ನ್ಯಾಯಾಲಯದಲ್ಲಿ ಕನ್ನಡ ಬಳಕೆಗೆ ಸಹಕಾರಿಯಾಗಲು ಕಾನೂನು ಕನ್ನಡ ನಿಘಂಟು ತಯಾರಿಸಿ: ಸಿಎಂ ಬೊಮ್ಮಾಯಿ ಸೂಚನೆ

author img

By

Published : Jan 22, 2023, 9:21 PM IST

Updated : Jan 22, 2023, 9:50 PM IST

Prepare a legal Kannada dictionary

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡದ ಕಾನೂನು ನಿಘಂಟು ಮಾಡುವ ಜವಾಬ್ದಾರಿ ವಹಿಸಬೇಕು - ಸರ್ಕಾರಿ ಅಭಿಯೋಜಕರು ಹಾಗೂ ವಕೀಲರುಗಳಿಗೆ 2019-20 ಮತ್ತು 2020-21ನೇ ಸಾಲಿನ ನ್ಯಾಯಾಂಗದಲ್ಲಿ ಕನ್ನಡ ಪ್ರಶಸ್ತಿ ಪ್ರದಾನ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ.

ನ್ಯಾಯಾಂಗದಲ್ಲಿ ಕನ್ನಡ ಪ್ರಶಸ್ತಿ ಪ್ರದಾನ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡದ ಕಾನೂನು ನಿಘಂಟು ಮಾಡುವ ಜವಾಬ್ದಾರಿ ವಹಿಸಬೇಕು. ಆಗ ಅದರ ಬಳಕೆ ಮಾಡಲು ನ್ಯಾಯಾಧೀಶರಿಗೆ ಸುಲಭವಾಗಲಿದೆ. ತಜ್ಞರ ಸಮಿತಿ ಮಾಡಿ ಕನ್ನಡದ ನಿಘಂಟು ತಯಾರು ಮಾಡಿದರೆ, ಅದರಿಂದ ಕ್ಲಯಂಟ್ ಗಳಿಗೆ, ವಕೀಲರಿಗೆ ಹಾಗೂ ನ್ಯಾಯಾಧೀಶರಿಗೆ ಸಹಾಯವಾಗಲಿದೆ. ಪ್ರಮುಖ ತೀರ್ಪುಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಬೇಕು. ಅದನ್ನು ನ್ಯಾಯಾಲಯಗಳ ಎಲ್ಲಾ ಲೈಬ್ರರಿಗಳಿಗೆ ಕೊಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.

ಎಲ್ಲ ರಂಗದಲ್ಲಿ ಕನ್ನಡ ಇರಬೇಕು ಎಂಬುದೇ ನಮ್ಮ ಧ್ಯೇಯ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಭಾನುವಾರ ಆಯೋಜಿಸಿದ್ದ ನ್ಯಾಯಾಧೀಶರು, ಸರ್ಕಾರಿ ಅಭಿಯೋಜಕರು ಹಾಗೂ ವಕೀಲರುಗಳಿಗೆ 2019-20 ಮತ್ತು 2020-21ನೇ ಸಾಲಿನ ನ್ಯಾಯಾಂಗದಲ್ಲಿ ಕನ್ನಡ ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ಅವರು ಮಾತನಾಡಿದರು. ಕನ್ನಡವನ್ನು ಕಾಯುವಂಥ, ಬೆಳೆಸುವಂತ, ಉಳಿಸುವಂಥ ಗುರುತರ ಜವಾಬ್ದಾರಿ ಪ್ರಾಧಿಕಾರದ ಮೇಲಿದೆ ಎಂದರು.

