ಬೆಂಗಳೂರು : ಜನರ ಜೀವನಶೈಲಿಯಿಂದಾಗಿ ಬಹುತೇಕರಿಗೆ ಅನಾರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ. ಭಾರತದಲ್ಲಿ ಪ್ರಮುಖ ಆರೋಗ್ಯ ಸಮಸ್ಯೆಯಾಗಿ ದೀರ್ಘಕಾಲೀನ ನೋವಿನ ಸಮಸ್ಯೆ ಹೊರಹೊಮ್ಮಲಿದೆ ಅಂತಾ ತಜ್ಞರು ಅಂದಾಜಿಸಿದ್ದಾರೆ.
ಮೂರು ತಿಂಗಳಿಗಿಂತ ಹೆಚ್ಚು ಕಾಲ ಇರುವ ಯಾವುದೇ ನಿರಂತರ ನೋವನ್ನು ದೀರ್ಘಕಾಲದ ನೋವು ಎಂದು ಹೇಳಲಾಗುತ್ತೆ. ಇದು ಮುಂಬರುವ ವರ್ಷಗಳಲ್ಲಿ ಭಾರತದಲ್ಲಿ ಕ್ಷಿಪ್ರಗತಿಯಲ್ಲಿ ಒಂದು ದೊಡ್ಡ ಆರೋಗ್ಯ ಸವಾಲಾಗಿ ಹೊರಹೊಮ್ಮುತ್ತಿದೆ.
ಭಾರತದಲ್ಲಿ ವಯಸ್ಕ ಜನಸಂಖ್ಯೆಯ ಶೇ.19ಕ್ಕಿಂತಲೂ ಹೆಚ್ಚಿನವರು ಇಂದು ಕೆಲ ರೀತಿಯ ದೀರ್ಘಕಾಲದ ನೋವಿನಿಂದ ಬಳಲುತ್ತಿದ್ದಾರೆ. ಮಹಿಳೆಯರಲ್ಲಿ ಈ ಪ್ರಮಾಣ ಹೆಚ್ಚಾಗಿದೆ. ಅಂದರೆ, ಶೇ.25ಕ್ಕಿಂತ ಹೆಚ್ಚಿನ ಮಹಿಳೆಯರು ಈ ದೀರ್ಘಕಾಲೀನ ನೋವಿನಿಂದ ಬಳಲುತ್ತಿದ್ದಾರೆ.
ಸಮೀಕ್ಷೆಯೊಂದರ ಪ್ರಕಾರ, 65 ವರ್ಷಕ್ಕಿಂತ ಮೇಲ್ಪಟ್ಟವರ ಸಂಖ್ಯೆ ಹೆಚ್ಚಾಗಿದೆ. ಇದು ಟಿಪ್ ಆಫ್ ದಿ ಐಸ್ಬರ್ಗ್ ಆಗಿರಬಹುದು. ಯಾಕೆಂದರೆ, ಭಾರತೀಯರು ಸಾಮಾನ್ಯವಾಗಿ ತಮ್ಮ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡುತ್ತಾರೆ ಮತ್ತು ಅವರಿಗಾಗಿರುವ ನೋವಿನ ಸಮಸ್ಯೆಗಳನ್ನು ಇತರರ ಬಳಿ ಹೇಳಿಕೊಳ್ಳುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಈ ಬಗ್ಗೆ ವರ್ಚುವಲ್ನಲ್ಲಿ ಮಾತನಾಡಿದ ಐಪಿಎಸ್ಸಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಡಾ.(ಮೇಜರ್) ಪಂಕಜ್ ಎನ್ ಸುರಾಂಗೆ, ಮುಂದಿನ ಎರಡು ದಶಕಗಳಲ್ಲಿ ದೀರ್ಘಕಾಲೀನ ನೋವು ದೊಡ್ಡ ಸಾಮಾಜಿಕ ಮತ್ತು ಆರ್ಥಿಕ ನಷ್ಟವನ್ನು ತೆಗೆದುಕೊಳ್ಳುತ್ತದೆ. ಶಸ್ತ್ರಚಿಕಿತ್ಸೆ ಮತ್ತು ಆಸ್ಪತ್ರೆಗೆ ದಾಖಲು ಮಾಡುವಲ್ಲಿ ಗಮನಾರ್ಹವಾದ ವೆಚ್ಚವಾಗುತ್ತದೆ. ಇದು ಕೆಲಸದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದಿದ್ದಾರೆ.
