ಪಠ್ಯ ಪುಸ್ತಕ ವಿವಾದ.. ಸಮಿತಿ ತೆಗೆದಿದ್ದೇನು, ಮರುಸೇರ್ಪಡೆ ಆಗಿದ್ದೇನು? ಸರ್ಕಾರದ ಸ್ಪಷ್ಟನೆ ಹೀಗಿದೆ

author img

By

Published : Jun 23, 2022, 4:12 PM IST

minister r ashok speak in bengaluru

ಬರಗೂರು ಪರಿಷ್ಕೃತ ಪುಸ್ತಕದಲ್ಲಿ ಕೆಂಪೇಗೌಡರ ಇತಿಹಾಸವೇ ಇದ್ದಿಲ್ಲ. ಅದನ್ನು ಹರಿದು ಹಾಕಬೇಕಿತ್ತು. ಅದರ ಬದಲಿಗೆ ಡಿಕೆಶಿ ಹೊಸ ಪರಿಷ್ಕೃತ ಪುಸ್ತಕವನ್ನು ಹರಿದು ಹಾಕಿದ್ದು ಸರಿಯಲ್ಲ ಎಂದು ಸಚಿವ ಆರ್​. ಅಶೋಕ್ ವಾಗ್ದಾಳಿ ನಡೆಸಿದರು.

ಬೆಂಗಳೂರು: ಡಿಕೆಶಿ ಮೊನ್ನೆ ಪ್ರತಿಭಟನೆ ವೇಳೆ ಪರಿಷ್ಕೃತ ಪುಸ್ತಕ ಹರಿದು ಹಾಕಿದ್ದರು.‌ ಅದರ ಬದಲಿಗೆ ಅವರು ಬರಗೂರು ಸಮಿತಿಯ ಪಠ್ಯವನ್ನು ಹರಿದು ಹಾಕಬೇಕಿತ್ತು. ಪರಿಷ್ಕೃತ ಪಠ್ಯದಲ್ಲಿ ನಾಡಪ್ರಭು ಕೆಂಪೇಗೌಡರ ಅಂಶ ಇತ್ತು. ಆದ್ರೆ ಬರಗೂರು ಪರಿಷ್ಕೃತ ಪುಸ್ತಕದಲ್ಲಿ ಕೆಂಪೇಗೌಡರ ಇತಿಹಾಸವೇ ಇದ್ದಿಲ್ಲ. ಅದನ್ನು ಹರಿದು ಹಾಕಬೇಕಿತ್ತು. ಹೊಸ ಪರಿಷ್ಕೃತ ಪುಸ್ತಕವನ್ನು ಹರಿದು ಹಾಕಿದ್ದು ಸರಿಯಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್​​ ಕಿಡಿಕಾರಿದರು.

ಅಲ್ಪಸಂಖ್ಯಾತರನ್ನು ಓಲೈಸಲು ಪುಸ್ತಕ ಬದಲಾವಣೆ: ವಿಧಾನಸೌಧದಲ್ಲಿಂದು ಮಾಧ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಪರಿಷ್ಕೃತ ಪಠ್ಯ ಪುಸ್ತಕದ ಸತ್ಯ ಮಿಥ್ಯಗಳ ಬಗ್ಗೆ ದಾಖಲೆ ಸಮೇತವಾಗಿ ಸವಿವರವಾಗಿ ಸ್ಪಷ್ಟೀಕರಣ ನೀಡಿದರು. ಈ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್​ನವರು ಅವರಿಗೆ ಬೇಕಾದ ಅಜೆಂಡಾ, ಕಮ್ಯುನಿಸ್ಟ್, ಕಾಂಗ್ರೆಸ್ ಅಜೆಂಡಾವನ್ನು ಪಠ್ಯದಲ್ಲಿ ತುರುಕಿಸಿದ್ದರು. ಕೆಲವು ಸಾಹಿತಿಗಳಿಗೆ ಹಿಡನ್ ಅಜೆಂಡಾ ಇರುತ್ತದೆ. ಕಾಂಗ್ರೆಸ್ ಅಧಿಕಾರದ ವೇಳೆ ಅವರಿಗೆ ಹಿಂದೂ ಪದವನ್ನು ತೆಗೆಯಬೇಕಾಗಿತ್ತು. ಹಲವು ಕಡೆ ರಾಮನ, ಶಿವನ ಹೆಸರು ಇತ್ತು. ಅದನ್ನು ತೆಗೆಯಲು ಬರಗೂರು ಪಠ್ಯ ಪರಿಷ್ಕರಣಾ ಸಮಿತಿ ರಚಿಸಿದ್ದರು. ಅಲ್ಪಸಂಖ್ಯಾತರನ್ನು ಓಲೈಸಲು ಪುಸ್ತಕ ಬದಲಾವಣೆ ಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದರು.