ಎಲ್ಲ ರಂಗದಲ್ಲಿ ಕನ್ನಡ ಇರಬೇಕು ಎಂಬುದು ನಮ್ಮ ಧ್ಯೇಯ. ಆಡಳಿತದಲ್ಲಿ ಕನ್ನಡ ಇರಬೇಕು ಎಂಬ ಬಗ್ಗೆ ಸುದೀರ್ಘ ಹೋರಾಟ ನಡೆದಿದೆ. ಶಿಕ್ಷಣದಲ್ಲಿ ‌ಕನ್ನಡದ ಬಗ್ಗೆ ಹಲವು ಕಾನೂನು ಮಾಡಿದ್ದೇವೆ. ಆದರೂ ಸುಪ್ರೀಂ ಕೋರ್ಟ್ ಶಿಕ್ಷಣದಲ್ಲಿ ಮಾತೃ ಭಾಷೆ ಆಯ್ಕೆಯನ್ನು ಪೋಷಕರಿಗೆ ನೀಡಿದೆ. ಹಾಗಾಗಿ ಶಿಕ್ಷಣದಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಜಾರಿ ಮಾಡಲು ಸಾಧ್ಯವಾಗಿಲ್ಲ ಎಂದು ಸಿಎಂ ಹೇಳಿದರು.

ಕನ್ನಡದಲ್ಲಿ ತೀರ್ಪು ನೀಡುವುದು ಸುಲಭದ ಮಾತಲ್ಲ: ನ್ಯಾಯಾಂಗದಲ್ಲಿ ಕನ್ನಡ ಸ್ವಲ್ಪ ಕಷ್ಟ ಸಾಧ್ಯ. ನೀವು ಓದಿರುವುದು ಎಲ್ಲಾ ಆಂಗ್ಲ ಭಾಷೆಯಲ್ಲಿ. ಕನ್ನಡ ಭಾಷೆಯಲ್ಲಿ ಕಲಿತಿರುವ ಮಕ್ಕಳು ಇಂಗ್ಲೀಷ್ ನಲ್ಲಿ ಗಣಿತ, ವಿಜ್ಞಾನ ಕಲಿಯುವುದು ಕಷ್ಟ. ಮನುಷ್ಯನ ನಾಗರಿಕತೆಗೆ ಕಾನೂನಿನ ಚೌಕಟ್ಟು ಬಹಳ ದಿನದವರೆಗ ಇತ್ತು. ಪ್ರಜಾಪ್ರಭುತ್ವ ಬಂದ ಮೇಲೆ ಅದಕ್ಕೆ ವ್ಯವಸ್ಥಿತವಾಗಿ ಕಾನೂನು ತರಲು ಸಾಧ್ಯವಾಗಿದೆ. ಆದರೆ ಕನ್ನಡದಲ್ಲಿ ತೀರ್ಪು ನೀಡುವುದು ಸುಲಭದ ಮಾತಲ್ಲ. ಆದರೆ ನೀವೆಲ್ಲ ಕನ್ನಡದಲ್ಲಿ ತೀರ್ಪು ನೀಡಿ ಅಭೂತಪೂರ್ವ ಸಾಧನೆ ಮಾಡಿದ್ದೀರ ಎಂದು ಸಿಎಂ ಬೊಮ್ಮಾಯಿ ಶ್ಲಾಘೀಸಿದರು.

ನಾನು ವಕೀಲ ಅಲ್ಲ ಆದರೆ ವಕೀಲನ ಮಗ. ಹಾಗಾಗಿ ಬಹಳ ಹತ್ತಿರದಿಂದ ನೋಡಿದ್ದೇನೆ. ನಮ್ಮ ತಂದೆಯವರಿಗೆ 28 ಜ್ಯೂನಿಯರುಗಳು ಇದ್ದರು. ಈಗ ವಕೀಲರಿಗಿಂತ ಬುದ್ಧಿವಂತ ಕಕ್ಷಿದಾರ ಇದ್ದಾರೆ. ಇನ್ನು ಅಧಿಕಾರಿಗಳು ಕೋರ್ಟ್ ಅಭಿಪ್ರಾಯವನ್ನು ತೀರ್ಪು ಅಂತ ಮಾಡುತ್ತಾರೆ.‌ ಇನ್ನು ಕೆಲ ತೀರ್ಪನ್ನು ಅಭಿಪ್ರಾಯ ಎಂದು ಮಾಡುತ್ತಾರೆ ಎಂದು ತಿಳಿಸಿದರು.

