ಜೆಡಿಎಸ್​​​ನ ಭವಾನಿ ರೇವಣ್ಣಗೆ ಟಿಕೆಟ್ ಆಫರ್ ನೀಡಿದ ಸಿ.ಟಿ. ರವಿ

author img

By

Published : Jan 27, 2023, 4:25 PM IST

Updated : Jan 27, 2023, 5:10 PM IST

CT Ravi

ಭವಾನಿಗಿಂತ ಉತ್ತಮ ಅಭ್ಯರ್ಥಿ ಹೊಳೆನರಸೀಪುರಕ್ಕೆ ಬೇರೊಬ್ಬರಿಲ್ಲ - ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ

ಭವಾನಿ ರೇವಣ್ಣಗೆ ಟಿಕೆಟ್ ಆಫರ್ ನೀಡಿದ ಸಿ.ಟಿ. ರವಿ..

ಚಿಕ್ಕಮಗಳೂರು: ಹಾಸನ ವಿಧಾನಸಭೆ ಕ್ಷೇತ್ರದ ಕುರಿತಂತೆ ಜೆಡಿಎಸ್​​ನಲ್ಲಿ ಟಿಕೆಟ್ ಗುದ್ದಾಟ ನಡೆಯುತ್ತಿದೆ. ಈ ನಡುವೆ ಭವಾನಿ ರೇವಣ್ಣನಿಗೆ ಬಿಜೆಪಿಗೆ ಬರುವಂತೆ ಸಿ.ಟಿ.ರವಿ ಆಫರ್ ನೀಡಿದ್ದಾರೆ. ''ನಾನು ಸಹೋದರಿ ಭವಾನಿ ಹಾಗೂ ಕುಮಾರಸ್ವಾಮಿ ಅವರ ಹೇಳಿಕೆಗಳನ್ನು ಗಮನಿಸಿದ್ದೇನೆ. ನಾನು ಮನೆಯಲ್ಲಿ ಗಲಾಟೆ ಹಚ್ಚಿಸಲು ಬಯಸುವುದಿಲ್ಲ. ನನ್ನ ಮನಸ್ಸಿನಲ್ಲಿ ಭವಾನಿ ಅಕ್ಕ ನಮ್ಮ ಪಾರ್ಟಿಯಿಂದ ಅಭ್ಯರ್ಥಿ ಆಗಬೇಕು ಎನ್ನುವುದಿತ್ತು. ಭವಾನಿ ಅವರು ಹೊಳೆನರಸೀಪುರದಿಂದ ನಮ್ಮ ಪಾರ್ಟಿಯಿಂದ ಅಭ್ಯರ್ಥಿಯಾಗಲಿ. ಭವಾನಿ ಅವರಿಗಿಂತ ಉತ್ತಮ ಅಭ್ಯರ್ಥಿ ಹೊಳೆನರಸೀಪುರಕ್ಕೆ ಬೇರೊಬ್ಬರಿಲ್ಲ" ಎಂದು ಚಿಕ್ಕಮಗಳೂರಿನಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.

ಸುಮಲತಾ ಜನಪ್ರಿಯರಾಗಿದ್ದಾರೆ- ಸಿಟಿ ರವಿ: ಪಕ್ಷದ ನೀತಿಯನ್ನು ಒಪ್ಪಿಕೊಂಡು ಯಾರ್ಯಾರು ಬರ್ತಾರೆ ಬರಬಹುದು. ಸುಮಲತಾ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಒಬ್ಬರು. ಅವರು ಪಕ್ಷೇತರ ಅಭ್ಯರ್ಥಿಯಾಗಿ ಘಟಾನುಘಟಿಗಳ ಎದುರು ಗೆದ್ದು ಬಂದವರು. ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರೆ ತುಂಬಾ ಸಂತೋಷ. ಇದರಿಂದ ಪಕ್ಕಕ್ಕೆ ಬಲ ಬರುತ್ತದೆ ಎಂದು ಸಿ.ಟಿ ರವಿ ವಿಶ್ವಾಸ ವ್ಯಕ್ತಪಡಿಸಿದರು.

