ಗಂಡನ ವಿರುದ್ಧ ದೂರು ದಾಖಲಿಸಲು ಬಂದ ಮಹಿಳೆ ಮೇಲೆಯೇ ಬಿತ್ತು ಕೇಸ್.. ಕಾರಣ?

author img

By

Published : Nov 22, 2021, 7:27 PM IST

ಗಂಡನ ವಿರುದ್ಧ ದೂರು ದಾಖಲಿಸಲು ಬಂದ ಮಹಿಳೆಯ ಮೇಲೆಯೇ ಬಿತ್ತು ಕೇಸ್

ಗಂಡ-ಹೆಂಡತಿಯ ನಡುವೆ ಕಲಹಗಳಿಂದಾಗಿ ಉಸ್ನಾ ಖಾನಂ ಎಂಬುವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಗಂಡ ಮಹಮದ್ ಸಿದ್ದಿಕ್ ಮೇಲೆ ದೂರು ದಾಖಲಿಸಿದ್ದರು. ಎರಡು ಕುಟುಂಬಗಳ ನಡುವೆ ಸಂಧಾನ ಮಾಡಲು ಪೊಲೀಸರು ಠಾಣೆಗೆ ಕರೆಸಿದಾಗ ದೂರು ಕೊಡಲು ಬಂದವರ ಮೇಲೆಯೇ ಕೇಸ್​ ಜಡಿದಿದ್ದಾರೆ.

ಚಿಕ್ಕಬಳ್ಳಾಪುರ : ಗಂಡನ ವಿರುದ್ಧ ದೂರು ದಾಖಲಿಸಲು ಬಂದ ಮಹಿಳೆಯ ಮೇಲೆಯೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಘಟನೆ ಜಿಲ್ಲೆಯ ಗೌರಿಬಿದನೂರಿನ ಗ್ರಾಮಾಂತರ ಠಾಣೆಯಲ್ಲಿ ನಡೆದಿದೆ.

ಗೌರಿಬಿದನೂರಿನ ಉಸ್ನಾ ಖಾನಂ ಎಂಬುವರು ಗ್ರಾಮ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಮಹಮದ್ ಸಿದ್ದಿಕ್ ಎಂಬುವರ ಜೊತೆ ಮದುವೆ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಗಂಡ-ಹೆಂಡತಿಯ ನಡುವಿನ ಕಲಹಗಳಿಂದಾಗಿ ಉಸ್ನಾ ಖಾನಂ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಗಂಡ ಮಹಮದ್ ಸಿದ್ದಿಕ್ ವಿರುದ್ಧ ದೂರು ದಾಖಲಿಸಿದ್ದರು. ಎರಡು ಕುಟುಂಬಗಳ ನಡುವೆ ಸಂಧಾನ ಮಾಡಲು ಪೊಲೀಸರು ಅವರೆನ್ನಲ್ಲ ಠಾಣೆಗೆ ಕರೆಸಿದ್ದರು.

ಉಭಯ ಕುಟುಂಬಗಳನ್ನು ರಾಜಿ ಮಾಡಿಸಲು ಹೋದ ಪ್ರಯತ್ನ ವಿಫಲವಾದ ಹಿನ್ನೆಲೆ ಠಾಣೆಯಿಂದ ಹೊರ ಬರುತ್ತಿದ್ದಂತೆ ಹುಡುಗಿ ಕಡೆಯ ಪೋಷಕರು, ಸಂಬಂಧಿಕರು ಗಂಡನ ಸಂಬಂಧಿಕರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದೇ ವೇಳೆ ಮಾತಿಗೆ ಮಾತು ಬೆಳೆದು ಪೊಲೀಸ್ ಠಾಣೆಯ ಮುಂಭಾಗವೇ ಬಡಿದಾಡಿಕೊಂಡಿದ್ದಾರೆ. ಹೀಗೆ ಬಡಿದಾಡಿಕೊಳ್ಳುತ್ತಿದ್ದವರನ್ನು ಬಿಡಿಸಲು ಹೋದ ಠಾಣೆಯ ಪಿಎಸ್ಐ ಚಂದ್ರಕಲಾ ಅವರ ಮೇಲೆಯೂ ಉಸ್ನಾ ಖಾನಂ ಸಂಬಂಧಿಕರು ಹಲ್ಲೆ ನಡೆಸಿದ್ದಾರೆ ಎನ್ನಲಾಗ್ತಿದೆ.

ಸದ್ಯ ಗಲಾಟೆಯಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವ್ ಆದ ಪೊಲೀಸ್ ಅಧಿಕಾರಿ, ಉಸ್ನಾ ಖಾನಂ ಸೇರಿದಂತೆ 6 ಜನ ಸಂಬಂಧಿಕರ ವಿರುದ್ಧ ಕೇಸ್​ ದಾಖಲಿಸಿಕೊಂಡಿದ್ದಾರೆ. ಸದ್ಯ ಗಂಡನ ಮೇಲೆ‌ ದೂರು ದಾಖಲಿಸಲು ಬಂದ ಮಹಿಳೆಯ ಮೇಲೆಯೇ ದೂರು ದಾಖಲಾಗಿದ್ದು ಪೋಷಕರು ಕಂಗಾಲಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಗೌರಿಬಿದನೂರಿನ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.