ಬಜೆಟ್ ಅಧಿವೇಶನದಲ್ಲಿ ಮಸೂದೆ ಮಂಡನೆ:ಇದೇ ವೇಳೆ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್, ಆಡಳಿತದಲ್ಲಿ ಕನ್ನಡಕ್ಕೆ ಆದ್ಯತೆ ಕೊಡಬೇಕು ಎಂಬುದು ಎಲ್ಲರ ಒತ್ತಾಸೆ. ಎಲ್ಲಾ ಸರ್ಕಾರಗಳು ಕನ್ನಡದ ಉಳಿವಿಗಾಗಿ ಮಾತನಾಡುತ್ತಿದ್ದರು ಅಷ್ಟೇ. ಆದರೆ ಸಿಎಂ ಬೊಮ್ಮಾಯಿ‌ ನೇತೃತ್ವದ ಸರ್ಕಾರ ಕನ್ನಡದ ಅನುಷ್ಠಾನದ ಬರೇ ಮಾತಿಗೆ ಮಾತ್ರ ಸೀಮಿತಗೊಳಿಸಿಲ್ಲ. ನಮ್ಮ‌ ಸರ್ಕಾರ ಕನ್ನಡ ಉಳಿಸುವುದು ಬದ್ಧತೆ ಆಗಬೇಕು ಎಂದು ಒಂದು ಸಮಗ್ರ ವಿಧೇಯಕ ರೂಪಿಸಿದ್ದೇವೆ. ಕನ್ನಡವನ್ನು ಅಧಿಕೃತ ಭಾಷೆಯಾಗಿ ಎಲ್ಲ ಹಂತಗಳಲ್ಲಿ ಅನುಷ್ಠಾನಗೊಳಿಸುವುದಕ್ಕೆ ಅಗತ್ಯವಾದ ಶಾಸನಾತ್ಮಕ ಬಲವನ್ನು ಒಳಗೊಂಡಂಥ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕವನ್ನು ಜಾರಿಗೆ ತರುತ್ತಿದ್ದೇವೆ. ಬಜೆಟ್ ಅಧಿವೇಶನದಲ್ಲಿ ಈ ಮಸೂದೆ ಪಾಸ್ ಮಾಡಲಿದ್ದೇವೆ ಎಂದರು.

ನ್ಯಾಯಾಲಯದಲ್ಲಿ ಕನ್ನಡ ಬಳಸುವವರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಈವರೆಗೆ ಒಟ್ಟು 526 ಈ ಸಂಬಂಧ ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಕನ್ನಡದ ಬಗ್ಗೆ ಆದ್ಯತೆ ಕೊಡಬೇಕು.‌ ನಮ್ಮ ಸರ್ಕಾರದ ಆದ್ಯತೆ ಕನ್ನಡವಾಗಿದೆ. ಪ್ರಶಸ್ತಿ ಪಡೆಯುವವರ ಈ ಸಂಖ್ಯೆ ಹೆಚ್ಚಾಗಬೇಕು. ನ್ಯಾಯಾಲಯದಲ್ಲಿ ಕನ್ನಡ ಬಳಕೆ ಇನ್ನು ಹೆಚ್ಚಾಗಬೇಕು ಎಂಬುದು ನಮ್ಮ ಅಭಿಲಾಷೆ ಎಂದರು.

