ಆಂಧ್ರದಲ್ಲಿ ಸಂಭವಿಸಿದ ಅಪಘಾತದಲ್ಲಿ ಅಥಣಿಯ ಆರು ಮಂದಿ ಸಾವು; ಸ್ವಗ್ರಾಮದಲ್ಲಿ ನೆರವೇರಿತು ಅಂತ್ಯಕ್ರಿಯೆ

ಆಂಧ್ರದಲ್ಲಿ ಸಂಭವಿಸಿದ ಅಪಘಾತದಲ್ಲಿ ಅಥಣಿಯ ಆರು ಮಂದಿ ಸಾವು; ಸ್ವಗ್ರಾಮದಲ್ಲಿ ನೆರವೇರಿತು ಅಂತ್ಯಕ್ರಿಯೆ
ತಿರುಪತಿಗೆ ತೆರಳಿ ಮರಳುವಾಗ ಕ್ರೂಸರ್ ವಾಹನಕ್ಕೆ ಲಾರಿ ಡಿಕ್ಕಿ ಸಂಭವಿಸಿ ಸ್ಥಳದಲ್ಲಿ ಅಥಣಿ ಮೂಲದ ಐದು ಜನ ಮೃತಪಟ್ಟಿದ್ದರು. ಇಂದು ಅವರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
ಚಿಕ್ಕೋಡಿ : ಸೆಪ್ಟೆಂಬರ್ 15 ರಂದು ತಿರುಪತಿಯ ತಿಮ್ಮಪ್ಪನ ದರ್ಶನ ಮಾಡಿಕೊಂಡು ಸ್ವ ಗ್ರಾಮಕ್ಕೆ ಆಗಮಿಸುತ್ತಿದ್ದ ಅಥಣಿ ತಾಲೂಕಿನ ಬಡಚಿ ಗ್ರಾಮದ ಭಕ್ತರ ಕ್ರೂಸರ್ ವಾಹನಕ್ಕೆ ಲಾರಿ ಡಿಕ್ಕಿ ಸಂಭವಿಸಿ ಸ್ಥಳದಲ್ಲಿ ಐದು ಜನ ಮೃತಪಟ್ಟಿದ್ದರು. ಇವತ್ತು ಅವರ ಸ್ವ ಗ್ರಾಮದಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.
ತೆಲಂಗಾಣದ ಸೂರ್ಯಪೇಟ ಜಿಲ್ಲೆಯ ಮಟ್ಟಮ್ ಪಲ್ಲಿ, ಕಡಪ-ಚಿತ್ತೂರು ರಸ್ತೆಯಲ್ಲಿ ಅಪಘಾತ ಸಂಭವಿಸಿ ಐದು ಜನ ಸಾವು ಸಂಭವಿಸಿ 11 ಜನರಿಗೆ ಗಾಯಗಳಾಗಿತ್ತು. ಇದರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿತ್ತು. ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ತಾಯಿ ಶೋಭಾ ಆಜೂರ(36), ಮಗಳು ಅಂಬಿಕಾ ಆಜೂರ(14). ಹನುಮಂತ ಆಜೂರ (42) ಹಾಗೂ ಪತ್ನಿ ಮಹಾನಂದಾ ಆಜೂರ(32), ಕ್ರೂಸರ್ ವಾಹನ ಚಾಲಕ ಹನುಮಂತ ಜಾಧವ್ ಸೇರಿ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಇವತ್ತು ಮುಂಜಾನೆ ಮೃತದೇಹಗಳನ್ನು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು. ಸ್ಥಳೀಯ ಶಾಸಕ ಲಕ್ಷ್ಮಣ್ ಸವದಿ ಹಾಗೂ ಮಾಜಿ ಶಾಸಕ ಮಹೇಶ್ ಕುಮಠಳ್ಳಿ ಭಾಗವಹಿಸಿದ್ದರು. ಆಜೂರ ಕುಟುಂಬಸ್ಥರ ತೋಟದಲ್ಲಿ ನಾಲ್ಕು ಜನರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಜಾಧವ್ ಕುಟುಂಬಸ್ಥರ ತೋಟದಲ್ಲಿ ಮೃತ ಚಾಲಕ ಹನುಮಂತ ಜಾಧವ್ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.
ಅಂತ್ಯಕ್ರಿಯೆ ಮುಗಿಯುವ ಹೊತ್ತಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಸ್ತೂರಿ ಶೇಖರ್ (34) ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂತು. ಅಜೂರ ಕುಟುಂಬದಲ್ಲಿ ಒಟ್ಟು ಐದು ಜನರ ಸಾವು ಸಂಭವಿಸಿ ಸಾವಿನ ಸಂಖ್ಯೆ 6ಕ್ಕೆ ಏರಿದೆ. ಬೆಂಗಳೂರಿನಿಂದ ಮಧ್ಯಾಹ್ನದ ವೇಳೆಗೆ ಗ್ರಾಮಕ್ಕೆ ಮೃತದೇಹ ತಲುಪುಬಹುದೆಂದು ಅಂದಾಜಿಸಲಾಗಿತ್ತು. ನಂತರ ಅವರದು ಅಂತ್ಯಕ್ರಿಯೆ ನೆರವೇರಲಿದೆ.
ಇದೇ ವೇಳೆ ಅಥಣಿ ಶಾಸಕ ಲಕ್ಷ್ಮಣ್ ಸವದಿ ಹಾಗೂ ಮಾಜಿ ಶಾಸಕ ಮಹೇಶ ಕುಮಠಳ್ಳಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಸಾಂತ್ವನ ಹೇಳಿದರು. ನಮ್ಮ ತಾಲೂಕಿನಲ್ಲಿ ಇಂಥ ದುರ್ಘಟನೆ ಸಂಭವಿಸಿರಲಿಲ್ಲ. ಈ ಘಟನೆಯಿಂದ ನಾವು ದಿಗ್ಭ್ರಮೆಗೊಳಗಾಗಿದ್ದೇವೆ. ಆಜೂರ್ ಮತ್ತು ಜಾಧವ್ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಆ ದೇವರು ಕರುಣಿಸಲಿ. ಎರಡು ಕುಟುಂಬಗಳು ಬಡತನದಲ್ಲಿ ಬೆಳೆದ ಕುಟುಂಬಗಳಾಗಿವೆ ಮತ್ತು ಕೃಷಿ ನಂಬಿಕೊಂಡು ಜೀವನ ಸಾಗಿಸುತ್ತಿದ್ದರು.
ಶ್ರಾವಣ ಮಾಸ ಹಿನ್ನೆಲೆಯಲ್ಲಿ ದೇವರ ದರ್ಶನಕ್ಕೆ ತೆರಳಿದ್ದರು. ಮಾರ್ಗ ಮಧ್ಯದಲ್ಲಿ ಅವಘಡ ಸಂಭವಿಸಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ನಾನು ಕೋರುತ್ತೇನೆ ಮತ್ತು ಮುಖ್ಯಮಂತ್ರಿಗಳ ಹತ್ತಿರ ಪರಿಹಾರ ಹಣದ ಬಗ್ಗೆ ಈಗಾಗಲೇ ಮಾತನಾಡಲಾಗಿದೆ. ನಾಳೆ ಕೂಡ ನಾನು ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಈ ವಿಚಾರವನ್ನು ಅವರಿಗೆ ಖುದ್ದಾಗಿ ತಿಳಿಸುತ್ತೇನೆ ಎಂದು ಸ್ಥಳೀಯ ಶಾಸಕ ಸವದಿ ಅವರು ಹೇಳಿದರು.
