ನಾನು ಸಾವಿಗೆ ಹೆದರುವವನಲ್ಲ: ರಾಜಕೀಯ ಜಿದ್ದಾಜಿದ್ದಿಗೆ ಬರಲಿ.. S R ವಿಶ್ವನಾಥ್ ಪಂಥಾಹ್ವಾನ

author img

By

Published : Dec 1, 2021, 4:22 PM IST

Updated : Dec 1, 2021, 7:30 PM IST

ಎಸ್.ಆರ್.ವಿಶ್ವನಾಥ್

ಸತತವಾಗಿ ನನ್ನ ಮೇಲೆ ಆಪಾದನೆ ಮಾಡುತ್ತಿದ್ದು, ವಿಡಿಯೋದಲ್ಲಿ ಎಲ್ಲವನ್ನೂ ಮಾತನಾಡಿದ್ದಾರೆ. ನಾನು ಸೋಲು, ಗೆಲುವು ಎರಡನ್ನೂ ನೋಡಿದ್ದೇನೆ. ಆದರೆ ಗೋಪಾಲಕೃಷ್ಣ ಸುಪಾರಿ ನೀಡಿರುವ ವಿಷಯವು ನಮ್ಮ ಕಾರ್ಯಕರ್ತರು, ಅಭಿಮಾನಿಗಳಿಗೆ ಆತಂಕ ತಂದಿದೆ ಎಂದು ಎಸ್.ಆರ್.ವಿಶ್ವನಾಥ್ ಹೇಳಿದ್ದಾರೆ.

ಬೆಂಗಳೂರು : ರಾಜಕೀಯ ಜಿದ್ದಾಜಿದ್ದಿಗೆ ಬರಲಿ, ನಾನು ಹೋರಾಟ ಮಾಡುತ್ತೇನೆ. ಆದರೆ ದ್ವೇಷದ ರಾಜಕೀಯ ಸರಿಯಲ್ಲ ಎಂದು ಯಲಹಂಕ ಕ್ಷೇತ್ರದ ಶಾಸಕರೂ ಆಗಿರುವ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಬ್ಬರು ಶಾಸಕರಿಗೆ ಕೊಲೆ ಸುಫಾರಿ‌ ನೀಡಿದ್ದು ನಿಜಕ್ಕೂ ಆತಂಕಕಾರಿ. ಯಾಕೆ ಇಂತಹ ದುರ್ಬುದ್ದಿ ಕಾಂಗ್ರೆಸ್​​​ ಮುಖಂಡ ಗೋಪಾಲಕೃಷ್ಣ ಅವರಿಗೆ ಬಂತೋ ಗೊತ್ತಿಲ್ಲ ಎಂದು ಕಿಡಿಕಾರಿದರು.

ಕೊಲೆ ಸಂಚಿಗೆ ವಿಶ್ವನಾಥ್ ಪ್ರತಿಕ್ರಿಯೆ

ಹತ್ಯೆ‌ ಸಂಚು ಪ್ರಕರಣ ಹಿನ್ನೆಲೆಯಲ್ಲಿ ಈಗಾಗಲೇ ಗೃಹ‌ ಸಚಿವರ ಗಮನಕ್ಕೆ ತಂದಿದ್ದೇನೆ. ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ನನ್ನ ಹತ್ಯಗೆ ಸುಫಾರಿ‌ ಕೊಟ್ಟ ಉದ್ದೇಶ ಏನು? ಇದರ ಹಿಂದೆ ಯಾರಿದ್ದಾರೆ? ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಯಲಿ ಎಂದು ಒತ್ತಾಯಿಸಿದರು.

