ಆನೇಕಲ್: ರಾಜ್ಯ ಸಭೆಯಲ್ಲಿ ಮಾತನಾಡಲು ಎರಡು ಬಾರಿ ಅವಕಾಶ ಸಿಕ್ಕಾಗ ಶಿರಾಡಿ ಘಾಟ್ ರಸ್ತೆ ಬಗ್ಗೆ, ಅಡಿಕೆ ಬೆಳೆಗಾರರ ಸಮಸ್ಯೆ, ರಾಜ್ಯದ ಕೆಲ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ಪ್ರಯತ್ನಿಸಿದ್ದೇನೆ ಎಂದು ರಾಜ್ಯಸಭಾ ಸದಸ್ಯ ವೀರೇಂದ್ರ ಹೆಗ್ಗಡೆ ಹೇಳಿದರು. ಕೊನಮಡಿವಾಳದ ಮಾದರಿ ಕೆರೆಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಈಗ ಬೀದರ್ ಪ್ರದೇಶಕ್ಕೆ ಹಾಲು ಉತ್ಪಾದನೆಗೆ ಬೇಕಾದ ವ್ಯವಸ್ಥೆಗೆ ರಾಜ್ಯಸಭಾ ಸದಸ್ಯರ ನಿಧಿಯಿಂದ ಸುಮಾರು 2.50 ಕೋಟಿಗಳ ರೂಪಾಯಿಗಳನ್ನ ವಿಸ್ತರಿಸಿದ್ದೇನೆ. ಅಲ್ಲಿ ಯಾದಗಿರಿ, ಗುಲ್ಬರ್ಗಾ, ಬಿಜಾಪುರ ಭಾಗದಲ್ಲಿ ಹಾಲು ಉತ್ಪಾದನೆ ಹೆಚ್ಚಾಗಬೇಕೆಂದು ಈ ಸಮಸ್ಯೆಗಳತ್ತ ಆಧ್ಯತೆಯ ಮೇರೆಗೆ ಗಮನ ಸೆಳೆಯಲಿದ್ದೇನೆ ಎಂದು ರಾಜ್ಯಸಭಾ ಸದಸ್ಯ ವೀರೇಂದ್ರ ಹೆಗ್ಗಡೆ ಹೇಳಿದರು.
ಪ್ರಸ್ತುತ ಕೊಳವೆ ಬಾವಿಗಳೇ ಹೆಚ್ಚಾಗಿರುವುದರಿಂದ ತೆರೆದ ಬಾವಿಗಳಿಲ್ಲ. ಹೀಗಾಗಿ ಜಾಗತಿಕ ತಾಪಮಾನ ಹೆಚ್ಚಾಗಿದೆ. ಕೊಳವೆ ಬಾವಿಗಳಿಗೆ ಅಂತರ್ಜಲ ಹೆಚ್ಚಿಸು ಕಾರ್ಯ ಕೆರೆಗಳಿಂದ ಸಾಧ್ಯ. ಜನ ಜಾನುವಾರುಗಳಿಗಳಿಗೆ ಹಳ್ಳಿಗಳ ಜೀವನಾಡಿ ಕೆರೆಗಳೇ ಆದಾರವಾಗಿವೆ ಇಂತಹ ಜೀವಸೆಲೆಗಳನ್ನ ನಾವು ಉಳಿಸಿ ಕಾಪಾಡಿಕೊಳ್ಳಬೇಕಿದೆ ಎಂದು ರಾಜ್ಯಸಭಾ ಸದಸ್ಯ ಡಾ ಡಿ ವೀರೇಂದ್ರ ಹೆಗ್ಗಡೆ ಕೆರೆಗಳ ಪುನರುಜ್ಜೀವನ ಕುರಿತು ಕರೆ ನೀಡಿದರು.
'ನಮ್ಮೂರು ನಮ್ಮ ಕೆರೆ' ಘೋಷ ವಾಕ್ಯದ ಕೊನಮಡಿವಾಳದ ಮಾದರಿ ಕೆರೆಯನ್ನು ಲೋಕಾರ್ಪಣೆ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಕ್ಷೇತ್ರಾಭಿವೃದ್ದಿ ಯೋಜನೆಯಡಿಯ 'ನಮ್ಮೂರು ನಮ್ಮ ಕೆರೆ' ಘೋಷ ವಾಕ್ಯದ ಕೊನಮಡಿವಾಳದ ಮಾದರಿ ಕೆರೆಯನ್ನು ಲೋಕಾರ್ಪಣೆ ಮಾಡಿದರು. ದಶಕಗಳ ಹಿಂದೆ ಆನೇಕಲ್ ಭಾಗಕ್ಕೆ ಬಂದಾಗ ಹಚ್ಚ ಹಸಿರಿನ ಭಾಗವಾಗಿತ್ತು, ಈಗ ಅಡಿ ಲೆಕ್ಕದ ಜಮೀನು ಭರಾಟೆ ಜೋರಾದ್ದರಿಂದ ಆ ಹಳ್ಳಿಯ ಸೊಗಡು ಮಾಯವಾಗಿದೆ ಎಂದರು.
