2007ರ ವಿಶ್ವಕಪ್​ ವಿಕ್ರಮಕ್ಕೆ ಇಂದಿಗೆ 15 ವಸಂತ.. ಪಾಸಾಗುತ್ತಾ ಮೆಲ್ಬೋರ್ನ್​ ಮಿಷನ್​?

author img

By

Published : Sep 24, 2022, 3:48 PM IST

2007-t20-wc-win

2007ರ ವಿಶ್ವಕಪ್​ ವಿಕ್ರಮಕ್ಕೆ ಇಂದಿಗೆ 15 ವಸಂತ. ಭಾರತ ಅಂದು ಪಾಕಿಸ್ತಾನವನ್ನು ಸೋಲಿಸಿ ವಿಜಯ ಕಹಳೆ ಮೊಳಗಿಸಿದ ದಿನವನ್ನು ಇತ್ತೀಚೆಗಷ್ಟೇ ಕ್ರಿಕೆಟ್​ಗೆ ಗುಡ್​ಬೈ ಹೇಳಿದ ಕನ್ನಡಿಗ ರಾಬಿನ್​ ಉತ್ತಪ್ಪ ನೆನಪಿಸಿಕೊಂಡರು.

ಅದು 2007ರ ಚೊಚ್ಚಲ ಟಿ20 ವಿಶ್ವಕಪ್​. ಮಾಜಿ ನಾಯಕ ಮಹೇಂದ್ರ ಸಿಂಗ್​ ನೇತೃತ್ವದ ಭಾರತ ಕ್ರಿಕೆಟ್​ ತಂಡ ಇತಿಹಾಸ ಬರೆದ ದಿನ. ಫೈನಲ್​ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿ 24 ವರ್ಷಗಳ ಬಳಿಕ ವಿಶ್ವಕಪ್​ ಎತ್ತಿ ಹಿಡಿದು ದೇಶವನ್ನೇ ಸಂತಸದ ಕಡಲಲ್ಲಿ ತೇಲಿಸಿದ ದಿನ.

ವಿಶ್ವಕಪ್​ ವಿಜಯದ ಕೊನೆಯ ಬೌಲ್​ನ ಝಲಕ್​
ವಿಶ್ವಕಪ್​ ವಿಜಯದ ಕೊನೆಯ ಬೌಲ್​ನ ಝಲಕ್​

ಸೆಪ್ಟೆಂಬರ್​ 24, ಭಾರತ ಕ್ರಿಕೆಟ್​ ಅಭಿಮಾನಿಗಳ ಮನದಲ್ಲಿ ಎಂದಿಗೂ ಮರೆಯಲಾಗದ ದಿನವಾಗಿದೆ. ಕಾರಣ ದಕ್ಷಿಣ ಆಫ್ರಿಕಾದಲ್ಲಿ ಭಾರತ ತಂಡ ವಿಜಯ ಕಹಳೆ ಮೊಳಗಿಸಿ ಟಿ20 ವಿಶ್ವಕಪ್​ ಎದೆಗೇರಿಸಿಕೊಂಡ ದಿನಕ್ಕೆ ಇಂದಿಗೆ 15 ವರ್ಷ.

ಗೆಲುವಿನ ಸಂಭ್ರಮದಲ್ಲಿ ಎಂಎಸ್​ ದೋನಿ
ಗೆಲುವಿನ ಸಂಭ್ರಮದಲ್ಲಿ ಎಂಎಸ್​ ದೋನಿ

ಟಿ20 ಎಂಬ ಹೊಸ ಮಾದರಿಯ ಹೊಡಿಬಡಿ ಕ್ರಿಕೆಟ್​ ಅನ್ನು ಅಂತಾರಾಷ್ಟ್ರೀಯ ಕ್ರಿಕೆಟ್​ ಸಮಿತಿ(ಐಸಿಸಿ) ಪರಿಚಯಿಸಿತ್ತು. ಅಂದು ಭಾರತ ತಂಡದ ಆಧಾರ ಸ್ಥಂಭಗಳಾದ ಸಚಿನ್​ ತೆಂಡೂಲ್ಕರ್​, ಸೌರವ್​ ಗಂಗೂಲಿ, ರಾಹುಲ್​ ದ್ರಾವಿಡ್​ರನ್ನು ಬದಿಗಿಟ್ಟು ಯುವಕರನ್ನೇ ಆಯ್ದುಕೊಂಡ ಮಹೇಂದ್ರ ಸಿಂಗ್​ ದೋನಿ ಇತಿಹಾಸ ನಿರ್ಮಿಸುತ್ತಾರೆ ಎಂಬ ನಂಬಿಕೆ ದೇಶಕ್ಯಾಕೆ ಅವರಿಗೇ ಇರಲಿಲ್ಲವೇನೋ.

