ಬಾಲಕನ ಸ್ನೇಹ ಬೆಳೆಸಿ ಕೊಲೆ ಬೆದರಿಕೆ.. ಬಾಗಲಕೋಟೆಯಲ್ಲಿ ಬ್ಲ್ಯಾಕ್​ಮೇಲ್​ ಮಾಡಿ 13 ಲಕ್ಷ ರೂ. ದೋಚಿದ್ದ ಖದೀಮ ಅರೆಸ್ಟ್​

author img

By

Published : Nov 25, 2021, 3:32 PM IST

ilkal-young-boy-arrested-for-threating-murder

ಕೊಲೆ ಬೆದರಿಕೆ ಹಾಕಿ 13 ಲಕ್ಷ ರೂ. ದೋಚಿದ್ದ 18 ವರ್ಷದ ಆರೋಪಿಯನ್ನು ಬಂಧಿಸುವಲ್ಲಿ ಇಲಕಲ್ಲ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗೆ ಹೆದರಿ ಹಣ ಕೊಟ್ಟು ಕೊಟ್ಟು ಸಾಕಾಗಿದ್ದ, ಕುಟುಂಬದ ದೂರಿನ ಮೇಲೆ ಕಾರ್ಯಾಚರಣೆ ನಡೆಸಿ ಖದೀಮನನ್ನು ಬಂಧಿಸಲಾಗಿದೆ.

ಬಾಗಲಕೋಟೆ: ಕುಟುಂಬವೊಂದಕ್ಕೆ ಬ್ಲ್ಯಾಕ್ ಮೇಲ್ ಮಾಡಿ 13 ಲಕ್ಷ ರೂ. ದೋಚಿದ್ದ ಖತರ್ನಾಕ್ ಕಿಲಾಡಿ ಯುವಕನನ್ನು ಬಂಧಿಸುವಲ್ಲಿ ಇಲಕಲ್ಲ ‌ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. 18 ವರ್ಷದ ಯುವಕ ಸುಲೇಮಾನ್ ಮೇಕಮುಂಗಲಿ ಬಂಧಿತ ಆರೋಪಿ. ಈತ ಇಲಕಲ್ಲ ನಗರದ ಸೀರೆ ವ್ಯಾಪಾರಿ ಸುಜಿತ್​ ಎಂಬುವರ ಮಗನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಹಣ ವಸೂಲಿ ಮಾಡಿದ್ದ. ಸದ್ಯ ಆರೋಪಿ ಪೊಲೀಸ್​ ವಶದಲ್ಲಿದ್ದಾನೆ.

ಪ್ರಕರಣ ಹಿನ್ನೆಲೆ..

ಇಲಕಲ್​ ನಗರದ ಸುಜಿತ್‌ ಎಂಬ ಸೀರೆ ವ್ಯಾಪಾರಸ್ಥರ 14 ವಯಸ್ಸಿನ ಮಗನ ಜೊತೆ ಸುಲೇಮಾನ್​ ಖಾಜೆಸಾಬ ಮೇಕಮುಂಗಲಿ ಸ್ನೇಹ ಬೆಳೆಸಿಕೊಂಡಿದ್ದ. ಚಿಕ್ಕ ಹುಡುಗನ ಸ್ನೇಹದಿಂದ ಬಳಿಕ ಆತನ ಮನೆಯವರೊಂದಿಗೂ ಸ್ನೇಹ ಬೆಳೆಸಿಕೊಂಡ. ನಂತರ ತನಗೆ ಹಣ ನೀಡದಿದ್ದರೆ ನಿಮ್ಮ ಮಗನನ್ನು ಕೊಲೆ ಮಾಡುವುದಾಗಿ ಹೆದರಿಸಿದ್ದ. ಸುಜಿತ್‌ ಅವರ ಧರ್ಮಪತ್ನಿಯಿಂದ 5 ಲಕ್ಷ ರೂ. ನಗದು, 5 ಲಕ್ಷ 25 ಸಾವಿರ ಬೆಲೆಬಾಳುವ 105 ಗ್ರಾಂ ಬಂಗಾರ ಮತ್ತು ಸುಜಿತ್‌ ಅವರಿಂದ 3 ಲಕ್ಷ ರೂಪಾಯಿಗಳನ್ನು ಸುಲೇಮಾನ್‌ ಎಗರಿಸಿದ್ದಾನೆ. ಅಲ್ಲದೆ, ಇದ್ದ ದುಡ್ಡನ್ನೆಲ್ಲ ಖರ್ಚು ಮಾಡಿ ಮತ್ತೆ ಹಣಕ್ಕಾಗಿ ಸುಜಿತ್‌ ಕುಟುಂಬವನ್ನು ಪೀಡಿಸಿದ್ದ.

