ಅಪೌಷ್ಟಿಕತೆ, ಅನೀಮಿಯ ನಿವಾರಣೆಗೆ ತಪಾಸಣೆಯೇ ನಡೆಯುತ್ತಿಲ್ಲ: ಡಾ.ಕೆ.ಸುಧಾಕರ್‌

author img

By

Published : Dec 7, 2022, 3:03 PM IST

there-is-no-proper-inspection-on-malnutrition-and-anemia-says-minister-dr-k-sudhakar

ಕರ್ನಾಟಕವು ಆರೋಗ್ಯ ವಲಯದಲ್ಲಿ ಉತ್ತಮ ಸುಧಾರಣೆ ಮಾಡಿದೆ. ಆರೋಗ್ಯ ಸೂಚ್ಯಂಕದಲ್ಲೂ ಉತ್ತಮ ಪ್ರಗತಿಯಾಗಿದೆ. ಆದರೆ, ಅಪೌಷ್ಟಿಕತೆ ಹಾಗೂ ಅನೀಮಿಯ ವಿಚಾರ ಬಂದಾಗ ನಾವು ಇನ್ನಷ್ಟು ಕೆಲಸಗಳನ್ನು ಮಾಡಬೇಕಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು : ಅಪೌಷ್ಟಿಕತೆ ಹಾಗೂ ಅನೀಮಿಯ ನಿವಾರಣೆಗಾಗಿ ಆರಂಭಿಕ ಹಂತದಲ್ಲೇ ಮಕ್ಕಳ ಆರೋಗ್ಯ ತಪಾಸಣೆ ಮಾಡುವುದು ಮುಖ್ಯ. ಇದಕ್ಕಾಗಿ ಗ್ರಾಮೀಣ ಭಾಗಗಳಲ್ಲಿ ಶಾಲೆ ಸೇರಿದಂತೆ ಮಕ್ಕಳಿರುವ ಜಾಗಗಳಲ್ಲಿ ಸರ್ಕಾರಿ ಆರೋಗ್ಯ ಕೇಂದ್ರಗಳ ಸಹಯೋಗದಲ್ಲಿ ಆರೋಗ್ಯ ತಪಾಸಣೆ ಮಾಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಸೂಚನೆ ನೀಡಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ, ಅಪೌಷ್ಟಿಕತೆ ಮತ್ತು ಅನಿಮೀಯ ಮುಕ್ತ ಕರ್ನಾಟಕ ಕುರಿತ ಕಾರ್ಯಾಗಾರದಲ್ಲಿ ಸಚಿವರು ಮಾತನಾಡಿದರು.

ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರನ್ನು ಒಟ್ಟುಗೂಡಿಸಿ ಆರೋಗ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಮಾಡಬೇಕು. ನಮ್ಮ ಇಲಾಖೆಯಿಂದ ತಪಾಸಣೆ ನಡೆಸಿ ಗುರಿಗಳನ್ನು ಮುಟ್ಟಿರುವುದನ್ನು ತೋರಿಸುತ್ತೇವೆ. ಆದರೆ, ಈ ಬಗ್ಗೆ ನಿಜವಾಗಿಯೂ ಆತ್ಮಾವಲೋಕನ ಮಾಡಿಕೊಂಡರೆ ನಾವು ಸಂಪೂರ್ಣವಾಗಿ ತಪಾಸಣೆ ನಡೆಸುತ್ತಿಲ್ಲ ಎಂದೇ ಹೇಳಬೇಕು ಎಂದರು.

ಪಿಎಚ್‌ಸಿ ವ್ಯಾಪ್ತಿಯಲ್ಲಿ ವೈದ್ಯರು ಶಾಲೆಗಳಿಗೆ ಹೋಗುವುದು ಅಥವಾ ಮಕ್ಕಳೇ ಪಿಎಚ್‌ಸಿ ಬಂದು ತಪಾಸಣೆ ಮಾಡಿಸಿಕೊಳ್ಳಬೇಕು. ಇದಕ್ಕಾಗಿ ಶಿಕ್ಷಣ ಇಲಾಖೆಯಿಂದ ಗಂಭೀರ ಕ್ರಮ ವಹಿಸಬೇಕು ಎಂದು ಸಚಿವ ಸುಧಾಕರ್​ ಹೇಳಿದರು.

ಇಂದಿನ ಕಾಲದಲ್ಲೂ ಮಾತೃ ಮರಣವಾಗುತ್ತಿರುವುದು ಅತ್ಯಂತ ಅಪಮಾನದ ಸಂಗತಿ. ರಾಜ್ಯದ ಪ್ರತಿ ಮಹಿಳೆಯರು ವರ್ಷಕ್ಕೊಮ್ಮೆಯಾದರೂ ಆರೋಗ್ಯ ತಪಾಸಣೆಗೆ ಮುಂದೆ ಬರುವಂತಾಗಬೇಕು. ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸುವುದು ಒಂದು ಪರಂಪರೆಯ ರೂಢಿಯಾಗಿ ಬೆಳೆದು ಬಂದಿದೆ. ಇದೇ ರೀತಿ ರಾಜ್ಯದಲ್ಲಿ ಮಹಿಳೆಯರು, ತಾಯಂದಿರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದನ್ನು ಪರಂಪರೆಯಂತೆ ಬೆಳೆಸಬೇಕು. ಇದಕ್ಕಾಗಿ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಪ್ರಚಾರ ಮಾಡಬೇಕು ಎಂದು ಸಚಿವರು ಕರೆ ನೀಡಿದರು.