ಗ್ರಾಮೀಣ ಅಭಿವೃದ್ಧಿಗೆ ಗ್ರಾಮಸ್ಥರು ಸಹಭಾಗಿತ್ವ ಅತ್ಯಂತ ಮುಖ್ಯವಾದುದ್ದು. ಕೂನಮಡಿವಾಳ ಕೆರೆಯನ್ನು 18 ಲಕ್ಷ ಗ್ರಾಮಾಭಿವೃದ್ಧಿ ಯೋಜನೆ ಮತ್ತು 18 ಲಕ್ಷ ರೂ. ಗ್ರಾಮಸ್ಥರ ಸಹಕಾರದಿಂದ ಪುನಶ್ಚೇತನಗೊಳಿಸಲಾಗಿದೆ. ಅರಣ್ಯ ಇಲಾಖೆಯಿಂದ ಕೆರೆಯ ಸುತ್ತಲೂ 1300 ಗಿಡಗಳನ್ನು ನೆಡಲಾಗಿದೆ. ಮನೆಯ ತೊಟ್ಟು ನೀರನ್ನು ಉಳಿಸುವ ಕಾಯಕ ಜನರದ್ದಾಗಬೇಕೆಂದರು. ಕೆರೆಗೆ ಬಾಗಿನ ಅರ್ಪಿಸಿದರು, ನಂತರ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಚೆಕ್ ವಿವರಿಸಿದರು.
ಎಲ್ಲ ಕ್ಷೇತ್ರಗಳಿಗೂ ಕೊಡುಗೆ ನೀಡಿದೆ:ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಜಾರಿ ಮಾಡುವಲ್ಲಿ ಇನ್ನೂ ತಿಣಕಾಡುತ್ತಿರುವ ಸಂದಿಗ್ದ ಹೊತ್ತಿನಲ್ಲಿ ಧರ್ಮಸ್ಥಳ ಧರ್ಮದರ್ಶಿಗಳ ಈ ಸಾರ್ಥಕ ಕಾರ್ಯ ಜನ ಮೆಚ್ಚುಗೆಗೆ ಪಾತ್ರವಾಗಿ ಯಶಸ್ವಿಯಾಗಿರುವುದು ಕಂಡರೆ ಆಪ್ತ ಎನಿಸುತ್ತದೆ ಎಂದರು. ಅವರ ಟ್ರಸ್ಟ್ ಶಿಕ್ಷಣ, ಆರೋಗ್ಯ, ಪರಿಸರ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೂ ಕೊಡುಗೆ ನೀಡಿದೆ. ಜಾತಿ ಧರ್ಮ ಹೊರತು ಪಡಿಸಿ ಮಾನವೀಯ ಆಧಾರದಲ್ಲಿ ಯೋಜನೆಗಳನ್ನು ರೂಪಿಸುತ್ತಿದೆ. ಗ್ರಾಮಗಳಲ್ಲಿ ದೇವಾಲಯ, ಸ್ಮಶಾನ, ಆಟದ ಮೈದಾನ ಅತ್ಯಂತ ಮುಖ್ಯವಾದದ್ದು, ಈ ನಿಟ್ಟಿನಲ್ಲಿ ಗ್ರಾಮಸ್ಥರು ಗ್ರಾಮದ ಆಸ್ತಿಯನ್ನು ಸಂರಕ್ಷಿಸಬೇಕು ಎಂದರು.
ರಾಜಾಪುರ ಮಠದ ಡಾ.ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ, ತಾ ಪಂ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀನಾರಾಯಣಸ್ವಾಮಿ, ಕೊನಮಡಿವಾಳ ಕೆರೆ ಅಭಿವೃದ್ದಿ ಸಮಿತಿ ಅಧ್ಯಕ್ಷ ವೈ ಸೋಮಣ್ಣ, ಶಾಸಕ ಬಿ.ಶಿವಣ್ಣ, ವಿಧಾನ ಪರಿಷತ್ ಸದಸ್ಯ ಗೋಪಿನಾಥರೆಡ್ಡಿ, ಗ್ರಾ ಅಧ್ಯಕ್ಷೆ ವೀಣಾ ಮುನಿರೆಡ್ಡಿ, ಉಪಾಧ್ಯಕ್ಷೆ ರತ್ನಮ್ಮ ರಾಜಪ್ಪ, ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಯೋಗೀಶ್ವರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ:ವಿಶ್ವ ಮಾರುಕಟ್ಟೆಯಲ್ಲಿ ಸಿರಿಧಾನ್ಯಗಳಿಗೆ ಬಹುಬೇಡಿಕೆ: ಸಿಎಂ ಬಸವರಾಜ ಬೊಮ್ಮಾಯಿ