ತೀರ್ಮಾನಗಳನ್ನು ಕನ್ನಡದಲ್ಲಿ ನೀಡಲು ಪ್ರೇರೇಪಿಸಬೇಕು:ಇದೇ ವೇಳೆ ಮಾತನಾಡಿದ ಹೈ ಕೋರ್ಟ್ ನ್ಯಾಯಮೂರ್ತಿ ಜಿ.ನರೇಂದ್ರ ಮಾತನಾಡಿ, ಅಧೀನ‌ ನ್ಯಾಯಾಲಯಗಳ ಸರ್ವೋಚ್ಚ ಹಾಗೂ ಉಚ್ಚ ನ್ಯಾಯಾಲಯ ಕಾನೂನು ನಡಿ ಎಲ್ಲಾ ತೀರ್ಪುಗಳ ಪ್ರತಿ ಕನ್ನಡದಲ್ಲಿ ಲಭ್ಯವಾಗುವಂತೆ ಮಾಡುವುದು. ನ್ಯಾಯಾಧಿಕಾರಿಗಳಿಗೆ ಕನಿಷ್ಟ ಒಂದು ತೀರ್ಮಾನಗಳನ್ನು ಕನ್ನಡದಲ್ಲಿ ನೀಡಲು ಪ್ರೇರೇಪಿಸಬೇಕು. ಮಧ್ಯಸ್ತಗಾರರಿಗೆ, ಸಂಧಾನಕಾರರಿಗೆ ಕಾರ್ಯಕಲಾಪ‌ ಕನ್ನಡದಲ್ಲಿ ನಡೆಸಲು ತರಬೇತಿ ನೀಡಬೇಕು‌. ನ್ಯಾಯಾಲಯ ವ್ಯವಸ್ಥೆಯಲ್ಲಿ ಕನ್ನಡ ಭಾಷೆ ಬೆಳೆಸುವುದು ಎಲ್ಲರ ಜವಾಬ್ದಾರಿ ಇದೆ ಎಂದು ತಿಳಿಸಿದರು.

ನ್ಯಾಧೀಶರಿಗೆ ಪ್ರಶಸ್ತಿ ಪ್ರದಾನ: 2019-20, 2020-21ನೇ ಸಾಲಿನ ನ್ಯಾಯಾಂಗದಲ್ಲಿ ಕನ್ನಡ ಪ್ರಶಸ್ತಿ ಯನ್ನು ಸಿಎಂ ಬೊಮ್ಮಾಯಿ‌ ನೀಡಿ ಗೌರವಿಸಿದರು. ನ್ಯಾಯಾಂಗದಲ್ಲಿ ಕನ್ನಡ ಪ್ರಶಸ್ತಿಗೆ 90 ನ್ಯಾಯಾಧೀಶರು ಸೇರಿ 120 ಮಂದಿಗೆ ಪ್ರಶಸ್ತಿ ನೀಡಿದರು. ಕನ್ನಡದಲ್ಲಿ ತೀರ್ಪು ನೀಡುವ ನ್ಯಾಯಾಧೀಶರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ. ನ್ಯಾಯಾಲಯಗಳಲ್ಲಿ ಕನ್ನಡದಲ್ಲಿ ಅರ್ಜಿ ಸಲ್ಲಿಸುವ, ವಾದ ಮಂಡಿಸುವ ವಕೀಲರನ್ನು ಅಭಿಯೋಜನಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಮೂಲಕ ಗುರುತಿಸಲಾಗಿದೆ. ಪ್ರಶಸ್ತಿ ತಲಾ 10 ಸಾವಿರ ನಗದು ಒಳಗೊಂಡಿದೆ. 2019-20, 2020-21ನೇ ಸಾಲಿನಲ್ಲಿ ಕನ್ನಡದಲ್ಲಿ ವಾದ ಮಂಡಿಸಿದ 12 ಸರ್ಕಾರಿ ಅಭಿಯೋಜಕರು ಹಾಗೂ 18 ವಕೀಲರಿಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದನ್ನೂ ಓದಿ:ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳಕ್ಕೆ ತೆರೆ: ₹170 ಕೋಟಿಯಷ್ಟು ಒಡಂಬಡಿಕೆ

Last Updated :Jan 22, 2023, 9:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.