ಸವಾಲುಗಳ ನಡುವೆಯೇ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಸುತ್ತಿದ್ದೇವೆ: ಸ್ಪೀಕರ್ ಕಾಗೇರಿ

author img

By

Published : Dec 2, 2021, 4:51 PM IST

vishweshwar-hegde-kageri

ಕೊರೊನಾ ನಿಯಂತ್ರಣ, ಅತಿವೃಷ್ಟಿ, ವಿಧಾನಪರಿಷತ್ ಚುನಾವಣೆ ಎಲ್ಲವುಗಳ ಮಧ್ಯೆ ಅಧಿವೇಶನ ಆಯೋಜಿಸುವುದು ಸವಾಲಿನ ಕಾರ್ಯವಾಗಿದೆ. ಸರ್ಕಾರ, ಜಿಲ್ಲಾಡಳಿತ, ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಪರಸ್ಪರ ಸಮನ್ವಯದೊಂದಿಗೆ ಸಿದ್ಧತೆಗಳನ್ನು ವಿಶ್ವಾಸಪೂರ್ಣವಾಗಿ ಆಯೋಜಿಸಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

ಬೆಳಗಾವಿ: ಇಲ್ಲಿನ ಸುವರ್ಣಸೌಧದಲ್ಲಿ ಡಿ. 13 ರಿಂದ 24 ರವರೆಗೆ ನಡೆಯಲಿರುವ ಚಳಿಗಾಲದ ಅಧಿವೇಶನವನ್ನು ಯಶಸ್ವಿಗೊಳಿಸಲು ಉತ್ತಮ ವಸತಿ, ಸಾರಿಗೆ, ಆಹಾರ, ಶಿಷ್ಟಾಚಾರ ಸಿದ್ಧತೆಗಳನ್ನು ಸರ್ಕಾರ, ಜಿಲ್ಲಾಡಳಿತ ಸಮರ್ಪಕವಾಗಿ ಕೈಗೊಳ್ಳಬೇಕು. ಸದ್ಯಕ್ಕೆ ಕೊರೊನಾ ಬಗ್ಗೆ ಯಾವುದೇ ಆತಂಕಗಳಿಲ್ಲ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಸುವರ್ಣಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಅಧಿವೇಶನದ ಪೂರ್ವಸಿದ್ಧತಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಅಧಿವೇಶನಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಬುಲೆಟಿನ್, ಕಾರ್ಯಕ್ರಮ ಪಟ್ಟಿ, ಕಲಾಪಗಳು, ಪ್ರಶ್ನೋತ್ತರಗಳ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಈ ಹಿಂದೆ 2018ರ ಡಿಸೆಂಬರ್‌ನಲ್ಲಿ ಇಲ್ಲಿ ಅಧಿವೇಶನ ನಡೆದಿತ್ತು. ಅದರ ನಂತರ ಕೊರೊನಾ ಕಾರಣದಿಂದ ಮೂರುವರ್ಷಗಳ ಬಳಿಕ ಸುವರ್ಣಸೌಧದಲ್ಲಿ ಅಧಿವೇಶನ ನಡೆಯುತ್ತಿದೆ ಎಂದು ತಿಳಿಸಿದರು.

ಕೊರೊನಾ ನಿಯಂತ್ರಣ, ಅತಿವೃಷ್ಟಿ, ವಿಧಾನಪರಿಷತ್ ಚುನಾವಣೆ ಎಲ್ಲವುಗಳ ಮಧ್ಯೆ ಅಧಿವೇಶನ ಆಯೋಜಿಸುವುದು ಸವಾಲಿನ ಕಾರ್ಯವಾಗಿದೆ. ಸಿದ್ಧತೆಗಳನ್ನು ಸರ್ಕಾರ, ಜಿಲ್ಲಾಡಳಿತ ಹಾಗೂ ವಿಧಾನಸಭೆ ಹಾಗೂ ವಿಧಾನಪರಿಷತ್ತಿನ ಪರಸ್ಪರ ಸಮನ್ವಯದೊಂದಿಗೆ ವಿಶ್ವಾಸಪೂರ್ಣವಾಗಿ ಆಯೋಜಿಸಬೇಕು. ಎಲ್ಲಾ ಹಂತಗಳಲ್ಲಿ ಜವಾಬ್ದಾರಿಯುತವಾಗಿ ಪರಸ್ಪರ ಸಂವಹನ ಮಾಡಬೇಕು ಎಂದರು.

ಸಚಿವರು, ಶಾಸಕರ ಹಿರಿತನ ಆಧರಿಸಿ ಸೌಕರ್ಯಗಳನ್ನು ಕಲ್ಪಿಸಬೇಕು. ಎಲ್ಲರಿಗೂ ಅಧಿಕಾರಿಗಳನ್ನು ನೇಮಿಸಬೇಕು. ಜವಾಬ್ದಾರಿಗಳನ್ನು ವಿಕೇಂದ್ರೀಕರಣಗೊಳಿಸಿ ಕಾರ್ಯ ಹಂಚಿಕೆ ಮಾಡಬೇಕು. ಅಧಿವೇಶನ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶವಿದೆ. ಕೊರೊನಾ ಕಾರಣದಿಂದ ಈ ಬಾರಿ ಮಕ್ಕಳಿಗೆ ಅವಕಾಶವಿಲ್ಲ ಎಂದು ಸ್ಪೀಕರ್‌ ವಿವರಿಸಿದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಅಧಿವೇಶನವನ್ನು ಸಾಧ್ಯವಾದಷ್ಟು ಕಡಿಮೆ ಖರ್ಚಿನಲ್ಲಿ ಆಯೋಜಿಸಬೇಕು. ವಿಧಾನಸಭೆ ಹಾಗೂ ವಿಧಾನಪರಿಷತ್ತಿನ ಎಲ್ಲಾ ಸದಸ್ಯರಿಗೆ ಬೆಳಗಾವಿಯಲ್ಲಿಯೇ ವಸತಿ ಸೌಕರ್ಯ ಕಲ್ಪಿಸಿದರೆ, ಸದನಕ್ಕೆ ಅವರು ಸಕಾಲದಲ್ಲಿ ಹಾಜರಾಗಲು ಅನುಕೂಲವಾಗುತ್ತದೆ ಎಂದರು.

ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಮಾತನಾಡಿ, ವಿಧಾನಮಂಡಲ ಅಧಿವೇಶನ ಅಚ್ಚುಕಟ್ಟಾಗಿ ಆಯೋಜಿಸಬೇಕು. ಅಧಿವೇಶನ ಸಮಯದಲ್ಲಿ ತಾಲೂಕು ಮಟ್ಟದಲ್ಲಿ ಗ್ರೇಡ್ 2 ತಹಶೀಲ್ದಾರರು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಪುರಸಭೆ, ಪಟ್ಟಣ ಪಂಚಾಯತಿಗಳ ಮುಖ್ಯಾಧಿಕಾರಿಗಳು ತಮ್ಮ ಕೇಂದ್ರ ಸ್ಥಾನಗಳಲ್ಲಿಯೇ ಇದ್ದು, ಸ್ಥಳೀಯ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.

ಓದಿ: ಆರೋಗ್ಯ ಸಿಬ್ಬಂದಿಗೆ ಬೂಸ್ಟರ್ ಡೋಸ್: ಮನ್ಸೂಕ್ ಮಾಂಡವಿಯಾ ಜೊತೆ ಸಿಎಂ ಮಹತ್ವದ ಮಾತುಕತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.