ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಅಕ್ರಮ: ಕಡಿವಾಣಕ್ಕೆ ಸರ್ಕಾರದ ಹೊಸ ಅಸ್ತ್ರವೇನು?

author img

By

Published : Aug 9, 2022, 5:30 PM IST

Agriculture Minister BC Patil

ರಾಜ್ಯದಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವವರಿಗೆ ಹಾಗೂ ಅದಕ್ಕೆ ಪ್ರೋತ್ಸಾಹ ನೀಡುವವರಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಹೊಸ ಕಾನೂನು ರೂಪಿಸಲು ಮುಂದಾಗಿದೆ.

ಬೆಂಗಳೂರು: ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದರೂ, ರೈತರಿಗೆ ಸರಿಯಾದ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕ ಸಿಗುತ್ತಿಲ್ಲ. ಇದರಿಂದ ರೈತರು ಸಮಯಕ್ಕೆ ಸರಿಯಾಗಿ ಬೆಳೆ ಬೆಳೆಯಲಾಗದೆ ಸಮಸ್ಯೆಗೆ ಸಿಲುಕುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ, ರಾಜ್ಯದಲ್ಲಿ ಹಲವು ವರ್ಷಗಳಿಂದಲೂ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳ ಅಕ್ರಮ ಮಾರಾಟ. ಕೃಷಿ ಇಲಾಖೆ ಜಾಗೃತ ದಳ ಆಗಾಗ ದಾಳಿ ನಡೆಸುತ್ತಲೇ ಇರುತ್ತದೆ. ಆದರೂ ಕಾಳಸಂತೆಯಲ್ಲಿ ಬಿತ್ತನೆ ಬೀಜ, ಕೀಟನಾಶಕಗಳು ಮಾರಾಟ ಆಗುತ್ತಲೇ ಇವೆ. ಹಾಗಾಗಿ ಇದಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಹೊಸ ಕಾನೂನು ರೂಪಿಸುತ್ತಿದೆ.

ಪ್ರತ್ಯೇಕ ಕಾನೂನು: ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವವರಿಗೆ ಬಿಸಿ ಮುಟ್ಟಿಸಲು ಹೊಸ ಅಸ್ತ್ರ ಅನುಕೂಲವಾಗಲಿದೆ. ಜೊತೆಗೆ ಹೊಸ ಆ್ಯಪ್​ನನ್ನು ರಚಿಸಿ ಅದರ ಮೂಲಕ ಅಕ್ರಮಗಳನ್ನು ತಡೆಯಲು ರಾಜ್ಯ ಸರ್ಕಾರ ಮುಂದಾಗಿದೆ. ಈಗ ಇರುವ ಕಾನೂನಿನಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಮುಂದಿನ ಅಧಿವೇಶನದಲ್ಲಿ ಪ್ರತ್ಯೇಕ ಕಾನೂನು ತರಲು ಕೃಷಿ ಸಚಿವ ಬಿ ಸಿ ಪಾಟೀಲ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೃಷಿ ಇಲಾಖೆಯ ಜಾಗೃತ ದಳ ಸಹ ಸಾಕಷ್ಟು ಪ್ರಕರಣಗಳನ್ನು ದಾಖಲಿಸಿದೆ. ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದ ಈ ರೀತಿಯ ನಕಲಿ ರಸಗೊಬ್ಬರ ಮತ್ತು ಕೀಟನಾಶಕ ಸರಬರಾಜು ಆಗುತ್ತದೆ ಎಂಬ ದೂರುಗಳಿವೆ. ರಾಜ್ಯದಲ್ಲಿ ರಸಗೊಬ್ಬರ, ಕೀಟನಾಶಕ ಮತ್ತು ಬಿತ್ತನೆ ಬೀಜದ ವಹಿವಾಟು ಪ್ರತಿ ವರ್ಷ 20 ಸಾವಿರ ಕೋಟಿ ರೂ.ಗೂ ಹೆಚ್ಚು ನಡೆಯುತ್ತದೆ. ಸುಮಾರು 10 ಸಾವಿರಕ್ಕೂ ಹೆಚ್ಚಿನ ಮಾರಾಟಗಾರರು ರಾಜ್ಯದಲ್ಲಿ ಇದ್ದಾರೆ. ಇಷ್ಟು ದೊಡ್ಡ ಮಟ್ಟದ ವಹಿವಾಟು ಇರುವುದರಿಂದಲೇ ಕಾಳಸಂತೆಕೋರರ ಹಾಗೂ ನಕಲಿ ವಸ್ತುಗಳ ಮಾರಾಟವೂ ಸರಾಗವಾಗಿ ನಡೆಯುತ್ತಿದೆ.