ಬಲಾಢ್ಯ ತಂಡಗಳ ಮೇಲೆ ಅನನುಭವಿಗಳ ಸವಾರಿ: ಅನನುಭವಿ ತಂಡದೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಿದ ದೋನಿ ಪಡೆ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ನ್ಯೂಜಿಲ್ಯಾಂಡ್​ನಂತಹ ಬಲಾಢ್ಯ ತಂಡಗಳನ್ನು ಸದೆಬಡಿದು ಫೈನಲ್​ಗೆ ಪ್ರವೇಶಿಸಿತ್ತು. ಅಂದು ಭಾರತ ಮತ್ತು ಪಾಕಿಸ್ತಾನ ಮಧ್ಯೆ ನಡೆದ ಅಂತಿಮ ಪಂದ್ಯವನ್ನು ಇಡೀ ಜಗತ್ತೇ ತುದಿಗಾಲ ಮೇಲೆ ನಿಂತು ವೀಕ್ಷಿಸಿತ್ತು.

ವಿಶ್ವಕಪ್ ಜೊತೆಗೆ ಗೆಲುವಿನ ರೂವಾರಿ, ಮಾಜಿ ಕ್ರಿಕೆಟಿಗ ಎಂಎಸ್​ ದೋನಿ
ವಿಶ್ವಕಪ್ ಜೊತೆಗೆ ಗೆಲುವಿನ ರೂವಾರಿ, ಮಾಜಿ ಕ್ರಿಕೆಟಿಗ ಎಂಎಸ್​ ದೋನಿ

ಸಾಂಪ್ರದಾಯಿಕ ತಂಡಗಳೆರಡು ಪ್ರಶಸ್ತಿಗಾಗಿ ಸೆಣಸಾಡುತ್ತಿರುವುದು ಕ್ರಿಕೆಟ್​ನ ಕೌತುಕವನ್ನು ಇಮ್ಮಡಿಗೊಳಿಸಿತ್ತು. ಭಾರತ ಮೊದಲು ಬ್ಯಾಟ್​ ಮಾಡಿ 5 ವಿಕೆಟ್​ ಕಳೆದುಕೊಂಡ 157 ರನ್​ ಗಳಿಸಿತ್ತು. ಮಾಜಿ ಕ್ರಿಕೆಟಿಗ ಗೌತಮ್​ ಗಂಭೀರ್​ 75 ರನ್​ ಬಾರಿಸಿದರೆ, ರೋಹಿತ್​ ಶರ್ಮಾ 30 ರನ್​ ಗಳಿಸಿ ತಂಡದ ಮೊತ್ತವನ್ನು 150 ಕ್ಕೆ ಹೆಚ್ಚಿಸಿದ್ದರು.

ಹೊಸ ಮಾದರಿಯ ಕ್ರಿಕೆಟ್​ನ ಚೊಚ್ಚಲ ಪ್ರಶಸ್ತಿ ಗೆಲ್ಲುವ ಗುರಿಯಲ್ಲಿದ್ದ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ ಭಾರತ, ಪಾಕಿಸ್ತಾನದ ಮಿಸ್ಬಾ ಉಲ್​ ಹಕ್​ರ ಹೋರಾಟವನ್ನು ಜೋಗಿಂದರ್​ ಶರ್ಮಾ ಎಂಬ ಹೊಸ ಹುಡುಗ ಹತ್ತಿಕ್ಕಿ ಔಟ್​ ಮಾಡುವ ಮೂಲಕ ದೇಶದ ಧ್ವಜವನ್ನು ಹಾರಿಸಿದ್ದರು. ಪಾಕಿಸ್ತಾನ ನಿಗದಿತ 20 ಓವರ್​ಗಳಲ್ಲಿ 152 ರನ್​ ಗಳಿಸಿ 5 ರನ್​ಗಳಿಂದ ಸೋಲು ಕಂಡು ರನ್ನರ್​ ಅಪ್​ ಆಗಿತ್ತು.