ದೀರ್ಘಕಾಲೀನ ನೋವಿನಿಂದ ಅನೇಕ ರೋಗಿಗಳು ಖಿನ್ನತೆ, ಆತಂಕ ಮತ್ತು ನಿದ್ರೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದೀರ್ಘಕಾಲೀನ ನೋವು ಪ್ರತ್ಯೇಕವಾಗಿ ಸಂಭವಿಸುವುದಿಲ್ಲ. ಇದರ ಹಿಂದೆ ಸಾಮಾನ್ಯವಾಗಿ ವಿವಿಧ ಮಾನಸಿಕ ಮತ್ತು ದೈಹಿಕ ಆರೋಗ್ಯ ಸಮಸ್ಯೆಗಳಿರುತ್ತವೆ. ಭಾರತದಲ್ಲಿ ದೀರ್ಘಕಾಲದ ನೋವು ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಮಾತನಾಡಿದ ಅವ್ರು, ಹೆಚ್ಚುತ್ತಿರುವ ಜೀವಿತಾವಧಿಯಿಂದಾಗಿ ಸಮಾಜದಲ್ಲಿ ವಯಸ್ಸಾದವರ ಸಂಖ್ಯೆಯಲ್ಲಿ ಕ್ರಮೇಣ ಏರಿಕೆಯಾಗಿದೆ. ಇದು ದೀರ್ಘಕಾಲದ ನೋವಿನ ಹೆಚ್ಚಳಕ್ಕೂ ಕಾರಣವಾಗುತ್ತಿದೆ ಎಂದಿದ್ದಾರೆ.
ಪ್ರಮುಖವಾಗಿ ಜಡ ಮತ್ತು ದೈಹಿಕವಾಗಿ ನಿಷ್ಕ್ರಿಯ ಜೀವನಶೈಲಿಯನ್ನು ರೂಢಿಸಿಕೊಂಡ ಕಾರಣದಿಂದಾಗಿ ಯುವ ಜನಸಂಖ್ಯೆಯ ಮೇಲೆಯೂ ಸಹ ಇದರ ಪರಿಣಾಮ ಬೀರುತ್ತಿದೆ. ಜನರು ಎದುರಿಸುತ್ತಿರುವ ದೀರ್ಘಕಾಲದ ನೋವಿನ ಸಾಮಾನ್ಯವಾದ ವಿಧವೆಂದರೆ ಬೆನ್ನು ನೋವು, ಕೀಲು ನೋವು ಮತ್ತು ಮೈಗ್ರೇನ್. ಆರ್ಥಿರಿಟೀಸ್ ಅಂದರೆ ಸಂಧಿವಾತ, ಬೆನ್ನು ಮೂಳೆಯ ಕ್ಷೀಣಗೊಳ್ಳುವ ಪರಿಸ್ಥಿತಿಗಳು ಹಾಗೂ ಕ್ಯಾನ್ಸರ್ ದೀರ್ಘಕಾಲದ ನೋವಿಗೆ ಸಾಮಾನ್ಯ ಕಾರಣವಾಗಿದೆ ಎಂದು ಹೇಳಿದ್ದಾರೆ.
ಇಂಟರ್ವೆನ್ಷನಲ್ ಸ್ಪೈನ್&ಕ್ಯಾನ್ಸರ್ ಪೇಯ್ನ್, ಐಪಿಎಸ್ಸಿ ಇಂಡಿಯಾದ ಕನ್ಸಲ್ಟೆಂಟ್ ಡಾ.ಸ್ವಾತಿ ಭಟ್ ಮಾತನಾಡಿ, ಪಾಶ್ಚಿಮಾತ್ಯ ದೇಶಗಳಲ್ಲಿ, ಕಳೆದ ಮೂರರಿಂದ ನಾಲ್ಕು ದಶಕಗಳಿಂದ ನೋವು ನಿವಾರಕ ಔಷಧವು ಒಂದು ಸೂಪರ್ ಸ್ಪೆಷಾಲಿಟಿಯಾಗಿದೆ. ಭಾರತದಲ್ಲಿ ಇದು ಕೇವಲ 15-20 ವರ್ಷಗಳಷ್ಟು ಹಳೆಯದು.