ಕಂದಾಯ ಸಚಿವ ಆರ್. ಅಶೋಕ್​​ ಕಿಡಿ

ಬರಗೂರು ಸಮಿತಿಯಿಂದ ಕುವೆಂಪು ಪಠ್ಯಕ್ಕೆ ಕತ್ತರಿ: ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ರಾಷ್ಟ್ರಕವಿ ಕುವೆಂಪು ಅವರ ಎಂಟು ಅಧ್ಯಯಗಳು ಇದ್ದವು. ಕಾಂಗ್ರೆಸ್ ಸರ್ಕಾರ ಅಜ್ಜಯ್ಯನ ಅಭ್ಯಂಜನ, ಕಾಮನ‌ಬಿಲ್ಲು ಕಮಾನು ಕಟ್ಟಿದೆ, ಅನಲೆ ಎಂಬ ಅಂಶಗಳನ್ನು ತೆಗೆದು ಹಾಕಿದ್ದರು. ಸಿದ್ದರಾಮಯ್ಯ ಕಾಲದಲ್ಲಿ ಎಂಟು ಇದ್ದ ಅಧ್ಯಯನವನ್ನು ಏಳಕ್ಕೆ ಕಡಿತಗೊಳಿಸಿದರು. ನಮ್ಮ ಸರ್ಕಾರ ಬಂದ ಬಳಿಕ ಈಗ ಕುವೆಂಪು ಅವರ 10 ಅಂಶಗಳನ್ನು ಸೇರಿಸಿದ್ದೇವೆ. ನಮ್ಮ ಪರಿಷ್ಕೃತ ಪಠ್ಯದಲ್ಲಿ ಕಾಮನಬಿಲ್ಲು ಕಮಾನು ಕಟ್ಟಿದೆ, ಬೊಮ್ಮನಹಳ್ಳಿ ಕಿಂದರಿ ಜೋಗಿ, ಬಹುಮಾನ ಸೇರಿ ಮೂರು ಕುವೆಂಪು ಅವರ ಅಂಶಗಳನ್ನು ಮರುಸೇರ್ಪಡೆಗೊಳಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಪರಿಷ್ಕೃತ ಪಠ್ಯದಲ್ಲಿ ಲೋಪಗಳಾಗಿದ್ದು, ಸರಿಪಡಿಸಲಾಗುತ್ತಿದೆ: ಸಚಿವ ಆರ್.ಅಶೋಕ್

ಕುವೆಂಪು ಅವರ ಪರಿಚಯದಲ್ಲಿ ಅನೇಕರ ಪ್ರೋತ್ಸಾಹದಲ್ಲಿ ಅವರು ಪ್ರಖ್ಯಾತ ಕವಿ ಎಂಬ ಪದ ಸೇರಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಆ ಪರಿಷ್ಕರಣೆyನ್ನು ರೋಹಿತ್ ಚಕ್ರತೀರ್ಥ ಸಮಿತಿ ಮಾಡಿಲ್ಲ. ಆ ಅಂಶ ಸಿದ್ದರಾಮಯ್ಯ ಸರ್ಕಾರ ಅವಧಿಯಲ್ಲಿದ್ದ ಪಠ್ಯದಲ್ಲಿ ಹಾಗೆ ಇತ್ತು. ಆಗ ಯಾರು ಅದಕ್ಕೆ ಪ್ರತಿರೋಧ ತೋರಿಲ್ಲ. ನಾವು ಅದನ್ನು ತೆಗೆದು ಹಾಕಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.