’ಉದರನಿಮಿತ್ತಂ ಬಹುಕೃತವೇಷಂ’: ಒಬ್ಬ ಸಿದ್ದರಾಮಯ್ಯ, ನಾಮ ಹಲವು ಪೋಸ್ಟರ್ ವಿಚಾರದ ಬಗ್ಗೆ ಪ್ರತಿಕ್ರಿಯಿಸುತ್ತಾ, "ಉದರನಿಮಿತ್ತಂ ಬಹುಕೃತವೇಷಂ ಎಂಬ ಮಾತಿದೆ. ಅಂತೆಯೇ ಓಟು ನಿಮಿತ್ತಂ, ಬಹುಕೃತ ಬಹುಕೃತವೇಷಂ. ವೋಟಿಗೋಸ್ಕರ ಹಲವು ವೇಷ ಹಾಕುತ್ತಿದ್ದಾರೆ. ಗಳಿಗೆಗೊಂದು ಬದಲಾಗಬಾರದು. ನಿಯತ್ತು ಮತ್ತು ನೀತಿ ಒಂದೇ ಇರಬೇಕು. ನಿಯತ್ತು ಬದಲಾಗೋದು ನೀತಿ ಬದಲಾಗೋದು ಒಳ್ಳೆಯ ನಾಯಕನ ಲಕ್ಷಣ ಅಲ್ಲ. ಜಾತಿ ಸಭೆಯಲ್ಲಿ ಜಾತಿವಾದಿ ತರ, ಹೊರಗಡೆ ಜಾತ್ಯಾತೀತವಾಗಿ ಮಾತಾನಾಡುವುದು. ಹಿಂದುತ್ವದ ವಿರುದ್ಧ ಮಾತಾನಾಡೋದು, ಹೊರಗಡೆ ಬಂದು ಹಿಂದೂ ಅನ್ನೋದು. ಅದು ನೀತಿ, ನಿಯತ್ತು ಇಲ್ಲದಿರುವುದನ್ನು ತೋರಿಸುತ್ತದೆ ಎಂದು ಕುಟುಕಿದರು.

ಭವಾನಿ ರೇವಣ್ಣ ಸ್ವಯಂ ಘೋಷಣೆ: ಜ. 21ರಂದು ನಾನೇ ಹಾಸನದ ಜೆಡಿಎಸ್​ ಅಭ್ಯರ್ಥಿ. ಇನ್ನು ಸ್ವಲ್ಪದರಲ್ಲೇ ಪಕ್ಷದ ವರಿಷ್ಠರು ನನ್ನ ಹೆಸರನ್ನು ಪ್ರಕಟ ಮಾಡಲಿದ್ದಾರೆ ಎಂದು ಮಾಜಿ ಸಚಿವ ಹೆಚ್​.ಡಿ ರೇವಣ್ಣ ಪತ್ನಿ ಜಿ.ಪಂ ಮಾಜಿ ಸದಸ್ಯೆ ಭವಾನಿ ರೇವಣ್ಣ ಸ್ವಯಂ ಘೋಷಿಸಿಕೊಂಡಿದ್ದರು. ಹಾಸನ ತಾಲೂಕಿನ ಸಾಲಗಾಮೆ ಬಳಿ ನಡೆದ ಅಣ್ಣಪ್ಪ ಸ್ವಾಮಿ ದೇವಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು ನನ್ನ ಪತಿ ಹೆಚ್​.ಡಿ ರೇವಣ್ಣ ಅವರು ಮಂತ್ರಿಯಾಗಿದ್ದಾಗ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ.

