ನಾಳೆಯಿಂದ ಮೂರು ದಿನ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ: ದೇಶ ವಿದೇಶದ ಸಿರಿಧಾನ್ಯ ಸಂಸ್ಥೆಗಳು ಭಾಗಿ..!

author img

By

Published : Jan 19, 2023, 5:16 PM IST

international-millet-summi

ಜ.20ರಿಂದ ಮೂರು ದಿನಗಳ ಕಾಲ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ - ಮೇಳದಲ್ಲಿ ದೇಶ ವಿದೇಶಗಳ ಸಿರಿಧಾನ್ಯ ಕಂಪನಿಗಳು ಭಾಗಿ - ಮೇಳಕ್ಕೆ ಸಿಎಂ ಬೊಮ್ಮಾಯಿ ಅವರಿಂದ ಚಾಲನೆ.

ಬೆಂಗಳೂರು: ನಾಳೆಯಿಂದ ಮೂರು ದಿನಗಳ ಕಾಲ ಅರಮನೆ ಮೈದಾನದಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ ನಡೆಯಲಿದ್ದು, ಸಿರಿಧಾನ್ಯ ಬೆಳೆಯುವ, ರೈತರಿಗೆ ಮಾರುಕಟ್ಟೆ ಒದಗಿಸುವ ಹಾಗೂ ರೈತರನ್ನು ಪ್ರೋತ್ಸಾಹಿಸುವ ಸದುದ್ದೇಶದೊಂದಿಗೆ ಸಿರಿಧಾನ್ಯ ಮೇಳ ಆಯೋಜಿಸಲಾಗಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರತಿನಿಧಿಗಳು ಮೇಳದಲ್ಲಿ ಭಾಗವಹಿಸಲಿದ್ದಾರೆ.

ಕೃಷಿ ಇಲಾಖೆಯು ಕೆಎಪಿಪಿಇಸಿ ಮತ್ತು ಐಸಿಸಿಒಎ ಸಂಸ್ಥೆಗಳ ಸಹಯೋಗದೊಂದಿಗೆ ನಾಳೆಯಿಂದ ಜನವರಿ 22ರವರೆಗೆ ಮೂರು ದಿನಗಳ ಕಾಲ ನಗರದ ಅರಮನೆ ಮೈದಾನದ ತ್ರಿಪುರವಾಸಿನಿ ಆವರಣದಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳವನ್ನು ಆಯೋಜನೆ ಮಾಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿರಿಧಾನ್ಯ ಮೇಳವನ್ನು ಉದ್ಘಾಟನೆ ಮಾಡಲಿದ್ದು, ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್, ಪ್ರಹ್ಲಾದ್​ ಜೋಶಿ, ಭಗವಂತ್ ಖೂಬಾ, ಶೋಭಾ ಕರಂದ್ಲಾಜೆ, ಕೈಲಾಶ್ ಚೌಧರಿ, ರಾಜೀವ್ ಚಂದ್ರಶೇಖರ್ ಭಾಗವಹಿಸಲಿದ್ದಾರೆ. ಕೃಷಿ ಸಚಿವ ಬಿ.ಸಿ.ಪಾಟೀಲ್ ಅಂತಾರಾಷ್ಟ್ರೀಯ ವಾಣಿಜ್ಯ ಮೇಳದ ಉತ್ಸುವಾರಿ ವಹಿಸಲಿದ್ದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಮೂರು ದಿನಗಳ ಮೇಳದ ಸಮಗ್ರ ವಿವರ

ವಸ್ತುಪ್ರದರ್ಶನ: ವಸ್ತುಪ್ರದರ್ಶನದಲ್ಲಿ ಸುಮಾರು 300 ಮಳಿಗೆಗಳನ್ನು ಕಾಯ್ದಿರಿಸಲಾಗಿದ್ದು, ಅಂತಾರಾಷ್ಟ್ರೀಯ, ಸಿರಿಧಾನ್ಯ ಕಂಪನಿಗಳೂ ಭಾಗಿಯಾಗಲಿದ್ದು, ದೇಶದ ಕೇರಳ, ಮಹಾರಾಷ್ಟ್ರ, ಉತ್ತರಾಖಂಡ್​, ಆಂಧ್ರಪ್ರದೇಶ, ಮಣಿಪುರ, ಛತ್ತೀಸಗಡ, ಸಿಕ್ಕಿಂ, ಅಸ್ಸೋಂ, ಅರುಣಾಚಲ ಪ್ರದೇಶ, ಬಿಹಾರ ಮುಂತಾದ ರಾಜ್ಯಗಳ ಕಂಪನಿಗಳು ಭಾಗವಹಿಸಲಿವೆ.

