ನಾಯಕತ್ವ ಬದಲಾವಣೆ ಬಳಿಕ ಮೊದಲ ಉಪಸಮರ: ಬೊಮ್ಮಾಯಿಗೆ ಅಗ್ನಿ ಪರೀಕ್ಷೆ, ಬಿಜೆಪಿಗಿದು ಸತ್ವ ಪರೀಕ್ಷೆ..!

author img

By

Published : Sep 28, 2021, 12:28 PM IST

bjp-facing-first-by-election-after-leadership-change-in-karnataka

ಕೇಂದ್ರ ಚುನಾವಣಾ ಆಯೋಗ 14 ರಾಜ್ಯಗಳ 30 ವಿಧಾನಸಭಾ ಕ್ಷೇತ್ರಗಳು ಮತ್ತು ಮೂರು ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕ ಘೋಷಣೆ ಮಾಡಿದೆ. ಅದರಲ್ಲಿ ಹಾನಗಲ್ ಹಾಗೂ ಸಿಂಧಗಿ ಕ್ಷೇತ್ರಗಳು ಸಹ ಸೇರಿದ್ದು, ಆಡಳಿತ ಪಕ್ಷ ಬಿಜೆಪಿಗೆ ಕ್ಷೇತ್ರ ಉಳಿಸಿಕೊಂಡು ನಾಯಕತ್ವ ಬದಲಾವಣೆಯ ಪರೀಕ್ಷೆ ಎದುರಿಸಲಿದೆ.

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ನಂತರ ಮೊದಲ ಉಪಚುನಾವಣೆ ಎದುರಾಗಿದ್ದು, ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿಗೆ ಅಗ್ನಿ ಪರೀಕ್ಷೆ ಎದುರಾಗಿದೆ. ಉಪ ಕದನದಲ್ಲಿ ಗೆಲ್ಲುವ ಮೂಲಕ ತಮ್ಮ ಆಯ್ಕೆ ಸಮರ್ಥಿಸಿಕೊಳ್ಳುವ ಅವಕಾಶ ಬೊಮ್ಮಾಯಿ ಅವರಿಗಿದ್ದು, ಬಿಜೆಪಿ ಪರ ಜನತೆಯಲ್ಲಿ ಒಲವಿದೆ ಎಂದು ಸಾಬೀತುಪಡಿಸುವ ಸತ್ವ ಪರೀಕ್ಷೆಗಿಳಿದಿದೆ.

ಮೂರು ಮಹಾನಗರ ಪಾಲಿಕೆ ಚುನಾವಣೆ ಬೆನ್ನಲ್ಲೇ ಎರಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ದಿನಾಂಕ ಘೋಷಣೆಯಾಗಿದೆ. ರಾಜಕೀಯ ಗುರು ಸಿಎಂ ಉದಾಸಿ ನಿಧನದಿಂದ ತೆರವಾಗಿರುವ ಹಾನಗಲ್ ವಿಧಾನಸಭಾ ಕ್ಷೇತ್ರ ಮತ್ತು ಜೆಡಿಎಸ್ ಶಾಸಕ ಎಂಸಿ ಮನಗೊಳಿ ನಿಧನದಿಂದ ತೆರವಾಗಿರುವ ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದ್ದು, ಎರಡು ಕ್ಷೇತ್ರಗಳು ಬಿಜೆಪಿ ಪಾಲಿಗೆ ಮಹತ್ವದ್ದಾಗಿದೆ.

ಸಿಎಂ ತವರು ಜಿಲ್ಲೆಯ ಪ್ರತಿಷ್ಠೆಯ ಕಣ

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ನಂತರ ನಡೆಯುತ್ತಿರುವ ಮೊದಲ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಇದಾಗಿದ್ದು, ನೂತನ ನಾಯಕತ್ವಕ್ಕೆ ಜನರು ಬೆಂಬಲ ಕೊಡುತ್ತಾರಾ? ಬಿಜೆಪಿ ಪರ ರಾಜ್ಯದ ಜನತೆಯ ಒಲವಿದೆಯಾ ಎನ್ನುವ ಪ್ರಶ್ನೆಗೆ ಉಪಚುನಾವಣೆ ಉತ್ತರ ನೀಡಲಿದೆ.

ಹಾನಗಲ್ ವಿಧಾನಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದ್ದು ಕ್ಷೇತ್ರವನ್ನು ಉಳಿಸಿಕೊಳ್ಳುವ ಮೂಲಕ ತವರು ಜಿಲ್ಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಅಸ್ತಿತ್ವ ಬಲಪಡಿಸಬೇಕಿದೆ. ಅಲ್ಲದೇ ತಮ್ಮ ರಾಜಕೀಯ ಗುರುವಾಗಿದ್ದ ಸಿಎಂ ಉದಾಸಿ ಅವರಿಗೆ ಕ್ಷೇತ್ರದ ಗೆಲುವಿನ ಮೂಲಕ ಗೌರವ ಅರ್ಪಿಸಬೇಕಿದೆ.

ಕಳೆದ ಬಾರಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಹಿಡಿತಕ್ಕೆ ಸಿಕ್ಕಿದ್ದ ಸಿಂದಗಿ ಕ್ಷೇತ್ರದಲ್ಲಿಯೂ ಈಗ ಉಪಚುನಾವಣೆ ನಡೆಯುತ್ತಿದೆ. ಕಳೆದ ಬಾರಿ 9 ಸಾವಿರ ಮತಗಳ ಅಂತರದಿಂದ ಬಿಜೆಪಿ 2ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಈಗ ರಾಜ್ಯದಲ್ಲಿ ಬಿಜೆಪಿ ಆಡಳಿತವಿದೆ ಹಾಗಾಗಿ ಉಪಚುನಾವಣೆ ಸವಾಲಾಗಿ ತೆಗೆದುಕೊಂಡಿದೆ.

