ಕುಮಾರಸ್ವಾಮಿ ಅವರೇ ಜನ ನಿಮ್ಮನ್ನು ನೋಡಿ ನಗ್ತಾರೆ: ಡಿಸಿಎಂ ಡಿಕೆ ಶಿವಕುಮಾರ್

ಕುಮಾರಸ್ವಾಮಿ ಅವರೇ ಜನ ನಿಮ್ಮನ್ನು ನೋಡಿ ನಗ್ತಾರೆ: ಡಿಸಿಎಂ ಡಿಕೆ ಶಿವಕುಮಾರ್
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆರೋಪಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿರುಗೇಟು ನೀಡಿದರು.
ಬೆಂಗಳೂರು: ಕುಮಾರಸ್ವಾಮಿ ಅವರು ಏನೇನೋ ಮಾತಾಡಿ ಅವರ ಗೌರವವನ್ನು ಅವರೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಅವರಿಗೆ ಒಳ್ಳೆಯದಾಗುವುದಿಲ್ಲ. ಜನ ನಿಮ್ಮನ್ನು ನೋಡಿ ನಗುತ್ತಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ವಿಷಾದ ವ್ಯಕ್ತಪಡಿಸಿದರು.
ಸದಾಶಿವನಗರದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿಯವರ ನೀಲಿ ಚಿತ್ರದ ಆರೋಪದ ಬಗ್ಗೆ ಪ್ರತಿಕ್ರಿಯಿಸುತ್ತಾ, ಮಾಜಿ ಮುಖ್ಯಮಂತ್ರಿಯ ಮಾತಿಗೆ ತೂಕ, ಗೌರವ ಇರಬೇಕು. ನಾನು ಕ್ಷೇತ್ರಕ್ಕೆ ಹೋಗದಿದ್ದರು ನನ್ನನ್ನು 1,23,000 ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಕನಕಪುರ ಕ್ಷೇತ್ರದ ಜನತೆ ನನ್ನ ಮೇಲೆ ಅಷ್ಟೊಂದು ನಂಬಿಕೆ ಇಟ್ಟಿದ್ದಾರೆ ಎಂದು ತಿಳಿಸಿದರು.
ಕುಮಾರಸ್ವಾಮಿಯವರು ಹತಾಶರಾಗಿದ್ದಾರೆ. ಅವರ ಹತಾಶೆ ಅವರನ್ನು ಈ ರೀತಿಯಾಗಿ ಮಾತನಾಡಿಸುತ್ತಿದೆ. ಅವರೇ ಹೋಗಿ ಕನಕಪುರದ ಜನರನ್ನು ಮಾತನಾಡಿಸಲಿ. ಡಿ ಕೆ ಶಿವಕುಮಾರ್ ಹೀಗೆ ಮಾಡಿದ್ದರೇ? ಎಂದು ನಿಮ್ಮ ಕಾರ್ಯಕರ್ತರನ್ನೇ ಕೇಳಿ. ನಾನು ಈ ರೀತಿಯ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದೆ ಎಂದು ನಮ್ಮ ಕ್ಷೇತ್ರದ ಜನರು ಹಾಗೂ ನಿಮ್ಮ ಕಾರ್ಯಕರ್ತರು ಹೇಳಿದರೆ, ಈ ಕೂಡಲೇ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಆಗ ನೀವೇನು ಮಾಡುತ್ತೀರಾ? ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಅವರು, ಅವರ ತಂದೆ ನನ್ನ ವಿರುದ್ಧ ಚುನಾವಣೆಗೆ ನಿಂತಿದ್ದಾಗ ಏಕೆ ಈ ವಿಚಾರ ಎತ್ತಲಿಲ್ಲ? ಈಗ ಏಕೆ ಈ ರೀತಿ ಮಾತನಾಡುತ್ತಿದ್ದಾರೆ. ನಾನು ಇಂದಿರಾಗಾಂಧಿ ಅವರ ನೆನಪಿನಲ್ಲಿ ಟೆಂಟ್ಗಳನ್ನು ತೆರೆದಿದ್ದವನು ಎಂದು ತಿರುಗೇಟು ನೀಡಿದರು.
