ರಾಜ್ಯದಲ್ಲಿ ಎಲ್ಲರಿಗೂ ವಸತಿ ಗುರಿ ಸಾಧಿಸುವುದು ಕಷ್ಟಕರ.. ಸಿಎಜಿ ವರದಿ

author img

By

Published : Sep 20, 2022, 7:12 PM IST

Today in Assembly

ವಿಧಾನಸಭೆಯಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರ್ನಾಟಕದಲ್ಲಿ ನಗರ ಪ್ರದೇಶದ ಬಡವರಿಗೆ ವಸತಿ ಯೋಜನೆಗಳ ಅನುಷ್ಠಾನ ಕುರಿತ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ ಮಂಡಿಸಿದರು.

ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ನಗರ ಪ್ರದೇಶದ ಬಡವರಿಗೆ ವಸತಿ ಕಲ್ಪಿಸುವ ಸಂಬಂಧ ಹಾಕಿಕೊಂಡಿರುವ 2022 ರ ವೇಳೆಗೆ ‘ಎಲ್ಲರಿಗೂ ವಸತಿ’ ಗುರಿಯನ್ನು ರಾಜ್ಯದಲ್ಲಿ ಸಾಧಿಸುವುದು ಕಷ್ಟಕರ ಎಂಬುದನ್ನು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ ವರದಿ (ಸಿಎಜಿ) ತಿಳಿಸಿದೆ.

ವಿಧಾನಸಭೆಯಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರ್ನಾಟಕದಲ್ಲಿ ನಗರ ಪ್ರದೇಶದ ಬಡವರಿಗೆ ವಸತಿ ಯೋಜನೆಗಳ ಅನುಷ್ಠಾನ ಕುರಿತ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ ಮಂಡಿಸಿದರು. ರಾಜ್ಯ ಸರ್ಕಾರದ ವಸತಿ ಇಲಾಖೆಯು ರಾಜೀವ್‌ ಗಾಂಧಿ ವಸತಿ ನಿಗಮ ನಿಯಮಿತ ಕೈಗೆಟುಕುವ ಬೆಲೆಯಲ್ಲಿ ವಸತಿ (ಎಎಚ್‌ಪಿ) ಮತ್ತು ಫಲಾನುಭವಿ ನೇತೃತ್ವದ ವೈಯಕ್ತಿಕ ವಸತಿ ನಿರ್ಮಾಣ (ಬಿಎಲ್‌ಸಿ) ಘಟಕಗಳನ್ನು ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆಗಾಗಿ ಆಯ್ಕೆ ಮಾಡಲಾಯಿತು.

2021 ರ ಮಾರ್ಚ್ ವೇಳೆ ಎಎಚ್‌ಪಿ ಮತ್ತು ಬಿಎಲ್‌ಸಿ ಘಟಕಗಳಡಿ ಶೇ.38 ರಷ್ಟು ಫಲಾನುಭವಿಗಳಿಗೆ ಮಾತ್ರ ಯೋಜನೆಗಳನ್ನು ತೆಗೆದುಕೊಳ್ಳಲಾಗಿದೆ. ಈ ಪೈಕಿ ಕೇವಲ ಶೇ.17 ರಷ್ಟು ಮಾತ್ರ ಪೂರ್ಣಗೊಂಡಿದೆ. ಶೇ.63 ರಷ್ಟು ಇನ್ನೂ ಪ್ರಾರಂಭವಾಗಬೇಕಿದೆ. ಉಳಿದ ಶೇ.20 ರಷ್ಟು ನಡೆಯುತ್ತಿದೆ. ಹೀಗಾಗಿ ಎಲ್ಲರಿಗೂ ವಸತಿ ಗುರಿಯನ್ನು 2022 ರ ವೇಳೆಗೆ ಸಾಧಿಸುವುದು ಕಷ್ಟ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಎಎಚ್‌ಪಿ ಘಟಕದಡಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕೈಗೆತ್ತಿಗೊಂಡ ಮನೆಗಳಲ್ಲಿ ಕೇವಲ ಶೇ.14 ರಷ್ಟು ಮನೆಗಳನ್ನು ಗುಂಪು ಮನೆಗಳಾಗಿ ನಿರ್ಮಿಸಿ ಉಳಿದ ಮನೆಗಳನ್ನು ಚದುರಿದ ರೀತಿಯಲ್ಲಿ ಪ್ರತ್ಯೇಕವಾಗಿ ತೆಗೆದುಕೊಳ್ಳಲಾಗಿದೆ. ಇದರಿಂದ ಎಎಚ್‌ಪಿ ಘಟಕದಡಿಯಲ್ಲಿ ಮೂಲಸೌಕರ್ಯ ಸೌಲಭ್ಯಗಳೊಂದಿಗೆ ಗುಂಪು ವಸತಿ ಒದಗಿಸುವ ಯೋಜನೆಯ ಉದ್ದೇಶವು ಈಡೇರಲಿಲ್ಲ.

