ನಿರ್ಮಾಪಕ ಉಮಾಪತಿ ಕೊಲೆಗೆ ಸಂಚು: ನೇಪಾಳದಲ್ಲಿ ಆರೋಪಿಯ ಬಂಧನ

author img

By

Published : Jun 15, 2021, 2:07 PM IST

Umapathi murder conspiracy

ನಿರ್ಮಾಪಕ ಉಮಾಪತಿ, ರೌಡಿಶೀಟರ್ ಸೈಕಲ್ ರವಿ ಹಾಗೂ ಇತರರ ಕೊಲೆಗೆ ಸಂಚು ರೂಪಿಸಿದ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ನೇಪಾಳದಿಂದ ಬಂಧಿಸಿ ನಗರಕ್ಕೆ ಕರೆ ತಂದಿದ್ದಾರೆ.

ಬೆಂಗಳೂರು: ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಹಾಗೂ ರೌಡಿಶೀಟರ್ ಸೈಕಲ್ ರವಿ ಹತ್ಯೆಗೆ ಸಂಚು ರೂಪಿಸಿದ ಆರೋಪದಡಿ ರೌಡಿಶೀಟರ್ ರಾಜೇಶ್ ಅಲಿಯಾಸ್ ಕರಿಯಾ ಎಂಬಾತನನ್ನು ಕೆಂಪೇಗೌಡ ನಗರ ಪೊಲೀಸರು ಬಂಧಿಸಿದ್ದಾರೆ‌.

ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಬಾಂಬೆ ರವಿಯ ಸೂಚನೆಯ ಮೇರೆಗೆ ಕಳೆದ ವರ್ಷ ಡಿ. 20 ರಂದು ನಿರ್ಮಾಪಕ ಉಮಾಪತಿ, ಸಹೋದರ ದೀಪಕ್, ರೌಡಿಶೀಟರ್​ಗಳಾದ ಸೈಕಲ್ ರವಿ, ಬೇಕರಿ ರಘು ಸೇರಿದಂತೆ ಇನ್ನಿತರರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು.

ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಜಯನಗರ ಪೊಲೀಸರು ಕಾರ್ಯಾಚರಣೆ ನಡೆಸಿ 9 ಮಂದಿಯನ್ನು ಬಂಧಿಸಿದ್ದರು. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ರಾಜೇಶ್ ಬಂಧನ ಭೀತಿಯಿಂದ ನೇಪಾಳದಲ್ಲಿ ತಲೆಮರೆಸಿಕೊಂಡಿದ್ದ. ಅಜ್ಞಾತ ಸ್ಥಳದಿಂದಲೇ ಹಲವರಿಗೆ ಫೋನ್ ಮಾಡಿ ಬೆದರಿಸಿ ಹಣಕ್ಕೆ‌ ಡಿಮ್ಯಾಂಡ್ ಇಡುತ್ತಿದ್ದ.

ನಗರದ ದಕ್ಷಿಣ ವಿಭಾಗದಲ್ಲಿ ಈತ ಅಪರಾಧ ಚಟುವಟಿಕೆಯಲ್ಲಿ ನಿರತರಾಗಿದ್ದನ್ನು ಕಂಡು ಕಾರ್ಯಪ್ರವೃತ್ತರಾದ ಇನ್​ಸ್ಪೆಕ್ಟರ್ ಚೇತನ್‌ ಕುಮಾರ್ ನೇತೃತ್ವದ ತಂಡ ಈತನ ಬಂಧನಕ್ಕಾಗಿ ಹಲವು ತಿಂಗಳಿಂದ ಶೋಧ ನಡೆಸುತ್ತಿತ್ತು.

ಆಪರೇಷನ್ ಬ್ಲ್ಯಾಕ್ ಡಾಗ್: ರಾಜೀವ್ ಅಲಿಯಾಸ್ ಕರಿಯನ ಬಂಧನಕ್ಕಾಗಿ ಇನ್‌ಸ್ಪೆಕ್ಟರ್ ಚೇತನ್‌ ಕುಮಾರ್ ನೇತೃತ್ವದ ವಿಶೇಷ ತಂಡ ಆಪರೇಷನ್ ಬ್ಲ್ಯಾಕ್ ಡಾಗ್ ಹೆಸರಿನಲ್ಲಿ ತನಿಖೆ ಚುರುಕುಗೊಳಿಸಿತ್ತು‌. ತಾಂತ್ರಿಕ ತನಿಖೆಯಲ್ಲಿ ರಾಜೇಶ್ ನೇಪಾಳದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂಬ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿ ನಗರಕ್ಕೆ‌ ಕರೆ ತಂದಿದ್ದಾರೆ.

ಆರೋಪಿ ನೇಪಾಳದ ಪೊಖಾನ್ ಜಿಲ್ಲೆಯ ಲಾಡ್ಜ್​​ನಲ್ಲಿ ವಾಸ್ತವ್ಯ ಹೂಡಿದ್ದ. ಈತ ಅಲ್ಲಿಂದಲೇ ಬೆದರಿಕೆ ಕರೆ ಮಾಡಿ ಹಣ ಸುಲಿಗೆ ಮಾಡುತ್ತಿದ್ದ‌ ಎಂದು ಪೊಲೀಸರು ತಿಳಿಸಿದ್ದಾರೆ. ಕುಖ್ಯಾತ ರೌಡಿ ಬಾಂಬೆ ರವಿಯ ಸಹಚರನಾಗಿದ್ದ ರಾಜೇಶ್, ಹಳೆ ರೌಡಿ ಪರಂಧಾಮಯ್ಯನ ಶಿಷ್ಯನಾಗಿ ಗುರುತಿಸಿಕೊಂಡಿದ್ದ. ಸೌತ್ ಬಾಸ್ ಎಂದು ಶಿಷ್ಯಂದಿರಿಂದ ಕರೆಸಿಕೊಳ್ಳುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕೋವಿಡ್​​​ ವ್ಯಾಕ್ಸಿನ್​ ಹಾಕಿಸ್ಕೋ ಅಂದಿದ್ದಕ್ಕೆ ವಿಷ ಕುಡಿದು ಪ್ರಾಣ ಬಿಟ್ಟ ಯುವಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.