ತೆಲಂಗಾಣ ಮಾದರಿ ಕಾಯ್ದೆ ಜಾರಿಗೆ ಚಿಂತನೆ: ಅಕ್ರಮಗಳನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡುವುದು ಸರ್ಕಾರದ ಉದ್ದೇಶ. ಈಗಾಗಲೇ ತೆಲಂಗಾಣದಲ್ಲಿ ಕಾಯ್ದೆ ರೂಪಿಸಲಾಗಿದೆ. ತೆಲಂಗಾಣದಲ್ಲಿ ಪ್ರಿವೆಂಟೀವ್‌ ಡಿಟೆಂಷನ್ ಎಂಬ ಕಾಯ್ದೆ ಜಾರಿಗೆ ತಂದು ಅಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಕಾಳಸಂತೆಗೆ ಕಡಿವಾಣ ಹಾಕಲಾಗಿದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಕಾಯ್ದೆ ತರಲು ಚಿಂತನೆ ನಡೆಸಲಾಗಿದೆ. ಈ ಕಾಯ್ದೆ ಅನ್ವಯ ಅಕ್ರಮ ಮಾಡುವವರ ವಿರುದ್ಧ ದೂರು ಬಂದರೆ ಅಂತಹವರನ್ನು ಬಂಧಿಸಬಹುದು. ಜಾಮೀನು ರಹಿತ ಬಂಧನವಾಗಿರುತ್ತದೆ. ಜೊತೆಗೆ ಒಂದು ವರ್ಷದವರೆಗೆ ಜೈಲು ಶಿಕ್ಷೆ, ದಂಡ ವಿಧಿಸಬಹುದು. ಅಲ್ಲದೆ ಇನ್ನೂ ಕೆಲ ಕಠಿಣ ಅಂಶಗಳು ಈ ಕಾಯ್ದೆಯಲ್ಲಿವೆ.

ಆ್ಯಪ್ ಅಭಿವೃದ್ಧಿ: ಉತ್ಪಾದನೆಯಿಂದ ರೈತರ ಬಳಕೆಯ ತನಕ ಟ್ರ್ಯಾಕ್ ಮಾಡಲು ಅನುಕೂಲವಾಗುವಂತೆ ಪ್ರತ್ಯೇಕ ಆ್ಯಪ್ ಅಭಿವೃದ್ಧಿ ಮಾಡಲಾಗುತ್ತಿದೆ. ಈ ಆ್ಯಪ್ ಅಭಿವೃದ್ಧಿಪಡಿಸುವಂತೆ ಈಗಾಗಲೇ ಎನ್‌ಐಸಿಗೆ ಸೂಚನೆ ನೀಡಲಾಗಿದೆ. ಈ ಆ್ಯಪ್ ಮೂಲಕ ಕಾರ್ಖಾನೆಯಲ್ಲಿನ ಉತ್ಪಾದನೆಯಿಂದ, ಯಾವ ಮಾರಾಟಗಾರರಿಗೆ ಹೋಗಿದೆ, ರೈತರು ಎಷ್ಟು ಖರೀದಿ ಮಾಡಿದ್ದಾರೆ ಎಂಬ ಎಲ್ಲ ವಿವರಗಳು ಇದರಲ್ಲಿ ದಾಖಲಾಗುತ್ತವೆ.

