ಬೆಳಗಾವಿ: ಕೌಟುಂಬಿಕ ಕಲಹಕ್ಕೆ ಬೇಸತ್ತು ಎರಡು ವರ್ಷದ ಪುತ್ರನ ಜೊತೆಗೆ ತಾಯಿ ನದಿಗೆ ಹಾರಿದ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ವೆಂಕಟೇಶ್ವರ ದೇವಾಲಯ ಪಕ್ಕದಲ್ಲಿರುವ ಮಲಪ್ರಭ ನದಿಗೆ ಪುತ್ರನ ಜೊತೆಗೆ ತಾಯಿ ಹಾರಿದ್ದಾಳೆ. ಎರಡು ವರ್ಷದ ಪುತ್ರ ಶಿವಲಿಂಗಪ್ಪ ಬನ್ನೂರ ಜೊತೆಗೆ ತಾಯಿ ರುದ್ರವ್ವ ಬಸವರಾಜ್ ಬನ್ನೂರು (30) ನದಿಗೆ ಹಾರಿದವರು.
ಎರಡು ವರ್ಷದ ಮಗು ಜೊತೆ ನದಿಗೆ ಹಾರಿದ ತಾಯಿ: ರುದ್ರವ್ವ ನದಿಗೆ ಹಾರಿರುವ ದೃಶ್ಯವನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕೆಲ ವರ್ಷಗಳಿಂದ ಪುತ್ರನ ಜೊತೆಗೆ ರುದ್ರಮ್ಮ ತವರು ಮನೆಯಲ್ಲಿ ವಾಸವಿದ್ದಳು.
ರುದ್ರಮ್ಮ ವಾಸವಿದ್ದ ಇಡಗುಂಡಿಗೆ ಹೋಗಿ ಬಸವರಾಜ ಪತ್ನಿಯನ್ನು ಮನವೊಲಿಸಿದ್ದರಂತೆ. ರಾಮದುರ್ಗ ಬೇಡ ತುಮಕೂರಲ್ಲಿ ಶಿಫ್ಟ್ ಆಗಿ ಕೆಲಸ ಮಾಡಿಕೊಂಡು ಜೀವನ ನಡೆಸೋಣ ಎಂದು ಹೇಳಿದ್ದರಂತೆ. ಅದಕ್ಕೆ ಒಪ್ಪಿದ ರುದ್ರವ್ವ ಇಂದು ಪತಿಯ ಜೊತೆಗೆ ರಾಮದುರ್ಗಗೆ ಬಂದಿದ್ದರು.
ಈ ವೇಳೆ ಆಟೋ ಚಾಲಕನಿಗೆ ಕೊಡಲು ಚಿಲ್ಲರೆ ತರಲು ಹೋದಾಗ ರುದ್ರವ್ವ ತನ್ನ ಪುತ್ರನ ಜೊತೆಗೆ ನದಿಗೆ ಹಾರಿದ್ದಾರೆ. ಪತ್ನಿ- ಪುತ್ರ ಕಾಣದಿದ್ದಾಗ ಬಸವರಾಜ್ ಅಲ್ಲೇ ಹುಡುಕಾಡಿ ಬಳಿಕ ಪೊಲೀಸರಿಗೆ ಮಾಹಿತಿ ನೀಡಲು ಹೋಗಿದ್ದರು. ಬಳಿಕ ಪ್ರತ್ಯಕ್ಷದರ್ಶಿ ನೀಡಿದ ಮಾಹಿತಿ ಆಧರಿಸಿ ಪೊಲೀಸರು, ಮಹಿಳೆಯ ಪತಿ ನದಿ ಕಡೆಗೆ ಹೋಗಿದ್ದರು. ಆಗ ನದಿ ಪಕ್ಕ ರುದ್ರವ್ವನ ಚಪ್ಪಲಿ ಕಂಡು ಬಂದಿವೆ.
ಸ್ಥಳಕ್ಕೆ ರಾಮದುರ್ಗ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ತಾಯಿ ಮಗುವಿಗೆ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ. ರಾಮದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
(ಇದನ್ನೂ ಓದಿ: ಪೋಕ್ಸೋ ಪ್ರಕರಣ: ಆರೋಪಿ ಯುವಕ ಆತ್ಮಹತ್ಯೆ.. ಮರುದಿನ ನಿರ್ದೋಷಿ ಎಂದು ಕೋರ್ಟ್ ತೀರ್ಪು)