ದಸರಾ ಹಬ್ಬದ ಸಡಗರದಲ್ಲಿ ಮಿಂದೆದ್ದ ರಾಜಧಾನಿಯಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ: 6,500 ಟನ್ ತ್ಯಾಜ್ಯ ಉತ್ಪತ್ತಿ

author img

By

Published : Oct 5, 2022, 7:16 PM IST

ಕಸದ ರಾಶಿ

ಬುಧವಾರ ಬೆಳಗ್ಗೆ ನಗರದಲ್ಲಿ ಕಣ್ಣಿಗೆ ರಾಚುವಷ್ಟು ತ್ಯಾಜ್ಯದ ಗುಡ್ಡೆಗಳು ಕಂಡು ಬಂದಿವೆ. ಇಲ್ಲಿನ ಮಲ್ಲೇಶ್ವರ, ಶಾಂತಿನಗರ, ಆರ್ ಟಿ ನಗರ, ಬಸವನಗುಡಿ, ವಿಜಯನಗರ, ಮಡಿವಾಳ, ಬಿಟಿಎಂ, ಹೆಬ್ಬಾಳ ಸೇರಿದಂತೆ ಬಹುತೇಕ ಕಡೆಗಳಲ್ಲಿ ಎಲ್ಲೆಂದರಲ್ಲಿ ಬಳಸಿ ಬಿಸಾಡಿದ ವಸ್ತುಗಳು ಕಾಣಸಿಗುತ್ತಿವೆ.

ಬೆಂಗಳೂರು: ನವರಾತ್ರಿ ಉತ್ಸವ ಹಾಗೂ ದಸರಾ ಹಬ್ಬದ ಸಡಗರದಲ್ಲಿ ಮಿಂದೆದ್ದ ರಾಜಧಾನಿಯಲ್ಲಿ ಈಗ ಕಸದ ಗುಡ್ಡೆ ನಿರ್ಮಾಣವಾಗಿದೆ. ಹಬ್ಬಕ್ಕೆ ಬಳಸಿದ ಪೂಜಾ ಸಾಮಗ್ರಿಗಳು, ತೆಂಗಿನ ಗರಿ, ಬಾಳೆದಿಂಡು ಸೇರಿದಂತೆ ಎಲ್ಲ ವಸ್ತುಗಳನ್ನೂ ಎಲ್ಲೆಂದರಲ್ಲಿ ಬಿಸಾಡಲಾಗಿರುವುದು ಕಂಡು ಬರುತ್ತಿದೆ.

ಬುಧವಾರ ಬೆಳಗ್ಗೆ ನಗರದಲ್ಲಿ ಕಣ್ಣಿಗೆ ರಾಚುವಷ್ಟು ತ್ಯಾಜ್ಯದ ಗುಡ್ಡೆಗಳು ಕಂಡು ಬಂದಿವೆ. ಇಲ್ಲಿನ ಮಲ್ಲೇಶ್ವರ, ಶಾಂತಿನಗರ, ಆರ್ ಟಿ ನಗರ, ಬಸವನಗುಡಿ, ವಿಜಯನಗರ, ಮಡಿವಾಳ, ಬಿಟಿಎಂ, ಹೆಬ್ಬಾಳ ಸೇರಿದಂತೆ ಬಹುತೇಕ ಕಡೆಗಳಲ್ಲಿ ಎಲ್ಲೆಂದರಲ್ಲಿ ಬಳಸಿ ಬಿಸಾಡಿದ ವಸ್ತುಗಳು ಕಾಣಸಿಗುತ್ತಿವೆ. ಪೂಜಾ ಸಾಮಗ್ರಿಗಳಿಂದಲೇ ತುಂಬಿ ತುಳುಕಿದ ಕಸದ ತೊಟ್ಟಿಗಳನ್ನು ಪಾಲಿಕೆಯ ಸ್ವಚ್ಛತಾ ಕರ್ಮಿಗಳು ಮಧ್ಯಾಹ್ನದ ನಂತರವೂ ವಿಲೇವಾರಿ ಮಾಡುತ್ತಿದ್ದ ದೃಶ್ಯ ಕೂಡ ಕೆಲವೆಡೆ ಕಂಡು ಬಂದಿದೆ.