ರಾಷ್ಟ್ರದಲ್ಲಿಯೇ ಆ್ಯಪ್ ಅಭಿವೃದ್ಧಿಪಡಿಸುತ್ತಿರುವ ಮೊದಲ ರಾಜ್ಯ ಕರ್ನಾಟಕವಾಗಲಿದೆ. ಬೇರೆ ಯಾವುದೇ ರಾಜ್ಯದಲ್ಲಿ ಇಂತಹ ಪದ್ಧತಿ ಇಲ್ಲ. ಶೀಘ್ರವಾಗಿ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ. ಕೃಷಿ ಇಲಾಖೆಯಲ್ಲಿ ಜಾಗೃತ ದಳವನ್ನು ರಚನೆ ಮಾಡಿದ್ದೇವೆ. ಇದಕ್ಕೆ ಮತ್ತಷ್ಟು ಶಕ್ತಿಯನ್ನು ತುಂಬಲಾಗಿದೆ. ಈ ಮೊದಲು ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಮಾತ್ರ ಜಂಟಿ ನಿರ್ದೇಶಕರಿದ್ದರು. ಈಗ ಮೈಸೂರು ಮತ್ತು ಕಲಬುರಗಿಗೆ ಪ್ರತ್ಯೇಕ ಜಂಟಿ ನಿರ್ದೇಶಕರನ್ನು ನೇಮಕ ಮಾಡಲಾಗಿದೆ. ಅದಕ್ಕೆ ಪೂರಕವಾಗಿ ಕಾನೂನು ರೂಪಿಸುವುದು ಮತ್ತು ತಂತ್ರಜ್ಞಾನದ ಬಲ ತುಂಬುವ ಕೆಲಸ ಮಾಡಲಾಗುತ್ತಿದೆ ಎನ್ನುತ್ತಾರೆ ಸಚಿವರು.

ತಾಂತ್ರಿಕತೆ ಅಭಿವೃದ್ಧಿಗೆ ಸಮಿತಿ: ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳ ಮೂಲಕ ರೈತರಿಗೆ ಅನುಕೂಲವಾಗುವಂತಹ ತಾಂತ್ರಿಕತೆಗಳನ್ನು ಅಭಿವೃದ್ಧಿ ಪಡಿಸುವ ಕುರಿತು ಪರಿಶೀಲಿಸಲು ಕೃಷಿ ಸಚಿವರ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರ ಸಮಿತಿ ರಚಿಸಲಾಗಿದೆ.

ದಾಖಲಾದ ಪ್ರಕರಣಗಳೆಷ್ಟು?: ರಾಜ್ಯದ ಹಲವು ಕಡೆ ದಾಳಿ ನಡೆಸಿರುವ ಕೃಷಿ ಇಲಾಖೆಯ ಜಾಗೃತ ದಳ ಇದುವರೆಗೂ 276 ಪ್ರಕರಣಗಳನ್ನು ದಾಖಲು ಮಾಡಿದೆ. ಜೊತೆಗೆ ಮೊದಲ ಬಾರಿಗೆ 24 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ರಸಗೊಬ್ಬರ ನಿಯಂತ್ರಣ ಕಾಯ್ದೆ 1985 ರ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಬೇಕೆಂಬ ನಿಯಮವಿದೆ. ನಿಗದಿಪಡಿಸಿದ ಪ್ರಮಾಣಕ್ಕಿಂತ ಹೆಚ್ಚು ಬೆಲೆಗೆ ಗೊಬ್ಬರ ಮಾರಾಟ ಮಾಡಿದರೆ, ಕೃಷಿ ಇಲಾಖೆ ಸಿಬ್ಬಂದಿ ಹಾಗೂ ತಹಶೀಲ್ದಾರ್​ಗಳು ಜಂಟಿ ಕಾರ್ಯಾಚರಣೆ ನಡೆಸಿ ಕ್ರಮಕೈಗೊಳ್ಳಬೇಕು ಎನ್ನುವ ನಿಯಮವಿದೆ.

