ಪೇ ಸಿಎಂ ಪೋಸ್ಟರ್ ವಿಚಾರ: ವಿಧಾನಸಭೆಯಲ್ಲಿ ಗದ್ದಲ, ಗಲಾಟೆ... ವಿಡಿಯೋ ನೋಡಿ

author img

By

Published : Sep 22, 2022, 5:06 PM IST

ವಿಧಾನಸಭೆ

ಸಾಮಾಜಿಕ ಜಾಲತಾಣಗಳಲ್ಲಿ ಪೇಸಿಎಂ ಎಂಬುದನ್ನು ಆಂದೋಲನ ಮಾಡುವುದಾಗಿ ಹೇಳಿದ್ದಾರೆ. ಇದರ ಹಿಂದೆ ರಾಜಕೀಯ ಪಕ್ಷವೊಂದರ ಕೈವಾಡವಿದೆ ಎಂದು ಕಾಂಗ್ರೆಸ್‍ ಶಾಸಕ ಪ್ರಿಯಾಂಕ ಖರ್ಗೆ ಅವರು ಆರೋಪಿಸಿದರು.

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರವನ್ನು ಬಳಸಿ ಕ್ಯೂ ಆರ್ ಕೋಡ್‍ ಮಾಡಿ ಪೇಸಿಎಂ ಎಂಬುದಾಗಿ ಪೋಸ್ಟರ್ ಅಂಟಿಸಿದ್ದ ವಿಷಯ ಇಂದು ಪ್ರಸ್ತಾಪವಾಗಿ ವಿಧಾನಸಭೆಯಲ್ಲಿ ಕೆಲಕಾಲ ಆಡಳಿತ ಮತ್ತು ಪ್ರತಿಪಕ್ಷಗಳ ಶಾಸಕರ ನಡುವೆ ಮಾತಿನ ವಾಗ್ದಾಳಿ, ಗದ್ದಲಕ್ಕೆ ಕಾರಣವಾಯಿತು.

ಶೂನ್ಯ ವೇಳೆಯಲ್ಲಿ ಬಿಜೆಪಿ ಶಾಸಕ ಪಿ ರಾಜೀವ್‍ ಅವರು ವಿಷಯ ಪ್ರಸ್ತಾಪಿಸಿ ಕೆಲವರು ರಾಜಕೀಯ ಲಾಭಕ್ಕಾಗಿ ಮುಖ್ಯಮಂತ್ರಿಗಳ ಹುದ್ದೆ, ಘನತೆಯನ್ನು ಅಪಮಾನ ಮಾಡಿದ್ದಾರೆ. ಇದು ರಾಜ್ಯಕ್ಕೆ ಮಾಡಿದ ಅಪಮಾನ ಎಂದರು.

ವಿಧಾನಸಭೆಯಲ್ಲಿ ಪೇ ಸಿಎಂ ಪೋಸ್ಟರ್​ ವಿಚಾರವಾಗಿ ಚರ್ಚೆ ನಡೆದಿರುವುದು

ಹೆದರುವ ಪ್ರಶ್ನೆಯೇ ಇಲ್ಲ: ಕಾಂಗ್ರೆಸ್‍ ಶಾಸಕ ಪ್ರಿಯಾಂಕ ಖರ್ಗೆ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಪೇಸಿಎಂ ಎಂಬುದನ್ನು ಆಂದೋಲನ ಮಾಡುವುದಾಗಿ ಹೇಳಿದ್ದಾರೆ. ಇದರ ಹಿಂದೆ ರಾಜಕೀಯ ಪಕ್ಷವೊಂದರ ಕೈವಾಡವಿದೆ ಎಂದು ಆರೋಪಿಸಿದರು. ಈ ಹಂತದಲ್ಲಿ ಅವರ ಹೇಳಿಕೆಗೆ ಕಾಂಗ್ರೆಸ್ ಶಾಸಕ ಕೃಷ್ಣಭೈರೇಗೌಡ ಆಕ್ಷೇಪಿಸಿ, ಈಗಾಗಲೇ ಪ್ರಕರಣ ಸಂಬಂಧ 8 ಜನರನ್ನು ಬಂಧಿಸಲಾಗಿದೆ. ಕಾನೂನು ಪ್ರಕಾರ, ಸರ್ಕಾರ ಯಾವುದೇ ಕ್ರಮ ಕೈಗೊಂಡರೂ ನಾವು ಅದನ್ನು ಎದುರಿಸಲು ಸಿದ್ಧರಿದ್ದೇವೆ. ಹೆದರುವ ಪ್ರಶ್ನೆಯೇ ಇಲ್ಲ ಎಂದು ತಿರುಗೇಟು ನೀಡಿದರು.

