ಶ್ರೀಮತಿ ಮೀರಾತಾಯಿ ಕೊಪ್ಪಿಕರರಿಗೆ ಮಹಾತ್ಮಾ ಗಾಂಧಿ ಸೇವಾ ಪ್ರಶಸ್ತಿ ಪ್ರದಾನ

author img

By

Published : Oct 2, 2021, 5:36 PM IST

mahathma gandi seva award for meeratayi koppikara

ಯಾರಿಂದಲೂ ಏನನ್ನೂ ಅಪೇಕ್ಷಿಸದೇ ಸಮಾಜಕ್ಕೆ ಏನನ್ನಾದರೂ ಕೊಡಬೇಕು ಎಂಬುದು ಇವರ ಮೂಲ ಧ್ಯೇಯ ಆಗಿತ್ತು. ಸಾವಯವ ಕೃಷಿ ಮಾಡುತ್ತಿದ್ದ ಇವರು ತಾವೇ ಬೆಳೆದ ಬೆಳೆಗಳನ್ನು ಮಾರಿ ಅದರಲ್ಲಿ ಬಂದ ಆದಾಯದಿಂದ ಜೀವನ ಸಾಗಿಸುತ್ತಿದ್ದಾರೆ. “ವಾತ್ಸಲ್ಯ ಧಾಮ” ವಿನೋಬಾ ಬಾವೆಯವರ ತಾಯಿ ರುಕ್ಮಿಣಿ ಬಾವೆಯವರದ್ದು. ಮುಧೋಳದಲ್ಲಿ ಅವರು 2.5 ಎಕರೆ ಜಾಗವನ್ನು ಕೊಂಡು ಅದರಲ್ಲಿ ಆಶ್ರಮ ನಿರ್ಮಿಸಿದ್ದರು. ಆರಂಭದಲ್ಲಿ 20 ಜನರಿದ್ದರು. ಈಗ ಮೂರು ಜನರಿದ್ದಾರೆ..

ಬಾಗಲಕೋಟೆ : ಮಹಾತ್ಮ ಗಾಂಧೀಜಿ ಅವರ ಒಡನಾಡಿಯಾಗಿದ್ದ ಸ್ವಾತಂತ್ರ್ಯ ಹೋರಾಟಗಾರರಾದ ಮುಧೋಳ ಪಟ್ಟಣದ ಗಾಂಧಿವಾದಿ ಶ್ರೀಮತಿ ಮೀರಾತಾಯಿ ಕೊಪ್ಪಿಕರ ಅವರಿಗೆ ಮಹಾತ್ಮಾ ಗಾಂಧಿ ಸೇವಾ ಪ್ರಶಸ್ತಿ ದೂರಕಿರುವುದು ಮುಧೋಳ ಜನತೆಗೆ ಸಂತಸ ಮೂಡಿಸಿದೆ. ಇಂದು ಗಾಂಧಿ ಜಯಂತಿ ಹಿನ್ನೆಲೆ ಈ ಪ್ರಶಸ್ತಿ ದೂರಕಿದೆ.

ಮಹಾತ್ಮಾ ಗಾಂಧಿ ಸೇವಾ ಪ್ರಶಸ್ತಿ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನೀಡುವ ಮಹಾತ್ಮಾ ಗಾಂಧಿ ಸೇವಾ ಪ್ರಶಸ್ತಿ-ಕರ್ನಾಟಕ 2020-21ನೇ ಸಾಲಿನ ಪ್ರಶಸ್ತಿಯು ಮುಧೋಳ ತಾಲೂಕಿನ ಮೀರಾತಾಯಿ ಕೊಪ್ಪಿಕರ ಅವರಿಗೆ ಲಭಿಸಿದೆ.

ಕೋವಿಡ್-19ರ ಹಿನ್ನೆಲೆ ಕಳೆದ ವರ್ಷದ ಪ್ರಶಸ್ತಿಯನ್ನು ಸರ್ಕಾರ ಪ್ರಕಟಿಸಿರಲಿಲ್ಲ. ಈ ವರ್ಷ ಕೋವಿಡ್ ಪ್ರಕರಣ ಕಡಿಮೆಯಾಗುತ್ತಾ ಬಂದಿರುವ ಹಿನ್ನೆಲೆ, ಸರ್ಕಾರ ಸದರಿ ಪ್ರಶಸ್ತಿಗಳನ್ನು ಪ್ರದಾನ ಮಾಡಿದೆ.

ಶ್ರೀಮತಿ ಮೀರಾತಾಯಿ ಕೊಪ್ಪಿಕರರಿಗೆ ಮಹಾತ್ಮಾ ಗಾಂಧಿ ಸೇವಾ ಪ್ರಶಸ್ತಿ

ಶ್ರೀಮತಿ ಮೀರಾತಾಯಿ ಕೊಪ್ಪಿಕರರಿಗೆ ಪ್ರಶಸ್ತಿ : ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು ಕರ್ನಾಟಕ ಉನ್ನತ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಅಶೋಕ್ ಬಂಗಾರೆಪ್ಪಾ ಹಿಂಚಿಗೇರಿ ಇವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯನ್ನು ರಚಿಸಲಾಗಿತ್ತು. ಆಯ್ಕೆ ಸಮಿತಿಯು 2020ರ ಸಾಲಿಗೆ ಬಾಗಲಕೋಟೆ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀಮತಿ ಮೀರಾತಾಯಿ ಕೊಪ್ಪಿಕರ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುತ್ತದೆ. ಬೆಂಗಳೂರಿನ ಗಾಂಧಿ ಭವನದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ತಲಾ ಐದು ಲಕ್ಷ ರೂ. ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗಿದೆ.

