್ತು. ಕಲೆ, ಸಂಸ್ಕೃತಿ, ಶಿಕ್ಷಣದಲ್ಲಿ ಬೆಂಗಳೂರಿಗೆ ಸಮನಾಗಿ ಬೆಳೆಯುವ ಶಕ್ತಿ ಚಿಕ್ಕಬಳ್ಳಾಪುರ ಜಿಲ್ಲೆ ಪಡೆದಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಕೆಲಸ ಮಾಡಲಾಗುವುದು ಎಂದು ಭರವಸೆ ಕೊಟ್ಟರು.

ಜೆಡಿಎಸ್​ನ ಕೆಲ ಮುಖಂಡರು ಈ ಹಿಂದೆ ಎಚ್ಎನ್ ವ್ಯಾಲಿ ಯೋಜನೆಗೆ ವಿರೋಧಿಸಿದ್ದರು. ಆದರೆ ಈಗ ಕೆರೆಗಳು ತುಂಬಿವೆ. ಇವರ ಮಾತು ಕೇಳಿ ಯೋಜನೆ ತರದಿದ್ದರೆ ಇಂದಿನ ಪರಿಸ್ಥಿತಿ ಏನಾಗುತ್ತಿತ್ತು? ಬವಣೆ ಅರ್ಥ ಮಾಡಿಕೊಂಡವರಿಗೆ ಮಾತ್ರ ಕಷ್ಟದ ಅರಿವಾಗುತ್ತದೆ. ಎಲ್ಲೋ ಕುಳಿತು ಮಾತನಾಡುವವರಿಗೆ ಅರ್ಥವಾಗಲು ಹೇಗೆ ಸಾಧ್ಯ? ಪ್ರಾಮಾಣಿಕ, ದಕ್ಷತೆ ಮತ್ತು ಬದ್ಧತೆಯಿಂದ ಯೋಜನೆ ತರಲಾಗಿದೆ. ಎಲ್ಲಾ ಅಭಿವೃದ್ಧಿಗೆ ವಿರೋಧ ಮಾಡುವುದು ಇವರ ಹುಟ್ಟುಗುಣ ಎಂದು ತಿರುಗೇಟು ನೀಡಿದರು.

ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ಬಸ್ ಸಂಚಾರ ಆರಂಭಿಸುವ ಕುರಿತು ಈಗಾಗಲೇ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಇಷ್ಟರಲ್ಲೇ ಜಿಲ್ಲೆಯಲ್ಲಿ ಬಸ್​ಗಳು ಸಂಚರಿಸಲಿವೆ ಎಂದು ಇದೇ ವೇಳೆ ಸಚಿವ ಸುಧಾಕರ್‌ ಮಾಹಿತಿ ನೀಡಿದರು.

ಇದನ್ನೂ ಓದಿ: 'ಚಿಕ್ಕಬಳ್ಳಾಪುರ ಉತ್ಸವ'ಕ್ಕೆ ವೈಭವದ ಚಾಲನೆ: 2 ಭಾರತ ರತ್ನ ಪಡೆದ ಜಿಲ್ಲೆ- ಸಿಎಂ ಗುಣಗಾನ

Last Updated :Jan 15, 2023, 7:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.