ಪ್ರಶ್ನೆಗೆ ಉತ್ತರಿಸಲು ಕಾಲಾವಕಾಶ ಕೋರಿದ ಸರ್ಕಾರ, ಕಾಂಗ್ರೆಸ್ ಆಕ್ಷೇಪ: ಕಲಾಪ ಮುಂದೂಡಿಕೆ

author img

By

Published : Sep 21, 2022, 1:02 PM IST

vidhan parishad

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಸಲೀಂ ಅಹಮದ್ ಕೇಳಿದ ಪ್ರಶ್ನೆಗೆ ಕಂದಾಯ ಸಚಿವ ಅಶೋಕ್ ಸಮಯಾವಕಾಶ ಕೋರಿದರು. ಬಹಳ ವಿಷಯ ಕೇಳಿದ್ದಾರೆ ಅದಕ್ಕಾಗಿ ಸಮಯ ಬೇಕು ಎಂದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಕಾಂಗ್ರೆಸ್​ ನಾಯಕರು ಗದ್ದಲದ ವಾತಾವರಣ ಸೃಷ್ಟಿಸಿದರು.

ಬೆಂಗಳೂರು: ಕಾಂಗ್ರೆಸ್ ಸದಸ್ಯ ಸಲೀಂ ಅಹಮದ್ ಪ್ರಶ್ನೆಗೆ ಉತ್ತರ ನೀಡಲು ಕಾಲಾವಕಾಶ ಕೋರಿದ ಘಟನೆ ಸದನದಲ್ಲಿ ಕಾಂಗ್ರೆಸ್ - ಬಿಜೆಪಿ ನಡುವೆ ಮಾತಿನ ಚಕಮಕಿ ಸೃಷ್ಟಿಗೆ ಕಾರಣವಾಯಿತು, ಆರೋಗ್ಯ ಪ್ರತ್ಯಾರೋಪಗಳಿಂದ ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಗಿ ಕಲಾಪವನ್ನು ಐದು ನಿಮಿಷ ಮುಂದೂಡಿಕೆ ಮಾಡಲಾಗಿದೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಸಲೀಂ ಅಹಮದ್ ಕೇಳಿದ ಪ್ರಶ್ನೆಗೆ ಕಂದಾಯ ಸಚಿವ ಅಶೋಕ್ ಸಮಯಾವಕಾಶ ಕೋರಿದರು. ಬಹಳ ವಿಷಯ ಕೇಳಿದ್ದಾರೆ ಅದಕ್ಕಾಗಿ ಸಮಯ ಬೇಕು ಎಂದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಲೀಂ ಅಹಮದ್, ಉತ್ತರವಿಲ್ಲದಿದ್ದರೆ ಪಟ್ಟಿಯಲ್ಲಿ ಯಾಕೆ ಹಾಕಬೇಕಿತ್ತು?. ಉತ್ತರ ಕೊಡಿಸಿ ಎಂದು ಪಟ್ಟುಹಿಡಿದರು. ಇದಕ್ಕೆ ಧ್ವನಿಗೂಡಿಸಿದ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್, ಸರ್ಕಾರದ ಬಳಿ ಉತ್ತರವಿಲ್ಲ ಎಂದರೆ ಹೇಗೆ, ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಸಭಾಪತಿಗಳು ಸಮಯಾವಕಾಶಕ್ಕೆ ಒಪ್ಪಿ ಮುಂದಿನ ಪ್ರಶ್ನೆ ಕೈಗೆತ್ತಿಕೊಳ್ಳಲು ಮುಂದಾಗಿದ್ದಕ್ಕೆ ಸಿಟ್ಟಾದ ಕಾಂಗ್ರೆಸ್ ಸದಸ್ಯರು, ಸದನದ ಬಾವಿಗಿಳಿದು ಧರಣಿ ನಡೆಸಿದರು.

