ದೊಡ್ಡಬಳ್ಳಾಪುರ: ಗಂಡನ ಕೊಲೆಗೈದು ಫಿಟ್ಸ್ ಬಂದು ಸತ್ತನೆಂದು ಕಥೆ ಕಟ್ಟಿ ಸಂಬಂಧಿಕರನ್ನ ನಂಬಿಸಿದ ಪತ್ನಿಯು ಅಂತ್ಯಕ್ರಿಯೆನ್ನು ಮಾಡಿ ಕೈತೊಳೆದುಕೊಂಡಿದ್ದಳು. ಆದ್ರೆ ತಾಯಿಯ ಕಳ್ಳಾಟವನ್ನು ಕಂಡಿದ್ದ ಮಗ ಕೊಲೆಯಾದ ತಂದೆಯ ರಹಸ್ಯವನ್ನು ಬಾಯ್ಬಿಟ್ಟು ಹೆತ್ತಮ್ಮಳ ಕೃತ್ಯವನ್ನು ಬಯಲು ಮಾಡಿರುವ ಪ್ರಕರಣ ತಾಲೂಕಲ್ಲಿ ಬೆಳಕಿಗೆ ಬಂದಿದೆ.
ಹೌದು, ಕೊಲೆ ರಹಸ್ಯವನ್ನ ಆರೋಪಿಯ ಮಗನೇ ತನ್ನ ಸಂಬಂಧಿಗಳ ಮುಂದೆ ಬಾಯ್ಬಿಟ್ಟಿದ್ದಾನೆ. ಗಂಡನ ಹಾಲು ತುಪ್ಪ ಕಾರ್ಯ ಸೇರಿದಂತೆ ಮುಂದಿನ ಯಾವುದೇ ವಿಧಿವಿಧಾನಕ್ಕೆ ಬಾರದೆ ತಲೆಮರೆಸಿಕೊಂಡಿದ್ದ ಚಾಲಾಕಿಯನ್ನು ದೊಡ್ಡಬಳ್ಳಾಪುರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಅನುಮಾನಾಸ್ಪದ ಸಾವಿಗೆ ಸಿಕ್ತು ಟ್ವಿಸ್ಟ್.. ದೊಡ್ಡಬಳ್ಳಾಪುರ ನಗರದ ಕರೇನಹಳ್ಳಿ ನಿವಾಸಿ 40 ವರ್ಷದ ರಾಘವೇಂದ್ರ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ. ಅಪ್ಪನ ಕೊಲೆಯನ್ನ ಕಣ್ಣಾರೆ ಕಂಡಿದ್ದ ಮಗ ಪವನ್ ಕುಮಾರ್ ಹೇಳಿಕೆ ಕೊಲೆ ಆರೋಪಿಗಳನ್ನ ಬಂಧಿಸಲು ನೆರವಾಗಿದೆ. ಕೊಲೆಯಾದ ನಂತರ ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಹೆಂಡತಿ ಶೈಲಜಾ, ಅತ್ತೆ ಲಕ್ಷ್ಮಿದೇವಮ್ಮ, ಶೈಲಜಾಳ ಪ್ರಿಯಕರ ಹನುಮಂತನನ್ನು ಪೊಲೀಸರು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.