ಅಂತಾರಾಷ್ಟ್ರೀಯ ಪೆವಿಲಿಯನ್: ಐಎಫ್ಓಎಎಂ ಇಂಟರ್‌ನ್ಯಾಶನಲ್, ಜರ್ಮನಿ, ಐಎಫ್ಒಎಎಂ ಏಷ್ಯಾ ಮತ್ತು ದಕ್ಷಿಣ ಕೊರಿಯಾ, ಯುನೈಟೆಡ್ ಕಿಂಗ್​ಡಮ್​ನ ಆಕ್ಸೆಸ್ ಅಗ್ರಿಕಲ್ಚರ್ ಮುಂತಾದ ಅಂತಾರಾಷ್ಟ್ರೀಯ ಸಂಸ್ಥೆಗಳು ಭಾಗವಹಿಸುತ್ತಿವೆ.

ಅಂತಾರಾಷ್ಟ್ರೀಯ ಸಮ್ಮೇಳನ: ಅಂತಾರಾಷ್ಟ್ರೀಯ ಸಮ್ಮೇಳನವು "ಸಿರಿಧಾನ್ಯ, ಸಾವಯವ ಮತ್ತು ನೈಸರ್ಗಿಕ ಕೃಷಿ - ಸವಾಲುಗಳ ನಡುವೆ ಅವಕಾಶಗಳು" ಎಂಬ ವಿಷಯದ ಮೇಲೆ ಪ್ರಮುಖವಾಗಿ ಪ್ಯಾನಲ್ ಚರ್ಚೆಗಳನ್ನು ಒಳಗೊಂಡಿದ್ದು, ಸರ್ಕಾರದ ಇಲಾಖೆಗಳು, ಅಭಿವೃದ್ಧಿ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಹಾಗೂ ಇನ್ನಿತರೆ ಸಂಸ್ಥೆಗಳ ತಜ್ಞ ಭಾಷಣಕಾರರನ್ನು ಹೊಂದಿರುತ್ತದೆ. ಸಮ್ಮೇಳನದಲ್ಲಿ ಜಾಗತಿಕ ದೃಷ್ಟಿಕೋನದಿಂದ ತಮ್ಮ ಅನುಭವ ಮತ್ತು ಜ್ಞಾನವನ್ನು ಹಂಚಿಕೊಳ್ಳಲು 6 ಅಂತಾರಾಷ್ಟ್ರೀಯ ತಜ್ಞರೂ ಸಹ ಭಾಗವಹಿಸುತ್ತಿದ್ದಾರೆ.

ರೈತರ ಕಾರ್ಯಾಗಾರ: ರೈತರ ಕಾರ್ಯಾಗಾರವು ಕನ್ನಡದಲ್ಲಿ ನಡೆಯಲಿದ್ದು, ಕೃಷಿ ವಿಶ್ವವಿದ್ಯಾನಿಲಯಗಳ ವಿಜ್ಞಾನಿಗಳು ಹಾಗೂ ಸಾವಯವ, ಸಿರಿಧಾನ್ಯ ಮತ್ತು ನೈಸರ್ಗಿಕ ಕೃಷಿ ಕ್ಷೇತ್ರದ ಪರಿಣಿತರು ಇತ್ತೀಚಿನ ಬೆಳವಣಿಗೆಗಳು ಮತ್ತು ತಂತ್ರಜ್ಞಾನದ ಬಗ್ಗೆ ರೈತರಿಗೆ ತಿಳಿಸಲಿದ್ದಾರೆ. ಮೇಳದ ಮೂರು ದಿನಗಳ ಕಾರ್ಯಾಗಾರದ ಅಧಿವೇಶನಗಳಲ್ಲಿ ಸಿರಿಧಾನ್ಯಗಳು - ಪರಿಚಯ, ಪ್ರಸ್ತುತ ಸನ್ನಿವೇಶ, ನವೀನ ತಳಿಗಳು ಹಾಗೂ ತಂತ್ರಜ್ಞಾನಗಳು, ಉತ್ಪಾದನೆ ಸೇರಿದಂತೆ ಇತರ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.

ಉತ್ಪಾದಕರು - ಮಾರುಕಟ್ಟೆಗಾರರ ಸಭೆ: ವ್ಯಾಪಾರ ಒಪ್ಪಂದಗಳು ಮತ್ತು ರಫ್ತು ಸೇರಿದಂತೆ ಹೊಸ ಮಾರುಕಟ್ಟೆ ಅವಕಾಶಗಳನ್ನು ಸುಗಮಗೊಳಿಸಲು ಭಾರತ ಮತ್ತು ಇತರ ದೇಶಗಳಾದ್ಯಂತ ಸಗಟು ಮತ್ತು ಬೃಹತ್ ಮಾರುಕಟ್ಟೆದಾರರು ನೇರವಾಗಿ ರೈತರು - ಉತ್ಪಾದಕರೊಂದಿಗೆ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ. ಈ ಸಭೆಗೆ 200ಕ್ಕೂ ಅಧಿಕ ಉತ್ಪಾದಕರು, ಮಾರುಕಟ್ಟೆದಾರರು ನೋಂದಾಯಿಸಿದ್ದಾರೆ.