ಯೋಜನೆಯ ಮಾರ್ಗಸೂಚಿಗಳಡಿ ಸೂಚಿಸಲಾದ ನೀರು ಸರಬರಾಜು, ಒಳಚರಂಡಿ, ರಸ್ತೆಗಳು, ವಿದ್ಯುತ್ ಮುಂತಾದ ನಾಗರಿಕ ಮೂಲ ಸೌಕರ್ಯಗಳನ್ನು ಒದಗಿಸದೆ, ಈ ಯೋಜನೆಯನ್ನು ಕೈಗೊಳ್ಳಲಾಗಿತ್ತು ಎಂದು ಹೇಳಿದೆ. ಯೋಜನೆಗಳಿಗೆ ಫಲಾನುಭವಿಗಳ ಸೇರಿಸುವಿಕೆಯಲ್ಲಿನ ಕೊರತೆಯಿಂದಾಗಿ ಕೇಂದ್ರ ಸರ್ಕಾರವು ಬಿಎಲ್‌ಸಿ ಯೋಜನೆಯಡಿಯಲ್ಲಿ 569.56 ಕೋಟಿ ರೂ. ಮೊದಲ ಕಂತಿನ ಬಿಡುಗಡೆ ತಡೆಹಿಡಿದಿದೆ.

62,648 ಬಿಎಲ್‌ಸಿ ಫಲಾನುಭವಿಗಳಲ್ಲಿ 12,757 ಫಲಾನುಭವಿಗಳಿಗೆ ಪಾವತಿ ಮಾಡಿದ 172.64 ಕೋಟಿ ರೂ. ಮೊತ್ತದ ಡಿಬಿಟಿ ಪಾವತಿಗೆ ಆಧಾರ್ ಮೂಲಕ ದೃಢೀಕರಣ ಮಾಡಿಲ್ಲ ಎಂದು ತಿಳಿಸಿದೆ. ರಾಜ್ಯದಲ್ಲಿ ವಸತಿ ಬೇಡಿಕೆಯನ್ನು ದೃಢಪಡಿಸಿಕೊಳ್ಳಲು ರಾಜ್ಯ ಸರ್ಕಾರ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಮತ್ತು 2022 ರೊಳಗೆ ಮನೆಗಳನ್ನು ಪೂರ್ಣಗೊಳಿಸಲು ಗುರಿಗಳನ್ನು ನಿಗದಿಪಡಿಸಿಕೊಳ್ಳಬೇಕು. ಯೋಜನೆಯ ಗುರಿಗಳನ್ನು ಸಾಧಿಸಲು ಗುರಿಗಳನ್ನು ಮತ್ತು ಸಂಪನ್ಮೂಲಗಳನ್ನು ನಿಗದಿಪಡಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ವಿವಿಧ ಅನುಷ್ಠಾನ ಸಂಸ್ಥೆಗಳು ನಿಗದಿತ ಕಾಲಮಿತಿಯೊಳಗೆ ಕಾರ್ಯತಂತ್ರದ ಯೋಜನೆ ಮತ್ತು ವಾರ್ಷಿಕ ಯೋಜನೆಗಳನ್ನು ಸಿದ್ದಪಡಿಸುವುದನ್ನು ಖಚಿತಪಡಿಸಬೇಕು ಎಂದು ಸಿಎಜಿ ಶಿಫಾರಸು ಮಾಡಿದೆ. ಕೇಂದ್ರದ ನೆರವಿನ ಬಿಡುಗಡೆಗೆ ಸೂಚಿಸಲಾದ ಷರತ್ತುಗಳಿಗೆ ರಾಜ್ಯ ಸರ್ಕಾರವು ಬದ್ಧವಾಗಿರಬೇಕು. ಯೋಜನೆಯಡಿ ಯೋಜನೆಗಳನ್ನು ಅನುಮೋದಿಸುವ ಮೊದಲು ಫಲಾನುಭವಿಗಳ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಪಾಲಿನ ವಂತಿಗೆಯ ಬಗ್ಗೆ ಒಪ್ಪಿಗೆಯನ್ನು ಪಡೆಯಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದೆ.