ಇದರಿಂದ ಬೇಸತ್ತ ಸುಜಿತ್​ ಕುಟುಂಬಸ್ಥರು ಪೊಲೀಸ್‌ ಕಂಪ್ಲೆಂಟ್‌ ಕೊಡುವುದಾಗಿ ಆರೋಪಿಗೆ ಹೇಳಿದ್ದರು. ಪೊಲೀಸರಿಗೆ ತಿಳಿಸಿದರೆ ಎಲ್ಲಿ ತನ್ನ ಕಳ್ಳಾಟ ಬಯಲಾಗುತ್ತದೆಯೋ ಎಂದು ರಾತ್ರೋರಾತ್ರಿ ಸುಜಿತ್‌ ಮನೆ ಮುಂದಿದ್ದ ಎರಡು ವಾಹನಗಳನ್ನು ಪೊಟ್ರೋಲ್‌ ಹಾಕಿ ಸುಟ್ಟಿದ್ದಲ್ಲದೇ ಅವರ ಮನೆಯ ಬಾಗಿಲಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚುವ ಯತ್ನ ಮಾಡಿದ್ದ.

ಈ ಹಿನ್ನೆಲೆ ಸುಜಿತ್‌ ಕುಟುಂಬ ಪೊಲೀಸರ ಮೊರೆ ಹೋಗಿತ್ತು. ಹುನಗುಂದ ಸಿ.ಪಿ.ಐ. ಹೊಸಕೇರಪ್ಪ ತನಿಖೆ ನಡೆಸಿ ಬೈಕ್‌ ಸುಟ್ಟವರನ್ನು ಪತ್ತೆಹಚ್ಚಿ ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದ್ದರು. ಹಿಂದೆ ಕುಟುಂಬಕ್ಕೆ ಹೆದರಿಸಿ ಬೆದರಿಸಿ ಹಣ ದೋಚಿರುವುದಾಗಿ ಸುಲೇಮಾನ್​ ಮತ್ತು ಅವನ ಸ್ನೇಹಿತ ಗುರುರಾಜ ಹೂಗಾರ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಇಲಕಲ್ಲ ನಗರ ಪೊಲೀಸ್‌ ಠಾಣೆಯಲ್ಲಿ ಆರೋಪಿ ಸುಲೇಮಾನ್​ ವಿರುದ್ಧ ಐಪಿಸಿ ಸೆಕ್ಷನ್‌ 384 ಮತ್ತು 386 ಪ್ರಕರಣ ದಾಖಲಿಸಿ ಕಂಬಿ ಎಣೆಸುವಂತೆ ಮಾಡಿದ್ದಾರೆ. ಬಂಧಿತರಿಂದ 5000 ನಗದು, 105 ಗ್ರಾಂ ಬಂಗಾರ ವಶಪಡಿಸಿಕೊಂಡಿದ್ದಾರೆ.

ಎಸ್.ಪಿ. ಲೋಕೇಶ ಜಗಲಾಸರ ಮಾರ್ಗದರ್ಶನದಲ್ಲಿ ನಡೆದ ಈ ಪ್ರಕರಣದ ತನಿಖೆ ಡಿ.ವೈ,ಎಸ್.ಪಿ. ಚಂದ್ರಕಾಂತ ನಂದರಡ್ಡಿ, ಸಿ.ಪಿ.ಐ. ಹೊಸಕೇರಪ್ಪ, ಇಲಕಲ್ಲ ಪೊಲೀಸ ಸಿಬ್ಬಂದಿಗಳಾದ ಆನಂದ ಗೋಲಪ್ಪನವರ, ಗಣೇಶ ಪವಾರ, ರಜಾಕ ಗುಡದಾರಿ, ಮಹಾಂತಗೌಡ ಗೌಡರ, ಆರ್.ಎಸ್.ಡೋಣಿ, ಬಸವರಾಜ ಭಾವಿಕಟ್ಟಿ, ವಿ.ಡಿ.ಗೌಡರ ಅವರಿಗೆ ಎಸ್.ಪಿ. ಲೋಕೇಶ ಜಗಲಾಸರ ಅವರು ಸೂಕ್ತ ಬಹುಮಾನವನ್ನು ಘೋಷಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.