ಕರ್ನಾಟಕ ಪೆವಿಲಿಯನ್: ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವಾಗಿ 2023 ಅನ್ನು ಘೋಷಿಸಲಾಗಿದ್ದು, ರಾಜ್ಯದ ಸಿರಿಧಾನ್ಯ ನವೋದ್ಯಮಿಗಳಿಗೆ ಪ್ರತ್ಯೇಕ ಪೆವಿಲಿಯನ್​ಗಳನ್ನು ರಚಿಸಲಾಗುತ್ತಿದ್ದು, ರಾಜ್ಯದ ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಲಾಗುತ್ತಿದೆ. ಅಲ್ಲದೇ, ರಾಜ್ಯದ ಸಾವಯವ ಕೃಷಿ ನೀತಿಗಳು, ಸುಸ್ಥಿರ ಪದ್ದತಿಗಳು, ತಾಂತ್ರಿಕತೆಗಳು, ಸಿರಿಧಾನ್ಯ ಉತ್ಪನ್ನಗಳ ವೈವಿಧ್ಯಮಯ ತಿನಿಸುಗಳು ಮುಂತಾದವುಗಳನ್ನು ಪ್ರದರ್ಶಿಸಲಾಗುತ್ತಿದೆ. ಇದು ಕರ್ನಾಟಕವನ್ನು ಉತ್ಪಾದಕ ರಾಜ್ಯವನ್ನಾಗಿ ಮಾಡುವುದರ ಜೊತೆಗೆ, ಮುಂದಿನ ಪೀಳಿಗೆಗೆ ಉತ್ತಮ ಆಹಾರ, ಹೊಸ ವ್ಯವಹಾರಗಳು, ತಂತ್ರಜ್ಞಾನ, ಉತ್ಪಾದಕರು, ಗ್ರಾಹಕರು ಮತ್ತು ಮಾರುಕಟ್ಟೆಗಳನ್ನು ಸಕ್ರಿಯಗೊಳಿಸುತ್ತದೆ.

ಕರ್ನಾಟಕ ಪೆವಿಲಿಯನ್ ಮಳಿಗೆ: ಸಿರಿಧಾನ್ಯ ನವೋದ್ಯಮಿಗಳು -30, ಪ್ರಾದೇಶಿಕ ಸಾವಯವ ಒಕ್ಕೂಟ-15, ಕೃಷಿ ಸಂಬಂಧಿತ ಇಲಾಖೆಗಳು -5, ಕೃಷಿ ವಿಶ್ವವಿದ್ಯಾನಿಲಯಗಳು – 14, ರೈತ ಉತ್ಪಾದಕ ಸಂಸ್ಥೆಗಳು–2 ಮಳಿಗೆಗಳು ಇರಲಿವೆ.

ಈ ವಾಣಿಜ್ಯ ಮೇಳವು ಪ್ರಪಂಚದಾದ್ಯಂತ ಸಿರಿಧಾನ್ಯ ಹಾಗೂ ಸಾವಯವ ಸಂಪರ್ಕಗಳಿಗೆ ಅವಕಾಶ ನೀಡುವುದರ ಜೊತೆಗೆ ಪರಿಣತಿ, ಜ್ಞಾನ ಮತ್ತು ವ್ಯಾಪಾರ ಪದ್ದತಿಗಳನ್ನು ಹಂಚಿಕೊಳ್ಳುವ ವೇದಿಕೆಯಾಗಿದೆ. ಕರ್ನಾಟಕಕ್ಕೆ ಸಂಬಂಧಿಸಿದಂತೆ, ರೈತರ ಮತ್ತು ಕೃಷಿ ಗುಂಪುಗಳ ವೈವಿಧ್ಯತೆಯ ಸಾವಯವ ಉತ್ಪನ್ನಗಳ ಜೊತೆಗೆ ತಮ್ಮ ಒಟ್ಟಾರೆ ಸಾಮರ್ಥ್ಯವನ್ನು ಪ್ರದರ್ಶಿಸಲು ಸೂಕ್ತವಾದ ಅವಕಾಶವನ್ನು ನೀಡುತ್ತದೆ.

ಇದನ್ನೂ ಓದಿ: ಹುಬ್ಬಳ್ಳಿಗೆ ಬರುತ್ತಿದ್ದಾಳೆ ಕೆಂಪು ಸುಂದರಿ: ಮೂರು ದಿನಗಳ ಭರ್ಜರಿ ಮೇಳ...!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.