ದೊಡ್ಡಬಳ್ಳಾಪುರದಲ್ಲಿ ಹೆಚ್ಚಿದ ಕುರಿಗಳ ಕಳ್ಳತನ: ಗ್ರಾಮಸ್ಥರಲ್ಲಿ ಆತಂಕ

author img

By

Published : Jan 28, 2023, 1:38 PM IST

Representative image

ದೊಡ್ಡಬಳ್ಳಾಪುರ ಗ್ರಾಮದಲ್ಲಿ ಪದೇ ಪದೇ ಕುರಿ-ಮೇಕೆ ಕಳ್ಳತನ- ಕಳೆದ 3 ದಿನಗಳಲ್ಲಿ 4 ಮೇಕೆಗಳ ಕಳ್ಳತನ, ಎರಡು ಬಾರಿ ಕಳ್ಳತನ ಯತ್ನ - ಆತಂಕದಲ್ಲಿ ಗ್ರಾಮಸ್ಥರು.

ದೊಡ್ಡಬಳ್ಳಾಪುರದಲ್ಲಿ ಹೆಚ್ಚಿದ ಕುರಿಗಳ ಕಳ್ಳತನ: ಗ್ರಾಮಸ್ಥರಲ್ಲಿ ಆತಂಕ

ದೊಡ್ಡಬಳ್ಳಾಪುರ: ತಾಲೂಕಿನ ಮೇಲಿನನಾಯಕರಂಡಹಳ್ಳಿ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಕುರಿ ಮೇಕೆ ಕಳವು ಪ್ರಕರಣಗಳು ನಡೆಯುತ್ತಿವೆ. ಮೊದಲ ದಿನ ನಾಲ್ಕು ಮೇಕೆಗಳನ್ನ ಕದ್ದೊಯ್ದಿದ್ದ ಕಳ್ಳರು, ಮರುದಿನ ಮತ್ತು ನಿನ್ನೆ ರಾತ್ರಿ ಮತ್ತೆ ಗ್ರಾಮಕ್ಕೆ ದಾಳಿ ಇಟ್ಟು ಕಳ್ಳತನ ಯತ್ನ ನಡೆಸಿದ್ದಾರೆ. ಪದೇ ಪದೇ ಕಳ್ಳರ ಹಾವಳಿ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

4 ಮೇಕೆ ಕಳವು: ಮೂರು ದಿನಗಳ ಹಿಂದೆಯಷ್ಟೇ ಗ್ರಾಮದಲ್ಲಿ ಮೇಕೆಗಳ ಕಳ್ಳತನ ಪ್ರಕರಣ ನಡೆದಿತ್ತು. ಗ್ರಾಮದ ನರಸಪ್ಪ ಎಂಬುವವರ ಮೇಕೆ ದೊಡ್ಡಿಯ ಬಾಗಿಲಿನ ಬೀಗ ಮುರಿದು ಒಳ ನುಗ್ಗಿದ ಕಳ್ಳರು ನಾಲ್ಕು ಮೇಕೆಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ಘಟನೆ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.

ಎರಡು ಬಾರಿ ಕಳ್ಳತನ ಯತ್ನ: ಘಟನೆಯಾದ ಮರುದಿನ ಸಹ ಗ್ರಾಮಕ್ಕೆ ಕಳ್ಳರು ಲಗ್ಗೆ ಇಟ್ಟಿದ್ದಾರೆ. ತೋಟದಲ್ಲಿನ ಮೇಕೆ ಸಾಕಾಣಿಕೆಯ ಶೆಡ್ಡಿಗೆ ಕಳ್ಳರು ನುಗ್ಗಲು ಯತ್ನಿಸಿದ್ದರು. ಈ ಸಂದರ್ಭದಲ್ಲಿ ಎಚ್ಚೆತ್ತ ಗ್ರಾಮಸ್ಥರು ಮಚ್ಚು, ದೊಣ್ಣೆಗಳಿಂದ ಹಲ್ಲೆಗೆ ಮುಂದಾಗುತ್ತಿದ್ದಂತೆ ಕಳ್ಳರು ಪರಾರಿಯಾಗಿದ್ದರು. ನಿನ್ನೆ(ಶುಕ್ರವಾರ) ರಾತ್ರಿ ಸಹ ಗ್ರಾಮಕ್ಕೆ ಕಳ್ಳರು ಬಂದಿದ್ದಾರೆ. ಗ್ರಾಮದ ಅಂಚಿನ ಶಶಿಕುಮಾರ್ ಎಂಬುವರ ಮೇಕೆ ದೊಡ್ಡಿಯ ಬಾಗಿಲಿನ ಬೀಗಿ ಒಡೆಯುತ್ತಿದ್ದರು. ಈ ಶಬ್ದಕ್ಕೆ ಶಶಿಕುಮಾರ್ ಮನೆಯಿಂದ ಹೊರಬರುತ್ತಿದ್ದಂತೆ ಕಳ್ಳರು ಕಾರಿನಲ್ಲಿ ಪರಾರಿಯಾಗಿದ್ದಾರಂತೆ.

