ದನಗಳ ಜಾತ್ರೆಗೆ ನಿಷೇಧ.. ನಿರ್ಬಂಧದ ನಡುವೆಯೂ ಘಾಟಿ ದನಗಳ ಜಾತ್ರೆ ಪ್ರಾರಂಭ..

author img

By

Published : Jan 17, 2023, 8:23 PM IST

ghati-cattle-fair-begins

ಘಾಟಿ ದನಗಳ ಜಾತ್ರೆ ಪ್ರಾರಂಭ - ಜಿಲ್ಲಾಡಳಿತ ನಿಷೇಧದ ನಡುವೆಯು ಪ್ರಾರಂಭಗೊಂಡ ಜಾತ್ರೆ - ಸ್ವಯಂಪ್ರೇರಿತರಾಗಿ ದನಗಳೊಟ್ಟಿಗೆ ಘಾಟಿಗೆ ಬರುತ್ತಿರುವ ರೈತರು.

ಘಾಟಿ ದನಗಳ ಜಾತ್ರೆ ಪ್ರಾರಂಭ

ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಉಲ್ಬಣಗೊಂಡಿರುವ ಹಿನ್ನೆಲೆ ಜಿಲ್ಲೆಯಲ್ಲಿ ಜಾನುವಾರುಗಳ ಸಾಕಣೆ ಮತ್ತು ಜಾನುವಾರುಗಳ ಜಾತ್ರೆ, ಸಂತೆ ನಿಷೇಧಿಸಲಾಗಿತ್ತು. ಜಿಲ್ಲಾಡಳಿತದ ನಿಷೇಧದ ನಡುವೆಯು ಘಾಟಿ ದನಗಳ ಜಾತ್ರೆ ಪ್ರಾರಂಭವಾಗಿದ್ದು, ಸ್ವಯಂಪ್ರೇರಿತರಾಗಿ ರೈತರು ದನಗಳ ವ್ಯಾಪಾರಕ್ಕೆ ಘಾಟಿಗೆ ಬರುತ್ತಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯುವ ದನಗಳ ಜಾತ್ರೆ ದಕ್ಷಿಣ ಭಾರತದಲ್ಲೇ ಪ್ರಸಿದ್ಧಿಯನ್ನ ಪಡೆದಿದೆ.

ಘಾಟಿ ದನಗಳ ಜಾತ್ರೆಗೆ ತಮಿಳುನಾಡು, ಆಂಧ್ರಪ್ರದೇಶದ ರೈತರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ ದನಗಳ ವ್ಯಾಪಾರಕ್ಕೆ ಘಾಟಿಗೆ ಬರುತ್ತಾರೆ. 2022ರ ಸಾಲಿನ ಘಾಟಿ ದನಗಳ ಜಾತ್ರೆ ಡಿಸೆಂಬರ್ 20 ರಂದು ನಡೆಯಬೇಕಿತ್ತು. ಆದರೆ ಜಿಲ್ಲೆಯಲ್ಲಿ ಚರ್ಮಗಂಟು ರೋಗ ಉಲ್ಬಣಗೊಂಡಿರುವ ಹಿನ್ನೆಲೆ ಜಾನುವಾರುಗಳ ಆರೋಗ್ಯದ ಹಿತದೃಷ್ಟಿಯಿಂದ ಎರಡು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಜಾನುವಾರುಗಳ ಸಂತೆ, ಜಾತ್ರೆ ಮತ್ತು ಸಾಕಣೆ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ನವೆಂಬರ್ 30, 2022 ರಿಂದ ಜನವರಿ 31ರವರೆಗೂ ನಿಷೇಧದ ಆದೇಶ ಚಾಲ್ತಿಯಲ್ಲಿತ್ತು. ಆದರೆ, ದನಗಳ ಜಾತ್ರೆಗೆ ಒತ್ತಡ ಹೆಚ್ಚಾದ ಹಿನ್ನೆಲೆ ನಿಷೇಧದ ನಡುವೆಯೂ ದನಗಳ ಜಾತ್ರೆ ಘಾಟಿಯಲ್ಲಿ ಪ್ರಾರಂಭವಾಗಿದೆ.