1983 ರ ವಿಶ್ವಕಪ್​ ವಿಕ್ರಮದ ಬಳಿಕ ಅಂದರೆ 24 ವಸಂತಗಳ ತರುವಾಯ ದೇಶ ಮತ್ತೊಮ್ಮೆ ವಿಶ್ವ ಕ್ರಿಕೆಟ್​ನ ಅಧಿಪತಿಯಾಗಿತ್ತು. ಅನನುಭವಿ ತಂಡವನ್ನು ಮುನ್ನಡೆಸಿ ದೇಶ ಮೆಚ್ಚುವಂತಹ ಕೆಲಸ ಮಾಡಿದ್ದ ದೋನಿ ಕ್ರಿಕೆಟ್​ ಇತಿಹಾಸ ಕಣ್ಮಣಿಯಾಗಿದ್ದರು.

ಬೌಲ್​ ಔಟ್​ ನೆನಪಿಸಿಕೊಂಡ ರಾಬಿನ್​: ಅಂದಿನ ವಿಕ್ರಮದ ಭಾಗವಾಗಿದ್ದ ಇತ್ತೀಚೆಗಷ್ಟೇ ಕ್ರಿಕೆಟ್​ ವಿದಾಯ ಹೇಳಿದ ಕನ್ನಡಿಗ ಉತ್ತಪ್ಪ ಅವರು ನೆನಪಿಸಿಕೊಂಡಿದ್ದಾರೆ. ಗುಂಪು ಹಂತದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧದ ಗೆಲ್ಲಲೇಬೇಕಾದ ಪಂದ್ಯದಲ್ಲಿ ಉಭಯ ತಂಡಗಳು ರನ್​ ಸಮಬಲ ಸಾಧಿಸಿದ್ದವು. ಪಂದ್ಯ ಡ್ರಾ ಆದಾಗ ಸೂಪರ್​ 4 ಹಂತಕ್ಕೆ ಕ್ವಾಲಿಫೈ ಆಗಲು ಬೌಲ್​ ಔಟ್​ ನಡೆಸಲಾಯಿತು.

ಇದರಲ್ಲಿ ರಾಬಿನ್​ ಉತ್ತಪ್ಪ, ವೀರೇಂದ್ರ ಸೆಹ್ವಾಗ್​, ಹರ್ಭಜನ್​ ಸಿಂಗ್​ ಅವರು ಸತತವಾಗಿ ವಿಕೆಟ್​ ಕೆಡವಿದರು. ಪಾಕಿಸ್ತಾನದ ಯಾವೊಬ್ಬ ಬೌಲರ್​ ಒಂದು ವಿಕೆಟ್​ ಕೂಡ ಕೆಡವದೇ 3-0 ಅಂತರದಲ್ಲಿ ಭಾರತ ಪಂದ್ಯವನ್ನು ಗೆದ್ದಿತ್ತು.

"ಇದರಲ್ಲಿ ನಾನು ವಿಕೆಟ್​ ಬೌಲ್​ ಔಟ್​ ಮಾಡಿ ಕ್ಯಾಪ್​ ತೆಗೆದು ನಾಲ್ಕು ದಿಕ್ಕಿಗೂ ಶಿರಬಾಗಿ ವಂದಿಸಿದ್ದು ಮರೆಯಲಾಗದ ಕ್ಷಣ. ಅದನ್ನು ನಾನು ಇಂದಿಗೂ ಅಚ್ಚರಿಯ ಕಣ್ಣಿಂದಲೇ ನೋಡುತ್ತೇನೆ. ಆ ವಿಕ್ರಮಕ್ಕೆ 15 ವರ್ಷ ಸಂದಿವೆ. ಇದು ಕೆಲ ದಿನಗಳ ಹಿಂದಷ್ಟೇ ನಡೆದಿದೆಯೇನೋ ಎಂಬಂತಿದೆ" ಎಂದು ರಾಬಿನ್​ ಉತ್ತಪ್ಪ ನೆನಪಿಸಿಕೊಂಡರು.

"ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್​ ನಡೆಯಲಿದೆ. ಭಾರತ ತಂಡ ಮತ್ತೊಮ್ಮೆ ಟ್ರೋಫಿಯನ್ನು ಗೆದ್ದು ಇತಿಹಾಸ ಮರುಕಳಿಸುವಂತೆ ಮಾಡಲಿ. ತಂಡದ ಮಿಷನ್​ ಮೆಲ್ಬೋರ್ನ್​ ಯಶಸ್ವಿಯಾಗಲಿ" ಎಂದು ರಾಬಿನ್​ ಹೇಳಿದರು.

ಓದಿ: ಭಾರತ-ಆಸ್ಟ್ರೇಲಿಯಾ ಟಿ20 ನಾಳೆ: ಇನ್ನೂ ಸಜ್ಜಾಗದ ಸ್ಟೇಡಿಯಂ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.