ಬೆಂಗಳೂರು: 2020-21ನೇ ಸಾಲಿನ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾಗಿದ್ದು, ಸಿಇಟಿ ಪರೀಕ್ಷೆಗೆ ಪುನರಾವರ್ತಿತರಾಗಿರುವ ಅಭ್ಯರ್ಥಿಗಳಿಗೆ ವೃತ್ತಿಪರ ಕೋರ್ಸ್ಗಳ ಸೀಟು ಹಂಚಿಕೆ ಮಾಡುವಾಗ ದ್ವಿತೀಯ ಪಿಯುಸಿ ಅಂಕಗಳನ್ನು ಪರಿಗಣಿಸಲು ಸೂಚನೆ ನೀಡಿದ್ದ ಏಕಸದಸ್ಯ ಪೀಠದ ಆದೇಶವನ್ನು ಸರ್ಕಾರ ಪ್ರಶ್ನಿಸಿ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದೆ.
ಸಿಇಟಿ ಸೀಟು ಹಂಚಿಕೆಯಲ್ಲಿ ರಿಪೀಟರ್ಸ್ಗಳ ಪಿಯುಸಿ ಅಂಕ ಪರಿಗಣನೆ: ಏಕಸದಸ್ಯ ಪೀಠದ ಆದೇಶದಿಂದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳಿಗೆ ಸೂಕ್ತ ರ್ಯಾಂಕಿಂಗ್ ಸಿಗುವುದಿಲ್ಲ. ಅಲ್ಲದೇ, ಕೊರೊನಾದಿಂದ ಪರೀಕ್ಷೆ ಇಲ್ಲದೇ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಹೆಚ್ಚು ನೆರವಾಗಲಿದೆ.
ಆದ್ದರಿಂದ ಏಕಸದಸ್ಯ ಪೀಠದ ಆದೇಶವನ್ನು ರದ್ದು ಪಡಿಸಬೇಕು. 2020-21ನೇ ಸಾಲಿನಲ್ಲಿ ಪಿಯು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗದೇ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ಆದರೆ, ಅವರ ಅಂಕಗಳನ್ನು ಸಿಇಟಿಯಲ್ಲಿ ಪಡೆದುಕೊಂಡಲ್ಲಿ ಸಿಇಟಿಯಲ್ಲಿ ಹೆಚ್ಚು ರ್ಯಾಂಕ್ ಸಿಗಲಿದೆ. ಇದರಿಂದ 2021-22ನೇ ಸಾಲಿನ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಕೊರೊನಾ ಸಾಂಕ್ರಾಮಿಕ ರೋಗ ಆವರಿಸಿದ್ದ ಕಾರಣದಿಂದ 2020-21ನೇ ಸಾಲಿನಲ್ಲಿ ಪಿಯುಸಿ ಉತ್ತೀರ್ಣರಾಗಿದ್ದ ವಿದ್ಯಾರ್ಥಿಗಳನ್ನು 2021-22ನೇ ಸಾಲಿನ ಪರಿಗಣಿಸಲಾಗುವುದಿಲ್ಲ ಎಂದು ಕರ್ನಾಟಕ ಪರೀಕ್ಷ ಪ್ರಾಧಿಕಾರ(ಕೆಇಎ) ಟಿಪ್ಪಣಿ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಈಶ್ವರ್.ಆರ್. ಸೇರಿ ಮತ್ತಿತರರು ಹೈಕೋರ್ಟ್ ಮೊರೆ ಹೋಗಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, ಕೆಇಎ ಟಿಪ್ಪಣಿಯನ್ನು ರದ್ದು ಪಡಿಸಿತ್ತು. ಅಲ್ಲದೆ, ರಿಪೀಟರ್ಸ್ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ಪಡೆದ ಶೇ.50 ರಷ್ಟು ಅಂಕ ಮತ್ತು ಸಿಇಟಿ ಪ್ರವೇಶ ಪರೀಕ್ಷೆಯಲ್ಲಿ ಪಡೆದ ಶೇ.50 ರಷ್ಟು ಅಂಕಗಳನ್ನು ಪರಿಗಣಿಸಿ ಸಿಇಟಿ ರ್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸುವಂತೆ ಕೆಇಎಗೆ ಹೈಕೋರ್ಟ್ ಈ ತೀರ್ಪಿನಲ್ಲಿ ತಿಳಿಸಿತ್ತು.
(ಇದನ್ನೂ ಓದಿ: ಸಿಇಟಿ ಸೀಟು ಹಂಚಿಕೆ: ರಿಪಿಟರ್ಸ್ಗಳ ಪಿಯುಸಿ ಅಂಕ ಪರಿಗಣಿಸಲು ಹೈಕೋರ್ಟ್ ತೀರ್ಪು, ರ್ಯಾಂಕ್ ಲಿಸ್ಟ್ನಲ್ಲಿ ಏರುಪೇರು..?)