ಪತ್ನಿ ಜೊತೆ ಅನೈತಿಕ ಸಂಬಂಧ ಆರೋಪ: ವ್ಯಕ್ತಿಯನ್ನು ಕೊಂದು ಜಮೀನಿನಲ್ಲಿ ಹೂತು ಹಾಕಿದ್ದ!

author img

By

Published : Jan 23, 2023, 12:15 PM IST

Updated : Jan 23, 2023, 1:23 PM IST

murder

ತನ್ನ ಪತ್ನಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ಆರೋಪಿಸಿ ವ್ಯಕ್ತಿಯನ್ನು ಕೊಂದು ಜಮೀನಿನಲ್ಲಿ ಶವ ಹೂತು ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹೊಸಕೋಟೆ ಕೊಲೆ ಪ್ರಕರಣ

ಹೊಸಕೋಟೆ (ಬೆಂಗಳೂರು ಗ್ರಾಮಾಂತರ): ಹತ್ತು ದಿನಗಳ ಹಿಂದೆ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದರು. ಈ ವ್ಯಕ್ತಿಯನ್ನು ಕೊಲೆ ಮಾಡಿ ಹೂತು ಹಾಕಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ದೊಡ್ಡನಲ್ಲೂರಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. ನಂದೀಶ್ ಕೊಲೆಯಾದ ವ್ಯಕ್ತಿ. ಪ್ರಕಾಶ್ ಬಂಧಿತ ಆರೋಪಿ.

ದೊಡ್ಡನಲ್ಲೂರಹಳ್ಳಿ ಗ್ರಾಮದ ನಂದೀಶ್ ಲೇಬರ್ ಕಾಂಟ್ರಾಕ್ಟ್ ಕೆಲಸ ಮಾಡುತ್ತಿದ್ದು, ಅಕ್ಕಪಕ್ಕದ ಗ್ರಾಮಗಳಲ್ಲಿ ಸುತ್ತಾಡುತ್ತಿದ್ದನಂತೆ. ಈ ವೇಳೆ ಪಕ್ಕದ ಗ್ರಾಮದ ಬೈರನಹಳ್ಳಿಯ ಪ್ರಕಾಶ್ ಎನ್ನುವವನ ಪತ್ನಿಯ ಪರಿಚಯವಾಗಿದೆ. ನಂದೀಶ್ ಆಕೆಯ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಇದೇ ತಿಂಗಳ 13ನೇ ತಾರೀಖಿನಂದು ಶುಕ್ರವಾರ ನಂದೀಶ್, ಆರೋಪಿ ಪ್ರಕಾಶ್ ಮನೆಗೆ ಹೋಗಿದ್ದು ನಂತರ ವಾಪಸ್ ಬರುತ್ತಿದ್ದನಂತೆ. ಈ ವೇಳೆ ಗ್ರಾಮದ ರಸ್ತೆಯಲ್ಲಿ ನಂದೀಶ್​ನನ್ನು ಅಡ್ಡಗಟ್ಟಿದ ಪ್ರಕಾಶ್, ಮಾತನಾಡಬೇಕು ಅಂತ ಹೊಲದ ಬಳಿ ಕರೆತಂದು ಗಲಾಟೆ ಮಾಡಿದ್ದಾನೆ.

ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ನೋಡುನೋಡ್ತಿದ್ದಂತೆ ಪ್ರಕಾಶ್ ನಂದೀಶನ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ನಂತರ ಶವವನ್ನು ಹೊಲದಲ್ಲಿ ತೆಗೆಸಿದ್ದ ಗುಂಡಿಗೆ ಹಾಕಿ ಮಣ್ಣು ಮಚ್ಚಿ, ಅಲ್ಲಿಂದ ತೆರಳಿದ್ದಾನೆ. ನಂದೀಶನ ಮೊಬೈಲ್ ಅನ್ನು ಯಾರಿಗೂ ಅನುಮಾನ ಬಾರದಂತೆ ಹೆದ್ದಾರಿಯಲ್ಲಿನ ಮಂಗಳಮುಖಿಯರ ಮನೆ ಬಳಿ ಬಿಸಾಕಿ ಪರಾರಿ ಆಗಿದ್ದ ಎಂದು ನಂದಗುಡಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಬಳಿ ಭೀಕರ ಹತ್ಯೆ: ಆಸ್ತಿಗಾಗಿ ಮಾವನಿಗೆ 20ಕ್ಕೂ ಹೆಚ್ಚು ಬಾರಿ ಇರಿದು ಕೊಂದ ಅಳಿಯ

ಕೊಲೆ ರಹಸ್ಯ ಬಯಲಾಗಿದ್ದು ಹೇಗೆ?: ಒಂದೆರಡು ದಿನ ನಂದೀಶನಿಗಾಗಿ ಹುಡುಕಾಡಿದ ಕುಟುಂಬಸ್ಥರು ಬಳಿಕ ನಂದಗುಡಿ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ತನಿಖೆ ಪ್ರಾರಂಭಿಸಿದ ಪೊಲೀಸರು ಮೊದಲು ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ. ಮೊಬೈಲ್​ನಲ್ಲಿದ್ದ ಸಂದೇಶ ಮತ್ತು ಕಾಲ್ ಲಿಸ್ಟ್ ಆಧಾರದಲ್ಲಿ ತನಿಖೆ ನಡೆಸಿದಾಗ ಪ್ರಕಾಶನ ಮೇಲೆ ಅನುಮಾನ ಬಂದು ತನಿಖೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.

ಇದನ್ನೂ ಓದಿ: ಹಾಸನದಲ್ಲಿ ಹಳೇ ದ್ವೇಷಕ್ಕೆ ಯುವಕನ ಕೊಲೆ: ಬೆಂಗಳೂರಿನಲ್ಲಿ ಬಾಮೈದುನನ ಹತ್ಯೆ ಆರೋಪಿ ಸೆರೆ

ಇನ್ನು ಆರೋಪಿ ಕೊಲೆ ಮಾಡಿ ಶವ ಹೂತು ಹಾಕಿದ್ದ ನಂತರ ಯಾರಿಗೂ ಅನುಮಾನ ಬಾರದಂತೆ ತನ್ನ ಜಮೀನನ್ನು ಸಮತಟ್ಟು ಮಾಡಿಸಿದ್ದಾನೆ. ಭಾನುವಾರ ಪೊಲೀಸರು ಆರೋಪಿಯನ್ನು ಗ್ರಾಮದ ಜಮೀನಿನ ಬಳಿ ಕರೆತಂದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ನಾಪತ್ತೆಯಾಗಿದ್ದ ನಂದೀಶನ ಮೃತದೇಹ ಪತ್ತೆಯಾಗಿದ್ದು, ಬಳಿಕ ಮಣ್ಣಿನಿಂದ ಹೊರತೆಗೆದು ಶವ ಪರೀಕ್ಷೆಗೆ ಕಳುಹಿಸಿದ್ದಾರೆ. ಕೆಲಸದ ನಿಮಿತ್ತ ಮಗ ಹೊರಗಡೆ ಹೋಗಿದ್ದಾನೆ, ಬರ್ತಾನೆ ಎಂದು ಕಾದು ಕುಳಿತಿದ್ದ ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದೆ.

ಇದನ್ನೂ ಓದಿ: ನಿನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ನನ್ನದಲ್ಲ.. ಶೀಲ‌‌ ಶಂಕಿಸಿ ಗಂಡನಿಂದಲೇ ಪತ್ನಿಯ ಹತ್ಯೆ

Last Updated :Jan 23, 2023, 1:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.