ಖಜಾನೆ -2 (ಕೆ2) ಯೋಜನೆ ಲೆಕ್ಕಪರಿಶೋಧನೆ ಮಂಡನೆ: ವಿಧಾನಸಭೆಯಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸಮಗ್ರ ಹಣಕಾಸು ನಿರ್ವಹಣಾ ವ್ಯವಸ್ಥೆ ಖಜಾನೆ -2 ಕುರಿತು ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆಯನ್ನು ಮಂಡಿಸಿದ್ದು, ಬಜೆಟ್ ತಯಾರಿಕೆ, ನಗದು ನಿರ್ವಹಣೆ, ಸರ್ಕಾರಿ ಸಾಲ ಮತ್ತು ಖಾತರಿಗಳ ನಿರ್ವಹಣೆ, ಹಣಕಾಸು ಸ್ವತ್ತುಗಳ ನಿರ್ವಹಣೆಯ ಕಾರ್ಯಗಳನ್ನೊಳೊಂಡಿರುವ ಖಜಾನೆ -2 (ಕೆ2) ಯೋಜನೆ ದಶಕ ಕಳೆದರೂ ನಿರೀಕ್ಷಿತ ಫಲಿತಾಂಶ ಸಾಧಿಸಲು ಸಾಧ್ಯವಾಗಿಲ್ಲ ಎಂದು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ ವರದಿ (ಸಿಎಜಿ) ಹೇಳಿದೆ.

2013 ರ ಫೆಬ್ರವರಿ ವೇಳೆಗೆ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುವುದು ಮತ್ತು ಎಲ್ಲ ಕಾರ್ಯಗಳನ್ನು ಕೆ-2 ಮೂಲಕ ಆರಂಭಿಸಲಾಗುವುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, 2021ರ ಮಾರ್ಚ್ ವೇಳೆಗೂ ಪೂರ್ಣಗೊಂಡಿಲ್ಲ. 2015 ರಿಂದ 2021 ರ ಅವಧಿಯಲ್ಲಿ ಕಂತು ಕಂತುಗಳಾಗಿ ಕಾರ್ಯಾರಂಭ ಮಾಡಲಾಗಿದೆ. ಹಲವು ವ್ಯವಹಾರ ಪ್ರಕ್ರಿಯೆಗಳು ಕೆ 2 ಅಪ್ಲಿಕೇಷನ್‌ನಿಂದ ಹೊರಗೆ ಉಳಿದಿವೆ. ಎಲ್ಲಾ ಮಾಡ್ಯೂಲ್‌ಗಳ ಕಾರ್ಯಾರಂಭದಲ್ಲಿ ವಿಳಂಬವಾದ ಕಾರಣ ‘ಗೋ-ಲೈವ್’ ಘೋಷಣೆ ಸಾಧ್ಯವಾಗಲಿಲ್ಲ ಎಂದು ಉಲ್ಲೇಖಿಸಿದೆ.

ಕೆ-2 ಒಪ್ಪಂದದ ನಿರ್ವಹಣೆಯ ವೈಫಲ್ಯಗಳಿಂದ ಅರಿತ ಅಂಶಗಳನ್ನು ಸಂಯೋಜಿಸುವ ಮೂಲಕ ಸರ್ಕಾರವು ಸಾಫ್ಟ್‌ವೇರ್ ಅಭಿವೃದ್ಧಿ ಯೋಜನೆಗಳಿಗೆ ಸೂಕ್ತ ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸಬಹುದಾಗಿದೆ. ಬದಲಾಗುತ್ತಿರುವ ತಂತ್ರಜ್ಞಾನದೊಂದಿಗೆ ವಿಕಸನಗೊಳ್ಳುವ ಯೋಜನೆಯ ದಿಕ್ಕನ್ನು ಪ್ರದರ್ಶಿಸಲು ಮತ್ತು ದಾಖಲಿಸಲು ಕಾರ್ಯತಂತ್ರದ ಯೋಜನೆಯನ್ನು ಸಿದ್ದಪಡಿಸುವುದನ್ನು ಪರಿಗಣಿಸಬೇಕು ಎಂದು ಸಿಎಜಿ ವರದಿಯಲ್ಲಿ ಶಿಫಾರಸು ಮಾಡಿದೆ.

ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿ ಬಗ್ಗೆ ಸದನದಲ್ಲಿ ಮತ್ತೆ ಪ್ರಸ್ತಾಪ ಮಾಡಿದ ಯತ್ನಾಳ್​​ : ಸಿಎಂ ಕೊಟ್ಟ ಉತ್ತರವೇನು ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.