ETV Bharat / state

ಕೃಷಿ ಹೊಂಡ ನಿರ್ಮಾಣದ ಬಗ್ಗೆ ಪುನರ್ ಪರಿಶೀಲನೆ ಮಾಡಲಾಗುವುದು : ಸಿಎಂ ಭರವಸೆ

ಒಂದು ಜಿಲ್ಲೆ, ಒಂದು ತಾಲೂಕಿನಲ್ಲಿ ಹೆಚ್ಚು, ಮತ್ತೊಂದು ತಾಲೂಕಿನಲ್ಲಿ ಕಡಿಮೆ ಕೃಷಿ ಹೊಂಡಗಳು ನಿರ್ಮಾಣವಾಗಿವೆ. ಕೃಷಿ ಹೊಂಡಗಳ ನಿರ್ಮಾಣದ ಬಗ್ಗೆ ಪುನರ್ ಪರಿಶೀಲನೆ ನಡೆಸಲಾಗುವುದು. ಕೃಷಿ ವಿವಿ ನೀಡಿರುವ ವರದಿಯನ್ನು ತರಿಸಿ ನೋಡುತ್ತೇನೆ ಎಂದು ಸಿಎಂ ವಿಧಾನಸಭೆಯಲ್ಲಿ ತಿಳಿಸಿದರು..

CM
ಸಿಎಂ ಭರವಸೆ

Published : March 29, 2022 at 4:37 PM IST

Choose ETV Bharat

ಬೆಂಗಳೂರು : ರಾಜ್ಯದಲ್ಲಿ ಕೃಷಿ ಹೊಂಡಗಳ ನಿರ್ಮಾಣ ಯೋಜನೆಯನ್ನು ಮುಂದುವರೆಸುವುದರ ಬಗ್ಗೆ ಪುನರ್ ಪರಿಶೀಲನೆ ಮಾಡಲಾಗುವುದು. ಇಂದು ಕೃಷಿ ಇಲಾಖೆ ಅನುದಾನ ಬೇಡಿಕೆ ಮೇಲೆ ನಡೆದ ಚರ್ಚೆಯಲ್ಲಿ ಸಚಿವರು ಉತ್ತರಿಸುವ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿಗಳು ಈ ಭರವಸೆ ನೀಡಿದರು. ಅಲ್ಲದೇ ಕೃಷಿ ಹೊಂಡಗಳಿಂದ ರೈತರಿಗೆ ಅನುಕೂಲವಾಗಿರುವ ಬಗ್ಗೆ ಕೃಷಿ ವಿವಿ ನೀಡಿರುವ ವರದಿಯನ್ನು ತರಿಸಿ ನೋಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ತಿಳಿಸಿದರು.

ಕೃಷಿಹೊಂಡ ನಿರ್ಮಾಣ ಮಾಡುವ ಯೋಜನೆ 2019ಕ್ಕೆ ಮುಕ್ತಾಯ : ಒಂದು ಜಿಲ್ಲೆ, ಒಂದು ತಾಲೂಕಿನಲ್ಲಿ ಹೆಚ್ಚು, ಮತ್ತೊಂದು ತಾಲೂಕಿನಲ್ಲಿ ಕಡಿಮೆ ಕೃಷಿ ಹೊಂಡಗಳು ನಿರ್ಮಾಣವಾಗಿವೆ. ಸರಿಸಮವಾಗಿ ನಿರ್ಮಾಣವಾಗಿಲ್ಲ. ಕೃಷಿ ಹೊಂಡ ನಿರ್ಮಾಣ ಮಾಡುವ ಯೋಜನೆ 2019ಕ್ಕೆ ಮುಕ್ತಾಯವಾಗಿದೆ. ಅವಶ್ಯಕತೆ ಇರುವ ಕಡೆ ಕೃಷಿಹೊಂಡ ನಿರ್ಮಾಣ ಮಾಡಬಾರದು ಎಂದಿಲ್ಲ. ಅಗತ್ಯವಿರುವ ಕಡೆ ನರೇಗಾ ಯೋಜನೆಯಡಿ ನಿರ್ಮಿಸಬಹುದಾಗಿದೆ ಎಂದರು.