ಕೊಲೆ ಸಂಚಿಗೆ ವಿಶ್ವನಾಥ್ ಪ್ರತಿಕ್ರಿಯೆ

ಕುಳ್ಳ ದೇವರಾಜ್ ನನಗೆ ಗೊತ್ತು, ಆದರೆ ಆತನಿಗೆ ನನಗೆ ಯಾವುದೇ ಸಂಪರ್ಕ ಇಲ್ಲ. ಈ ವಿಡಿಯೋ ಮಾಡಿ ಎಷ್ಟು ದಿನ ಆಯ್ತು ಎಂದು ಗೊತ್ತಿಲ್ಲ.‌ ಆದರೆ ಸುಫಾರಿ‌ ಪಡೆದ ಕುಳ್ಳ ದೇವರಾಜ್ ಕ್ಷಮಾಪಣಾ ಪತ್ರ ಹಾಗೂ ವಿಡಿಯೋ ಕಳಿಸಿಕೊಟ್ಟಿದ್ದಾನೆ. ನಿನ್ನೆ ಸಂಜೆ 7.30 ರ ಸುಮಾರಿಗೆ ಮನೆಗೆ ಒಂದು ಪತ್ರ ಬಂದಿತ್ತು, ಅದರಲ್ಲಿ ಕ್ಷಮಾಪಣಾ ಪತ್ರ ಮತ್ತು‌ ವಿಡಿಯೋ ಇತ್ತು ಎಂದು ತಿಳಿಸಿದರು.

ಕೊಲೆ ಸಂಚಿಗೆ ವಿಶ್ವನಾಥ್ ಪ್ರತಿಕ್ರಿಯೆ

ಚುನಾವಣೆಯಲ್ಲಿ ಸೋಲಿಸಲು ಆಗಲ್ಲ, ಅದಕ್ಕಾಗಿ ಐದು ಕೋಟಿ ಕೊಡ್ತೀನಿ ಮುಗಿಸು ಎಂದು ವಿಡಿಯೋದಲ್ಲಿ ನನ್ನ ಹತ್ಯೆಗೆ ಸುಫಾರಿ ಬಗ್ಗೆ ಉಲ್ಲೇಖ ಇದೆ. ನಾ‌ನು‌ ತೋಟಕ್ಕೆ ಹೋಗುವ ಬಗ್ಗೆಯೂ ಸಂಭಾಷಣೆಯಲ್ಲಿ ಇದೆ. ಸಂಭಾಷಣೆಯಲ್ಲಿ ನನ್ನ ವಿರುದ್ಧ ದ್ವೇಷದ ಮಾತುಗಳು ಇವೆ. ನಾನು ತೋಟಕ್ಕೆ ಹೋಗುವುದು. ನನ್ನ ಜೊತೆ ಯಾರು ಇರುತ್ತಾರೆ‌. ಯಾವ ರೀತಿ ಹತ್ಯೆ ಮಾಡಬೇಕು ಎಂದು ಸಂಭಾಷಣೆ ಸಹ ಇದೆ. ಪೊಲೀಸ್ ಇಲಾಖೆಯ ಮೇಲೆ ನಂಬಿಕೆ ಇದೆ.‌ ಅವರು ಸಂಪೂರ್ಣ ತನಿಖೆ ಮಾಡುತ್ತಾರೆ ಎಂದು ಹೇಳಿದರು.

ವಿಶ್ವನಾಥ್ ನೀಡಿರುವ ದೂರು ಪ್ರತಿ
ವಿಶ್ವನಾಥ್ ನೀಡಿರುವ ದೂರು ಪ್ರತಿ

ಸಾವಿಗೆ ಹೆದರುವವನು ನಾನಲ್ಲ :

ಈ ವಿಡಿಯೋವನ್ನು ನಾನೇ ಕ್ರಿಯೇಟ್ ಮಾಡಿದ್ದೇನೆ ಎಂಬ ಆರೋಪ ಸುಳ್ಳು. ಈ ತರಹದ ದ್ವೇಷದ ರಾಜಕೀಯ ಸರಿಯಲ್ಲ. ನಾನು ಯಾವತ್ತೂ ಸಾವಿಗೆ ಹೆದರುವವನಲ್ಲ. ಕಾಂಗ್ರೆಸ್ ನಾಯಕರು ಸಮರ್ಥನೆ ಮಾಡುವುದು ಸರಿಯಲ್ಲ. ನಾಳೆ ನಿಮಗೂ ಕೆಟ್ಟ ಹೆಸರು ಬರಬಹುದು.‌ ಈ ನಿಟ್ಟಿನಲ್ಲಿ ವಿರೋಧ ಪಕ್ಷದವರು ತನಿಖೆಗೆ ಆಗ್ರಹ ಮಾಡಲಿ ಎಂದರು.

