ಬೆಂಗಳೂರಲ್ಲಿ ವಿದ್ಯುತ್ ತಂತಿ ತುಳಿದು ತಾಯಿ, ಮಗು ಸಾವು: ಸರ್ಕಾರಕ್ಕೆ ಎನ್ಹೆಚ್ಆರ್ಸಿ ನೋಟಿಸ್

ಬೆಂಗಳೂರಲ್ಲಿ ವಿದ್ಯುತ್ ತಂತಿ ತುಳಿದು ತಾಯಿ, ಮಗು ಸಾವು: ಸರ್ಕಾರಕ್ಕೆ ಎನ್ಹೆಚ್ಆರ್ಸಿ ನೋಟಿಸ್
NHRC Notice to Government of Karnataka: ಬೆಂಗಳೂರಿನಲ್ಲಿ ವಿದ್ಯುತ್ ತಂತಿ ತುಳಿದು ತಾಯಿ ಹಾಗೂ ಮಗು ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನೋಟಿಸ್ ನೀಡಿದೆ.
ನವದೆಹಲಿ: ಬೆಂಗಳೂರಿನಲ್ಲಿ ವಿದ್ಯುತ್ ತಂತಿ ತುಳಿದು ತಾಯಿ ಹಾಗೂ ಮಗು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (National Human Rights Commission - NHRC) ನೋಟಿಸ್ ಜಾರಿ ಮಾಡಿದೆ. ಈ ಬಗ್ಗೆ ಎನ್ಹೆಚ್ಆರ್ಸಿ ತನ್ನ ವೆಬ್ಸೈಟ್ನಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.
ನವೆಂಬರ್ 19ರಂದು ಬೆಂಗಳೂರಿನ ವೈಟ್ ಫೀಲ್ಡ್ ವಿಭಾಗದ ಕಾಡುಗೋಡಿಯಲ್ಲಿ ಪಾದಚಾರಿ ಮಾರ್ಗದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ತಾಯಿ ಹಾಗೂ ಮಗು ಸಾವನ್ನಪ್ಪಿದ್ದರು. ಈ ಕುರಿತು ಕಾಡುಕೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಇದೀಗ ಪ್ರಕರಣದಲ್ಲಿ ಮಾನವ ಹಕ್ಕುಗಳ ಆಯೋಗವು ಮಧ್ಯಪ್ರವೇಶಿಸಿ, ಸುಮೋಟೋ ಕೇಸ್ ಅನ್ನೂ ದಾಖಲಿಸಿಕೊಂಡಿದೆ.
ಈ ಕುರಿತು ತನ್ನ ವೆಬ್ಸೈಟ್ನಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ನವೆಂಬರ್ 19ರಂದು ಬೆಂಗಳೂರಿನ ಕಾಡುಗೋಡಿ ಪ್ರದೇಶದ ಹೋಪ್ ಫಾರ್ಮ್ ಬಳಿಯ ಫುಟ್ಪಾತ್ನಲ್ಲಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು 23 ವರ್ಷದ ಮಹಿಳೆ ಮತ್ತು ಅವರ ಒಂಬತ್ತು ತಿಂಗಳ ಮಗು ಸಾವನ್ನಪ್ಪಿದ್ದಾರೆ ಎಂಬ ಮಾಧ್ಯಮ ವರದಿಯನ್ನು ಸ್ವಯಂಪ್ರೇರಿತವಾಗಿ ಸ್ವೀಕರಿಸಿದೆ ಎಂದು ಹೇಳಿದೆ.
-
National Human Rights Commission, NHRC has taken suo motu cognizance of a media report that a 23-year-old woman and her nine months baby were electrocuted when they stepped on a live electricity wire lying unattended on the footpath near Hope Farm in the Kadugodi area in… https://t.co/fs8M1EI4kQ pic.twitter.com/NQMdMxRrpQ
— ANI (@ANI) November 21, 2023
ಅಲ್ಲದೇ, ವರದಿಯ ಪ್ರಕಾರ, ಸಂತ್ರಸ್ತರಿಗೆ ಜನತೆ ಸಹಾಯ ಮಾಡಲು ಧಾವಿಸುವ ಹೊತ್ತಿಗೆ, ಅವರು ಸುಟ್ಟು ಕರಕಲಾಗಿದ್ದಾರೆ. ಸುದ್ದಿ ವರದಿಯ ವಿಷಯಗಳು ನಿಜವಾಗಿದ್ದರೆ, ಕಳವಳಕಾರಿಯಾದ ಮಾನವ ಹಕ್ಕುಗಳ ಉಲ್ಲಂಘನೆಯ ಗಂಭೀರ ಸಮಸ್ಯೆ ಎಂಬುವುದನ್ನೂ ಆಯೋಗವು ಗಮನಿಸಿದೆ. ಈ ಘಟನೆಯು ಬೆಂಗಳೂರಿನ ವಿದ್ಯುತ್ ಇಲಾಖೆಯ ನಿರ್ಲಕ್ಷ್ಯವನ್ನು ಸೂಚಿಸುತ್ತದೆ. ಅದರಂತೆ, ಆರು ವಾರಗಳಲ್ಲಿ ಈ ವಿಷಯದ ಬಗ್ಗೆ ವಿವರವಾದ ವರದಿಯನ್ನು ನೀಡುವಂತೆ ಆಯೋಗವು ಕರ್ನಾಟಕದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ನೀಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಸರ್ಕಾರದ ವರದಿಯು ಎಫ್ಐಆರ್ನ ಸ್ಥಿತಿಗತಿ, ಲೋಪಗಳಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ತೆಗೆದುಕೊಂಡ ಕ್ರಮ ಹಾಗೂ ಮೃತರ ಸಂಬಂಧಿಕರಿಗೆ ನೀಡಲಾದ ಪರಿಹಾರ ಮಾಹಿತಿಯನ್ನು ಒಳಗೊಂಡಿರಬೇಕೆಂದು ಆಯೋಗ ಸೂಚಿಸಿದೆ. ಮತ್ತೊಂದೆಡೆ, ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್, ತನಿಖೆಗೆ ತಾಂತ್ರಿಕ ಸಹಾಯದ ಅಗತ್ಯವಿದೆ. ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ಮತ್ತು ಎಫ್ಎಸ್ಎಲ್ ಅಧಿಕಾರಿಗಳ ವರದಿ ಆಧರಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