ಈ ವೇಳೆ ಕಾಂಗ್ರೆಸ್‍ ಮತ್ತು ಬಿಜೆಪಿ ಸದಸ್ಯರ ನಡುವೆ ಆರೋಪ-ಪ್ರತ್ಯಾರೋಪ ನಡೆದು ಗದ್ದಲದ ವಾತಾವರಣ ನಿರ್ಮಾಣವಾಯಿತು. ನೀವು ತಪ್ಪು ಮಾಡಿಲ್ಲ ಎಂದರೆ ಇದನ್ನು ಮಾಡಿದವರು ಯಾರು? ಅವರಿಗೆ ಶಿಕ್ಷೆಯಾಗಬೇಕು ಅಲ್ಲವೇ? ಎಂದು ಶಾಸಕ ಮಾಡಾಳ್‍ ವಿರೂಪಾಕ್ಷಪ್ಪ ಪ್ರಶ್ನಿಸಿದರು. ಸಚಿವ ಬಿ. ಸಿ ಪಾಟೀಲ್‍, ಶಾಸಕರಾದ ಪ್ರೀತಂಗೌಡ, ಶಿವನಗೌಡ ನಾಯಕ್‍ ಸೇರಿದಂತೆ ಮತ್ತಿತರರು ಕಾಂಗ್ರೆಸ್‍ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಸದನದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು.

ಗರಂ ಆದ ಸ್ಪೀಕರ್ : ಈ ಸಂದರ್ಭದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಎರಡೂ ಕಡೆಯ ಶಾಸಕರನ್ನು ಸಮಾಧಾನ ಪಡಿಸುವ ಯತ್ನ ಮಾಡಿದರು. ಆಗಲೂ ಗದ್ದಲ ಮುಂದುವರೆದಾಗ ಸಿಟ್ಟಿಗೆದ್ದ ಅವರು, ಸರ್ಕಾರದ ಮುಖ್ಯಸಚೇತಕ ಸತೀಶ್‍ ರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡರು.

ನೀವೇ ಎದ್ದು ನಿಂತು ಮಾತಾಡಿದರೆ, ಬೇರೆಯವರು ಏನು ಮಾಡಬೇಕು. ಮೊದಲು ನಿಮ್ಮ ಸದಸ್ಯರನ್ನು ನಿಯಂತ್ರಿಸಿ. ಉಳಿದದ್ದು ನನಗೆ ಗೊತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆಗ ಕಾನೂನು ಸಚಿವ ಜೆ. ಸಿ ಮಾಧುಸ್ವಾಮಿ ಮಧ್ಯೆ ಪ್ರವೇಶಿಸಿ ಇದು ಯಾರಿಗೂ ಶೋಭೆ ತರುವುದಿಲ್ಲ. ಮುಖ್ಯಮಂತ್ರಿ ಯಾರಾಗಿರುತ್ತಾರೆ ಎಂಬುದು ಮುಖ್ಯವಲ್ಲ. ಇಂದು ಅವರಿಗೆ ಬಂದಿರಬಹುದು. ನಾಳೆ ನಿಮಗೂ ಬರಬಹುದು ಎಂದು ಎಚ್ಚರಿಸಿದರು.

ಜನಪ್ರತಿನಿಧಿಗಳ ಬಗ್ಗೆ ಸಾರ್ವಜನಿಕರು ಹಾದಿ ಬೀದಿಯಲ್ಲಿ ಮಾತನಾಡುತ್ತಿದ್ದಾರೆ. ನಾವೆಲ್ಲರೂ ಬೆತ್ತಲಾಗುವ ಸ್ಥಿತಿಗೆ ತಲುಪಿದ್ದೇವೆ. ಇನ್ನೂ ಯಾವ ಸ್ಥಿತಿಗೆ ಬರಬೇಕು. ಇದು ಯಾರಿಗಾದರು ಶೋಭೆ ತರುತ್ತದೆಯೇ? ಎಂದು ಪ್ರಶ್ನಿಸಿದರು. ನಿಮ್ಮ ನಿಮ್ಮ ಆತ್ಮಸಾಕ್ಷಿಗೆ ಬಿಡುತ್ತೇನೆ ಎಂದು ಹೇಳುವ ಮೂಲಕ ಚರ್ಚೆಗೆ ತೆರೆ ಎಳೆದರು.

ಓದಿ: ಸಿಎಂ ಪರಿಹಾರ ನಿಧಿಗೆ ಪೇಸಿಎಂ ಹೆಸರಿನ ಆ್ಯಪ್ ಅಭಿವೃದ್ಧಿಪಡಿಸಿ: ಪರಿಷತ್‌ನಲ್ಲಿ ಪ್ರಾಣೇಶ್ ಸಲಹೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.