ದೇಶದ ಹಲವಾರು ಆಸ್ಪತ್ರೆಗಳು ಈಗ ನಿರ್ವಹಣೆಯನ್ನು ಪ್ರತ್ಯೇಕ ವಿಭಾಗವಾಗಿ ಪರಿಗಣಿಸುತ್ತಿವೆ. ಐದು ವರ್ಷಗಳ ಹಿಂದಿನವರೆಗೂ ಪಾಶ್ಚಾತ್ಯ ರಾಷ್ಟ್ರಗಳ ಶಿಷ್ಠಾಚಾರಗಳನ್ನು ದೀರ್ಘಕಾಲದ ನೋವಿನ ಭಾರತೀಯ ರೋಗಿಗಳ ನೋವು ನಿವಾರಣೆಗೆ ಬಳಸಲಾಗುತ್ತಿತ್ತು. ಆದಾಗ್ಯೂ, ಈಗ ಉತ್ತಮ ಫಲಿತಾಂಶಗಳಿಂದಾಗಿ ಭಾರತದಲ್ಲಿ ನಿರ್ದಿಷ್ಟವಾದ ಚಿಕಿತ್ಸಾ ಶಿಷ್ಠಾಚಾರಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದಿದ್ದಾರೆ.
ಐಪಿಎಸ್ಸಿ ಇಂಡಿಯಾದ ಸೀನಿಯರ್ ಕನ್ಸಲ್ಟೆಂಟ್ ಡಾ.ಓಂಪ್ರಕಾಶ್ ಗುಪ್ತಾ ಮಾತನಾಡಿ, ಇಂಟರ್ವೆನ್ಷನಲ್ ನೋವು ನಿರ್ವಹಣೆಯಲ್ಲಿ ಬೆನ್ನು ನೋವು, ಸ್ಲಿಪ್ಡ್ ಡಿಸ್ಕ್, ಡಿಸ್ಕ್ ಬಲ್ಜ್, ಸಿಯಾಟಿಕಾ ಇತ್ಯಾದಿಗಳಿಂದ ಬಳಲುತ್ತಿರುವ ರೋಗಿಗಳಿಗೆ ಕಡಿಮೆ ಆಕ್ರಮಣಾಕಾರಿ ಚಿಕಿತ್ಸೆ ನೀಡಲಾಗುತ್ತದೆ. ಓಝೋನ್ ಡಿಸೆಕ್ಟಮಿ, ಪೆಕ್ರ್ಯುಟೇನಿಯಸ್ ಡಿಸ್ಕ್ ಡಿ-ಕಂಪ್ರೆಶನ್ ಮತ್ತು ಎಂಡೋಸ್ಕೋಪಿಕ್ ಡಿಸೆಕ್ಟಮಿ ಮುಂತಾದ ತಂತ್ರಗಳು ಡಿಸ್ಕ್ನ ಹರ್ನಿಯೇಟೆಡ್ ಭಾಗವನ್ನು ಭಾಗವನ್ನು ತೆಗೆದುಹಾಕಲು ಸಣ್ಣ ವ್ಯಾಪ್ತಿಯನ್ನು ಸೇರಿಸಲಾಗುತ್ತದೆ.
ಮೊಣಕಾಲು, ಭುಜ, ಸೊಂಟ ಮತ್ತು ಬೆನ್ನು ಮೂಳೆಯ ಕೀಲುಗಳ ಮುಂದುವರಿದ ಸಂಧಿವಾತದಲ್ಲಿನ ನೋವನ್ನು ರೇಡಿಯೋಫ್ರೀಕ್ವೆನ್ಸಿ ವಿಧಾನಗಳಿಂದ ನಿರ್ವಹಣೆ ಮಾಡಲಾಗುತ್ತದೆ. ನರ ನೋವು ಮತ್ತು ನರರೋಗ ನೋವು ಸೇರಿದಂತೆ ನರಗಳ ನೋವನ್ನು ಔಷಧಿ ಮತ್ತು ನ್ಯೂರೋಲೈಟಿಕ್ ವಿಧಾನಗಳಿಂದ ನಿರ್ವಹಣೆ ಮಾಡಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆಗಳನ್ನು ಸ್ಥಳೀಯ ಅರಿವಳಿಕೆ ಅಡಿಯಲ್ಲಿ ಮಾಡಲಾಗುತ್ತದೆ ಮತ್ತು ರೋಗಿಗಳನ್ನು ಅದೇ ದಿನ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.