ಉದಾಸಿ ಕುಟುಂಬಸ್ಥರಿಗೆ ಒಲಿಯುತ್ತಾ ಟಿಕೆಟ್​..?

ಸದ್ಯ ಎರಡೂ ಕ್ಷೇತ್ರಗಳಿಗೂ ಅಭ್ಯರ್ಥಿಗಳು ಯಾರು ಎನ್ನುವುದನ್ನು ಅಂತಿಮಗೊಳಿಸಿಲ್ಲ, ಹಾನಗಲ್​ನಲ್ಲಿ ಉದಾಸಿ ಕುಟುಂಬಕ್ಕೆ ಕೊಡಬೇಕಾ ಎನ್ನುವ ಕುರಿತು ನಿರ್ಧಾರಕ್ಕೆ ಬಂದಿಲ್ಲ, ಸಿಂದಗಿಯಲ್ಲಿಯೂ ಕಳೆದ ಬಾರಿಯ ಪರಾಜಿತ ಅಭ್ಯರ್ಥಿಗೆ ಕೊಡಬೇಕಾ ಅಥವಾ ಹೊಸಬರಿಗೆ ಟಿಕೆಟ್ ನೀಡಬೇಕಾ ಎನ್ನುವುದು ಅಂತಿಮವಾಗಿಲ್ಲ. ಎರಡೂ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಸದ್ಯದಲ್ಲೇ ಬಿಜೆಪಿ ನಾಯಕರು ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರವಾಸದ ವೇಳೆ ಮುಂದಿನ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಲಿದೆ ಎನ್ನುವ ಹೇಳಿಕೆ ನೀಡಿದ್ದರು. ನಂತರ ಈ ಹೇಳಿಕೆ ಕುರಿತು ರಾಜ್ಯ ಬಿಜೆಪಿ ನಾಯಕರಿಂದ ಭಿನ್ನ ಹೇಳಿಕೆಗಳು ವ್ಯಕ್ತವಾಗಿದ್ದವು. ಪರ-ವಿರೋಧದ ಅಭಿಪ್ರಾಯ ಬಂದಿದ್ದವು ಅದರ ಬೆನ್ನಲ್ಲೇ ಇದೀಗ ಉಪ ಕದನ ಎದುರಾಗಿದ್ದು, ಬೊಮ್ಮಾಯಿ ನಾಯಕತ್ವಕ್ಕೆ ಸವಾಲಾಗಿದೆ.

ಉಪಪರೀಕ್ಷೆಯಲ್ಲಿ ಗೆದ್ದು ನಾಯಕತ್ವ ಸಾಬೀತುಪಡಿಸಿಕೊಂಡು ಮುಂದಿನ ಚುನಾವಣಾ ನಾಯಕತ್ವ ಕುರಿತು ಅಮಿತ್ ಶಾ ನೀಡಿದ್ದ ಹೇಳಿಕೆಯನ್ನು ಬೊಮ್ಮಾಯಿ ಉಪ ಕದನದ ಫಲಿತಾಂಶದ ಮೂಲಕ ಸಮರ್ಥಿಸಿಕೊಳ್ಳಬೇಕಾಗಿದೆ.

ಬಿಎಸ್​ವೈ ಪಾತ್ರ

ಭವಿಷ್ಯದ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ರಾಜ್ಯ ಪ್ರವಾಸಕ್ಕೆ ಮುಂದಾಗಿದ್ದ ಮಾಜಿ ಸಿಎಂ ಯಡಿಯೂರಪ್ಪಗೆ ಪಕ್ಷದಲ್ಲೇ ಅಡ್ಡಗಾಲು ಹಾಕಿ ಪ್ರವಾಸಕ್ಕೆ ಅಡ್ಡಿಪಡಿಸಲಾಗಿದೆ. ಇದೀಗ ಉಪಕದನದಲ್ಲಿ ಸಕ್ರೀಯರಾಗುತ್ತಾರಾ ಅಥವಾ ತಟಸ್ಥವಾಗಿ ಉಳಿದು ರಾಜ್ಯ ಪ್ರವಾಸಕ್ಕೆ ಅಡ್ಡಿ ಮಾಡಿದವರಿಗೆ ಪಕ್ಷಕ್ಕೆ ತಮ್ಮ ಅನಿವಾರ್ಯತೆ ತೋರಿಸಿಕೊಡಲಿದ್ದಾರಾ ಎಂದು ಕಾದು ನೋಡಬೇಕಿದೆ.

ಚುನಾವಣಾ ದಿನಾಂಕ

ಶಾಸಕರ ಅಗಲಿಕೆಯಿಂದ ತೆರವಾದ ಹಾನಗಲ್ ಮತ್ತು ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದೆ. ಅಕ್ಟೋಬರ್ 30 ರಂದು ಎರಡೂ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ನವೆಂಬರ್ 2ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ: ಸಾಮೂಹಿಕ ನಾಯಕತ್ವದಲ್ಲಿ ಉಪ ಚುನಾವಣೆ ಎದುರಿಸಲಿದ್ದೇವೆ: ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.