ಕಳೆದ ಬಾರಿ ಹಾಸನ ವಿಧಾನಸಭಾ ಕ್ಷೇತ್ರ ಬಿಜೆಪಿ ಪಾಲಾಗಿದ್ದರಿಂದ ಇನ್ನು ಸಾಕಷ್ಟು ಕೆಲಸ ಕಾರ್ಯಗಳು ಹಾಗೆಯೇ ಉಳಿದುಕೊಂಡಿದೆ. ಅದನ್ನು ಈ ಬಾರಿ ಸಂಪೂರ್ಣಗೊಳಿಸುವ ಕೆಲಸವನ್ನು ನಾವು ಮಾಡುತ್ತೇವೆ ಮತ್ತು ಈ ಬಾರಿ ಹಾಸನದಲ್ಲಿ ಮತ್ತೆ ಜೆಡಿಎಸ್​ ಬರಲಿದೆ ಎಂದು ಭವಾನಿ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: 'ಹಾಸನದಿಂದ ನಾನೇ ಜೆಡಿಎಸ್​ ಅಭ್ಯರ್ಥಿ..': ಭವಾನಿ ರೇವಣ್ಣ ಸ್ವಯಂ ಘೋಷಣೆ

ಭವಾನಿ ರೇವಣ್ಣ ಸ್ಪರ್ಧೆ ಕುರಿತು ಹೆಚ್​ಡಿಕೆ ಪ್ರತಿಕ್ರಿಯೆ: ಪ್ರತಿಯೊಬ್ಬರಿಗೂ ಚುನಾವಣೆಗೆ ನಿಲ್ಲಬೇಕು ಎನ್ನುವ ಆಕಾಂಕ್ಷೆ ಇರುವುದು ಸಹಜ. ಭವಾನಿ ರೇವಣ್ಣ ಅವರ ಅನಿವಾರ್ಯತೆ ಹಾಸನ ಕ್ಷೇತ್ರದಲ್ಲಿ ಇದ್ದಿದ್ದರೆ ನಾನೇ ಸ್ಪರ್ಧೆ ಮಾಡುವಂತೆ ಹೇಳುತ್ತಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದು ಹೇಳಿದರು. ರಾಯಚೂರು ಜಿಲ್ಲೆಯ ದೇವದುರ್ಗ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಜೆಡಿಎಸ್ ಅಭ್ಯರ್ಥಿ ಕರೆಮ್ಮ ಪರವಾಗಿ ಅವರು ಪ್ರಚಾರ ನಡೆಸಿದರು. ಬಳಿಕ ಪಂಚರತ್ನ ಯಾತ್ರೆಯ ವೇಳೆ ಗಾಣಧಾಳ ಗ್ರಾಮದಲ್ಲಿ ಮಾತನಾಡಿದ ಅವರು, "ಭವಾನಿ ರೇವಣ್ಣ ಅವರು ಅಭ್ಯರ್ಥಿಯಾಗಬೇಕು ಎನ್ನುವ ಅನಿವಾರ್ಯತೆ ಇದ್ದಿದ್ದರೆ ನಾನೇ ನಿಲ್ಲಿಸುತ್ತಿದ್ದೆ. ಆದರೆ, ಹಾಸನದಲ್ಲಿ ಇವತ್ತು ಅಂತಹ ಅನಿವಾರ್ಯತೆ ಇಲ್ಲ. ಅಲ್ಲಿ ಈಗಾಗಲೇ ಒಬ್ಬ ಸಮರ್ಥ ಅಭ್ಯರ್ಥಿ ಇದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: 'ಭವಾನಿ ರೇವಣ್ಣ ಅನಿವಾರ್ಯತೆ ಹಾಸನ ಕ್ಷೇತ್ರಕ್ಕಿದ್ದಿದ್ದರೆ ನಾನೇ ಸ್ಪರ್ಧಿಸುವಂತೆ ಹೇಳುತ್ತಿದ್ದೆ': ಹೆಚ್​ಡಿಕೆ

Last Updated :Jan 27, 2023, 5:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.