‘ಡಿ’ ಕಾಂಗ್ರೆಸ್​ ಸೋಲಿಸಲು ‘ಎಸ್‘​ ಕಾಂಗ್ರೆಸ್​ 500 ಕೋಟಿ ರೂ ಡೀಲ್​ ಮಾಡಿದೆ: ಆರ್​.ಆಶೋಕ್​

author img

By

Published : Jan 22, 2023, 11:28 AM IST

Revenue Minister R. Ashok

ರಾಜ್ಯ ಕಾಂಗ್ರೆಸ್​ ಪಕ್ಷದಲ್ಲಿ ‘ಡಿ’ ಮತ್ತು ‘ಎಸ್’​ ಕಾಂಗ್ರೆಸ್​ ಪಕ್ಷವಿದೆ. ‘ಡಿ’ ಯನ್ನು ಸೋಲಿಸಲು ಕೆಸಿಆರ್​ ಜೊತೆ ‘ಎಸ್’​ ಕಾಂಗ್ರೆಸ್​ 500 ಕೋಟಿ ರೂ ಡೀಲ್​ ಮಾಡಿಕೊಂಡಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್​ ಆರೋಪಿಸಿದರು.

ಸಚಿವ ಆರ್. ಅಶೋಕ್​ ಹೇಳಿಕೆ

ಹೊಸಕೋಟೆ: ಕರ್ನಾಟಕದಲ್ಲಿ ಚುನಾವಣೆ ಅಲೆ ಎದ್ದಿದೆ. ಗೆಲುವಿಗಾಗಿ ರಾಜಕೀಯ ನಾಯಕರ ಸರ್ಕಸ್‌ ಜೋರಾಗಿದೆ. ಪಕ್ಷಗಳ ನಾಯಕರು ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ. ಈ ನಡುವೆ ಕಂದಾಯ ಸಚಿವ ಆರ್.ಅಶೋಕ್ ಅವರು, ‘ಡಿ’ ಕಾಂಗ್ರೆಸ್ ಅ​ನ್ನು ಸೋಲಿಸಲು ‘ಎಸ್’ ಕಾಂಗ್ರೆಸ್​ಗೆ ಕೆಸಿಆರ್ 500 ಕೋಟಿ ರೂ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಹೊಸಕೋಟೆಯ ಜಡಿಗೇನಹಳ್ಳಿಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಹೂಡಿರುವ ಆರ್.ಅಶೋಕ್ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದು, ಕಾಂಗ್ರೆಸ್ ‘ಎಸ್​’ ಡಿ.ಕೆ.ಶಿವಕುಮಾರ್ ‘ಡಿ‌’ ನ ಸೋಲಿಸಲು 500 ಕೋಟಿ ರೂಪಾಯಿ ಸುಪಾರಿ ಕೊಟ್ಟಿದೆ. ಕಾಂಗ್ರೆಸ್​ ಪಕ್ಷದಲ್ಲಿಯೇ ‘ಡಿ’ ಕಾಂಗ್ರೆಸ್​ ವರ್ಸಸ್ ‘ಎಸ್’ ಕಾಂಗ್ರೆಸ್ ಎಂದು ಇಬ್ಭಾಗವಾಗಿದೆ. ಈ ‘ಡಿ’ ಹಾಗೂ ‘ಎಸ್’ ಇವರಿಬ್ಬರಿಂದ ಬಿಜೆಪಿಗೆ‌ ಲಾಭವಾಗುತ್ತೆ. ಹಾಗಂತ ಇವರಿಲ್ಲದಿದ್ದರೂ ನಮ್ಮ ಪಕ್ಷಕ್ಕೆ ಲಾಭವೇ ಎಂದು ಕಾಂಗ್ರೆಸ್​ ಪಕ್ಷದ ಕುರಿತು ವ್ಯಂಗ್ಯಮಿಶ್ರಿತ ಧಾಟಿಯಿಂದಲೇ ಮಾತನಾಡಿದರು.

