ಜುಲೈ 16ರಿಂದ ಪೌತಿ ಖಾತೆ ಅಭಿಯಾನ: ಸಚಿವ ಆರ್.ಅಶೋಕ್

author img

By

Published : Jun 22, 2022, 7:24 PM IST

minister r ashok

ಪೌತಿ ಖಾತೆ ಅಭಿಯಾನವನ್ನು ಜುಲೈ 16ರಿಂದ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ಬೆಂಗಳೂರು: ಮೃತರ ಹೆಸರಿನಲ್ಲಿರುವ ಭೂದಾಖಲೆಗಳನ್ನು ಹಾಲಿ ವಾರಸುದಾರರಿಗೆ ವರ್ಗಾಯಿಸುವ ಪೌತಿ ಖಾತೆ ಅಭಿಯಾನವನ್ನು ಜುಲೈ 16ರಿಂದ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಲಕ್ಷಾಂತರ ಪೌತಿ ಖಾತೆಗಳಿದ್ದು, ಇವು ಕಾಲಾನುಕಾಲಕ್ಕೆ ವಾರಸುದಾರರಿಗೆ ವರ್ಗಾವಣೆಯಾಗದೇ ತೊಂದರೆಯಾಗುತ್ತಿದೆ ಎಂದು ಹೇಳಿದರು.

ಪೌತಿ ಖಾತೆಗಳನ್ನು ಹಾಲಿ ವಾರಸುದಾರರಿಗೆ ವರ್ಗಾವಣೆ ಮಾಡುವ ಕೆಲಸ ಸರಿಯಾಗಿ ಆಗದಿರುವುದರಿಂದ ಕೇಂದ್ರ-ರಾಜ್ಯ ಸರ್ಕಾರಗಳಿಂದ ಲಭ್ಯವಾಗುವ ಹಣಕಾಸು ನೆರವನ್ನು ಬಹುತೇಕ ರೈತರು ಪಡೆಯಲಾಗುತ್ತಿಲ್ಲ. ಇದರಿಂದ ಸಾಲ ಪಡೆಯುವ ಕೆಲಸಕ್ಕೂ ಅಡ್ಡಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಮ ವಾಸ್ತವ್ಯದ ಕಾಲದಲ್ಲೇ ಪೌತಿ ಖಾತೆಗಳನ್ನು ಇತ್ಯರ್ಥಪಡಿಸಲು ನಿರ್ಧರಿಸಲಾಗಿದ್ದು, ಚಿಕ್ಕಬಳ್ಳಾಪುರದ ಮಂಚೇನಹಳ್ಳಿಯಲ್ಲಿ ತಾವು ನಡೆಸಲಿರುವ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಈ ಯೋಜನೆಗೆ ಚಾಲನೆ ದೊರೆಯಲಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ಸುಮಾರು 10 ಸಾವಿರ ಪೌತಿ ಖಾತೆಗಳನ್ನು ಹಾಲಿ ವಾರಸುದಾರರಿಗೆ ವರ್ಗಾಯಿಸುವ ಕೆಲಸವಾಗಲಿದೆ. ಇದರಿಂದಾಗಿ ದಶಕಗಳ ಕಾಲದಿಂದ ರೈತರು ಎದುರಿಸುತ್ತಿರುವ ಸಮಸ್ಯೆ ದೂರವಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. ಗ್ರಾಮವನ್ನು ಘಟಕವಾಗಿ ಪರಿಗಣಿಸಲಾಗುತ್ತಿತ್ತು. ಆನಂತರ ಏಳೆಂಟು ಗ್ರಾಮಗಳನ್ನು ಹೊಂದಿರುವ ಗ್ರಾಮ ಪಂಚಾಯಿತಿಗಳನ್ನು ಘಟಕವಾಗಿ ಪರಿಗಣಿಸಲಾಯಿತು. ಈಗ ತಾಲೂಕನ್ನೇ ಒಂದು ಘಟಕವಾಗಿ ಪರಿಗಣಿಸಲಾಗಿದ್ದು, ಪೌತಿ ಖಾತೆ ನೀಡುವ ಕೆಲಸದಿಂದ ರೈತರಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ ಎಂದು ಹೇಳಿದರು.

ಇದನ್ನೂ ಓದಿ: ಬೊಕ್ಕಸಕ್ಕೆ ಭಾರವಾಗಿರುವ ಇಲಾಖೆಗಳಲ್ಲಿರುವ ನಿಗಮಗಳ ವಿಲೀನಕ್ಕೆ ತೀರ್ಮಾನ: ಸಚಿವ ಆರ್​. ಅಶೋಕ್

ಇನ್ನು ಮುಂದೆ ಅಸಿಸ್ಟೆಂಟ್ ಕಮಿಷನರ್​ಗಳಿಗೆ ಪೌತಿ ಖಾತೆಗಳನ್ನು ಒದಗಿಸುವ ಸ್ವಾತಂತ್ರ್ಯ ನೀಡಲಾಗುವುದು. ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಅಲ್ಲಿನ ನೂರಾರು ಮಂದಿ ಹಾಜರಿರುವುದರಿಂದ ಅವರ ಸಮ್ಮುಖದಲ್ಲಿ ಪೌತಿ ಖಾತೆಯ ದಾಖಲೆಗಳನ್ನು ಸ್ಪಷ್ಟಪಡಿಸಿಕೊಳ್ಳಬಹುದು. ಮೃತರ ಹೆಸರಿನಲ್ಲಿರುವ ಪೌತಿ ಖಾತೆಗಳನ್ನು ವರ್ಗಾಯಿಸುವಾಗ ಅವರ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳ ವಿವರವನ್ನು ಸ್ಥಳೀಯರಿಂದ ಖಚಿತಪಡಿಸಿಕೊಳ್ಳಲು ಅವಕಾಶವಿದ್ದು, ಇದರಿಂದ ಹಾಲಿ ವಾರಸುದಾರರಿಗೆ ಖಾತೆ ವರ್ಗಾಯಿಸುವ ಕೆಲಸ ಸುಗಮವಾಗಲಿದೆ ಎಂದು ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.