ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ಅಂತರ.. ಬಾಂಧವ್ಯ ಹೆಚ್ಚಿಸಲು ಹಿರಿಯ ಕಾಂಗ್ರೆಸಿಗರ ಪ್ರಯತ್ನ

author img

By

Published : Oct 2, 2022, 3:06 PM IST

ಡಿಕೆ ಶಿವಕುಮಾರ್ -ಸಿದ್ದರಾಮಯ್ಯ

ರಾಜ್ಯ ಕಾಂಗ್ರೆಸ್ ನ ಹಿರಿಯ ನಾಯಕರು, ಅದರಲ್ಲಿಯೂ ಮಾಜಿ ಸಚಿವರು ಮತ್ತು ಪಕ್ಷಕ್ಕಾಗಿ ಶ್ರಮಿಸಿರುವ ನಾಯಕರು ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಒಮ್ಮತ ಮೂಡಿಸುವ ಪ್ರಯತ್ನ ಆರಂಭಿಸಿದ್ದಾರೆ. ಈ ವಿಚಾರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದೀಗ ಹಿರಿಯ ನಾಯಕರೆಲ್ಲ ಸೇರಿ ಅಂತಿಮ ಹಂತದಲ್ಲಿ ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಒಮ್ಮತ ಮೂಡಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಬೆಂಗಳೂರು: ರಾಜ್ಯ ಕಾಂಗ್ರೆಸ್​ನಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬಣವನ್ನು ಒಂದಾಗಿಸುವ ಅಂತಿಮ ಹಂತದ ಪ್ರಯತ್ನಕ್ಕೆ ಹಿರಿಯ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.

ಒಗ್ಗಟ್ಟಿನ ಬಗ್ಗೆ ಜನರಿಗೆ ಮನವರಿಕೆ: ಕೆಲವೇ ತಿಂಗಳಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಇದಕ್ಕೂ ಮುನ್ನವೇ ವರ್ಷಾಂತ್ಯದಲ್ಲಿ ಬಿಬಿಎಂಪಿಗೂ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ. ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಒಗ್ಗಟ್ಟು ಇರುವುದು ಜನರಿಗೆ ಮನವರಿಕೆ ಆದರೆ ಮಾತ್ರ ಪಕ್ಷವನ್ನ ಇನ್ನೊಮ್ಮೆ ಅಧಿಕಾರಕ್ಕೆ ತರಲು ಸಾಧ್ಯ. ಒಂದೆಡೆ ರಾಹುಲ್ ಗಾಂಧಿ ಪಾದಯಾತ್ರೆ ಸಹ ನಡೆಯುತ್ತಿದ್ದು, ಇಲ್ಲಿ ಒಗ್ಗಟ್ಟು ಪ್ರದರ್ಶಿಸಿದರೆ, ಅದನ್ನು ವರ್ಷದವರೆಗೂ ಮುಂದುವರಿಸಿಕೊಂಡು ಹೋಗುವ ಅವಕಾಶ ಇದೆ.

ಡಿಕೆಶಿ, ಸಿದ್ದರಾಮಯ್ಯ ನಡುವೆ ಅಂತರ: ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಉನ್ನತ ಸ್ಥಾನದಲ್ಲಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಡುವೆ ಸಾಕಷ್ಟು ಅಂತರವಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆಗಾಗ ಇದಕ್ಕೆ ಸೂಕ್ತ ಉದಾಹರಣೆ ಸಹ ಸಿಗುತ್ತಿದೆ. ರಾಜ್ಯ ಕಾಂಗ್ರೆಸ್​ನ ನಾಯಕತ್ವದ ಚುಕ್ಕಾಣಿ ಹಿಡಿಯಲು ಸಾಕಷ್ಟು ನಾಯಕರು ಶ್ರಮಿಸುತ್ತಿದ್ದು, ಇವರಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ಪ್ರಯತ್ನ ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ಪಕ್ಷದಲ್ಲಿ ಸದ್ಯ ಉತ್ತಮ ಹಿಡಿತವನ್ನು ಡಿಕೆಶಿ ಹೊಂದಿದ್ದಾರೆ. ಆದರೆ ಹೆಚ್ಚಿನ ಶಾಸಕರ ಒಲವು ಮತ್ತು ಬೆಂಬಲ ಸಿದ್ದರಾಮಯ್ಯ ಬೆನ್ನಿಗಿದೆ.

ಇದರ ಬೆನ್ನಲ್ಲೇ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ರಾಜ್ಯದ ಹಿರಿಯ ಕಾಂಗ್ರೆಸ್ಸಿಗ ಮಲ್ಲಿಕಾರ್ಜುನ್ ಖರ್ಗೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಈ ಹಿನ್ನೆಲೆ ರಾಜ್ಯದ ಇಬ್ಬರು ನಾಯಕರ ಜೊತೆ ಇದೀಗ ಮಲ್ಲಿಕಾರ್ಜುನ ಖರ್ಗೆ ಸಹ ಮುಂದಿನ ಚುನಾವಣೆಯಲ್ಲಿ ತಮ್ಮ ಪ್ರಭಾವವನ್ನು ಬೀರಲಿದ್ದಾರೆ. ಚುನಾವಣೆ ಪ್ರಚಾರ ಅಭ್ಯರ್ಥಿಗಳಿಗೆ ಬಿ ಫಾರಂ ವಿತರಣೆ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ನಾಯಕರು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭ ರಾಜ್ಯನಾಯಕರು ಒಗ್ಗಟ್ಟು ಪ್ರದರ್ಶಿಸದಿದ್ದರೆ, ಮತದಾರರಿಗೆ ಬೇರೆಯದ್ದೇ ಸಂದೇಶ ರವಾನೆ ಆಗಲಿದೆ.

ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ಅಂತರ
ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ಅಂತರ

ಒಮ್ಮತ ಮೂಡಿಸುವ ಪ್ರಯತ್ನ: ಈ ಎಲ್ಲ ವಿಚಾರವನ್ನು ಅರಿತಿರುವ ರಾಜ್ಯ ಕಾಂಗ್ರೆಸ್ ನ ಹಿರಿಯ ನಾಯಕರು, ಅದರಲ್ಲಿಯೂ ಮಾಜಿ ಸಚಿವರು ಮತ್ತು ಪಕ್ಷಕ್ಕಾಗಿ ಶ್ರಮಿಸಿರುವ ನಾಯಕರು ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಒಮ್ಮತ ಮೂಡಿಸುವ ಪ್ರಯತ್ನ ಆರಂಭಿಸಿದ್ದಾರೆ. ಈ ವಿಚಾರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದೀಗ ಹಿರಿಯ ನಾಯಕರಲ್ಲ ಸೇರಿ ಅಂತಿಮ ಹಂತದಲ್ಲಿ ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಒಮ್ಮತ ಮೂಡಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಕಡೆಯ ಪ್ರಯತ್ನ: ಒಂದೆಡೆ ಮೇಕೆದಾಟು ಪಾದಯಾತ್ರೆ ಮೂಲಕ ತಮ್ಮ ಶಕ್ತಿ ಪ್ರದರ್ಶನ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ಗೆ ಕೌಂಟರ್ ಕೊಡಲು ಮುಂದಾಗಿರುವ ಸಿದ್ದರಾಮಯ್ಯ ರಾಜ್ಯದಲ್ಲಿ ರಥಯಾತ್ರೆ ನಡೆಸಲು ಮುಂದಾಗಿದ್ದಾರೆ. ವಿಧಾನಮಂಡಲ ಉಭಯ ಸದನಗಳ ಅಧಿವೇಶನ ಸಂದರ್ಭ ಪರೋಕ್ಷವಾಗಿ ಈ ವಿಚಾರವನ್ನು ಸಹ ಪ್ರಸ್ತಾಪಿಸಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಎದುರಾಗಿರುವ ಈ ಭಿನ್ನಾಭಿಪ್ರಾಯ ಹಾಗೂ ಗೊಂದಲವನ್ನು ನಿವಾರಿಸುವ ನಿಟ್ಟಿನಲ್ಲಿ ಮಧ್ಯಪ್ರವೇಶಿಸಲು ಹಿರಿಯ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.

ಮಾಜಿ ಸಚಿವರಾದ ಆರ್ ವಿ ದೇಶಪಾಂಡೆ, ಎಚ್ ಕೆ ಪಾಟೀಲ್, ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಟಿಬಿ ಜಯಚಂದ್ರ, ರಾಮಲಿಂಗ ರೆಡ್ಡಿ, ಹೆಚ್ ಎಂ ರೇವಣ್ಣ, ಬಸವರಾಜ್ ರಾಯರೆಡ್ಡಿ, ಯು ಟಿ ಖಾದರ್, ಸತೀಶ್ ಜಾರಕಿಹೊಳಿ, ಡಾ ಹೆಚ್​ ಸಿ ಮಹದೇವಪ್ಪ, ಎಂ ಆರ್ ಸೀತಾರಾಮ್ ಮತ್ತು ಎಂ ಕೃಷ್ಣಪ್ಪ ಸೇರಿದಂತೆ ಹಲವು ನಾಯಕರು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಇರುವ ಅಂತರ ಕಡಿಮೆ ಮಾಡಿ ಬಾಂಧವ್ಯ ಹೆಚ್ಚಿಸುವ ಪ್ರಯತ್ನ ನಡೆಸಿದ್ದಾರೆ.

