ಅಕ್ಟೋಬರ್ 14 ರಿಂದ 16 ರ ವರೆಗೆ ತ್ರಿವೇಣಿ ಸಂಗಮದಲ್ಲಿ ಅದ್ಧೂರಿ ಮಹಾ ಕುಂಭಮೇಳ

author img

By

Published : Aug 21, 2022, 7:16 AM IST

Maha kumbh mela

ಕೆ ಆರ್ ಪೇಟೆ ತಾಲೂಕಿನ ಅಂಬಿಗರಹಳ್ಳಿ, ಸಂಗಾಪುರ ಬಳಿ ಕಾವೇರಿ, ಹೇಮಾವತಿ ಮತ್ತು ಲಕ್ಷ್ಮಣ ತೀರ್ಥ ನದಿಗಳು ಸಮಾಗಮವಾಗುವ ತ್ರಿವೇಣಿ ಸಂಗಮದಲ್ಲಿ ಅಕ್ಟೋಬರ್ ತಿಂಗಳ 14 ರಿಂದ 16 ರ ವರೆಗೆ ಮಹಾ ಕುಂಭಮೇಳ ಮತ್ತು ಮಲೆ ಮಹದೇಶ್ವರ ಜಯಂತಿ ನಡೆಯಲಿದೆ.

ಬೆಂಗಳೂರು: ಕೃಷ್ಣರಾಜ ಪೇಟೆ ತಾಲೂಕಿನ ಅಂಬಿಗರಹಳ್ಳಿ ತ್ರಿವೇಣಿ ಸಂಗಮದಲ್ಲಿ ಅಕ್ಟೋಬರ್ 14 ರಿಂದ 15 ರ ವರೆಗೆ ಮಹಾ ಕುಂಭಮೇಳ ಕಾರ್ಯಕ್ರಮ ಮತ್ತು ಮಲೆ ಮಹದೇಶ್ವರ ಜಯಂತಿ ನೆರವೇರಲಿದೆ.

ಆದಿಚುಂಚನಗಿರಿ ಮಠದಲ್ಲಿ ಶನಿವಾರ ಈ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಈ ಬಾರಿಯ ಮಹಾ ಕುಂಭಮೇಳವನ್ನು ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಲಾಯಿತು. ಈ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ನಾಗಸಾಧು-ಸಂತರು, ಧಾರ್ಮಿಕ ಪ್ರತಿನಿಧಿಗಳು, ಜನಪ್ರತಿನಿಧಿಗಳು ಹಾಗು ಇತರೆ ಗಣ್ಯರನ್ನು ಆಹ್ವಾನಿಸಲು ಚರ್ಚಿಸಲಾಗಿದೆ.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಚಂದ್ರವನದ ಮಹಾಂತ ಶಿವಯೋಗಿ ಸ್ವಾಮೀಜಿಗಳು ಪೂರ್ವಭಾವಿ ಸಭೆಯಲ್ಲಿ ರಾಜ್ಯ ಸರ್ಕಾರಕ್ಕೆ ಮಹಾ ಕುಂಭ ಮೇಳದ ಆಯೋಜನೆ ಹೇಗಿರಬೇಕೆನ್ನುವುದರ ಬಗ್ಗೆ ಹಲವು ಮಾರ್ಗದರ್ಶನ ನೀಡಿದರು.

ಮಹಾ ಕುಂಭಮೇಳವನ್ನು ಯಶ್ವಸಿಯಾಗಿ ಆಯೋಜಿಸಬೇಕು. ಐದು ಜಿಲ್ಲೆಗಳಲ್ಲಿ ಮಲೆ ಮಹದೇಶ್ವರ ಜ್ಯೋತಿ ಸಂಚರಿಸಬೇಕು.‌ ಮೇಳಕ್ಕೆ ಆಗಮಿಸುವ ಎಲ್ಲಾ ಸಾಧು-ಸಂತರು ಹಾಗೂ ಜನರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಇದಕ್ಕೆ ಆದಿ ಚುಂಚನಗಿರಿ ಮಠದಿಂದ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಇದನ್ನೂ ಓದಿ: ಕುಂಭಮೇಳ: ಆರಡಿ ಉದ್ದ ಗಡ್ಡ ಬಿಟ್ಟು ಗಮನ ಸೆಳೆದ ನಾಗಾ ಸಾಧು