ಕೊಪ್ಪಿಕರ ವಂಶದ ಕುಡಿ ಮೀರಾತಾಯಿ ಕೊಪ್ಪಿಕರ : ಮೀರಾತಾಯಿ ಕೊಪ್ಪಿಕರ, ಹುಬ್ಬಳ್ಳಿಯ ಅತ್ಯಂತ ಶ್ರೀಮಂತರಾಗಿದ್ದ ಕೊಪ್ಪಿಕರ ವಂಶದ ಕುಡಿ. ಸದ್ಯ ಇವರಿಗೆ 96 ವರ್ಷ. ಸದ್ಯ ಮುಧೋಳದಲ್ಲಿರುವ ವಾತ್ಸಲ್ಯ ಧಾಮದಲ್ಲಿದ್ದಾರೆ. ಪಕ್ಕಾ ಗಾಂಧಿವಾದಿಯಾಗಿದ್ದ ಇವರು ತಾವೇ ನೂಲು ನೇಯ್ದು ವಸ್ತ್ರವನ್ನು ಮಾಡಿಕೊಳ್ಳುತ್ತಿದ್ದರು. ಸದ್ಯ ವಯಸ್ಸಾದ ಹಿನ್ನೆಲೆ ನೇಯ್ಗೆ ಮಾಡುತ್ತಿಲ್ಲ.

ಗಾಂಧಿವಾದಿಯಾಗಿದ್ದ ಮೀರಾತಾಯಿ ಕೊಪ್ಪಿಕರ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಸಬರಮತಿ ಆಶ್ರಮದಲ್ಲಿ ಇದ್ದರು. ವಿನೋಭಾ ಬಾವೆಯವರ ಜೊತೆಗೂಡಿ ಭೂದಾನ ಚಳವಳಿಯಲ್ಲಿ ಪಾಲ್ಗೊಂಡು, ಕರ್ನಾಟಕದಿಂದ ಒಟ್ಟು 40 ಸಾವಿರ ಎಕರೆ ಭೂಮಿಯನ್ನು ದಾನ ಮಾಡಿಸುವಲ್ಲಿ ಯಶಸ್ವಿಯಾದವರು.

ಮೂಲ ಧ್ಯೇಯವೇನು? : ಯಾರಿಂದಲೂ ಏನನ್ನೂ ಅಪೇಕ್ಷಿಸದೇ ಸಮಾಜಕ್ಕೆ ಏನನ್ನಾದರೂ ಕೊಡಬೇಕು ಎಂಬುದು ಇವರ ಮೂಲ ಧ್ಯೇಯ ಆಗಿತ್ತು. ಸಾವಯವ ಕೃಷಿ ಮಾಡುತ್ತಿದ್ದ ಇವರು ತಾವೇ ಬೆಳೆದ ಬೆಳೆಗಳನ್ನು ಮಾರಿ ಅದರಲ್ಲಿ ಬಂದ ಆದಾಯದಿಂದ ಜೀವನ ಸಾಗಿಸುತ್ತಿದ್ದಾರೆ. “ವಾತ್ಸಲ್ಯ ಧಾಮ” ವಿನೋಬಾ ಬಾವೆಯವರ ತಾಯಿ ರುಕ್ಮಿಣಿ ಬಾವೆಯವರದ್ದು. ಮುಧೋಳದಲ್ಲಿ ಅವರು 2.5 ಎಕರೆ ಜಾಗವನ್ನು ಕೊಂಡು ಅದರಲ್ಲಿ ಆಶ್ರಮ ನಿರ್ಮಿಸಿದ್ದರು. ಆರಂಭದಲ್ಲಿ 20 ಜನರಿದ್ದರು. ಈಗ ಮೂರು ಜನರಿದ್ದಾರೆ.

ಇದನ್ನೂ ಓದಿ: ಮಹಾತ್ಮ ಗಾಂಧಿ ಜಯಂತಿ: ಶಿವಪುರದ ಸ್ವಾತಂತ್ರ್ಯ ಸಂಗ್ರಾಮ ಸ್ಮರಿಸಿದ ಸಚಿವ ನಾರಾಯಣ ಗೌಡ

ಶ್ರೀಮತಿ ಮೀರಾತಾಯಿ ಕೊಪ್ಪಿಕರ ಅವರನ್ನು ಸಂದರ್ಶಿಸಲು ಅತಿಥಿಗಳು ಆಗಾಗ್ಗೆ ಬರುತ್ತಿರುತ್ತಾರೆ. 2008ರಲ್ಲಿ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯನ್ನು ಇವರಿಗೆ ಕೊಡಲು ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೇ ಆಶ್ರಮಕ್ಕೆ ಆಗಮಿಸಿ, ಚೆಕ್ ಹಾಗೂ ಮೂರು ಗ್ರಾಂ ಬಂಗಾರದ ಪದಕವನ್ನು ಕೊಟ್ಟಿದ್ದರು. ಅವರು ನೀಡಿದ ಹಣ ಇನ್ನೂ ಬ್ಯಾಂಕ್‍ನಲ್ಲಿದ್ದು, ಅದನ್ನು ಜನತೆಯ ಕಲ್ಯಾಣಕ್ಕೆ ಬಳಸಲು ಹೇಳಿದ್ದಾರೆ. ಬಂಗಾರದ ಪದಕವನ್ನು ಬಡವರಿಗೆ ದಾನ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.