ಹೊಸ ಶಿಕ್ಷಣ ನೀತಿ ಭಾರತವನ್ನು ಜಾಗತಿಕವಾಗಿ ಬೆಳೆಸಲಿದೆ : ಸಚಿವ ಅಶ್ವತ್ಥ್ ನಾರಾಯಣ

author img

By

Published : Oct 13, 2021, 8:50 PM IST

Minister Ashwattha Narayana

ಪ್ರತಿವರ್ಷವೂ ಪ್ರಾ‌ಧ್ಯಾಪಕರ ನೇಮಕಾತಿ ಮಾಡಿಕೊಳ್ಳಲಾಗುವುದು. ಶಿಕ್ಷಕರು, ಪ್ರಾಧ್ಯಾಪಕರಿಗೆ ತರಬೇತಿ ನೀಡಲಾಗುವುದು. ಶಿಕ್ಷಣ ಸಂಸ್ಥೆಗಳಿಗೆ ಸ್ವಾತಂತ್ರ್ಯ ನೀಡಲಾಗುವುದು. ಅಧಿಕಾರದ ವಿಕೇಂದ್ರೀಕರಣ ಮಾಡಲಾಗುವುದು. ಗುಣಮಟ್ಟದ ಶಿಕ್ಷಣ ಹಾಗೂ ಸಂಪನ್ಮೂಲ ನೀಡಲಾಗುವುದು. ಈ ಹಿನ್ನೆಲೆ ಭಾರತ ಮತ್ತು ನೆಸ್ಕಾಂ ಸಂಸ್ಥೆಯ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರತಿವರ್ಷ‌ 5 ಲಕ್ಷ ಜನರಿಗೆ ಡಿಜಿಟಲ್‌ ತರಬೇತಿ ನೀಡಲಾಗುವುದು..

ಬೆಳಗಾವಿ : ರಾಷ್ಟೀಯ ಶಿಕ್ಷಣ ನೀತಿ ಭಾರತವು ಜಾಗತಿಕ ಮಟ್ಟದಲ್ಲಿ ಬೆಳೆಯಲು ಸಹಾಯ ಮಾಡಲಿದೆ. ಈ ನೀತಿಯು ಉತ್ತಮ‌ ಗುಣಮಟ್ಟದ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಸಿ ಎನ್ ಅಶ್ವತ್ಥ್ ನಾರಾಯಣ ಹೇಳಿದರು.

ನಗರದ ಕೆಎಲ್ಇ ಆವರಣದಲ್ಲಿರುವ ಜೀರಗೆ ಸಭಾಭವನದಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ನೀತಿ -2020 ಅನುಷ್ಠಾನದ ದಿಟ್ಟ ಹೆಜ್ಜೆ ಕುರಿತು ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

Workshop held in Belgaum
ಬೆಳಗಾವಿಯಲ್ಲಿ ನಡೆದ ಕಾರ್ಯಾಗಾರ

ರಾಷ್ಟೀಯ ಶಿಕ್ಷಣ ನೀತಿ-2020 ಕುರಿತು ಅರಿವು ಮೂಡಿಸಲು ಅನೇಕ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸ್ವಾತಂತ್ರ್ಯ ನಂತರ ಅಳವಡಿಸಿಕೊಳ್ಳಲಾಗುತ್ತಿರುವ 3ನೇ ಶಿಕ್ಷಣ ನೀತಿ ಇದಾಗಿದೆ. 34 ವರ್ಷಗಳ‌ ನಂತರ ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆ ಮಾಡಲಾಗಿದೆ.

ಇಂದು ತಂತ್ರಜ್ಞಾನದ ಬೆಳವಣಿಗೆಯಿಂದ‌ ಜಗತ್ತೇ ಹಳ್ಳಿಯಂತಾಗಿದೆ. ಹೊಸ ಶಿಕ್ಷಣ ನೀತಿ ಕಲಿಕೆಯಲ್ಲಿ ಮಹತ್ತರವಾದ ಬದಲಾವಣೆ ತರಲಿದೆ. ಈ ನೀತಿ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ಹಾಗೂ ಸ್ಪಷ್ಟ ಗುರಿಗಳನ್ನು ಹೊಂದಿದೆ ಎಂದು ತಿಳಿಸಿದರು.

ವಿಶ್ವ ಮಾನವನಾಗಲು ಶಿಕ್ಷಣ ನೀತಿ ಸಹಕಾರಿ : ವಿಶ್ವ ಮಾನವನಾಗಬೇಕಾದರೆ ಎಲ್ಲಾ ಗುಣಮಟ್ಟದಲ್ಲಿ ಮುಂಚೂಣಿಯಲ್ಲಿರಬೇಕು. ತಂತ್ರಜ್ಞಾನ ಬೆಳೆದರೆ ಮಾತ್ರ ದೇಶಗಳಿಗೆ ಮಾನ್ಯತೆ ದೊರೆಯುತ್ತದೆ. ಈ ನಿಟ್ಟಿನಲ್ಲಿ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲು ರಾಷ್ಟೀಯ ಶಿಕ್ಷಣ ನೀತಿ ಸಹಕಾರಿಯಾಗಲಿದೆ. ಜಾಗತಿಕ ಮಟ್ಟದಲ್ಲಿ ಆವಿಷ್ಕಾರಗಳನ್ನು ಮಾಡಲು ಶಿಕ್ಷಣ ಮೂಲವಾಗಿದೆ.