ಇದನ್ನೂ ಓದಿ: ಮೋದಿ ಸ್ವಾತಂತ್ರ್ಯ ಬಂದ ನಂತರ ಹುಟ್ಟಿದವರು, ಇವರ ದೇಶಪ್ರೇಮ ತೋಳ-ಕುರಿಮರಿ ಕತೆ: ಸಿದ್ದರಾಮಯ್ಯ

ರೈತರು ರಸಗೊಬ್ಬರಗಳನ್ನು ಖರೀದಿಸುವಾಗ ಚೀಲದ ಮೇಲೆ ಮುದ್ರಿತ ದರವನ್ನು ಗಮನಿಸಿ ಖರೀದಿಸಬೇಕು. ಆಧಾರ್ ಕಾರ್ಡ್ ಸಂಖ್ಯೆಯನ್ನು ಸಲ್ಲಿಸಿ ರಸಗೊಬ್ಬರ ಖರೀದಿಸಬೇಕು. ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಕಂಡುಬಂದಲ್ಲಿ ಹತ್ತಿರದ ರೈತ ಸಂಪರ್ಕ ಕೇಂದ್ರ ಕಚೇರಿ ಸಂಪರ್ಕಿಸಿ ದೂರು ನೀಡಬಹುದು. ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ(ಜಾರಿದಳ)ರನ್ನು ಸಂಪರ್ಕಿಸಬಹುದು ಎಂದು ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ಬಿತ್ತನೆ ಬೀಜ ವಿತರಣೆ: ಭತ್ತ, ರಾಗಿ, ಜೋಳ, ಮೆಕ್ಕೆಜೋಳ, ಉದ್ದು, ಹೆಸರು, ಕಡಲೆ, ಅಲಸಂದೆ, ನೆಲಗಡಲೆ, ಸೂರ್ಯಕಾಂತಿ, ಗೋದಿ, ಕುಸುಬೆ ಮತ್ತು ನವಣಿ ಬಿತ್ತನೆ ಬೀಜಗಳ ಪ್ರಮಾಣಿತ ಹಾಗೂ ನಿಜ ಚೀಟಿ ಬಿತ್ತನೆ ಬೀಜಗಳನ್ನು ರಾಜ್ಯದ ಎಲ್ಲ ವರ್ಗದ ರೈತರಿಗೆ ರಿಯಾಯಿತಿ (ಸಾಮಾನ್ಯ ರೈತರಿಗೆ ಶೇ. 50 ರವರೆಗೆ ಹಾಗೂ ಪರಿಶಿಷ್ಟವರ್ಗ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ.75ರ ವರೆಗೆ) ಒಟ್ಟಾರೆ ಗರಿಷ್ಠ 2.00 ಹೆಕ್ಟೇರ್ ಅಥವಾ ಅದರ ವಾಸ್ತವಿಕ ಹಿಡುವಳಿ ಯಾವುದು ಕಡಿಮೆಯೋ ಆ ವಿಸ್ತೀರ್ಣದ ಮಿತಿಯೊಳಗೆ ರೈತರಿಗೆ ಸಕಾಲದಲ್ಲಿ ಹೋಬಳಿ ಮಟ್ಟದಲ್ಲಿಯೇ ಉತ್ತಮ ಬಿತ್ತನೆ ಬೀಜಗಳು ಲಭ್ಯವಾಗುವಂತೆ ಆಯಾ ಹೋಬಳಿಯ ರೈತ ಸಂಪರ್ಕ ಕೇಂದ್ರಗಳು, ಗುರುತಿಸಿದ ಹೆಚ್ಚುವರಿ ಮಾರಾಟ ಕೇಂದ್ರಗಳು ಹಾಗೂ ಗ್ರಾಮ ಮಟ್ಟದಲ್ಲಿಯೇ ಲಭ್ಯವಾಗುವಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.