ಬೆಂಗಳೂರು: ದೇಶದ ಅಖಂಡತೆಗೆ, ಸಾರ್ವಭೌಮತ್ವದ ಉಳಿಯುವಿಕೆಗೆ ಬಲಿದಾನಗೈದ ಧೀಮಂತ ನಾಯಕ ಡಾ. ಶ್ಯಾಮಪ್ರಸಾದ ಮುಖರ್ಜಿ ಅವರ ಬಲಿದಾನ ದಿವಸ ಮತ್ತು ಕರ್ನಾಟಕದ ಕೇಸರಿ ಎಂದೇ ಖ್ಯಾತರಾಗಿದ್ದ ಭಾರತೀಯ ಜನಸಂಘದ ಸಂಸ್ಥಾಪಕ ಸದಸ್ಯ ಜಗನ್ನಾಥರಾವ್ ಜೋಶಿ ಅವರ ಜನ್ಮದಿನಾಚರಣೆಯನ್ನು ಇಂದು ಬಿಜೆಪಿ ಕಾರ್ಯಾಲಯದಲ್ಲಿ ಆಚರಿಸಲಾಯಿತು.
ನಗರದ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಾರ್ಯಾಲಯ, ಜಗನ್ನಾಥ ಭವನದಲ್ಲಿ ಈ ಇಬ್ಬರು ಗಣ್ಯರ ಭಾವಚಿತ್ರಗಳಿಗೆ ಪುಷ್ಪನಮನದೊಂದಿಗೆ ಗೌರವ ಸಲ್ಲಿಸಿ ಅವರ ಕೊಡುಗೆಯನ್ನು ಸ್ಮರಿಸಲಾಯಿತು. ಈ ವೇಳೆ ಮಾತನಾಡಿದ ವಿಧಾನಪರಿಷತ್ ಮಾಜಿ ಸದಸ್ಯ ಎನ್. ಶಂಕರಪ್ಪ, ಡಾ. ಶ್ಯಾಮಪ್ರಸಾದ ಮುಖರ್ಜಿ ಅವರು ದೇಶಕ್ಕೆ ಕೊಟ್ಟ ಕೊಡುಗೆ ಅಪಾರವಾದುದು. ದೇಶ ಮತ್ತು ಸಮಾಜಕ್ಕಾಗಿ ಕಾಶ್ಮೀರದಲ್ಲಿ ಅವರ ಬಲಿದಾನವಾಗಿದೆ. ಕಾಶ್ಮೀರವನ್ನು ಪ್ರತ್ಯೇಕವಾಗಿ ನೋಡುವುದನ್ನು ಅವರು ಸಹಿಸಿರಲಿಲ್ಲ. ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೊಡುವುದನ್ನು ವಿರೋಧಿಸಿ ದೆಹಲಿಯಿಂದ 10 ಸಾವಿರ ಜನರೊಂದಿಗೆ ಅವರು ಜಮ್ಮುವರೆಗೆ ಪ್ರತಿಭಟನೆ ನಡೆಸಿದ್ದರು. ಜಮ್ಮುವಿನಲ್ಲಿ ಬಂಧಿತರಾದ ಅವರು ಅನುಮಾನಾಸ್ಪದವಾಗಿ ಕೊನೆಯುಸಿರೆಳೆದರು. ಕಾಶ್ಮೀರ ನಮ್ಮ ದೇಶದಲ್ಲಿ ಉಳಿದಿರಲು ಮುಖರ್ಜಿ ಅವರ ತ್ಯಾಗವೇ ಕಾರಣ ಎಂದರು.
ಭಾರತೀಯ ಜನಸಂಘದ ಉಪಾಧ್ಯಕ್ಷರೂ ಆಗಿದ್ದ ಸಂಸ್ಥಾಪಕ ಸದಸ್ಯ ಜಗನ್ನಾಥರಾವ್ ಜೋಶಿ, ಮಧ್ಯಪ್ರದೇಶದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾದವರು. ಗೋವಾ ಪ್ರದೇಶವು ಪೋರ್ಚುಗೀಸರಿಂದ ಮುಕ್ತವಾಗಲು ಜೋಶಿ ಅವರ ಪಾತ್ರ ಬಹುದೊಡ್ಡದು ಹಾಗೂ ಜೋಶಿಯವರು ಬಹಳ ಸರಳ ಮನುಷ್ಯರಾದರೂ ದೊಡ್ಡ ಆರ್ಥಿಕ ತಜ್ಞರಾಗಿದ್ದರು. ಇವರಿಬ್ಬರು ಪಕ್ಷದ ಎರಡು ಕಣ್ಣುಗಳಿದ್ದಂತೆ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು, ಶಾಸಕ ಡಾ.ಶಿವರಾಜ್ ಪಾಟೀಲ್, ಮೋರ್ಚಾಗಳ ಪದಾಧಿಕಾರಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಕಾರ್ಯಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ನಾಯಕರು ನಕಲಿ ಗಾಂಧಿ ಕುಟುಂಬದ ರಬ್ಬರ್ ಸ್ಟ್ಯಾಂಪ್: ಬಿಜೆಪಿ