ಜನಸಂಖ್ಯೆ ಹೆಚ್ಚಿನ ಮಟ್ಟದಲ್ಲಿರುವ ನಮ್ಮ ದೇಶದಲ್ಲಿ ಜನರ ಜೀವನಮಟ್ಟ ಸುಧಾರಿಸಲು ಈ ನೀತಿಯು ಶಿಕ್ಷಣದ ಮೂಲಕ ದೇಶದ ಅಭಿವೃದ್ಧಿಗೆ ಅನುಕೂಲಕರವಾಗಿದೆ. 2ನೇ ಮಹಾಯುದ್ಧದ ನಂತರ ಕೊರಿಯಾ,ಚೀನಾ,ಜಪಾನ್, ಜರ್ಮನಿ ದೇಶಗಳು ಪುನರ್ ರಚನೆಗೊಂಡವು. ಇದಕ್ಕೆ ಕಾರಣ ಅವರಲ್ಲಿರುವ ಶಿಕ್ಷಣ ಮತ್ತು ಕೌಶಲ್ಯ ಎಂದು ತಿಳಿಸಿದರು.

2030ರೊಳಗೆ ಎಲ್ಲರಿಗೂ ಅಕ್ಷರ ಜ್ಞಾನ : ಪ್ರಥಮ್ ಸರ್ವೇ ಸಂಸ್ಥೆಯ ಸಮೀಕ್ಷೆಯ ಪ್ರಕಾರ‌ ಶೇ.30ರಷ್ಟು ಪ್ರಾಥಮಿಕ, ಪ್ರೌಢ ಶಿಕ್ಷಣ ದಾಖಲಾತಿ ಪ್ರಮಾಣವಿದೆ. ಉನ್ನತ ಶಿಕ್ಷಣದ ದಾಖಲಾತಿ ಪ್ರಮಾಣದ ಮೊತ್ತವು ಶೇ.26ರಷ್ಟಿದೆ. ಇದರ ಪ್ರಮಾಣವನ್ನು ಹೆಚ್ಚಿಸಲು ಸೂಕ್ತ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುವುದು. 2030ರೊಳಗಾಗಿ ಎಲ್ಲರಿಗೂ ಅಕ್ಷರ ಜ್ಞಾನ ನೀಡಲಾಗುವುದು ಎಂದು ಭರವಸೆ ನೀಡಿದರು.

ಗೊಂದಲಗಳಿಗೆ ಒಳಗಾಗಬೇಡಿ : ರಾಷ್ಟೀಯ ಶಿಕ್ಷಣ ನೀತಿಯಲ್ಲಿ ಮೆರಿಟ್‌, ವಿದ್ಯಾರ್ಥಿ ವೇತನ ಹಾಗೂ ಮೀಸಲಾತಿಗಳನ್ನು ತೆಗೆದು ಹಾಕಲಾಗುವುದಿಲ್ಲ. ಶಿಕ್ಷಕರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಮತ್ತು ಪಾಲಕರು ಈ ನೀತಿಯ ಕುರಿತು ಯಾವುದೇ ಗೊಂದಲಗಳಿಗೆ ಒಳಗಾಗಬಾರದು. ಈಗಾಗಲೇ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಿಗೆ ನೀಡಿರುವ ಮಾಹಿತಿಯನ್ನು ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

ಪಾರದರ್ಶಕ ವ್ಯವಸ್ಥೆಗೆ ಒತ್ತು : ವಿದ್ಯಾರ್ಥಿಗಳಿಂದ ಪಡೆದ ಹಣವನ್ನು ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಹಾಗೂ ಪ್ರಾಧ್ಯಾಪಕರ ವೇತನಕ್ಕೆ ಮಾತ್ರ ಬಳಸಬೇಕು. ಈ ನೀತಿಯಲ್ಲಿ ಪಬ್ಲಿಕ್ ಡೊಮೇನ್​​​ನಲ್ಲಿ ಮಾಹಿತಿ ದೊರಕುವಂತೆ ಮಾಡಿ ಪಾರದರ್ಶಕತೆ ಕಾಪಾಡಲಾಗುವುದು ಎಂದರು.

ಪ್ರತಿವರ್ಷ ಪ್ರಾಧ್ಯಾಪಕರ ನೇಮಕಾತಿ : ಪ್ರತಿವರ್ಷವೂ ಪ್ರಾ‌ಧ್ಯಾಪಕರ ನೇಮಕಾತಿ ಮಾಡಿಕೊಳ್ಳಲಾಗುವುದು. ಶಿಕ್ಷಕರು, ಪ್ರಾಧ್ಯಾಪಕರಿಗೆ ತರಬೇತಿ ನೀಡಲಾಗುವುದು. ಶಿಕ್ಷಣ ಸಂಸ್ಥೆಗಳಿಗೆ ಸ್ವಾತಂತ್ರ್ಯ ನೀಡಲಾಗುವುದು. ಅಧಿಕಾರದ ವಿಕೇಂದ್ರೀಕರಣ ಮಾಡಲಾಗುವುದು. ಗುಣಮಟ್ಟದ ಶಿಕ್ಷಣ ಹಾಗೂ ಸಂಪನ್ಮೂಲ ನೀಡಲಾಗುವುದು. ಈ ಹಿನ್ನೆಲೆ ಭಾರತ ಮತ್ತು ನೆಸ್ಕಾಂ ಸಂಸ್ಥೆಯ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರತಿವರ್ಷ‌ 5 ಲಕ್ಷ ಜನರಿಗೆ ಡಿಜಿಟಲ್‌ ತರಬೇತಿ ನೀಡಲಾಗುವುದು ಎಂದರು.

ಇದನ್ನೂ ಓದಿ: ಕೆಪಿಸಿಸಿ ಮಾಧ್ಯಮ‌ ಸಮನ್ವಯಕಾರ ಸಲೀಂ ತಲೆದಂಡ: ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.