ಅಪೌಷ್ಟಿಕತೆ ನಿವಾರಣೆಗೆ ಇನ್ನಷ್ಟು ಕೆಲಸಗಳಾಗಲಿ: ಕರ್ನಾಟಕವು ಆರೋಗ್ಯ ವಲಯದಲ್ಲಿ ಉತ್ತಮ ಸುಧಾರಣೆ ಮಾಡಿದೆ. ಆರೋಗ್ಯ ಸೂಚ್ಯಂಕದಲ್ಲೂ ಉತ್ತಮ ಪ್ರಗತಿಯಾಗಿದೆ. ಆದರೆ, ಅಪೌಷ್ಟಿಕತೆ ಹಾಗೂ ಅನೀಮಿಯ ವಿಚಾರ ಬಂದಾಗ ನಾವು ಇನ್ನಷ್ಟು ಕೆಲಸಗಳನ್ನು ಮಾಡಬೇಕಿದೆ ಎಂದರು.

ರಿಜಿಸ್ಟರ್‌ ಜನರಲ್‌ ಆಫ್‌ ಇಂಡಿಯಾದವರು ಹೇಳಿದಂತೆ, 2018-2020ರಲ್ಲಿ ದೇಶದಲ್ಲಿ ತಾಯಿ ಮರಣ ಪ್ರಮಾಣ 97 ಆಗಿತ್ತು. 2001-2003 ರಲ್ಲಿ 301 ಆಗಿತ್ತು. ಅದೇ ರೀತಿ, ಶಿಶು ಮರಣ ಪ್ರಮಾಣ 2005 ರಲ್ಲಿ 58 ಆಗಿದ್ದು, 2021ರಲ್ಲಿ 27 ಆಗಿದೆ. ಈ ಬಗ್ಗೆ ಸ್ವಲ್ಪ ಸಮಾಧಾನ ಇದ್ದರೂ, ಮುಂದುವರಿಯಬೇಕಾದ ದಾರಿ ಇನ್ನಷ್ಟಿದೆ ಎಂದರು.

ಅಪೌಷ್ಟಿಕತೆ ಪರಿಣಾಮ : ಮಗು ಜನಿಸಿದ ನಂತರದ ಎರಡು ವರ್ಷಗಳಲ್ಲೇ ಅಪೌಷ್ಟಿಕತೆ ಕಾಣಿಸಿಕೊಳ್ಳುತ್ತದೆ. ಈ ಸಮಯದಲ್ಲೇ ಸಮಸ್ಯೆ ಪತ್ತೆ ಮಾಡಿ ಪರಿಹರಿಸದಿದ್ದರೆ ಅದು ಮೆದುಳಿನ ಆರೋಗ್ಯ ಮೇಲೆ ಹಾಗೂ ಶರೀರದ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುತ್ತದೆ.

ಆದ್ದರಿಂದ ಮಗು ಜನಿಸಿದ ಮೊದಲ 1,000 ದಿನಗಳಲ್ಲಿ ಅಪೌಷ್ಟಿಕತೆ ಹಾಗೂ ಅನೀಮಿಯಾವನ್ನು ನಿವಾರಣೆ ಮಾಡಲು ಕ್ರಮ ವಹಿಸಬೇಕಾಗುತ್ತದೆ. ಅದರಲ್ಲೂ ಹೆಣ್ಣುಮಕ್ಕಳು ಅಪೌಷ್ಟಿಕತೆಗೆ ಒಳಗಾದರೆ, ಅವರು ಬೆಳೆದು ಮಗುವಿಗೆ ಜನ್ಮ ನೀಡುವಾಗ ಆ ಮಗು ಕಡಿಮೆ ತೂಕ ಹೊಂದಿರುವ ಸಮಸ್ಯೆ ಎದುರಾಗುತ್ತದೆ ಎಂದರು.

ಕೈಗೊಳ್ಳಬೇಕಾದ ಅಗತ್ಯ ಕ್ರಮಗಳು :

- ಸ್ವಸ್ಥ ಕರ್ನಾಟಕ, ಸುಸ್ಥಿರ ಕರ್ನಾಟಕ ಎಂಬ ಘೋಷಣೆಯೊಂದಿಗೆ ಪ್ರತಿ ಕನ್ನಡಿಗ ಆರೋಗ್ಯವಾಗಿರಬೇಕು ಎಂಬುದು ಸರ್ಕಾರದ ಆಶಯ.

- ಆರೋಗ್ಯ ರಕ್ಷಣೆಗೆ ಪೌಷ್ಟಿಕ ಆಹಾರ ಪೂರೈಕೆ, ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿವ ನೀರು ಘಟಕ ಅಳವಡಿಕೆ ಬಗ್ಗೆ ಗಮನಹರಿಸಿ. ಅನೇಕ ಕಡೆ ಆರ್‌ಒ ಘಟಕಗಳಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ.

- ಈಟ್‌ ರೈಟ್‌ ಅಭಿಯಾನ, ಶಾಲೆಗಳಲ್ಲಿ ಕೈದೋಟ ಬೆಳೆಯುವುದು ಮೊದಲಾದವುಗಳಿಗೆ ಆದ್ಯತೆ ನೀಡಬೇಕು.

- ಇಂದ್ರಧನುಷ್‌ ಲಸಿಕಾಕರಣ ಶೇ.100 ರಷ್ಟು ಆಗಬೇಕು ಎಂದು ಸೂಚನೆ ನೀಡಿದರು.

ಇದನ್ನೂ ಓದಿ : 60 ವರ್ಷ ಮೇಲ್ಪಟ್ಟವರಿಗೆ ಉಚಿತ ನೇತ್ರ ಚಿಕಿತ್ಸೆ: ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.