ಇದನ್ನೂ ಓದಿ: ರಾಜ್ಯದಲ್ಲಿ ಕೃಷಿ ಕಾಯ್ದೆ ವಾಪಸ್ ಪಡೆಯಲ್ಲ: ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್

ಈ ವೇಳೆ ಮಾತನಾಡಿದ ಕಂದಾಯ ಸಚಿವ ಅಶೋಕ್, ಇದು ಬೇಜವಾಬ್ದಾರಿತನದ ಪರಮಾವಧಿ ಎಂದರು. ಇದಕ್ಕೆ ಧ್ವನಿಗೂಡಿಸಿದ ಸಚಿವ ಸುಧಾಕಾರ್, ಹಿಂದೆ ಇವರೆಲ್ಲಾ ಏನು ಮಾಡಿದ್ದರು ಎಂದು ಕಡತ ತರಿಸಿ ನೋಡಿ ಎಂದರು. ಇದಕ್ಕೆ ಟಾಂಗ್ ನೀಡಿದ ಬಿ ಕೆ ಹರಿಪ್ರಸಾದ್, ಸಚಿವರದ್ದು ಬೇಜವಾಬ್ದಾರಿತನದ ಹೇಳಿಕೆ. ಸಚಿವರು ಉತ್ತರ ಕೊಡಲು ಸಾಧ್ಯವಾಗದೇ ಹೀಗೆ ಮಾಡುತ್ತಿದ್ದಾರೆ ಎಂದರು.

ಬಳಿಕ ಮಧ್ಯಪ್ರವೇಶಿಸಿದ ಸಭಾಪತಿ ರಘುನಾಥರಾವ್ ಮಲ್ಕಾಪುರೆ, ಸಚಿವರು ಉತ್ತರ ಕೊಡಬೇಕು. ಇದು ಪ್ರತಿಪಕ್ಷದ ಹಕ್ಕು, ಆದರೆ ಕಾಲಾವಕಾಶ ಬೇಕಾದಾಗ ಕೊಡಬೇಕಾಗಲಿದೆ ಎಂದರು. ಸಭಾಪತಿ ಹೇಳಿಕೆ ಸಮರ್ಥಿಸಿಕೊಂಡ ಅಶೋಕ್, ಆರು ವಿಷಯ ಕೇಳಿದ್ದಾರೆ, ಭೂ ಮಂಜೂರಾತಿ ಯಾರಿಗೆ ಎಂದು ಕೇಳಿಲ್ಲ. ಯಾವ ದಿನಾಂಕ ಎಂದಿಲ್ಲ, ಪೂರ್ತಿ ಕೊಡಬೇಕು, ಭೂ ಪರಿವರ್ತನೆ ಬಗ್ಗೆ ಕೇಳಿದ್ದಾರೆ. ಆದಾಯ, ಜನನ, ಮರಣ, ಪಿಂಚಣಿ ಇಡೀ ರಾಜ್ಯದ ಬಗ್ಗೆ ಕೇಳಿದ್ದಾರೆ. ಇದು ಕೊಡಲು ಸಾಧ್ಯವಾ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ, ಭೂ ಕಂದಾಯ ತಿದ್ದುಪಡಿ ವಿಧೇಯಕಕ್ಕೆ ವಿಧಾನ ಪರಿಷತ್​ನಲ್ಲಿ ಅಂಗೀಕಾರ

ಇದಕ್ಕೆ ಪ್ರತಿಕ್ರಿಯಿಸಿದ ಬಿ ಕೆ ಹರಿಪ್ರಸಾದ್, ಲಂಚದ ಪ್ರಕರಣದ ಕುರಿತು ಅವರಿಗೆ ಹೇಳಲಾಗುತ್ತಿಲ್ಲ, ಬಹಳ ಲಂಚ ಪಡೆದಿದ್ದಾರೆ. ಅದಕ್ಕೆ ಸಮಯ ಬೇಕು ಎನ್ನುತ್ತಿದ್ದಾರೆ ಎಂದರು. ಇದಕ್ಕೆ ಟಾಂಗ್ ನೀಡಿದ ಅಶೋಕ್, ಲಂಚದ ವಿಚಾರ ಕೇಳಿದ್ರೆ ಅದಕ್ಕೆ ಉತ್ತರ ಕೊಡಲು ಸಿದ್ಧ ಎಂದರು. ಈ ವೇಳೆ ಬಿಜೆಪಿ ಸದಸ್ಯರಿಂದ ರಾಜೀವ್ ಗಾಂಧಿ ಹೇಳಿಕೆ ಪ್ರಸ್ತಾಪವಾಯಿತು.

