ಕೇಂದ್ರ ನೀತಿ ಆಯೋಗ ಮಾದರಿಯಲ್ಲಿ ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆ ರಚನೆಗೆ ಆದೇಶ

author img

By

Published : Aug 6, 2022, 9:22 PM IST

Order for formation of Karnataka State Transitional Institution

ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆ ರಚನೆಗೆ ಸರ್ಕಾರ ಆದೇಶ ಹೊರಡಿಸಿದ್ದು ಇದು ಕೇಂದ್ರ ನೀತಿ ಆಯೋಗದ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗಿದೆ.

ಬೆಂಗಳೂರು : ಕೇಂದ್ರ ನೀತಿ ಆಯೋಗದ ಮಾದರಿಯಂತೆ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗವನ್ನು ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆ ಎಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ನವ ಭಾರತಕ್ಕಾಗಿ ನವ ಕರ್ನಾಟಕವನ್ನು ನಿರ್ಮಿಸುವ ಉದ್ದೇಶದಿಂದ ರಚಿಸಲಾಗಿರುವ ಸಂಸ್ಥೆಗೆ ಸರ್ಕಾರದ ಯೋಜನೆ ಹಾಗೂ ಸಂಬಂಧಿಸಿದ ವಿಷಯಗಳಲ್ಲಿ ಪರಿಣಿತರಾದವರನ್ನು ಸರ್ಕಾರದಿಂದ ಉಪಾಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಲಾಗುವುದು. ಸಂಸ್ಥೆಯನ್ನು ಪರಿಣಾಮಕಾರಿಯಾಗಿ ನಡೆಸಲು ಹಾಗೂ ಗುರಿಗಳನ್ನು ಸಾಧಿಸಲು ವಾರ್ಷಿಕ 150 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗುವುದು. ಸಂಸ್ಥೆಯಲ್ಲಿ ಯೋಜನೆ, ಆರ್ಥಿಕ, ಸಮಾಜ ಕಲ್ಯಾಣ, ಶಿಕ್ಷಣ, ಆರೋಗ್ಯ, ಕೃಷಿ, ಗ್ರಾಮೀಣಾಭಿವೃದ್ಧಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ, ಶುದ್ಧ ಮತ್ತು ಹಸಿರು ಇಂಧನ ಮತ್ತು ಆರ್ಥಿಕತೆ ಮತ್ತು ಹಣಕಾಸು ವಲಯಗಳಾಗಿ ಒಟ್ಟು 8 ವಲಯ ಪರಿಣಿತರನ್ನು ಸಲಹೆಗಾರರನ್ನಾಗಿ ನೇಮಿಸಲಾಗುವುದು.

ಕೃಷಿ, ಶಿಕ್ಷಣ, ಕೈಗಾರಿಕೆ, ಗ್ರಾಮೀಣ ಮತ್ತು ನಗರಾಭಿವೃದ್ಧಿ, ಆರ್ಥಿಕ ಮತ್ತು ಸಾಮಾಜಿಕ, ಆರೋಗ್ಯ ಮತ್ತು ಪೋಷಣೆ, ಶುದ್ಧ ಮತ್ತು ಹಸಿರು ಇಂಧನ ವಿಜ್ಞಾನ ಮತ್ತು ತಂತ್ರಜ್ಞಾನ , ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶ, ಆರ್ಥಿಕತೆ ಮತ್ತು ಹಣಕಾಸು ವಿಭಾಗಗಳನ್ನು ರಚಿಸಲಾಗುವುದು.

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸಲಹೆಗಾರರಾಗಿರುತ್ತಾರೆ. ಬಡತನ ನಿರ್ಮೂಲನೆ, ಆದಾಯ, ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆ, ಸೇವೆಗಳ ಸರಳೀಕರಣ, ಸ್ವಚ್ಛ ಮತ್ತು ಹಸಿರು ಇಂಧನ, ಸಂಪನ್ಮೂಲಗಳ ನಿರ್ವಹಣೆ, ಲಿಂಗ ಸಮಾನತೆ, ಕೈಗಾರಿಕೆ ಮತ್ತು ಮೂಲಸೌಕರ್ಯ, ನಾವೀನ್ಯತೆ ಮತ್ತು ಕೌಶಲ್ಯಾಭಿವೃದ್ಧಿಗಳಿಗೆ ಎಂಟು ವಿಷಯ ತಜ್ಞರನ್ನು ನೇಮಿಸಲಾಗುವುದು.

ಭಾರತೀಯ ವಿಜ್ಞಾನ ಸಂಸ್ಥೆ, ಐಐಎಂಬಿ, ಐಸೆಕ್, ಎನ್​.ಎಲ್.ಎಸ್.ಯು ಸೇರಿದಂತೆ 14 ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳನ್ನು ಪಾಲುದಾರ ಸಂಸ್ಥೆಗಳಾಗಿ ನೇಮಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : ರಾಜ್ಯದಲ್ಲಿ ಮಳೆ ಹಾನಿ, ಎರಡು ತಿಂಗಳಲ್ಲಿ 70 ಜನ ಸಾವು: 2 ಹೆಚ್ಚುವರಿ ಎಸ್​​ಡಿಆರ್​ಎಫ್ ತಂಡ ರಚನೆಗೆ ಸಿಎಂ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.