ಅಡ್ಡ ಮತದಾನ: ಶಾಸಕ ಗುಬ್ಬಿ ಶ್ರೀನಿವಾಸ್, ಶ್ರೀನಿವಾಸ ಗೌಡಗೆ ನೋಟೀಸ್

author img

By

Published : Oct 4, 2022, 8:12 PM IST

KN_BNG_03_

ಅಡ್ಡ ಮತದಾನ ಮಾಡಿರುವ ಆರೋಪದಡಿ ಇಬ್ಬರು ಉಚ್ಛಾಟಿತ ಶಾಸಕರಿಗೆ ವಿಧಾನಸಭೆ ಕಾರ್ಯದರ್ಶಿ ನೋಟೀಸ್​ ಜಾರಿ ಮಾಡಿದ್ದಾರೆ.

ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಆರೋಪದಡಿ ಜೆಡಿಎಸ್​ನ ಉಚ್ಛಾಟಿತ ಶಾಸಕರಿಬ್ಬರಿಗೆ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ನೋಟೀಸ್ ಜಾರಿ ಮಾಡಿದ್ದಾರೆ.

ಜೆಡಿಎಸ್​ನ ಕೋಲಾರ ಶಾಸಕ ಶ್ರೀನಿವಾಸ ಗೌಡ ಮತ್ತು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್​ಗೆ ನೋಟೀಸ್ ಜಾರಿ ಮಾಡಲಾಗಿದೆ. ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಹಾಕಿದ್ದರೆಂದು ದೂರಿ ಜೆಡಿಎಸ್ ಪಕ್ಷ ಸ್ಪೀಕರ್​ಗೆ ದೂರು ನೀಡಿದ್ದರು. ಪಕ್ಷ ವಿರೋಧಿ ಚಟುವಟಿಕೆ ನಿಯಮದಡಿ ಇಬ್ಬರು ಶಾಸಕರ ಸದಸ್ಯತ್ವ ಅನರ್ಹತೆಗೆ ಜೆಡಿಎಸ್‌‌ ಶಾಸಕ ವೆಂಕಟ್‌ರಾವ್ ನಾಡಗೌಡ ದೂರು ನೀಡಿದ್ದರು. ಈ ಹಿನ್ನೆಲೆ ವಿಧಾನಸಭೆ ಕಾರ್ಯದರ್ಶಿ ಉತ್ತರ ಕೇಳಿ ಶಾಸಕರಿಬ್ಬರಿಗೆ ನೋಟೀಸ್ ಜಾರಿ ಮಾಡಿದ್ದಾರೆ.

ಆರೋಪಕ್ಕೆ ಉತ್ತರ ನೀಡುವಂತೆ ಸೆ.22 ರಂದು ನೋಟಿಸ್ ಜಾರಿ ಮಾಡಲಾಗಿದೆ. ನೋಟಿಸ್ ತಲುಪಿದ ನಂತರ ಏಳು ದಿನಗಳಲ್ಲಿ ಉತ್ತರ ನೀಡುವಂತೆ ಸೂಚಿಸಲಾಗಿದೆ. ನಿಗದಿತ ಅವಧಿಯಲ್ಲಿ ಉತ್ತರ ನೀಡದೇ ಇದ್ದರೆ, ಎರಡನೇ ಬಾರಿಗೆ ನೋಟಿಸ್ ಕೊಡಬಹುದು. ಉತ್ತರ ಪಡೆಯಲು ಸಾಕಷ್ಟು ಅವಕಾಶ ನೀಡಲಾಗುತ್ತದೆ. ಆಗಲೂ ಉತ್ತರ ನೀಡದೇ ಇದ್ದರೆ ಕಾನೂನು ಕ್ರಮಕ್ಕೆ ಅವಕಾಶ ಇರುತ್ತದೆ.

ಜೂನ್​ನಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್​ನ‌ ಇಬ್ಬರು ಶಾಸಕರು ಅಡ್ಡ ಮತದಾನ ಮಾಡಿರುವುದಾಗಿ ಜೆಡಿಎಸ್ ಪಕ್ಷ ಆರೋಪಿಸಿತ್ತು. ಇದರಿಂದ ಜೆಡಿಎಸ್​ನ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಸೋಲಬೇಕಾಯಿತು. ಅಡ್ಡ ಮತದಾನದ ಹಿನ್ನೆಲೆ ಜೆಡಿಎಸ್ ಕೋರ್ ಕಮಿಟಿ ಇಬ್ಬರು ಬಂಡಾಯ ಶಾಸಕರನ್ನು ಪಕ್ಷದಿಂದ ಉಚ್ಛಾಟನೆ ಮಾಡಿತ್ತು.

ಇದನ್ನೂ ಓದಿ: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ : ಜೆಡಿಎಸ್​ನಿಂದ ಇಬ್ಬರು ಶಾಸಕರ ಉಚ್ಚಾಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.