ಬಿಜೆಪಿ ಬರ ಪ್ರವಾಸ ಮಾಡಲು ಸಜ್ಜಾಗುತ್ತಿದೆ ಎಂದು ಕೇಳಿದಾಗ, ಕೇಂದ್ರ ಸರ್ಕಾರದಿಂದ, ರಾಜ್ಯ ಸರ್ಕಾರಕ್ಕೆ ಆಗುತ್ತಿರುವ ಅನ್ಯಾಯವನ್ನು ಮೊದಲು ಸರಿಪಡಿಸಲಿ. ರಾಜ್ಯದ ಎಲ್ಲ ಸಂಸದರನ್ನು ಕರೆದುಕೊಂಡು ಹೋಗಿ ಬರ ಪರಿಹಾರಕ್ಕೆ ಕೇಂದ್ರದಿಂದ ಹಣ ಬಿಡುಗಡೆ ಮಾಡಿಸಲಿ ಎಂದು ಹೇಳಿದರು.
ಕೇಂದ್ರ ಸರ್ಕಾರವೇ ಈಗಾಗಲೇ ಬರ ಪರಿಸ್ಥಿತಿ ಕುರಿತು ವರದಿ ನೀಡಿದೆ. ಪ್ರವಾಸ ಮಾಡುವವರನ್ನು ನಾವು ಬೇಡ ಎಂದು ಹೇಳುವುದಿಲ್ಲ. ಪಕ್ಷ ಕಟ್ಟಿಕೊಳ್ಳಲಿ, ಪ್ರವಾಸ ಮಾಡಲಿ, ನಮಗೇನು ತೊಂದರೆ ಇಲ್ಲ. ನೂರು ದಿನ ಇರುವ ಉದ್ಯೋಗ ಖಾತ್ರಿ ಯೋಜನೆಯ ಮಾನವ ದಿನಗಳನ್ನು 150 ದಿನಕ್ಕೆ ಹೆಚ್ಚಳ ಮಾಡಲಿ. ಆಗ ಈ ದೇಶಕ್ಕೆ ಬಿಜೆಪಿ ಒಳ್ಳೆಯದನ್ನು ಮಾಡುತ್ತಿದೆ ಎಂದು ಈ ದೇಶದ ಜನ ಮತ್ತು ನಾವು ನಂಬುತ್ತೇವೆ ಎಂದು ಕುಹಕವಾಡಿದರು.
ವಿದ್ಯುತ್ ಸ್ಪರ್ಶದಿಂದ ತಾಯಿ ಮತ್ತು ಮಗು ಮರಣದ ಬಗ್ಗೆ ಪ್ರತಿಕ್ರಿಯಿಸುತ್ತಾ, ಇದು ಗಂಭೀರವಾದ ವಿಚಾರ. ಅದರ ಬಗ್ಗೆ ಕ್ರಮ ಕೈಗೊಳ್ಳುತ್ತಿದ್ದೇವೆ. ತಂತಿಯ ಬದಲಿಗೆ ಕೇಬಲ್ ಅಳವಡಿಕೆ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ನೀವು ಸಹಕರಿಸಬೇಕು, ನಾನು ಅದನ್ನು ಸರಿಪಡಿಸುತ್ತೇನೆ ಎಂದರು.
ಕಾಂಗ್ರೆಸ್ ಕಾರ್ಯಕರ್ತರು ಕುಮಾರಸ್ವಾಮಿ ವಿರುದ್ಧ ಪೋಸ್ಟರ್ ಹಾಕಿದ್ದಾರೆ ಎಂದಾಗ “ಯಾರು ಹಾಕಿದ್ದರೂ ತಪ್ಪೇ. ನಾನು ಇಂತಹ ಕೀಳು ಮಟ್ಟದ ರಾಜಕಾರಣಕ್ಕೆ ಇಳಿಯುವುದಿಲ್ಲ ಎಂದು ತಿಳಿಸಿದರು. ರಂದೀಪ್ ಸುರ್ಜೇವಾಲ ಅವರ ರಾಜ್ಯ ಭೇಟಿಯ ಬಗ್ಗೆ ಕೇಳಿದಾಗ “ಸುರ್ಜೇವಾಲ ಅವರು ಪಕ್ಷದ ಕಾರ್ಯವೈಖರಿ ಬಗ್ಗೆ ಚರ್ಚೆ ಮಾಡಲು ಬರುತ್ತಿದ್ದಾರೆ” ಎಂದರು.