ಕೆಂಪೇಗೌಡರ ಹೊಸ ಪಾಠ ಅಳವಡಿಕೆ: ಕೆಂಪೇಗೌಡರ ಹೆಸರನ್ನು ಬರಗೂರು ಪಠ್ಯ ಸಮಿತಿ ಕೈ ಬಿಟ್ಟಿತ್ತು. ನಮ್ಮ ಸರ್ಕಾರ ಕೆಂಪೇಗೌಡರ ಕನಸು ಎಂಬ ಹೊಸ ಪಾಠವನ್ನು ಅಳವಡಿಸಿದೆ. ಕಾಂಗ್ರೆಸ್ ಸರ್ಕಾರದ ಅವಧಿಯ ಪಠ್ಯದಲ್ಲಿ ಬೆಂಗಳೂರು ವಿಭಾಗದ ಪರಿಚಯದಲ್ಲಿ ಬೆಂಗಳೂರು ನಿರ್ಮಾತೃ ನಾಡಫ್ರಭು ಕೆಂಪೇಗೌಡರ ಕುರಿತು ಯಾವುದೇ ಉಲ್ಲೇಖವಿರಲಿಲ್ಲ ಎಂದು ಸಚಿವ ಅಶೋಕ್​ ಟೀಕಿಸಿದರು.

ಮೈಸೂರು ರಾಜರ ಕಡೆಗಣನೆ: ಸಿದ್ದರಾಮಯ್ಯರಿಗೆ ಟಿಪ್ಪು ಅಂದರೆ ಮೈಮೇಲೆ ಬರುತ್ತದೆ. ಅವರ ಕಾಲದ ಪಠ್ಯದಲ್ಲಿ ಮೈಸೂರು ರಾಜ ಒಡೆಯರ್ ಕಡೆಗಣನೆ ಮಾಡಿದ್ದರು. ಟಿಪ್ಪು ಹಾಗೂ ಹೈದರಾಲಿ ಅಂಶವನ್ನು ಹೆಚ್ಚಾಗಿ ಪಠ್ಯದಲ್ಲಿ ಸೇರಿಸಿದ್ದಾರೆ.‌ ಟಿಪ್ಪುವನ್ನು ವೈಭವೀಕರಣ ಮಾಡಿದ್ದಾರೆ ಎಂದು ಕಿಡಿಕಾರಿದರು. ಬಿಜೆಪಿ ಸರ್ಕಾರ ಇದ್ದಾಗ ಮೈಸೂರು ರಾಜವಂಶಸ್ಥರಾದ ಒಡೆಯರ್​ ಕುರಿತ ಪಾಠವನ್ನು ಆರನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಅಳವಡಿಸಲಾಗಿತ್ತು. ಈ ಪಠ್ಯವನ್ನು ಸಿದ್ದರಾಮಯ್ಯ ಸರ್ಕಾರ ತೆಗೆದುಹಾಕಿ ರಾಜವಂಶಸ್ಥರನ್ನು ಗಡೆಗಣಿಸಿತ್ತು ಎಂದು ವಾಗ್ದಾಳಿ ನಡೆಸಿದರು.