ಸಿಎಂ ಬಸವರಾಜ ಬೊಮ್ಮಾಯಿ

ನರೇಗಾ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣಕ್ಕೆ ಅವಕಾಶ : ಇದಕ್ಕೂ ಮುನ್ನ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್, 2014 ರಿಂದ 19ರವರೆಗೆ ಕೃಷಿ ಹೊಂಡವನ್ನು ಮಿಷನ್ ಮೋಡ್‍ನಲ್ಲಿ ನಿರ್ಮಿಸಲಾಗಿತ್ತು. ಈಗ ನರೇಗಾ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆಗ ಸಿದ್ದರಾಮಯ್ಯ ಅವರು ಕೃಷಿ ಹೊಂಡದ ಅನುದಾನವನ್ನು ಏಕೆ ನಿಲ್ಲಿಸಿದ್ದೀರಿ?. 2.60 ಲಕ್ಷ ಕೃಷಿ ಹೊಂಡ ನಿರ್ಮಿಸಲಾಗಿದೆ.

ಕೃಷಿ ವಿಜ್ಞಾನಿಗಳು ಕೃಷಿ ಹೊಂಡದಿಂದ ಉದ್ಯೋಗ ಹೆಚ್ಚಳ ಹಾಗೂ ಇಳುವರಿ ಹೆಚ್ಚಾಗಲಿದೆ ಎಂಬ ವರದಿ ನೀಡಿದ್ದಾರೆ ಎಂದು ಪ್ರಸ್ತಾಪ ಮಾಡಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಕೃಷಿ ಹೊಂಡದಿಂದ ಅನುಕೂಲವಿದೆ. ಒಳ್ಳೆಯದಾಗುತ್ತದೆ ಎಂಬ ಅಭಿಪ್ರಾಯ ಶಾಸಕರಾದ್ದಾಗಿದೆ ಎಂದರು.

ಇದನ್ನೂ ಓದಿ: ವಿಧಾನಸಭೆಯಲ್ಲಿ ಬ್ರಾಹ್ಮಣ, ಲಿಂಗಾಯತ, ದಲಿತರ ಇತಿಹಾಸದ ಕುರಿತು ಸ್ವಾರಸ್ಯಕರ ಚರ್ಚೆ

ಆಗ ಶಾಸಕ ಕೃಷ್ಣಭೈರೇಗೌಡ ಮಾತನಾಡಿ, ನರೇಗಾ ಯೋಜನೆಯಡಿ ನಿರ್ಮಿಸುವ ಕೃಷಿ ಹೊಂಡದ ಉದ್ದೇಶ, ಅಳತೆ, ಪ್ರಯೋಜನವೇ ಬೇರೆ. ಅದನ್ನು ಕೃಷಿ ಹೊಂಡಕ್ಕೆ ಹೋಲಿಕೆ ಮಾಡಬೇಡಿ. ಯಾರಿಗೆ ಕೃಷಿ ಹೊಂಡದ ಅಗತ್ಯವಿದೆ ಎಂದು ಪ್ರಶ್ನಿಸಿದರು.

ರಸಗೊಬ್ಬರ ಕೊರತೆ : ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮಾತನಾಡಿ, ಯೂರಿಯಾ ಗೊಬ್ಬರ ಕೊರತೆ ಎದುರಾಗಿದೆ. ಯೂರಿಯಾ ಸಿಗದ ಕಾರಣ ನಾವು ಹಸುವಿನ ಗೊಬ್ಬರ ಬಳಸಿದ್ದೇವೆ. ಚನ್ನಪಟ್ಟದಲ್ಲಿ ರಸಗೊಬ್ಬರ ಸಿಗದೆ ಹೆಣ್ಣು ಮಕ್ಕಳು ಕಣ್ಣೀರು ಇಟ್ಟಿದ್ದಾರೆ. ಫೋನ್ ಮಾಡಿದವರೆಗೆಲ್ಲಾ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಬಿ.ಸಿ.ಪಾಟೀಲ್, ಈ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ರಸಗೊಬ್ಬರದ ದಾಸ್ತುನು ಸಾಕಷ್ಟು ಇದೆ‌. ಯಾವುದೇ ಕೊರತೆ ಇಲ್ಲ. ನಂತರ ಕೃಷಿ ಇಲಾಖೆಯ ಅನುದಾನ ಬೇಡಿಕೆಯ ಪ್ರಸ್ತಾವನೆಗೆ ಸದನದಲ್ಲಿ ಧ್ವನಿಮತದ ಅಂಗೀಕಾರ ದೊರೆಯಿತು.