ಅಂತಾರಾಷ್ಟ್ರೀಯ ಕುಸ್ತಿ ಪಂದ್ಯಾವಳಿಗೆ ಆಯ್ಕೆ, ನೇಪಾಳಕ್ಕೆ ತೆರಳಲಿದ್ದಾರೆ ಬೆಳಗಾವಿ ಸಹೋದರರು

author img

By

Published : Sep 15, 2021, 6:03 AM IST

ಅಂತಾರಾಷ್ಟ್ರೀಯ ಕುಸ್ತಿ ಪಂದ್ಯಾವಳಿ

ನೇಪಾಳದ ಕಠ್ಮಂಡುವಿನ ಫೊಖ್ರಾದಲ್ಲಿ ಸೆ.22ರಿಂದ 24ರವರೆಗೆ ಜರುಗಲಿರುವ ಇಂಡೋ - ನೇಪಾಳ ಗೇಮ್ಸ್​ನಲ್ಲಿ ಈ ಇಬ್ಬರು ಸಹೋದರರು ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. 92 ಕೆ.ಜಿ. ಹಿರಿಯರ ವಿಭಾಗದಲ್ಲಿ ಮೀರಾಸಾಬ್ ಬೇವಿನಗಿಡದ, 92 ಕೆ.ಜಿ. ಸಬ್ ಜ್ಯೂನಿಯರ್ ವಿಭಾಗದಲ್ಲಿ ಮುಷ್ಫಿಕ್ ಆಲಂ ಬೇವಿನಗಿಡದ ಸ್ಪರ್ಧಿಸಲಿದ್ದಾರೆ. ಇದೇ 18ರಂದು ಉಗರಗೋಳ ಗ್ರಾಮದಿಂದ ನೇಪಾಳದತ್ತ ಪ್ರಯಾಣ ಬೆಳೆಸಲಿದ್ದಾರೆ.

ಬೆಳಗಾವಿ: ಅಪ್ಪ ಗುಡಿ ಕಟ್ಟಿದರೆ, ಮಕ್ಕಳು ಅದಕ್ಕೆ ಕಳಶ ಇಡಬೇಕು ಎಂಬ ಗಾದೆಯಿದೆ. ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದಲ್ಲಿ ಇಬ್ಬರು ಪೈಲ್ವಾನ್ ಸಹೋದರರು, ಇದನ್ನು ಅಕ್ಷರಶಃ ನಿಜವಾಗಿಸಿದ್ದಾರೆ. ತಂದೆ ಹಾದಿಯಲ್ಲೇ ಸಾಧನೆ ಮೆರೆಯುತ್ತ, ಅಂತಾರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.

ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಯಲ್ಲಮ್ಮನಗುಡ್ಡದಿಂದ ಮೂರೇ ಕಿ.ಮೀ. ದೂರದಲ್ಲಿರುವ ಉಗರಗೋಳ ಗ್ರಾಮದಲ್ಲಿ ಕಳೆದ 40 ವರ್ಷಗಳ ಹಿಂದೆ ಹಿರಿಯ ಕುಸ್ತಿಪಟು ರಾಜೇಸಾಬ್ ಬೇವಿನಗಿಡದ ತಮ್ಮ ಪ್ರತಿಭೆ ಮೂಲಕವೇ ಕುಸ್ತಿಪ್ರೇಮಿಗಳ ಮನ ಗೆದ್ದದ್ದರು. ಅವರು ಕರ್ನಾಟಕ ಕೇಸರಿ, ಕರ್ನಾಟಕ ಕಂಠೀರವ, ಕರ್ನಾಟಕ ಕುಮಾರ, ಕೆಂಪೇಗೌಡ ಕೇಸರಿ, ದಸರಾ ಕೇಸರಿಣ ಕೆಂಗಲ್ ಹನುಮಂತರಾಯ್ ಮತ್ತಿತರ ಪ್ರಶಸ್ತಿ ಮುಡಿಗೇರಿಸಿಕೊಂಡು ಈ ಊರಿನ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಮಿಂಚಿಸಿದ್ದರು.

ಅಂತಾರಾಷ್ಟ್ರೀಯ ಕುಸ್ತಿ ಪಂದ್ಯಾವಳಿಗೆ ಆಯ್ಕೆಯಾದ ಬೆಳಗಾವಿ ಸಹೋದರರು

ಹತ್ತಾರು ಸಾಹಸ ಕಲೆಗಳ ಮೂಲಕವೇ ಉತ್ತರ ಕರ್ನಾಟಕದ ನೆಲದಲ್ಲಿ ಛಾಪು ಮೂಡಿಸಿದ್ದರು. ಈಗ ಅವರ ಪುತ್ರರಾದ ಮೀರಾಸಾಬ್ ಹಾಗೂ ಮುಷ್ಫಿಕ್ ಆಲಂ ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಾಮರ್ಥ್ಯ ಪರೀಕ್ಷೆಗೆ ಮುಂದಾಗಿದ್ದಾರೆ. ಹಲವು ವರ್ಷಗಳಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕುಸ್ತಿ ಅಖಾಡಗಳಲ್ಲಿ ಗೆಲುವಿನ ನಗೆ ಬೀರುತ್ತ ಬಂದಿದ್ದ ಅವರು, ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