100 ರೂ. ಬಿಡುಗಡೆ ಆದರೆ ಕಡೆಯ ಹಳ್ಳಿಗೆ ತಲುಪುವ ವೇಳೆ15 ರೂ. ಆಗಿರಲಿದೆ, ಶಾಸಕರ ನಿಧಿ 15 ಲಕ್ಷ ಎಂದರೆ 12 ಲಕ್ಷ ಮಾತ್ರ ಸಿಗೋದು. ಉಳಿದ 3 ಲಕ್ಷ ತೆರಿಗೆ ಇತ್ಯಾದಿಗೆ ಹೋಗಲಿದೆ. ಈ ಅರ್ಥದಲ್ಲಿ ರಾಜೀವ್ ಗಾಂಧಿ ಅಂದು ಹೇಳಿದ್ದರು ಎಂದು ರಾಜೀವ್ ಗಾಂಧಿ ಹೇಳಿಕೆ ಸಮರ್ಥಿಸಿಕೊಂಡರು. ದೇವಸ್ಥಾನದ ಹಣ ಹೊಡೆದವರು ಯಾರು? ಎಂದು ಗೊತ್ತಿದೆ ಅಂತಾ ಬಿಜೆಪಿ ಸದಸ್ಯರಿಗೆ ಟಾಂಗ್ ನೀಡಿದರು.

ಇದನ್ನೂ ಓದಿ: ಪರಿಷತ್​ನಲ್ಲಿ ಪಿಎಸ್ಐ ನೇಮಕಾತಿ ಹಗರಣ ಸದ್ದು: ಚರ್ಚೆಗೆ ಅವಕಾಶ ಕಲ್ಪಿಸಿ ರೂಲಿಂಗ್

ಈ ವೇಳೆ ಮಧ್ಯಪ್ರವೇಶ ಮಾಡಿದ ಸಚಿವ ಸೋಮಣ್ಣ, ಹತ್ತಾರು ಪ್ರಶ್ನೆ ಕೇಳುವ ವೇಳೆ ಒಂದೋ ಎರಡೋ ಪ್ರಶ್ನೆಗೆ ಉತ್ತರ ಬಂದಿಲ್ಲ ಎಂದರೆ ಸಹಕಾರ ಅಗತ್ಯ. ಇದನ್ನು ಪ್ರತಿಷ್ಠೆಯಾಗಿ ಪರಿಗಣಿಸದೆ ಸಹಕರಿಸಿ ಎಂದರು.

ಇದಕ್ಕೆ ಪ್ರತಿಯಾಗಿ ಹರಿಪ್ರಸಾದ್, ನೀವು ಒಳ್ಳೆಯ ಸಂಪ್ರದಾಯ ಹಾಕಿಕೊಟ್ಟಿದ್ದರೆ ನಾವು ಅದನ್ನು ಪಾಲಿಸುತ್ತಿದ್ದೆವು. ಈ ಪ್ರಶ್ನೆಯಲ್ಲಿ ಲಂಚದ ವಿಷಯ ಇದೆ. ಅದನ್ನು ವಿಷಯಾಂತರ ಮಾಡಲು ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಆಶ್ವತ್ಥನಾರಾಯಣ್, ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯಾವ ನೈತಿಕತೆ ನಿಮಗಿಲ್ಲ, ಭ್ರಷ್ಟಾಚಾರ ಮುಗಿಸಲು ನಾವು ಬಂದಿದ್ದೇವೆ ಎಂದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿದ್ದರಿಂದ ಸಭಾಪತಿಗಳು ಸದನವನ್ನು 5 ನಿಮಿಷ ಮುಂದೂಡಿಕೆ ಮಾಡಿದರು. ಕಲಾಪ ಮುಂದೂಡಿಕೆಯಾದರೂ ಕಾಂಗ್ರೆಸ್, ಬಿಜೆಪಿ ಸದಸ್ಯರ ನಡುವೆ ವಾಗ್ವಾದ ಮುಂದುವರೆದಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.