ವಿಮಾನ ನಿಲ್ದಾಣ, ಕಾರ್ಖಾನೆ ನಿರ್ಮಾಣಕ್ಕೆ ಒತ್ತಾಯ ಪೂರ್ವಕವಾಗಿ ರೈತರ ಜಮೀನು ವಶಪಡಿಸಿಕೊಳ್ಳಲ್ಲ: ಸಚಿವ ನಿರಾಣಿ

author img

By

Published : Sep 25, 2022, 8:39 PM IST

Minister Murugesha Nirani

ಸ್ವ ಇಚ್ಛೆಯಿಂದ ಭೂಮಿ ನೀಡಲು ಮುಂದೆ ಬರುತ್ತಾರೋ ಅವರ ಭೂಮಿಗೆ ಯೋಗ್ಯ ದರದಲ್ಲಿ ಪರಿಹಾರ ಧನ ನೀಡುತ್ತೇವೆ. ಯಾರು ಜಮೀನು ನೀಡುವುದಿಲ್ಲ ಎಂದು ಹೇಳುತ್ತಾರೋ ಅಂತವರ ಭೂಮಿಯನ್ನು ನಾವು ಒತ್ತಾಯ ಪೂರ್ವಕವಾಗಿ ವಶಪಡಿಸಿಕೊಳ್ಳುವುದಿಲ್ಲ ಎಂದು ಸಚಿವ ಮುರುಗೇಶ ನಿರಾಣಿ ಹೇಳಿದರು.

ಬಾಗಲಕೋಟೆ: ವಿಮಾನ ನಿಲ್ದಾಣ ಹಾಗೂ ಕಾರ್ಖಾನೆ ನಿರ್ಮಾಣಕ್ಕಾಗಿ 400 ಎಕರೆ ಸರ್ಕಾರಿ ಜಮೀನು ಇದೆ. ಇನ್ನುಳಿದ 1,600 ಎಕರೆ ಬಿತ್ತನೆಗೆ ಯೋಗ್ಯವಲ್ಲದ ಭೂಮಿಯನ್ನು ಮಾತ್ರ ನಾವು ಸ್ವಾಧೀನಪಡಿಸಿಕೊಳ್ಳುತ್ತೇವೆ ಎಂದು ಸಚಿವ ಮುರುಗೇಶ ನಿರಾಣಿ ತಿಳಿಸಿದ್ದಾರೆ.

ಯೋಗ್ಯ ದರದಲ್ಲಿ ಪರಿಹಾರ ಧನ: ಬೀಳಗಿ ಪಟ್ಟಣದಲ್ಲಿ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾರು ಸ್ವ ಇಚ್ಛೆಯಿಂದ ಭೂಮಿ ನೀಡಲು ಮುಂದೆ ಬರುತ್ತಾರೋ ಅವರ ಭೂಮಿಗೆ ಯೋಗ್ಯ ದರದಲ್ಲಿ ಪರಿಹಾರ ಧನ ನೀಡುತ್ತೇವೆ. ಸರ್ಕಾರದ ವತಿಯಿಂದ ಪ್ರತಿ ಕುಟುಂಬಗಳಿಗೆ 8 ಲಕ್ಷ ರೂಪಾಯಿ ವೆಚ್ಚದಲ್ಲಿ ಬೋರ್​ವೆಲ್ ಹಾಕಿಸಿ ಕೊಡುವ, ಮನೆಗಳನ್ನು ಕಟ್ಟಿಸಿ ಕೊಡುವ, ನಂತರ ಅವರು ಬೇರೆ ಕಡೆಗೆ ಭೂಮಿ ಖರೀದಿಸಲು ಸ್ಟಾಂಪ್ ಡ್ಯೂಟಿ ಎಕ್ಸಂಷನ್ ಹಾಗೂ ಭೂಮಿ ಕಳೆದುಕೊಂಡ ರೈತರ ಕುಟುಂಬದಲ್ಲಿ ಅವರ ಶಿಕ್ಷಣ ಅನುಗುಣವಾಗಿ ಉದ್ಯೋಗ ನೀಡುವಂತಹ ಕೆಲಸವನ್ನು ಮಾಡುತ್ತೇವೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವರಾದ ಮುರುಗೇಶ್ ನಿರಾಣಿ ತಿಳಿಸಿದರು.