ಘಾಟಿ ದನಗಳ ಜಾತ್ರೆಗೆ ಬರುವ ರೈತರು: ಜಾನುವಾರುಗಳನ್ನ ಅವಲಂಬಿಸಿ ರೈತರು ಕೃಷಿ ಮಾಡುತ್ತಾರೆ. ವರ್ಷಕ್ಕೊಮ್ಮೆ ನಡೆಯುವ ಘಾಟಿ ದನಗಳ ಜಾತ್ರೆಗೆ ಬರುವ ರೈತರು ತಮಗೆ ಬೇಕಾದ ದನಗಳ ಖರೀದಿ ಮಾಡುತ್ತಾರೆ. ಜೊತೆಗೆ ತಾವು ಜೋಡಿ ಮಾಡಿದ ದನಗಳನ್ನ ಮಾರುವ ಮೂಲಕ ಲಾಭ ಸಹ ಗಳಿಸುತ್ತಾರೆ. ಆದರೆ, ಈ ವರ್ಷ ಚರ್ಮಗಂಟು ರೋಗ ಹಿನ್ನೆಲೆ ಘಾಟಿ ದನಗಳ ಜಾತ್ರೆಗೆ ನಿಷೇಧಿಸಲಾಗಿತ್ತು. ಕಳೆದೊಂದು ತಿಂಗಳಿಂದ ಆದೇಶಕ್ಕೆ ಬೆಲೆ ಕೊಟ್ಟು ಸುಮ್ಮನಾಗಿದ್ದ ರೈತರು ಸ್ವಯಂ ಪ್ರೇರಿತರಾಗಿ ಜನವರಿ 16 ರಿಂದ 23ವರೆಗೂ ದನಗಳ ಜಾತ್ರೆಯನ್ನ ನಡೆಸಿದ್ದಾರೆ. ಈಗಾಗಲೇ ಘಾಟಿಯಲ್ಲಿ ದನಗಳ ಸಂಗಮವಾಗಿವೆ, ದನಗಳ ವ್ಯಾಪಾರಕ್ಕಾಗಿ ದೂರದೂರಿನಿಂದ ರೈತರು ಆಗಮಿಸುತ್ತಿದ್ದಾರೆ.

ರೈತರಿಂದ ಬೆದರಿಕೆ: ಪೆಂಡಾಲ್​ಗಳ ಹಾಕಿರುವ ರೈತರು ದನಗಳ ವ್ಯಾಪಾರಕ್ಕೆ ಸಿದ್ಧತೆ ನಡೆಸಿದ್ದಾರೆ. ಜಾತ್ರೆಯಿಂದ ತೆರಳುವಂತೆ ಪಶು ಆರೋಗ್ಯಧಿಕಾರಿಗಳು ರೈತರಲ್ಲಿ ಮನವಿ ಮಾಡಿದ್ದಾರೆ, ಆದರೇ ಅಧಿಕಾರಿಗಳ ಮಾತಿಗೆ ಬಗ್ಗದ ರೈತರು ದನಗಳ ಜಾತ್ರೆ ನಡೆಸುವುದಾಗಿ ಹಠ ತೊಟ್ಟಿದ್ದಾರೆ. ಒಂದು ವೇಳೆ ದನಗಳ ಜಾತ್ರೆ ನಿಲ್ಲಿಸಲು ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾದರೆ ವಿಷ ಕುಡಿಯುವ ಬೆದರಿಕೆ ಹಾಕಿದ್ದಾರೆ, ಕಣ್ಣೂರಿನ ರೈತ ವೆಂಕಟೇಶ್.

ದಿನ ಕಳೆದಂತೆ ಘಾಟಿಯಲ್ಲಿ ರೈತರು ಮತ್ತು ದನಗಳ ಸಂಖ್ಯೆ ಹೆಚ್ಚಾಗಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಚರ್ಮಗಂಟು ರೋಗದ ಸಮಸ್ಯೆ ಇಲ್ಲ, ರೈತರ ಹಿತದೃಷ್ಟಿಯಿಂದ ಅಧಿಕಾರಿಗಳು ಸಹ ದನಗಳ ಜಾತ್ರೆಯ ಪರವಾಗಿಯೇ ಇದ್ದಾರೆ, ಎಂದು ರೈತ ವೆಂಕಟೇಶ್ ಇದೇ ವೇಳೆ​ ಹೇಳಿದರು.

ಕಳೆದ ತಿಂಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2,037 ಜಾನುವಾರುಗಳಿಗೆ ಚರ್ಮಗಂಟು ರೋಗದ ಲಕ್ಷಣ ಕಂಡುಬಂದು ಅದರಲ್ಲಿ, 154 ಜಾನುವಾರುಗಳು ಮರಣ ಹೊಂದಿದ್ದವು. ಜಾನುವಾರುಗಳಿಗೆ ಹರಡುತ್ತಿರುವ ರೋಗದ ನಿಯಂತ್ರಣಕ್ಕಾಗಿ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆಗೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಚರ್ಮಗಂಟು ರೋಗವನ್ನು ನಿಯಂತ್ರಣ ಮಾಡಲು ಕರ್ನಾಟಕ ಪ್ರಾಣಿಗಳ ಕಾಯಿಲೆ 1961ರ ಕಾಯ್ದೆ ಪ್ರಕಾರ, 2023ರ ಜನವರಿ 30ರವರೆಗೂ ಜಿಲ್ಲೆಯಲ್ಲಿ ಜಾನುವಾರುಗಳ ಜಾತ್ರೆ ಮತ್ತು ಸಾಗಾಣಿಕೆ ಮಾಡದಂತೆ ಡಿಸಿ ಆದೇಶದಲ್ಲಿ ತಿಳಿಸಿದ್ದರು.

ಇದನ್ನೂ ಓದಿ: ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.