ಕಾರಿಗೆ ಯಾವುದೇ ರೀತಿಯ ನಂಬರ್ ಪ್ಲೇಟ್ ಇರಲಿಲ್ಲ. ಗುರುತು ಸಿಗದ ರೀತಿಯಲ್ಲಿ ಮುಖವನ್ನ ಬಟ್ಟೆಯಿಂದ ಸುತ್ತಿಕೊಂಡಿದ್ದರು. ಮಧ್ಯ ರಾತ್ರಿ 12 ಗಂಟೆಯಿಂದ ಮುಂಜಾನೆ 3 ಗಂಟೆಯ ನಡುವೆ ಗ್ರಾಮಕ್ಕೆ ಕಳ್ಳರು ನುಗ್ಗುತ್ತಿದ್ದಾರೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು. ಇನ್ನು ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕಳೆದ ಆರು ತಿಂಗಳಿದ ಈಚೆಗೆ ವಿವಿಧ ಗ್ರಾಮಗಳಲ್ಲಿ ಕುರಿ, ಮೇಕೆ, ರಾಸುಗಳ ಕಳವು ಪ್ರಕರಣಗಳು ನಡೆಯುತ್ತಲೇ ಇವೆ. ಆದರೆ ಈವರೆಗೆ ಒಂದೇ ಒಂದು ಪ್ರಕಣದಲ್ಲೂ ಕಳ್ಳರು ಪತ್ತೆಯಾಗಿಲ್ಲ. ಇದರಿಂದ ಆತಂಕದಲ್ಲಿಯೇ ರಾತ್ರಿ ಕಳೆಯುವಂತಾಗಿದೆ ಎಂದು ಗ್ರಾಮಸ್ಥ ಶಶಿಕುಮಾರ್ ಎಂಬುವವರು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ತಡರಾತ್ರಿ 30 ಕುರಿ, 12 ಮೇಕೆ ಕದ್ದೊಯ್ದ ಕಳ್ಳರು: ಸಂಕಷ್ಟದಲ್ಲಿ ರೈತರು

ಕುರಿಗಳನ್ನು ಕದ್ದೊಯ್ದ ಖದೀಮರು: ಕಳೆದ 6 ತಿಂಗಳ ಹಿಂದೆ ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟ ಗ್ರಾಮದಲ್ಲಿ ರಾತ್ರಿ 2 ಗಂಟೆಯ ವೇಳೆಗೆ ಖದೀಮರು ಸುಮಾರು 1 ಲಕ್ಷ ಮೌಲ್ಯದ 11 ಕುರಿಗಳನ್ನು ವಾಹನದಲ್ಲಿ ಸಾಗಿಸಿದ್ದರು. ರಾತ್ರಿ ಕ್ವಾಲಿಸ್ ವಾಹನದಲ್ಲಿ ಬಂದಿದ್ದ ನಾಲ್ವರು ಕಳ್ಳರು ಕೊಟ್ಟಿಗೆಯಲ್ಲಿದ್ದ ಕುರಿಗಳನ್ನು ವಾಹನಕ್ಕೆ ತುಂಬಿದ್ದಾರೆ. ಕುರಿಗಳ ಶಬ್ದ ಕೇಳಿ ಎಚ್ಚರಗೊಂಡ ಓಬಳೇಶ್ ಪತ್ನಿ ಸುಮಾ ಮನೆಯಿಂದ ಹೊರಬಂದು ನೋಡಿದ್ದಾರೆ. ಅಷ್ಟರಲ್ಲಾಗಲೇ ಕುರಿಗಳನ್ನು ವಾಹನಕ್ಕೆ ತುಂಬಿದ್ದರು. ಕೊಟ್ಟಿಗೆಯಲ್ಲಿದ್ದ ಮತ್ತೆರಡು ಕುರಿಗಳನ್ನೂ ಸಹ ಕದಿಯಲು ಪ್ರಯತ್ನಿಸಿದ್ದು ಮಹಿಳೆಯನ್ನು ಕಂಡು ಕಳ್ಳರು ಪರಾರಿಯಾಗಿದ್ದರು.

ಇದನ್ನೂ ಓದಿ: ದೊಡ್ಡಬಳ್ಳಾಪುರ: ತಡರಾತ್ರಿ ಕೊಟ್ಟಿಗೆಗೆ ನುಗ್ಗಿ 11 ಕುರಿಗಳನ್ನು ಕದ್ದೊಯ್ದ ಖದೀಮರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.