ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಶೌಚಾಲಯಕ್ಕೆ ನುಗ್ಗಿದ್ದ ಆರೋಪಿ ಬಂಧನ

author img

By

Published : Jan 23, 2023, 3:04 PM IST

Updated : Jan 23, 2023, 4:59 PM IST

Police with arrested accused.

ಕಾಲೇಜು ವಿದ್ಯಾರ್ಥಿನಿಯರ ಶೌಚಾಲಯಕ್ಕೆ ಅಸಭ್ಯ ವರ್ತನೆ ಆರೋಪ - ಬೆಂಗಳೂರಿನಲ್ಲಿ ವ್ಯಕ್ತಿಯ ಬಂಧನ - ಜ. 11ರಂದು ನಡೆದಿದ್ದ ಘಟನೆ

ಬೆಂಗಳೂರು: ಇಲ್ಲಿನ ವಿಜಯಾ ಕಾಲೇಜಿನ ಮಹಿಳಾ ಶೌಚಾಲಯಕ್ಕೆ ವ್ಯಕ್ತಿಯೊಬ್ಬ ನುಗ್ಗಿ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಆರೋಪ ಪ್ರಕರಣವು ಜಯನಗರ ಠಾಣಾ ಪೊಲೀಸ್​ ವ್ಯಾಪ್ತಿಯಲ್ಲಿ ಜನವರಿ 10ರಂದು ನಡೆದಿತ್ತು. ಇದೀಗ ಘಟನೆಯ ಆರೋಪಿಯನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಅಜಯ್ ಕುಮಾರ್ (39) ಎಂದು ಗುರುತಿಸಲಾಗಿದೆ.

ಅಂದು ಕಾಲೇಜಿನ ಶೌಚಾಲಯದಲ್ಲಿ ನಡೆದಿದ್ದೇನು? ಜನವರಿ 10ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಜಯನಗರದ ವಿಜಯಾ ಕಾಲೇಜಿನ ಶೌಚಾಲಯದ ಒಳಗೆ ವಿದ್ಯಾರ್ಥಿನಿಯೊಬ್ಬರು ಹೋದಾಗ ಆರೋಪಿ ಅಜಯ್​ ಕುಮಾರ್​ ಒಳಗಡೆ ಇರುವುದು ಗೊತ್ತಾಗಿತ್ತು. ಯುವತಿಯನ್ನು ನೋಡುತ್ತಿದ್ದಂತೆ ಆರೋಪಿಯು​ ಆಕೆಯ ಮೈ-ಕೈ ಮುಟ್ಟಿ ಎಳೆದಾಡಿ ಅಸಭ್ಯವಾಗಿ ವರ್ತಿಸಿದ್ದ ಎನ್ನಲಾಗಿತ್ತು. ಭಯಭೀತಳಾದ ವಿದ್ಯಾರ್ಥಿನಿ ಕಿರುಚಾಡಿಕೊಳ್ಳುತ್ತಿದ್ದಂತೆ ಶೌಚಾಲಯದ ಬಾಗಿಲಿಗೆ ಚಿಲಕ ಹಾಕಿ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದ. ಇದರಿಂದ ಆತಂಕಕ್ಕೆ ಒಳಗಾದ ವಿದ್ಯಾರ್ಥಿಗಳು ಆರೋಪಿಯನ್ನು ಹಿಡಿದು ಬಂಧಿಸುವಂತೆ ಆಗ್ರಹಿಸಿ ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಆರೋಪಿಯನ್ನು ಬಂಧಿಸುವಂತೆ ಪ್ರಾಂಶುಪಾಲರು ನೀಡಿದ ದೂರಿನನ್ವಯ ಜಯನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು 13 ದಿನಗಳ ಬಳಿಕ ಆರೋಪಿಯನ್ನು ಬಂಧಿಸಿದ್ದಾರೆ.

ಡಿಸಿಪಿ ಪ್ರತಿಕ್ರಿಯೆ: ಘಟನೆ ಬಗ್ಗೆ ಮಾಹಿತಿ ನೀಡಿದ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಪಿ.ಕೃಷ್ಣಕಾಂತ್, ''ಶೌಚಾಲಯಕ್ಕೆ ತೆರಳಿದ್ದಲ್ಲದೆ, ಪ್ರಶ್ನಿಸಿದವರ ಮೇಲೆ ಹಲ್ಲೆ ನಡೆಸಿದ ಸಂಬಂಧ ಎಫ್​ಐಆರ್​ ದಾಖಲಾಗಿತ್ತು. ಅದರ ಆಧಾರದ ಮೇಲೆ ತನಿಖೆ ಕೈಗೊಂಡು ಅಜಯ್ ಕುಮಾರ್ (39) ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಬಂಧಿತ ವ್ಯಕ್ತಿಯು ಹನುಮಂತನಗರದ ನಿವಾಸಿಯಾಗಿದ್ದಾನೆ. ವೃತ್ತಿಯಲ್ಲಿ ಇಂಜಿನಿಯರ್​ ಆಗಿದ್ದವವನು, ದುಬೈಯಲ್ಲಿ ಕೂಡ ಕೆಲಸ ಮಾಡಿದ್ದ. ಸದ್ಯ ಕೆಲಸ ಬಿಟ್ಟು ವಾಪಸ್​ ಬೆಂಗಳೂರಿಗೆ ಮರಳಿದ್ದು, ಧಾರವಾಹಿ ಹಾಗೂ ಸಿನೆಮಾಗಳಲ್ಲಿ ನಟಿಸಲು ಪ್ರಯತ್ನಿಸುತ್ತಿದ್ದ'' ಎಂದು ಡಿಸಿಪಿ ತಿಳಿಸಿದರು.