ಮೂರನೇ ದಿನ ಹಾಲು - ತುಪ್ಪ ಬಿಡುವಾಗ ಬಾಯ್ಬಿಟ್ಟ ಮಗ.. ಡಿಸೆಂಬರ್ 27 ನಸುಕಿನಜಾವ 2 ಗಂಟೆಯ ಸಮಯದಲ್ಲಿ ರಾಘವೇಂದ್ರನ ಹೆಂಡತಿಯೇ ಆತನಿಗೆ ಫಿಟ್ಸ್ ಬಂದು ಬಿದ್ದು ಸತ್ತನೆಂದು ಮೃತನ ಸಹೋದರರಿಗೆ ವಿಷಯ ತಿಳಿಸಿದ್ದಳು. ಅಪ್ಪನ ಅಂತ್ಯ ಸಂಸ್ಕಾರದ ಸಮಯದಲ್ಲಿ ಕೊಲೆ ರಹಸ್ಯವನ್ನು ಬಾಯ್ಬಿಡದೆ ಸುಮ್ಮನಿದ್ದ ಮಗ, ಮೂರನೇ ದಿನದ ಹಾಲು-ತುಪ್ಪ ಕಾರ್ಯದ ದಿನದಂದು ಅಮ್ಮ ಮತ್ತು ಅಜ್ಜಿ ಸೇರಿ ಅಪ್ಪನನ್ನ ಕೊಂದ ರಹಸ್ಯವನ್ನ ಬಹಿರಂಗಪಡಿಸಿದ್ದ. ಅಷ್ಟರಲ್ಲಾಗಲೇ ಅಮ್ಮ ಮತ್ತು ಅಜ್ಜಿ ಪರಾರಿಯಾಗಿದ್ದರು.
ಅನೈತಿಕ ಸಂಬಂಧ, ಗಂಡನ ಕೊಲೆಗೆ ಇಟ್ಟಳು ಮುಹೂರ್ತ.. ಬಾಶೆಟ್ಟಿಹಳ್ಳಿಯ ಇಂಡಿಗೋ ಬ್ಲೂ ಗಾರ್ಮೆಂಟ್ಸ್ ನಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಶೈಲಜಾ ಅಲ್ಲಿಯೇ ಕೆಲಸ ಮಾಡುತ್ತಿದ್ದ ಹನುಮಂತನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಅನೈತಿಕ ವಿಚಾರಕ್ಕೆ ಸಂಬಂಧಿಸಿದಂತೆ ಹನುಮಂತನ ಹೆಂಡತಿ ಮತ್ತು ಶೈಲಜಾ ನಡುವೆ ಜಗಳವಾಗಿತ್ತು.
ಅದೇ ಸಮಯದಲ್ಲಿ ರಾಘವೇಂದ್ರ ತನ್ನ ಚಪ್ಪಲಿಯನ್ನ ಹನುಮಂತನ ಹೆಂಡತಿಗೆ ಕೊಟ್ಟು ನನ್ನ ಹೆಂಡತಿಗೆ ಬುದ್ಧಿ ಕಲಿಸು ಎಂದಿದ್ದ. ಇಬ್ಬರ ಸಂಬಂಧಕ್ಕೆ ತಡೆಯಾಗಿದ್ದ ರಾಘವೇಂದ್ರನನ್ನ ಡಿಸೆಂಬರ್ 27ರ ನಸುಕಿನಜಾವ ಶೈಲಜಾ, ಆಕೆಯ ತಾಯಿ ಲಕ್ಷ್ಮಿದೇವಮ್ಮ ಮತ್ತು ಪ್ರಿಯಕರ ಹನುಮಂತ ಸೇರಿ ಲಟ್ಟಣಿಗೆಯಿಂದ ಹೊಡೆದು ಸಾಯಿಸಿದ್ದಾರೆ. ಕೊಲೆಯ ಘಟನೆಯನ್ನ ರಾಘವೇಂದ್ರನ ಮಗ ಪವನ್ ಕುಮಾರ್ ಕಣ್ಣಾರೆ ಕಂಡಿದ್ದ ಮತ್ತು ಅಪ್ಪನ ಕೊಂದವರನ್ನ ಜೈಲಿಗೆ ಕಳಿಸುವ ಕೆಲಸದಲ್ಲಿ ಪ್ರಮುಖ ಪಾತ್ರವಹಿಸಿದ್ದಾನೆ.
ಓದಿ: 'ಪಂಚಮಸಾಲಿ ಮೀಸಲಾತಿ ಹೋರಾಟದ ವರ್ಷಾಚರಣೆ ಕಾರ್ಯಕ್ರಮ ಮುಂದೂಡಿಕೆ'