ಅತಿವೃಷ್ಟಿ ಬಗ್ಗೆ ಸರ್ಕಾರಕ್ಕೆ ಗಂಭೀರತೆ ಇಲ್ಲವೆಂದರೆ ಚರ್ಚೆ ಯಾಕೆ? : ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗರಂ

author img

By

Published : Sep 16, 2022, 7:02 PM IST

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

ಬೇರೆ ಬೇರೆ ಕ್ಷೇತ್ರಗಳಿಗೆ ಕೋಟ್ಯಂತರ ರೂಪಾಯಿ ಅನುದಾನ ಕೊಡ್ತೀರಿ. ಆದರೆ, ನಮಗೆ ಅನುದಾನ ಕೊಡದೇ ಸರ್ಕಾರ ತಾರತಮ್ಯ ಮಾಡ್ತಿದೆ ಎಂದು ಶಾಸಕ ಅಬ್ಬಯ್ಯ ಪ್ರಸಾದ್ ಅವರು ಹೇಳಿದ್ದಾರೆ.

ಬೆಂಗಳೂರು: ಅತಿವೃಷ್ಟಿ ಬಗ್ಗೆ ಸರ್ಕಾರಕ್ಕೆ ಗಂಭೀರತೆ ಇಲ್ಲ ಎಂದರೆ ಚರ್ಚೆ ಯಾಕೆ ಬೇಕು? ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಇಂದು ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.

ಅತಿವೃಷ್ಟಿ ಮೇಲೆ ಚರ್ಚೆ ನಡೆಯುತ್ತಿದ್ದ ವೇಳೆ ಜೆಡಿಎಸ್‍ ಶಾಸಕ ಡಾ. ಕೆ ಅನ್ನದಾನಿ ಅವರು ತಮ್ಮ ಕ್ಷೇತ್ರಗಳಲ್ಲಿ ಮಳೆಯಿಂದ ಆಗಿರುವ ಸಮಸ್ಯೆಗಳ ಬಗ್ಗೆ ವಿವರ ನೀಡುತ್ತಿದ್ದರು. ಅದಕ್ಕೆ ಸಂಬಂಧಿಸಿದ ಸಚಿವರು ಸದನದಲ್ಲಿ ಇಲ್ಲದ ಕಾರಣ ಗರಂ ಆದ ಸಿದ್ದರಾಮಯ್ಯ, ಹಿರಿಯ ಅಧಿಕಾರಿಗಳಿಗೆ ಇದನ್ನು ಬಿಟ್ಟು ಬೇರೆ ಕೆಲಸ ಏನಿದೆ?. ಕೃಷಿ ಸಚಿವರು ಇಲ್ಲ, ಕಂದಾಯ ಸಚಿವರು ಇಲ್ಲ, ಯಾರೂ ಇಲ್ಲದೆ ಇದ್ದಾಗ ಚರ್ಚೆ ಮಾಡಿ ಏನು ಪ್ರಯೋಜನ? ಎಂದು ಪ್ರಶ್ನಿಸಿದರು.

ಕೊನೆಗೆ ನಾವು ಇದ್ದೇವೆ ಮಾತಾಡಿ ಎಂದು ಸಚಿವ ಗೋವಿಂದ ಕಾರಜೋಳ ಅವರು, ಶಾಸಕ ಅನ್ನದಾನಿಗೆ ಹೇಳಿದರು. ನಂತರ ಅತಿವೃಷ್ಟಿ ಬಗ್ಗೆ ಚರ್ಚೆ ಮುಂದುವರೆಸಿದ ಶಾಸಕ ಅಬ್ಬಯ್ಯ ಪ್ರಸಾದ್ ಅವರು, ಅನುದಾನ ತಾರತಮ್ಯದ ಬಗ್ಗೆಆಕ್ಷೇಪ ವ್ಯಕ್ತಪಡಿಸಿ, ಬೇರೆ ಬೇರೆ ಕ್ಷೇತ್ರಗಳಿಗೆ ಕೋಟ್ಯಂತರ ರೂಪಾಯಿ ಅನುದಾನ ಕೊಡ್ತೀರಿ.

ಆದರೆ, ನಮಗೆ ಅನುದಾನ ಕೊಡದೆ ಸರ್ಕಾರ ತಾರತಮ್ಯ ಮಾಡ್ತಿದೆ. ನಮ್ಮ ಕ್ಷೇತ್ರದ ರಸ್ತೆಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಯವರು ಓಡಾಡ್ತಾರೆ. ಅವರು ಓಡಾಡುವ ರಸ್ತೆ ಗಳಾದರೂ ಅಭಿವೃದ್ಧಿಯಾಗೋಕೆ ಅನುದಾನ ಕೊಡಿ ಎಂದು ಮನವಿ ಮಾಡಿದರು.

ರೇವಣ್ಣ ಕಾಲೆಳೆದ ಸಚಿವ ಮಾಧುಸ್ವಾಮಿ: ಈ ಸಂದರ್ಭದಲ್ಲಿ ಸದನಕ್ಕೆ ಆಗಮಿಸಿದ ಹೊಳೇನರಸೀಪುರ ಶಾಸಕ ಹೆಚ್ ಡಿ ರೇವಣ್ಣ ಅವರನ್ನು ಕುರಿತು ಸಚಿವ ಮಾಧುಸ್ವಾಮಿ ಅವರು, ಏನು ರೇವಣ್ಣ, ಕಾಲ, ಲಗ್ನ ಎಲ್ಲಾ ಚೆನ್ನಾಗಿದೆಯಾ? ಎಂದು ಕಾಲೆಳೆದರು.

ಅಧಿವೇಶನ ಸೋಮವಾರಕ್ಕೆ ಮುಂದೂಡಿಕೆ: ಸದನ ಮುಂದೂಡಿಕೆ ಆಗುತ್ತಿದ್ದಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿದ ಬಸನಗೌಡ ಪಾಟೀಲ್ ಯತ್ನಾಳ್, 2ಎ ಮೀಸಲಾತಿ ಚರ್ಚೆಗೆ ಮನವಿ ಮಾಡಿದರು. ಸೋಮವಾರ ಅಥವಾ ಮಂಗಳವಾರ ಚರ್ಚೆಗೆ ಅವಕಾಶ ಕೊಡುವುದಾಗಿ ಸ್ಪೀಕರ್ ತಿಳಿಸಿದರು.

ಓದಿ: 23 ಕೆರೆಗಳನ್ನು ನುಂಗಿದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.