ಬಸವಕಲ್ಯಾಣ (ಬೀದರ್): ಬಡ ಜನರಿಗೆ ಸರಿಯಾದ ಪ್ರಮಾಣದಲ್ಲಿ ಪಡಿತರ ವಿತರಿಸುವಂತೆ ಮನವಿ ಮಾಡಿದ ಗ್ರಾ.ಪಂ ಸದಸ್ಯರೊಬ್ಬರ ಮೇಲೆ ಪಿಕೆಪಿಎಸ್ನ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಹುಲಸೂರ ತಾಲೂಕಿನ ಮಿರಖಲ್ ಗ್ರಾಮದಲ್ಲಿ ಜರುಗಿದೆ. ಮಿರಖಲ್ ಗ್ರಾಮದ ಗ್ರಾ.ಪಂ ಸದಸ್ಯ ಜ್ಞಾನೇಶ್ವರ ತಾತೇರಾವ್ ಶಿಂಧೆ ಹಲ್ಲೆಗೆ ಒಳಗಾದವರು.
ಮಿರಖಲ್ ಗ್ರಾಮದಲ್ಲಿ ಪಿಕೆಪಿಎಸ್ನಿಂದ ಗ್ರಾಮ ಜನರಿಗೆ ಪಡಿತರ(ರೇಷನ್) ವಿತರಿಸಲಾಗುತ್ತದೆ. ಆದರೆ, ಕಳೆದ ಕೆಲ ತಿಂಗಳುಗಳಿಂದ ಜನರಿಗೆ 11 ಕೆಜಿ ಅಕ್ಕಿ ವಿತರಿಸುವ ಬದಲಾಗಿ 10 ಕೆಜಿ ಮಾತ್ರ ವಿತರಿಸಲಾಗುತ್ತಿದೆ. ಬಡ ಜನರಿಗೆ ವಿತರಿಸಲೆಂದು ಸರ್ಕಾರದಿಂದ 11 ಕೆಜಿ ಅಕ್ಕಿ ಬರುತ್ತವೆ. ಆದರೆ, ನೀವು 10 ಕೆಜಿ ಮಾತ್ರ ವಿತರಿಸುತ್ತಿದ್ದೀರಿ. ಈ ರೀತಿ ಜರಿಗೆ ಮೋಸ ಮಾಡುತ್ತಿರುವುದು ಸರಿಯಲ್ಲ. ಸರ್ಕಾರ ನಿಗದಿಪಡಿಸಿದಂತೆ ಪ್ರತಿಯೊಬ್ಬರಿಗೂ 11 ಕೆಜಿ ಅಕ್ಕಿ ವಿತರಿಸಬೇಕು ಎಂದು ಪಿಕೆಪಿಎಸ್ನ ಆಡಳಿತ ಮಂಡಳಿಗೆ ಮನವಿ ಮಾಡಿದ್ದೆ ಎಂದು ಜ್ಞಾನೇಶ್ವರ ತಾತೇರಾವ್ ಶಿಂಧೆ ತಿಳಿಸಿದರು.
ಇದರಿಂದ ರೊಚ್ಚಿಗೆದ್ದ ಪಿಕೆಪಿಎಸ್ನ ಕಾರ್ಯದರ್ಶಿ ಶಿವಾಜಿ ಬಿರಾದಾರ ಹಾಗೂ ಅಧ್ಯಕ್ಷರು ಇಬ್ಬರು ಸೇರಿ ನನ್ನ ಮೇಲೆ ಆಯುಧದಿಂದ ಹಲ್ಲೆ ನಡೆಸಿದ್ದಾರೆ ಎಂದು ಜ್ಞಾನೇಶ್ವರ ತಾತೇರಾವ್ ಶಿಂಧೆ ಆರೋಪಿಸಿದ್ದಾರೆ. ಪಿಕೆಪಿಎಸ್ನಿಂದ ಗ್ರಾಮದ ಜನರಿಗೆ ಆಗುತ್ತಿರುವ ಅನ್ಯಾಯವನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಲ್ಲದೇ ಜೀವ ಬೇದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ವೆಬ್ ಡಿಸೈನರ್ನನ್ನೇ ಕಿಡ್ನ್ಯಾಪ್ ಮಾಡಿದ ವೆಬ್ ಸೈಟ್ ಮಾಲೀಕ.. ಮುಂದೆ ನಡೆದಿದ್ದೇನು ಗೊತ್ತಾ?
ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಜ್ಞಾನೇಶ್ವರ ಅವರನ್ನು ಬಸವಕಲ್ಯಾಣ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸುದ್ದಿ ತಿಳಿದ ಹುಲಸೂರು ಠಾಣೆ ಪೊಲೀಸರ ತಂಡ ಆಸ್ಪತ್ರೆಗೆ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.