6,500 ಟನ್ ತ್ಯಾಜ್ಯ ಉತ್ಪತ್ತಿ: ಸಾಮಾನ್ಯ ದಿನಗಳಲ್ಲಿ ನಗರದಲ್ಲಿ ನಿತ್ಯ ಸುಮಾರು 4,000 ಟನ್‌ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಕಳೆದೆರಡು ದಿನಗಳಿಂದ 6,500 ಟನ್‌ ಗೂ ಹೆಚ್ಚು ತ್ಯಾಜ್ಯ ಸೃಷ್ಟಿಯಾಗಿದೆ. ಅಂದರೆ, ಸುಮಾರು 2,500 ಟನ್‌ ಹೆಚ್ಚುವರಿ ತ್ಯಾಜ್ಯ ಸೃಷ್ಟಿಯಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಟಿಪ್ಪರ್‌ಗಳು ಹಾಗೂ ಕ್ಯಾಂಪ್ಯಾಕ್ಟರ್​ಗಳ ಪೂಜೆ: ಹಬ್ಬದ ಹಿನ್ನೆಲೆ ಪಾಲಿಕೆ ಕಸದ ಟಿಪ್ಪರ್‌ಗಳು ಹಾಗೂ ಕ್ಯಾಂಪ್ಯಾಕ್ಟರ್‌ಗಳನ್ನು ಚಾಲಕರು ಸ್ವಚ್ಛಗೊಳಿಸಿ ಪೂಜೆ ಮಾಡಿದ್ದಾರೆ. ಹೀಗಾಗಿ ಕಳೆದೆರಡು ದಿನಗಳಿಂದ ಸಮರ್ಪಕವಾಗಿ ಕಸ ವಿಲೇವಾರಿ ಸಾಧ್ಯವಾಗಿಲ್ಲ. ಹೀಗಾಗಿ ಮಾರುಕಟ್ಟೆ ಪ್ರದೇಶಗಳು, ಪಾದಚಾರಿ ಮಾರ್ಗಗಳು, ಮೈದಾನದ ಮೂಲೆಗಳು, ಖಾಲಿ ನಿವೇಶನಗಳು ಸೇರಿದಂತೆ ಹಲವೆಡೆ ರಾಶಿಗಟ್ಟಲೇ ಕಸ ಬಿದ್ದಿದೆ ಎಂದು ಹೇಳಿದ್ದಾರೆ.

ಪ್ರಮುಖ ಮಾರುಕಟ್ಟೆಗಳಲ್ಲಿ ಹೆಚ್ಚಿದ ತ್ಯಾಜ್ಯ: ವ್ಯಾಪಾರಿಗಳು ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಿಂದ ಮಾವಿನ ಎಲೆ, ಬಾಳೆಕಂದು, ಬೂದುಕುಂಬಳಕಾಯಿ, ಹೂವು ಸೇರಿದಂತೆ ಇತರೆ ವಸ್ತುಗಳನ್ನು ನಗರಕ್ಕೆ ತಂದು ಮಾರಾಟ ಮಾಡಿದ್ದಾರೆ. ಪ್ರಮುಖವಾಗಿ ಕೆ. ಆರ್‌ ಮಾರುಕಟ್ಟೆ, ಮೈಸೂರು ರಸ್ತೆ, ಯಶವಂತಪುರ ಮಾರುಕಟ್ಟೆ, ಕೆ. ಆರ್‌ ಪುರಂ. ಯಲಹಂಕ, ಹೆಬ್ಬಾಳ, ಮಲ್ಲೇಶ್ವರ, ಬಸವನಗುಡಿ, ರಾಜಾಜಿನಗರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿತ್ತು. ಹೀಗಾಗಿ ಈ ಪ್ರದೇಶಗಳಲ್ಲಿ ಹೆಚ್ಚಿನ ತ್ಯಾಜ್ಯ ಸೃಷ್ಟಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸಂಜೆಯ ವೇಳೆಗೆ ಬಹುತೇಕ ವ್ಯಾಪಾರಿಗಳು ಊರುಗಳತ್ತ: ಇಂದು ಸಂಜೆಯ ವೇಳೆಗೆ ಬಹುತೇಕ ವ್ಯಾಪಾರಿಗಳು ವ್ಯಾಪಾರ ಮುಗಿಸಿಕೊಂಡು, ಊರುಗಳತ್ತ ತೆರಳಿದ್ದಾರೆ. ಖರೀದಿಯಾಗದೆ ಉಳಿದಿರುವ ಬಾಳೆಕಂದು, ಬಾಳೆ ಎಲೆ, ಮಾವಿನ ಸೊಪ್ಪುಗಳನ್ನು ಅಲ್ಲಲ್ಲೇ ಬಿಟ್ಟಿರುವುದರಿಂದ ತಾಜ್ಯ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಓದಿ: ಅದ್ಧೂರಿಯಾಗಿ ನೆರವೇರಿದ ಜಂಬೂ ಸವಾರಿ: ಬನ್ನಿಮಂಟಪದ ಪಂಜಿನ ಕವಾಯತಿನಿಂದ ಕಾರ್ಯಕ್ರಮಕ್ಕೆ ತೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.