ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ: ಸಮರ್ಥಿಸಿಕೊಂಡ ರಾಜ್ಯ ಸರ್ಕಾರ
Updated on: Jan 24, 2023, 6:46 AM IST

ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ: ಸಮರ್ಥಿಸಿಕೊಂಡ ರಾಜ್ಯ ಸರ್ಕಾರ
Updated on: Jan 24, 2023, 6:46 AM IST
ಚಿತ್ರದುರ್ಗ ಮುರುಘಾ ರಾಜೇಂದ್ರ ಮಠದ ಆಡಳಿತ ನೋಡಿಕೊಳ್ಳಲು ನಿವೃತ್ತ ಐಎಎಸ್ ಅಧಿಕಾರಿಯನ್ನು ಮಠದ ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಸರ್ಕಾರ ಈ ಮೊದಲು ಆದೇಶ ಹೊರಡಿಸಿತ್ತು. ಇದನ್ನು ಮಠದ ಉಸ್ತುವಾರಿ ಸ್ವಾಮೀಜಿ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಬೆಂಗಳೂರು: ಬೆಂಗಳೂರು: ಚಿತ್ರದುರ್ಗದ ಮುರುಘ ರಾಜೇಂದ್ರ ಬೃಹನ್ಮಠಕ್ಕೆ ಸೇರಿದ ಸಾವಿರಾರು ಕೋಟಿ ರೂಪಾಯಿಗಳ ಮೌಲ್ಯದ ಆಸ್ತಿ ಹಾಗೂ ನೂರಾರು ವಿದ್ಯಾಸಂಸ್ಥೆಗಳ ದೈನಂದಿನ ಆಡಳಿತಕ್ಕೆ ಅಡ್ಡಿಯಾಗಬಾರದೆಂಬ ಕಾರಣಕ್ಕಾಗಿ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ ಎಂದು ಸರ್ಕಾರ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿರುವ ಕ್ರಮವನ್ನು ಸಮರ್ಥನೆ ಮಾಡಿಕೊಂಡಿದೆ.
ಮುರುಘಾ ಮಠಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್.ವಸ್ತ್ರದ ಅವರನ್ನು ಆಡಳಿತಾಧಿಕಾರಿಯನ್ನು ನೇಮಕ ಮಾಡಿ ಆದೇಶಿಸಿದ್ದ ಕ್ರಮವನ್ನು ಪ್ರಶ್ನಿಸಿ ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ನ್ಯಾಯಪೀಠಕ್ಕೆ ಸರ್ಕಾರದ ಪರವಾಗಿ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು. 'ಬಸವಪ್ರಭು ಸ್ವಾಮೀಜಿ ಉಸ್ತುವಾರಿ ಹೊತ್ತ ನಂತರ ಮಠಕ್ಕೆ ಸೇರಿದ ಲಕ್ಷಾಂತರ ರೂಪಾಯಿಗಳನ್ನು ಪಡೆದಿದ್ದು, ಅದಕ್ಕೆ ಲೆಕ್ಕ ಕೊಟ್ಟಿಲ್ಲ ಎಂಬ ಅಂಶ ಗೊತ್ತಾಗಿದೆ. ಈ ಆಡಳಿತಾಧಿಕಾರಿ ವಸ್ತ್ರದ ಅವರು ತಮಗೆ ದೊರೆತಿರುವ ಮಾಹಿತಿಯನ್ನು ನೀಡಿದ್ದಾರೆ' ಎಂದು ತಿಳಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ವಸ್ತ್ರದ ಪರ ಹಿರಿಯ ವಕೀಲ ಗಂಗಾಧರ ಗುರುಮಠ, ಮಠದ ವೆಚ್ಚಗಳ ಸಂಬಂಧ ವಿವರಣೆ ಕೇಳಿದಲ್ಲಿ ಸರಿಯಾದ ಉತ್ತರ ನೀಡುತ್ತಿಲ್ಲ. ಪ್ರಕರಣ ಹೈಕೋರ್ಟ್ನಲ್ಲಿ ವಿಚಾರಣಾ ಹಂತದಲ್ಲಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಚಿಕಿತ್ಸೆಗೆ ಬಳಸದ ಹೆಲಿಕಾಪ್ಟರ್: ತುಂಬಿ ಏವಿಯೇಷನ್ಸ್ (ಹೆಲಿಕಾಪ್ಟರ್) ಜೊತೆ ಒಪ್ಪಂದ ಮಾಡಿಕೊಂಡಿದ್ದ ಪೀಠಾಧಿಪತಿಯವರು, 2020ರ ಅಕ್ಟೋಬರ್ 20ರಿಂದ ಬಳಸಿರುವ ಹೆಲಿಕಾಪ್ಟರ್ಗೆ 3 ಕೋಟಿ ಪಾವತಿ ಮಾಡಿದ್ದಾರೆ. ಇದನ್ನು ಏರ್ ಆಂಬಲೆನ್ಸ್ ಆಗಿ ಬಳಸಲಾಗುವುದು ಎಂದು ಒಪ್ಪಂದ ಮಾಡಿಕೊಂಡಿದ್ದರು. ಆದರೆ, ಈ ದಿನದತನಕ ಯಾವುದೇ ರೋಗಿಯನ್ನು ಇದರಲ್ಲಿ ಕೊಂಡೊಯ್ದಿಲ್ಲ ಎಂದು ವಿವರಿಸಿದರು.