ವಿಶ್ವನಾಥ್ ನೀಡಿರುವ ದೂರು ಪ್ರತಿ
ವಿಶ್ವನಾಥ್ ನೀಡಿರುವ ದೂರು ಪ್ರತಿ

ಉನ್ನತ ಮಟ್ಟದಲ್ಲಿ ತನಿಖೆಯಾಗಲಿ:

ಈ ವರಗೆ ಇಂತಹ ಘಟನೆ ನನ್ನ ಕ್ಷೇತ್ರದಲ್ಲಿ ನಡೆದಿಲ್ಲ. ಕಳೆದ ಎರಡು ಬಾರಿ ನನ್ನ ವಿರುದ್ಧ ಚುನಾವಣೆಯಲ್ಲಿ ಗೋಪಾಲಕೃಷ್ಣ ಸ್ಪರ್ಧೆ ಮಾಡಿದ್ದಾರೆ.‌ ನಾನು ಏಕಾಂಗಿಯಾಗಿ ಓಡಾಡುವವನು. ರಾಜಕೀಯವಾಗಿ ಯಾವುದೇ‌ ದ್ವೇಷ ಇಲ್ಲ. ಈ ಘಟನೆಯಿಂದ ದಿಗ್ಬ್ರಮೆಗೆ ಒಳಗಾಗಿದ್ದೇನೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡಬೇಕು ಎಂದು ಸಿಎಂಗೆ ಆಗ್ರಹ ಮಾಡಿದ್ದೇನೆ.
ಗೋಪಾಲಕೃಷ್ಣ ಕಾಂಗ್ರೆಸ್ ಹಿರಿಯ ಮುಖಂಡ ವೀರಪ್ಪ ಮೊಯಿಲಿಯ ಶಿಷ್ಯ, ಆದರೆ ಏನೇ ಆದರೂ ತನಿಖೆ ನಡೆಸಲಿ ಎಂದು ಒತ್ತಾಯಿಸಿದರು. ಕಡಬಗೆರೆ ಶ್ರೀನಿವಾಸ ಶೂಟ್ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ.‌ ಆದರೆ ವಿಡಿಯೋದಲ್ಲಿ ಸುಳ್ಳು ಬಿಂಬಿಸಲಾಗಿದೆ. ಇದರ ಬಗ್ಗೆಯೂ ತನಿಖೆ ನಡೆಯಲಿ, ಸತ್ಯಾಸತ್ಯತೆ ಹೊರಬರುತ್ತದೆ ಎಂದರು.

ಡಿಕೆಶಿ ಸಾಧು ಸಂತರ ಜೊತೆಗೆ ಇದ್ದಾರಾ? :

ನನಗೆ ಯಾವುದೇ ಭದ್ರತೆಯ ಅವಶ್ಯಕತೆ ಇಲ್ಲ.‌ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೂಡಾ ನನ್ನ ಸ್ನೇಹಿತರು. ಶಾಸಕರಿಗೆ ಸುಪಾರಿ‌ ಕೊಟ್ಟವರನ್ನು ಸಮರ್ಥನೆ ಮಾಡ್ತಾರೆ. ಡಿ.ಕೆ.ಶಿವಕುಮಾರ್ ಸಾಧು ಸಂತರ ಜೊತೆಗೆ ಇದ್ದಾರಾ? ಅವರು ನನ್ನನ್ನು ಸಮರ್ಥನೆ ಮಾಡಬೇಕು ಎಂದು ಡಿಕೆಶಿಗೆ ಟಾಂಗ್ ಕೊಟ್ಟರು.

ಇದನ್ನೂ ಓದಿ : ಹತ್ಯೆಗೆ ಸಂಚು ಆರೋಪ : ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ವಿರುದ್ಧ ಶಾಸಕ ಎಸ್ ಆರ್ ವಿಶ್ವನಾಥ್ ದೂರು

Last Updated :Dec 1, 2021, 7:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.