ಆರೋಪಿಗೆ ಗ್ಯಾಸ್ಟ್ರೋ ಸಮಸ್ಯೆ: ''ಆರೋಪಿಗೆ ಗ್ಯಾಸ್ಟ್ರೋ ಸಮಸ್ಯೆ ಇದೆ. ಹೀಗಾಗಿ ಯಾವುದಾದರೂ ಆಹಾರ ಸೇವಿಸಿದರೆ, ತಕ್ಷಣ ಶೌಚಾಲಯಕ್ಕೆ ಹೋಗಬೇಕಾಗುತ್ತಿದೆ. ಅದೇ ಕಾರಣಕ್ಕೆ ಏಕಾಏಕಿ ಕಾಲೇಜಿನ ಶೌಚಾಲಯಕ್ಕೆ ತೆರಳಿದ್ದ. ಬಳಿಕ ಹೊರಗೆ ಬಂದಾಗ ಕೆಲವರಿಗೆ ಈ ವಿಚಾರ ತಿಳಿದು ಪ್ರಶ್ನೆ ಮಾಡಿದ್ದರು. ಆಗ ಆರೋಪಿಯು ಸ್ಥಳದಲ್ಲಿದ್ದ ಒಬ್ಬರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ. ಈತ ಅಪರಿಚಿತ ಹಾಗೂ ಯಾವುದೇ ಕಾಂಟ್ಯಾಕ್ಟ್​ ಇಲ್ಲದ ಕಾರಣ ಪತ್ತೆ ಮಾಡಲು ನಮಗೆ 10 ದಿನ ಬೇಕಾಯಿತು. ಆರೋಪಿಯು ಮಾನಸಿಕ ಅಸ್ವಸ್ಥನಾಗಿದ್ದಾನೆಯೇ ಎಂಬ ಬಗ್ಗೆ ತನಿಖೆ ಮುಂದುವರೆದಿದೆ. ಈ ಬಗ್ಗೆ ವೈದ್ಯಕೀಯ ವರದಿ ಬಳಿಕವೇ ತಿಳಿದುಬರಲಿದೆ'' ಎಂದು ಡಿಸಿಪಿ ಪಿ.ಕೃಷ್ಣಕಾಂತ್ ಮಾಹಿತಿ ನೀಡಿದ್ದಾರೆ.

ಹುಡುಗಿಯರ ಹಾಸ್ಟೆಲ್​ಗೆ ಕನ್ನ, ಪರಾರಿ ಆಗುತ್ತಿದ್ದಾಗ ಬಾವಿಗೆ ಬಿದ್ದ.. ಮತ್ತೊಂದೆಡೆ ತೆಲಂಗಾಣದಲ್ಲಿ ಇತ್ತೀಚೆಗೆ ಕಾಲೇಜು ಹುಡುಗಿಯರ ಹಾಸ್ಟೆಲ್​ನಲ್ಲಿ ಸರಣಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದಾಗ ಕಳ್ಳತನದ ಆರೋಪಿ ಬಾವಿಗೆ ಬಿದ್ದಿರುವ ಘಟನೆ ನಡೆದಿತ್ತು. ಬಾವಿಯಲ್ಲಿದ್ದ ಈತನನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಬಳಿಕ ಹೊರಕ್ಕೆ ತೆಗೆದಿದ್ದರು. ಇಲ್ಲಿನ ಹಾಸನಪರ್ತಿ ತಾಲೂಕಿನ ಎಸ್‌ಆರ್‌ ಇಂಜಿನಿಯರಿಂಗ್‌ ಕಾಲೇಜಿನ ಬಾಲಕಿಯರ ಹಾಸ್ಟೆಲ್‌ನಲ್ಲಿ ಆರೋಪಿ ಸರಣಿ ಕಳ್ಳತನ ಮಾಡಿದ್ದನಂತೆ. ಹಾಸ್ಟೆಲ್‌ನಲ್ಲಿದ್ದ ಮೊಬೈಲ್​ಫೋನ್​ ಮತ್ತು ಲ್ಯಾಪ್‌ಟಾಪ್​​ಗಳನ್ನು ಕದ್ದು ರಾತ್ರಿ ಪರಾರಿಯಾಗುತ್ತಿದ್ದ ವೇಳೆ ಬಾವಿಗೆ ಬಿದ್ದಿದ್ದಾನೆ. ಇನ್ನೊಂದೆಡೆ, ಕಳ್ಳತನ ಆರೋಪಿ ಸ್ನಾನಗೃಹದ ಬಾಗಿಲು ಮುರಿದು ಹಾಸ್ಟೆಲ್ ಪ್ರವೇಶಿದ್ದಕ್ಕೆ ವಿದ್ಯಾರ್ಥಿನಿಯರು ಕಾಲೇಜಿನ ಎದುರು ಧರಣಿ ನಡೆಸಿದ್ದರು. ಮೂರು ದಿನದ ಅಂತರದಲ್ಲಿ ಸುಮಾರು 14 ಫೋನ್ ಗಳು ಕಳ್ಳತನವಾಗಿದ್ದರೂ ಆಡಳಿತ ಮಂಡಳಿ ಏನೂ ಕ್ರಮಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಕಾಲೇಜಿನಲ್ಲಿ ಲೇಡಿಸ್​ ಟಾಯ್ಲೆಟ್ ಗೆ ನುಗ್ಗಿದ ಅಪರಿಚಿತ.. ವಿದ್ಯಾರ್ಥಿನಿಯೊಂದಿಗೆ ಅಸಭ್ಯ ವರ್ತನೆ

Last Updated :Jan 23, 2023, 4:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.