ಮುಂದುವರೆದು, ರಾಜ್ಯದಲ್ಲಿ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರೊಂದಿಗೆ ಮುಖ್ಯಮಂತ್ರಿ ಬೊಮ್ಮಾಯಿಯವರ ಹವಾ ಶುರುವಾಗಿದ್ದು ಈಗಾಗಲೇ ಬ್ಯಾಂಡ್​ ಬಾರಿಸುತ್ತಿದ್ದಾರೆ. ಇನ್ನು ಮೂರು ನಾಲ್ಕು ದಿನಗಳಲ್ಲಿ ಅಮಿತ್ ಶಾ ಮತ್ತೆ ರಾಜ್ಯಕ್ಕೆ ಬರುತ್ತಿದ್ದಾರೆ. ಫೆಬ್ರವರಿ 05ಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮತ್ತೆ ಆಗಮಿಸಲಿದ್ದಾರೆ ಎಂದು ಹೇಳಿದರು. ಆಂಧ್ರ ಕಾಂಗ್ರೆಸ್​ ರಾಜ್ಯಾಧ್ಯಕ್ಷ ರೇವಂತ್​ ರೆಡ್ಡಿ ನನಗೂ ಸ್ನೇಹಿತರು ಎಂದಿರುವ ಆರ್.ಅಶೋಕ್​, ಅವರು ಕಾಂಗ್ರೆಸ್​ ಪಕ್ಷದಲ್ಲಿ ಇದ್ದಾರೆ, ನಾನು ಬಿಜೆಪಿ ಪಕ್ಷದಲ್ಲಿ ಇದ್ದೇನೆ ಅಷ್ಟೇ ಎಂದರು.

ರೇವಂತ್ ರೆಡ್ಡಿ ಒಳ್ಳೆಯ ವಾಗ್ಮಿ, ಒಳ್ಳೆಯ ನಾಯಕ. ಅವರು ಹೇಳುವುದು ಸುಳ್ಳಾಗಲು ಸಾಧ್ಯವೇ ಇಲ್ಲ. ಅವರು ಕಾಂಗ್ರೆಸ್‌ ಅಧ್ಯಕ್ಷರು. ಹಾಗಾಗಿ ಅವರು ಮಾಹಿತಿ‌ ಇಲ್ಲದೇ ಹೇಳುವುದಿಲ್ಲ. ಕಾಂಗ್ರೆಸ್​ ಅನ್ನು ಕೆಲ ಕ್ಷೇತ್ರಗಳನ್ನು ಸೋಲಿಸಲು 500 ಕೋಟಿ ರೂಪಾಯಿ ಡೀಲ್ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ ಜಮೀರ್‌ ಅವರನ್ನು​ ಭೇಟಿಯಾಗಿರುವುದನ್ನೂ ಒಪ್ಪಿಕೊಂಡಿದ್ದಾರೆ. ಭೇಟಿಯಾದ ಮೇಲೆ ಖಂಡಿತ ವ್ಯವಹಾರ ಆಗಿರುತ್ತದೆ ಎಂದು ಹೇಳಿದರು.

ಮುಖ್ಯವಾಗಿ ಇಲ್ಲಿ ಕೆಸಿಆರ್ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇವರು (ಕಾಂಗ್ರೆಸ್​ನವರು) ಹೋಗಲೇಬಾರದು. ಅವರು ವಿರೋಧ ಪಕ್ಷದವರು ಮುಗಿಸಲು ಇರುವಂತವರು. ಅಂತವರನ್ನು ಹೋಗಿ ಭೇಟಿ ಮಾಡಿದ್ದಾರೆ. ಇನ್ನು ಸಿದ್ದರಾಮಯ್ಯನವರನ್ನು ಕೋಲಾರದಲ್ಲಿ ಮುಗಿಸೋಕೆ ಟೀಂ ರೆಡಿಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮುಗಿಸಲು ಸುಪಾರಿಯಾಗಿದೆ. ಚಟ್ಟ ಕಟ್ಟಿಕೊಂಡು ಕಾಂಗ್ರೆಸ್‌ನವರು ಸ್ಮಶಾನದೆಡೆ ಪ್ರಯಾಣ ಬೆಳೆಸಬೇಕು ಅಷ್ಟೇ ಎಂದು ಸಚಿವ ಅಶೋಕ್ ಟೀಕಿಸಿದರು.

ಇದನ್ನೂ ಓದಿ: ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನನ್ನು ಸೋಲಿಸಲು ತಾನೇ ಟೊಂಕ ಕಟ್ಟಿ ನಿಂತಿದೆ: ಬಿಜೆಪಿ ಟ್ವೀಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.