"ಇಂದೊಂದು ಐತಿಹಾಸಿಕ ಕಾರ್ಯಕ್ರಮ. ಕಳೆದ ಬಾರಿಗಿಂತಲೂ ಅದ್ಧೂರಿಯಾಗಿ ಆಯೋಜಿಸಬೇಕು. ಪ್ರತಿದಿನ ಧಾರ್ಮಿಕ ಕಾರ್ಯಕ್ರಮಗಳು, ಧರ್ಮ ಸಭೆಗಳನ್ನು ಯಶಸ್ವಿಯಾಗಿ ಏರ್ಪಡಿಸಬೇಕು. ಭಕ್ತಾದಿಗಳಿಗೆ ಸೂಕ್ತ ಸ್ನಾನಘಟ್ಟ ನಿರ್ಮಿಸಬೇಕೆಂದು" ಎಂದು ಸುತ್ತೂರು ಶ್ರೀಗಳು ಸಲಹೆ ಕೊಟ್ಟರು.

"ತ್ರಿವೇಣಿ ಸಂಗಮ ಪವಿತ್ರ ಸ್ಥಳ. ಇಲ್ಲಿ ಕುಂಭಮೇಳವನ್ನು ಶಾಸ್ತ್ರೋಕ್ತವಾಗಿ ಆಚರಿಸಬೇಕು. ಇದರ ಜೊತೆಗೆ ವಸ್ತು ಪ್ರದರ್ಶನ, ಮೇಳಗಳನ್ನು ನಡೆಸಬೇಕು" ಎಂದು ತ್ರಿನೇತ್ರ ಮಹಾಂತ ಶ್ರೀಗಳು ಅಭಿಪ್ರಾಯಪಟ್ಟರು. ಪ್ರತಿ ದಿನ ಗಂಗಾರತಿ, ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು, ಮಲೆ ಮಹದೇಶ್ವರ ಬೆಟ್ಟದಿಂದ ತ್ರಿವೇಣಿ ಸಂಗಮದವರೆಗೂ ಜ್ಯೋತಿ ಯಾತ್ರೆ ಸೇರಿದಂತೆ ಹಲವು ಕಾರ್ಯಕ್ರಮಗಳ ಬಗ್ಗೆ ಸಭೆಯಲ್ಲಿ ಸಚಿವರಾದ ನಾರಾಯಣಗೌಡ, ಗೋಪಾಲಯ್ಯ ಚರ್ಚಿಸಿದರು.

ಇದನ್ನೂ ಓದಿ: ಹರಿದ್ವಾರ ಮಹಾಕುಂಭದಲ್ಲಿ ಶಾಹಿಸ್ನಾನ: ಸಾಮಾಜಿಕ ಅಂತರ, ಮಾಸ್ಕ್‌ ಮರೆತ ಭಕ್ತರು

"ಮಂಡ್ಯ, ಮೈಸೂರು, ಚಾಮರಾಜನಗರ ಸೇರಿದಂತೆ ಐದು ಜಿಲ್ಲೆಗಳಲ್ಲಿ ಮಲೆ ಮಹದೇಶ್ವರ ಜ್ಯೋತಿ ಸಂಚರಿಸಿ ಅಕ್ಟೋಬರ್ 13 ರಂದು ಕೆ ಆರ್ ಪೇಟೆಯ ತ್ರಿವೇಣಿ ಸಂಗಮ ತಲುಪಲಿದೆ. ಈ ಧಾರ್ಮಿಕ ಕಾರ್ಯಕ್ರಮಕ್ಕೆ ದೇಶದ ನಾನಾ ಕಡೆಯಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವರು. ರಸ್ತೆ ಸೌಕರ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಧು-ಸಂತರಿಗೆ ವಸತಿ ಸೌಕರ್ಯ, ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಬೇಕು. ಬರುವ ಭಕ್ತರಿಗೆ ಸಂಗಮದಲ್ಲಿ ಸ್ನಾನಘಟ್ಟ ನಿರ್ಮಾಣ, ಶೌಚಾಲಯದ ವ್ಯವಸ್ಥೆ ಸೇರಿದಂತೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗುತ್ತಿದೆ" ಎಂದು ಸಚಿವ ಡಾ.ನಾರಾಯಣಗೌಡ ವಿವರಿಸಿದರು.

ಇದನ್ನೂ ಓದಿ: 2 ವರ್ಷದ ನಂತರ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ.. ಯುಗಾದಿ ಸಂಭ್ರಮದಲ್ಲಿ ಭಕ್ತರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.