ಮನವಿ ಮಾಡಿಕೊಂಡ ಸಚಿವ ನಿರಾಣಿ: ವಿಮಾನ ನಿಲ್ದಾಣ ಹಾಗೂ ಕಾರ್ಖಾನೆ ಸ್ಥಾಪನೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಮಾತನಾಡಿದ ಅವರು, ಯಾರು ಜಮೀನು ನೀಡುವುದಿಲ್ಲ ಎಂದು ಹೇಳುತ್ತಾರೋ ಅಂತವರ ಭೂಮಿಯನ್ನು ನಾವು ಒತ್ತಾಯ ಪೂರ್ವಕವಾಗಿ ವಶಪಡಿಸಿಕೊಳ್ಳುವುದಿಲ್ಲ. ಯಾವುದೇ ಭಾಗದ ಅಭಿವೃದ್ಧಿಯಾಗಬೇಕಾದರೆ ಅಲ್ಲಿ ಶಿಕ್ಷಣ ವ್ಯವಸ್ಥೆ, ಕೈಗಾರಿಕೆಗಳು ಹಾಗೂ ವಿಮಾನ ನಿಲ್ದಾಣಗಳು ಬಂದಾಗ ಮಾತ್ರ ಆ ಪ್ರದೇಶಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ರೈತ ಕುಟುಂಬ ಹಾಗೂ ಹೋರಾಟ ನಿರತರಿಗೆ ಸಚಿವರು ವಿನಂತಿ ಮಾಡಿಕೊಂಡರು.

ಸಚಿವ ಮುರುಗೇಶ ನಿರಾಣಿ

ವಿಮಾನ ನಿಲ್ದಾಣ ನಿರ್ಮಾಣದಿಂದ ಹೆಚ್ಚಿನ ಅಭಿವೃದ್ಧಿ: ಬಾದಾಮಿ, ಐಹೊಳೆ ಹಾಗೂ ಪಟ್ಟದಕಲ್ಲು ಪ್ರವಾಸೋದ್ಯಮ ದೃಷ್ಟಿಯಿಂದ ಚೆನ್ನಾಗಿ ಇದೆ. ಇಲ್ಲಿಗೆ ದೇಶ ವಿದೇಶಗಳಿಂದ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದ್ದರಿಂದ ಆ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುವುದರಿಂದ ಹೆಚ್ಚಿನ ಅಭಿವೃದ್ಧಿ ಆಗಲಿದೆ. ಹೀಗಾಗಿ ಎಲ್ಲರೂ ಅದಕ್ಕೆ ಸಹಕಾರ ನೀಡಬೇಕು ಎಂದು ಸಚಿವರು ವಿನಂತಿ ಮಾಡಿಕೊಂಡರು.

ಇದನ್ನೂ ಓದಿ: ಕಾಂಗ್ರೆಸ್​​ ಸುಮ್ಮನೆ ಆರೋಪಗಳನ್ನು ಮಾಡಿ ವಿಪಕ್ಷ ಸ್ಥಾನವನ್ನು ಕಳೆದುಕೊಳ್ಳುತ್ತದೆ: ಮುರುಗೇಶ್​ ನಿರಾಣಿ

ಆಲಮಟ್ಟಿ ಜಲಾಶಯ ನಿರ್ಮಾಣಕ್ಕಾಗಿ 154 ಗ್ರಾಮಗಳು ಹಾಗೂ ಬಾಗಲಕೋಟೆ ಪಟ್ಟಣವನ್ನು ಕಳೆದುಕೊಳ್ಳಬೇಕಾಯಿತು. ಇದರಿಂದ ಈಗ ಕೋಟ್ಯಂತರ ಜನರಿಗೆ ಅನುಕೂಲವಾಗಿದೆ. ಈಗಾಗಲೇ ಕಾಲುವೆ ರಸ್ತೆಗಳು ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳಿಗೆ ರೈತರು ಭೂಮಿಯನ್ನು ನೀಡುವುದರ ಮೂಲಕ ನಮ್ಮ ಜಿಲ್ಲೆಯು ಅಭಿವೃದ್ಧಿ ಹೊಂದಿದೆ. ರೈತರ ತ್ಯಾಗದಿಂದ ಸರ್ಕಾರಿ ಯೋಜನೆಗಳು ನಮಗೆ ಬಂದಿವೆ. ಆಲಮಟ್ಟಿ ಜಲಾಶಯ ಅಷ್ಟೇ ಅಲ್ಲ ನಾರಾಯಣಪುರ ಜಲಾಶಯ ಹಾಗೂ ಬೇರೆ ಬೇರೆ ವಿಮಾನ ನಿಲ್ದಾಣಗಳಿಗೆ ರೈತರ ತ್ಯಾಗದ ಮೂಲಕ ಅವು ನಿರ್ಮಾಣ ಆಗಿ ಕೋಟ್ಯಂತರ ಜನರಿಗೆ ಅನುಕೂಲ ಆಗಿದೆ. ಅದಕ್ಕಾಗಿ ದಯವಿಟ್ಟು ಸಹಕಾರ ನೀಡಿ ಎಂದು ಮನವಿ ಮಾಡಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.