wrestling
ಮೀರಾಸಾಬ್ ಹಾಗೂ ಮುಷ್ಫಿಕ್ ಗೆದ್ದಿರುವ ಪ್ರಶಸ್ತಿಗಳು
ನೇಪಾಳದ ಕಠ್ಮಂಡುವಿನ ಫೊಖ್ರಾದಲ್ಲಿ ಸೆ.22ರಿಂದ 24ರವರೆಗೆ ಜರುಗಲಿರುವ ಇಂಡೋ-ನೇಪಾಳ ಗೇಮ್ಸ್​ನಲ್ಲಿ ಈ ಇಬ್ಬರು ಸಹೋದರರು ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. 92 ಕೆ.ಜಿ. ಹಿರಿಯರ ವಿಭಾಗದಲ್ಲಿ ಮೀರಾಸಾಬ್ ಬೇವಿನಗಿಡದ, 92 ಕೆ.ಜಿ. ಸಬ್ ಜ್ಯೂನಿಯರ್ ವಿಭಾಗದಲ್ಲಿ ಮುಷ್ಫಿಕ್ ಆಲಂ ಬೇವಿನಗಿಡದ ಸ್ಪರ್ಧಿಸಲಿದ್ದಾರೆ.
ಇದೇ 18ರಂದು ಉಗರಗೋಳ ಗ್ರಾಮದಿಂದ ನೇಪಾಳದತ್ತ ಪ್ರಯಾಣ ಬೆಳೆಸಲಿದ್ದಾರೆ.ನಾವು ಕಷ್ಟದಲ್ಲೇ ಬೆಳೆದು ಬಂದವರು. ತಂದೆಯವರ ಗರಡಿಯಲ್ಲಿ ಕುಸ್ತಿಯಲ್ಲಿ ಸ್ಪರ್ಧಿಸುತ್ತ ಬಂದಿದ್ದೇವೆ. ನನ್ನ ಅಣ್ಣಂದಿರಾದ ಮಲ್ಲನಗೌಡ ಪಾಟೀಲ, ರಾಜು ಪಾಟೀಲ ಅಗತ್ಯ ಮಾರ್ಗದರ್ಶನ ನೀಡುತ್ತಿದ್ದಾರೆ.
ಅಲ್ಲದೆ, ನಮ್ಮೂರಿನ ಹಿರಿಯರು ಆರ್ಥಿಕ ಸಹಾಯ ಮಾಡಿದ್ದಾರೆ. ಅವರೆಲ್ಲರ ಸಹಕಾರದಿಂದಾಗಿ ಇದೇ ಮೊದಲ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದು, ಇದರಲ್ಲಿ ಗೆದ್ದು ನಮ್ಮೂರು, ದೇಶದ ಕೀರ್ತಿ ಹೆಚ್ಚಿಸುವುದೇ ನಮ್ಮ ಗುರಿ ಎಂದು ಇಬ್ಬರು ಸಹೋದರರು ಹೇಳಿದರು. ನನ್ನ ಸಹೋದರ ಸಮಾನರಾದ ರಾಜೇಸಾಬ್ ಇಡೀ ದೇಶದಲ್ಲಿ ನಮ್ಮೂರಿನ ಹೆಸರು ಬೆಳಗಿದ್ದರು. ಈಗ ಅವರ ಪುತ್ರರಿಬ್ಬರು ವಿದೇಶಕ್ಕೆ ಹೊರಡುತ್ತಿರುವುದು ಬಹಳ ಸಂತಸ ತಂದಿದೆ.

ಅವರೂ ಅಲ್ಲಿ ಗೆಲುವು ಸಾಧಿಸಿ ನಮ್ಮೂರಿನ ಕೀರ್ತಿ ಹೆಚ್ಚಿಸಲಿ ಎನ್ನುತ್ತಾರೆ ಹಿರಿಯ ಕ್ರೀಡಾಪಟು ರಾಜನಗೌಡ ಪಾಟೀಲ. ಕುಸ್ತಿಯಾಡಲು ಬಹಳ ಶ್ರಮ ಬೇಕು. ಪೌಷ್ಠಿಕ ಆಹಾರವೂ ಅಗತ್ಯ. ಆದರೂ, ಬಡತನದಲ್ಲೇ ಹೇಗೋ ಕುಸ್ತಿಯಾಡುತ್ತ ಬಂದಿದ್ದೆ. ನನ್ನನ್ನ ನೋಡಿ ಮಕ್ಕಳು ಕುಸ್ತಿ ಕಲಿತಿದಿದ್ದಾರೆ. ಈಗ ನೇಪಾಳಕ್ಕೆ ಹೋಗುತ್ತಿದ್ದಾರೆ. ಅವರಿಗೆ ಶುಭವಾಗಲಿ ಎಂದು ಹಾರೈಸುತ್ತೇನೆ. ಸರ್ಕಾರ ದೇಸಿ ಕ್ರೀಡೆ ಉಳಿವಿಗೆ ಇನ್ನಷ್ಟು ಮಹತ್ವದ ಹೆಜ್ಜೆ ಇಡಬೇಕು ಎಂದು ರಾಜೇಸಾಬ್ ಬೇವಿನಗಿಡದ ಒತ್ತಾಯಿಸುತ್ತಾರೆ.

ಒಟ್ಟಿನಲ್ಲಿ ಈ ಸಣ್ಣ ಹಳ್ಳಿಯಿಂದ ಇಬ್ಬರು ಪ್ರತಿಭೆಗಳು ಕುಸ್ತಿ ಅಂಗಳದಲ್ಲಿ ಮಿಂಚಲು ವಿದೇಶಕ್ಕೆ ಹೋಗುತ್ತಿರುವುದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದ್ದು, ಗೆದ್ದು ಬರಲೆಂದು ಹಾರೈಸಿದ್ದಾರೆ.

ಇದನ್ನೂ ಓದಿ:ದೇಶದ ಕ್ರೀಡಾ ವ್ಯವಸ್ಥೆಯ ವಿರುದ್ಧ ಟೀಕೆ ; ಜಾವೆಲಿನ್ ಸ್ಟಾರ್ ನೀರಜ್ ಚೋಪ್ರಾ ತರಬೇತುದಾರ ಉವೆ ಹಾನ್‌ ವಜಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.