ಏಕತೆಯ ಸಂದೇಶ ರವಾನೆ: ರಾಜ್ಯದಲ್ಲಿ ಸರ್ಕಾರಿ ವಿರೋಧಿ ಅಲೆ ಏರ್ಪಟ್ಟಿದ್ದು, ಇದರ ಲಾಭವನ್ನು ಕಾಂಗ್ರೆಸ್ ಪಡೆದುಕೊಳ್ಳಬೇಕಿದೆ. ಪಕ್ಷವನ್ನು ಅಧಿಕಾರಕ್ಕೆ ತರಲು ನಾವು ಪ್ರಯತ್ನಿಸೋಣ. ಅತ್ಯುನ್ನತ ಸ್ಥಾನ ಯಾರಿಗೆ ಎಂಬ ವಿಚಾರವನ್ನು ಹೈಕಮಾಂಡ್ ನಿರ್ಧರಿಸಲಿದೆ. ಈ ಬಗ್ಗೆ ಚುನಾವಣೆ ಮುಗಿಯುವವರೆಗೂ ಯಾವುದೇ ಪ್ರಸ್ತಾಪ ಮಾಡದೆ ಇಬ್ಬರೂ ನಾಯಕರು ಒಗ್ಗಟ್ಟನ್ನು ಪ್ರದರ್ಶಿಸಿ. ರಾಹುಲ್ ಗಾಂಧಿ ರಾಜ್ಯದಲ್ಲಿ ಕೈಗೊಂಡಿರುವ ಭಾರತ್ ಜೋಡೋ ಪಾದಯಾತ್ರೆ ನಿಮ್ಮ ನಡುವೆಯೂ ಒಮ್ಮತ ತರುವಲ್ಲಿ ಯಶಸ್ವಿಯಾಗಲಿ. ಈ ಯಾತ್ರೆಯನ್ನು ರಾಜ್ಯದಲ್ಲಿ ಐಕ್ಯತಾ ಯಾತ್ರೆಯಾಗಿ ನಡೆಸುತ್ತಿದ್ದು, ರಾಜ್ಯದ ಜನತೆಗೂ ತಮ್ಮ ಏಕತೆಯ ಸಂದೇಶ ರವಾನೆ ಆಗಲಿ ಎಂದು ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಮೂರು ಬಾರಿ ಸಿಎಂ ಪಟ್ಟ ಕೈ ತಪ್ಪಿದರೂ ಪಕ್ಷ ನಿಷ್ಠೆ ಬಿಡದ ಖರ್ಗೆ: ಸೋಲಿಲ್ಲದ ಸರದಾರ ನಡೆದು ಬಂದ ದಾರಿ ಹೀಗಿದೆ...

ಇದಕ್ಕೆ ಪೂರಕವಾದ ರೀತಿ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ನಡೆದುಕೊಳ್ಳುತ್ತಿದ್ದು, ಇದು ಮುಂದಿನ ಚುನಾವಣೆ ಘೋಷಣೆವರೆಗೂ ಹಾಗೂ ನಂತರವೂ ಮುಂದುವರೆಯುತ್ತದೆಯೋ ಎನ್ನುವುದನ್ನು ಕಾದು ನೋಡಬೇಕಿದೆ. ರಾಜ್ಯದಲ್ಲಿ ನಾಯಕತ್ವದ ವಿಚಾರವಾಗಿ ಯಾವುದೇ ಹೇಳಿಕೆ ನೀಡದಂತೆ ತಮ್ಮ ಬೆಂಬಲಿಗರಿಗೆ ಸಿದ್ದರಾಮಯ್ಯ ಹಾಗೂ ಡಿಕೆಶಿ ಸೂಚಿಸುತ್ತಾರಾ ಎನ್ನುವುದನ್ನು ತಿಳಿಯಬೇಕಿದೆ. ಒಟ್ಟಾರೆ ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟು ಮೂಡುತ್ತಿದೆ ಅಂದುಕೊಳ್ಳುತ್ತಿರುವ ಸಂದರ್ಭದಲ್ಲಿ ಪ್ರತ್ಯೇಕತೆಯ ದನಿ ಕೇಳಿ ಬರುತ್ತಿದ್ದು, ಈ ಬಾರಿ ಬೇರೆಯದೇ ರೀತಿಯ ಬೆಳವಣಿಗೆ ನಡೆಯುತ್ತದಾ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಅಧಿಕಾರಕ್ಕೆ ಬರುತ್ತೇವೆ: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಆರ್ ವಿ ದೇಶಪಾಂಡೆ ರಾಜ್ಯ ಕಾಂಗ್ರೆಸ್ ನಾಯಕರ ಬಾಂಧವ್ಯದ ಕುರಿತು ಮಾತನಾಡಿದ್ದು, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ತಾರತಮ್ಯ ಉದ್ಭವಿಸುವ ಪ್ರಶ್ನೆಯೇ ಇಲ್ಲ. ಅವರು ಒಂದಾಗಿಯೇ ಇದ್ದಾರೆ. ರಾಜ್ಯ ಕಾಂಗ್ರೆಸ್​ನಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಸಾಮೂಹಿಕ ನಾಯಕತ್ವದೊಂದಿಗೆ ಮುಂದಿನ ಚುನಾವಣೆಯನ್ನು ಎದುರಿಸುತ್ತೇವೆ ಮತ್ತು ಅಧಿಕಾರಕ್ಕೆ ಬರುತ್ತೇವೆ. ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಯಾರ ಶ್ರಮ ಎಷ್ಟಿದೆ ಎನ್ನುವುದರ ಮೇಲೆ ಹೈಕಮಾಂಡ್ ನಾಯಕರು ಅಧಿಕಾರವನ್ನು ನೀಡುತ್ತಾರೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.