ಇದನ್ನೂ ಓದಿ: ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್
ಪ್ರಕರಣ ಸಂಬಂಧ ಈ ಹಿಂದೆ ನಡೆಸಿದ್ದ ವಿಚಾರಣೆ ವೇಳೆ ಅರ್ಜಿದಾರರ ಪರ ಮಠದ ಪರ ಹಿರಿಯ ವಕೀಲ ಜಯಕುಮಾರ್ ಎಸ್.ಪಾಟೀಲ, ಈಗಾಗಲೇ ಮುರುಘಾ ಶರಣರು ಜೈಲಿನಲ್ಲಿ ಇದ್ದರೂ ಅವರಿಂದ ನೇಮಕಗೊಂಡಿರುವ ಮಠದ ಉಸ್ತುವಾರಿ ಸ್ವಾಮೀಜಿ ಶಾಖಾ ಮಠದ ಮಠಾಧಿಪತಿಯೇ ಆಗಿದ್ದು, ಶರಣರಿಂದ ತಮ್ಮ ಹೆಸರಿಗೆ ಜಿಪಿಎ (ಸಾಮಾನ್ಯ ಅಧಿಕಾರ ಪತ್ರ) ಪಡೆದಿದ್ದಾರೆ. ಕಾನೂನು ಪ್ರಕಾರ ಇಂತಹ ಪತ್ರವನ್ನು ಜೈಲಿನಲ್ಲಿರುವ ವಿಚಾರಣಾಧೀನ ಬಂಧಿಯೂ ಕೊಡುವ ಅಧಿಕಾರ ಇದೆ. ಇದರಿಂದ ಮಠ ಮತ್ತು ಅದರ ಆಸ್ತಿಗಳ ನಿರ್ವಹಣೆಗೆ ಯಾವುದೇ ಅನಾನುಕೂಲ ಆಗುವುದಿಲ್ಲ. ಹಾಗಾಗಿ, ಹೊರಗಿನಿಂದ ಬಂದ ಆಡಳಿತಾಧಿಕಾರಿಯು ಮಠದ ಆಂತರಿಕ ಆಡಳಿತ ನಡೆಸುವುದು ಕಾನೂನಿಗೆ ವಿರುದ್ಧವಾದುದು ಎಂದು ಪ್ರತಿಪಾದಿಸಿದ್ದರು.
ರಾಜ್ಯ ಸರ್ಕಾರವು ಸಂವಿಧಾನದ 162ನೇ ವಿಧಿಯನ್ನು ಬಳಸಿ ಆಡಳಿತಾಧಿಕಾರಿ ನೇಮಕ ಮಾಡಿದೆ. ಧಾರ್ಮಿಕ ಪಂಥದ (ರಿಲಿಜಿಯಸ್ ಡಿನಾಮಿನೇಶನ್) ವ್ಯಾಪ್ತಿಯಲ್ಲಿ ಹಾಗೂ ಸಂವಿಧಾನದ 26ನೇ ಕಲಂನಲ್ಲಿ ಮೂಲಭೂತ ಹಕ್ಕು ಪ್ರಾಪ್ತಿಯಾಗುತ್ತದೆ. ಒಮ್ಮೆ ಮೂಲಭೂತ ಹಕ್ಕು ಪ್ರಾಪ್ತಿ ಆದ ಮೇಲೆ ಅದನ್ನು ಯಾವುದೇ ಕಾನೂನು ಅಡಿಯಲ್ಲಿ ನಿರ್ಬಂಧಿಸಲು ಆಗುವುದಿಲ್ಲ. ಒಂದು ವೇಳೆ ನಿರ್ಬಂಧ ಮಾಡಲೇಬೇಕು ಎಂದಾದರೆ ಅದು ಶಾಸಕಾಂಗ ರೂಪಿಸಿದ ಕಾನೂನೇ ಆಗಿರಬೇಕು. ಈ ಕೆಲಸವನ್ನು ಕಾರ್ಯಾಂಗ ಮಾಡಲಾಗದು ಎಂದು ಸರ್ಕಾರದ ಕ್ರಮಕ್ಕೆ ಮಠದ ಪರ ವಕೀಲರು ವಿರೋಧ ವ್ಯಕ್ತ ಪಡಿಸಿದರು.