ಗಾಂಧಿಜಿಯವರ ಗೀತ ಪಠಣಕ್ಕೆ ಕತ್ತರಿ: ಕಾಂಗ್ರೆಸ್ ಸರ್ಕಾರದ ವೇಳೆ ಗಾಂಧಿಜಿಯವರ ಗೀತ ಪಠಣದ ಅಂಶಗಳಿಗೆ ಕತ್ತರಿ ಹಾಕಿದ್ದರು. ವಲಸೆಯ ಸಂದರ್ಭದಲ್ಲಿ ನಡೆದ ಮತೀಯ ಗಲಭೆಗಳನ್ನು ನಿಯಂತ್ರಣಕ್ಕೆ ತರುವುದು ಸರ್ಕಾರಕ್ಕೆ ಹರಸಾಹಸದ ಕೆಲಸವಾಗಿತ್ತು. ಎರಡೂ ದೇಶಗಳ ಜನರಲ್ಲಿ ಭಾವೋದ್ರೇಕದಿಂದ ಉಂಟಾಗಿದ್ದ ಆಕ್ರೋಶವು ವಿಮೋಚನೆಗೊಳ್ಳಬೇಕೆಂದು ಗಾಂಧಿಯವರು ಕೋಲ್ಕತ್ತಾದಲ್ಲಿ ಗೀತೆಯನ್ನು ಪಠಿಸುತ್ತಾ ಉಪವಾಸ ಕೈಗೊಂಡರು ಎಂಬ ಅಂಶವನ್ನು ಸಿದ್ದರಾಮಯ್ಯ ಪಠ್ಯ ಪುಸ್ತಕದಲ್ಲಿ ಕತ್ತರಿ ಹಾಕಿದ್ದಾರೆ ಎಂದು ಕಿಡಿಕಾರಿದರು.

ಬಸವಣ್ಣನ ಅಂಶ ಪಠ್ಯದಲ್ಲಿ ಸೇರಿಸುತ್ತೇವೆ: ಅನೇಕ ವರ್ಷಗಳಿಂದ ಮುದ್ರಿತವಾದ ಪಠ್ಯದಲ್ಲಿ ಬಸವಣ್ಣನವರ ವಿಷಯಾಂಶದಲ್ಲಿ ವೀರಶೈವ ಧರ್ಮ ಅಭಿವೃದ್ಧಿಪಡಿಸಿದರು ಎಂಬ ಮಾಹಿತಿ ಮುದ್ರಣ ಮಾಡಿದೆ. ಇದೇ ಮಾಹಿತಿಯನ್ನು ಪರಿಷ್ಕೃತ ಪಠ್ಯದಲ್ಲಿ ಸೇರ್ಪಡೆ ಆಗಿದೆ. ನಾಡಿನ ಸ್ವಾಮೀಜಿಗಳು ಬಸವಣ್ಣನವರ ಕುರಿತಂತೆ ಸರ್ವಸಮ್ಮತವಾದ ಮಾಹಿತಿ ನೀಡಿದ್ದರಿಂದ ಪಠ್ಯದಲ್ಲಿ ಸೇರ್ಪಡೆ ಮಾಡಲು ನಿರ್ಧರಿಸಲಾಗಿದೆ ಎಂದರು.

ಪರಿಷ್ಕೃತ 2022 ಪಠ್ಯದಲ್ಲಿ ಸೇರಿಸಲಾಗಿರುವ ಅಂಶಗಳು:

  • ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿ, ಸ್ವಾಮಿ ವಿವೇಕಾನಂದ ವಿಷಯ ಮರು ಸೇರ್ಪಡೆ
  • ಭಗತ್ ಸಿಂಗ್, ನಾರಾಯಣ ಗುರು, ಪೆರಿಯಾರ್ ಪಾಠವನ್ನು ಕೈ ಬಿಟ್ಟಿಲ್ಲ.
  • ಸಿಂಧೂ ಸಂಸ್ಕೃತಿ ಪಾಠವನ್ನು ತೆಗೆದು ಕಾಂಗ್ರೆಸ್ ಸರ್ಕಾರ ನೆಹರೂ ಪತ್ರಗಳನ್ನು ಪಾಠದಲ್ಲಿ ಸೇರಿಸಿದ್ದರು. ನಾವು ಸಿಂಧೂ-ಸರಸ್ವತಿ ನಾಗರಿಕತೆ ಪಠ್ಯ ಸೇರಿಸಿದ್ದೇವೆ.
  • ನಾವು ನಮ್ಮ ದೇಶಕ್ಕೆ ಹೋರಾಟ ಮಾಡಿದವರನ್ನು ಸೇರಿಸಿದ್ದೇವೆ. ಮೊಗಲರು, ಟಿಪ್ಪು ಬಗ್ಗೆ ಹೆಚ್ಚಾಗಿ ಅವರು ಪಠ್ಯದಲ್ಲಿ ಸೇರಿಸಿದ್ದರು. ಅದನ್ನು ನಾವು ತೆಗೆದಿದ್ದೇವೆ.
  • ಭಾರತೀಯ ರಾಜರುಗಳ ಸಾಹಸ, ಶೌರ್ಯಗಳ ಪರಿಚಯ ಮಾಡಿದ್ದೇವೆ.
  • ಕೆ.ಎಸ್.ನರಸಿಂಹಸ್ವಾಮಿರ ಭಾರತೀಯತೆ ಕವನವನ್ನು ಮರು ಸೇರ್ಪಡೆಗೊಳಿಸಲಾಗಿದೆ.
  • ಚೆನ್ನಭೈರಾದೇವಿ ಕನ್ನಡ ರಾಣಿಯ ಅಂಶ ಪಠ್ಯದಲ್ಲಿ ಸೇರ್ಪಡೆ.
  • ಭಾರತ ನಮ್ಮ ಹೆಮ್ಮೆ ಪಾಠವನ್ನು ಆರನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಸೇರ್ಪಡೆ ಮಾಡಲಾಗಿದೆ.
  • ವಿವೇಕಾನಂದರ ಜನ್ಮದಿನ ಕುರಿತ ಪಾಠ ಸೇರ್ಪಡೆ.
  • ಸನಾತನ ಧರ್ಮ ಪಾಠ ಸೇರ್ಪಡೆ.
  • ಎಸ್.ಎಲ್. ಭೈರಪ್ಪರ ನಾನು ಕಂಡಂತೆ ಬಿಜಿಎಲ್ ಸ್ವಾಮಿ ಎಂಬ ಬರಹ ಸೇರಿಸಲಾಗಿದೆ.
  • ಕ್ರೈಸ್ತ ಮತ್ತು ಇಸ್ಲಾಂ ಧರ್ಮ ಎಂಬ ಅಧ್ಯಾಯವನ್ನು ಪಾಶ್ಚಾತ್ಯ ರಿಲೀಜಿಯನ್ ಎಂದು ಬದಲಾಯಿಸಿ, ಯಹೂದಿ, ಪಾರ್ಸಿ ಧರ್ಮಗಳ ವಿಷಯಾಂಶಗಳನ್ನು ಸೇರಿಸಲಾಗಿದೆ.
  • ಉತ್ತರ ಭಾರತದ ಕೆಲವು ರಾಜವಂಶಗಳ ವಿಷಯಾಂಶವನ್ನು ಸೇರಿಸಲಾಗಿದೆ.
  • ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿ ಪಾಠದಲ್ಲಿದ್ದ ಶ್ರೀ ನಾರಾಯಣ ಗುರು ವಿಷಯವನ್ನು ಏಳನೇ ತರಗತಿ ಹಾಗೂ 10ನೇ ತರಗತಿ ಪಠ್ಯದಲ್ಲಿ ಸೇರಿಸಲಾಗಿದೆ ಎಂದು ಸಚಿವ ಆರ್​ ಅಶೋಕ್​ ವಿವರಿಸಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.