ಮತ್ತೊಂದು ವೈಫಲ್ಯದೊಂದಿಗೆ ಕೊಹ್ಲಿ ನಾಯಕತ್ವ ಅಂತ್ಯ.. ಆರ್​ಸಿಬಿಯ ಮುಂದಿದೆ ಬಲಿಷ್ಠ ತಂಡ ಕಟ್ಟುವ ಸವಾಲು..

author img

By

Published : Oct 12, 2021, 3:42 PM IST

IPL: Time to restructure RCB as captain Kohli fails

ಕೊಹ್ಲಿ ದುರಾದೃಷ್ಟವೂ ಕೇವಲ ಐಪಿಎಲ್​ಗೆ ಮಾತ್ರ ಸೀಮಿತವಾಗಿಲ್ಲ. ಅವರ ನೇತೃತ್ವದಲ್ಲಿ ಭಾರತ ತಂಡ 2017ರ ಚಾಂಪಿಯನ್​ ಟ್ರೋಫಿ ಫೈನಲ್ ಮತ್ತು 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ಮತ್ತು 2021ರ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ ಫೈನಲ್​ನಲ್ಲೂ ಸೋಲು ಕಂಡಿದೆ. ಭಾರತ ತಂಡ ತನ್ನ ಕೊನೆಯ ಐಸಿಸಿ ಟ್ರೋಫಿ ಗೆದ್ದಿರೋದು 2013ರಲ್ಲಿ. ಅಂದು ಭಾರತ ತಂಡದ ನೇತೃತ್ವ ವಹಿಸಿದ್ದವರು ಎಂ ಎಸ್​ ಧೋನಿ..

ನವದೆಹಲಿ : ವಿರಾಟ್​ ಕೊಹ್ಲಿ ವಿಶ್ವ ಕ್ರಿಕೆಟ್​ನಲ್ಲಿ ಒಬ್ಬ ಬ್ಯಾಟರ್​ ಆಗಿ ಸಾಕಷ್ಟು ಮೈಲುಗಲ್ಲುಗಳನ್ನು ನಿರ್ಮಿಸಿದ್ದಾರೆ. ಕ್ರಿಕೆಟ್​ ತಜ್ಞರು ಮತ್ತು ಕಾಮೆಂಟೇಟರ್ಸ್ ಕೊಹ್ಲಿ ಪ್ರತಿಯೊಂದು ಎಸೆತವನ್ನು ಎದುರಿಸುವಾಗ ಮತ್ತು ವಿವಿಧ ಹೊಡೆತಗಳನ್ನು ಪ್ರಯೋಗಿಸುವಾಗ ಸ್ಟಾರ್ ಬ್ಯಾಟರ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆದರೆ, ನಾಯಕತ್ವದ ವಿಚಾರ ಬಂದಾಗ ಕೊಹ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ. ಅದರಲ್ಲೂ ಮೇಜರ್​ ಟೂರ್ನಮೆಂಟ್​ಗಳಲ್ಲಿ ಕೊಹ್ಲಿ ನಾಯಕತ್ವ ಭಾರಿ ವೈಫಲ್ಯ ಅನುಭವಿಸಿದೆ. ವಿರಾಟ್​ ಕೊಹ್ಲಿ ದೊಡ್ಡ ಟೂರ್ನಮೆಂಟ್​ ಅಥವಾ ಐಪಿಎಲ್​ನಲ್ಲಾಗಲಿ, ಯಾವಾಗಲೂ ತಮ್ಮ ನಿರ್ಧಾರಗಳಿಂದಲೇ ಟೀಕೆಗೆ ಒಳಗಾಗಿದ್ದಾರೆ.

ಬ್ಯಾಟರ್​ ಆಗಿ ಅದ್ವಿತೀಯ ಸಾಧನೆ ಮಾಡಿರುವ ಅವರು, ನಾಯಕತ್ವದ ಕಲೆಯನ್ನು ಕರಗತ ಮಾಡಿಕೊಳ್ಳುವಲ್ಲಿ ಎಂದೂ ಸಫಲರಾಗಿಲ್ಲ. ಅದರಲ್ಲೂ ಸೀಮಿತ ಓವರ್​ಗಳಲ್ಲಿ ಅವರ ನಾಯಕತ್ವ ತುಂಬಾ ಹಿನ್ನಡೆ ಅನುಭವಿಸಿದೆ. ಇದಕ್ಕೆ ಸಾಕ್ಷಿ ಎಂದರೆ ಅವರ ನಾಯಕತ್ವದಲ್ಲಿ ಭಾರತ ಒಂದೂ ಮೇಜರ್ ಟ್ರೋಫಿ ಎತ್ತಿ ಹಿಡಿದಿಲ್ಲ, ಐಪಿಎಲ್​ನಲ್ಲೂ ಕೂಡ.

ಸೋಮವಾರ ನಡೆದ 14ನೇ ಆವೃತ್ತಿಯ ಐಪಿಎಲ್​ನಲ್ಲಿ ಆರ್​ಸಿಬಿ ಪರ ಕೊಹ್ಲಿ ನಾಯಕನಾಗಿ ಕೊನೆಯ ಪಂದ್ಯವನ್ನಾಡಿದರು. 2021ರ ಲೀಗ್​ನ ಎಲಿಮಿನೇಟರ್​ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧ 4 ವಿಕೆಟ್​ಗಳ ರೋಚಕ ಸೋಲು ಕಂಡರು. ಈ ಮೂಲಕ ಕೊಹ್ಲಿ ನಾಯಕತ್ವ ಕೊನೆಗೂ ಸೋಲಿನೊಂದಿಗೆ ಅಂತ್ಯವಾಯಿತು. ಅಲ್ಲದೆ ಒಂದೂ ಟ್ರೋಫಿಯಿಲ್ಲದೇ ನಾಯಕನಾಗಿ 9ನೇ ಆವೃತ್ತಿ ಮುಗಿಸಿದರು.

ವಿರಾಟ್ ಕೊಹ್ಲಿ ನಿನ್ನೆಯ ಪಂದ್ಯದಲ್ಲಿ ಪಂದ್ಯ ಸೋಲುವ ಮುನ್ನವೇ ಟೀಕೆಗೆ ಗುರಿಯಾಗಿದ್ದರು. ಯಾಕೆಂದರೆ, ಟಾಸ್​ ಗೆದ್ದು ಬಲಿಷ್ಠ ಬೌಲಿಂಗ್ ಬಳಗ ಹೊಂದಿದ್ದ ಕೆಕೆಆರ್​ ವಿರುದ್ಧ ಬ್ಯಾಟಿಂಗ್ ಮಾಡುವ ತಪ್ಪು ನಿರ್ಧಾರ ತೆಗೆದುಕೊಂಡರು. ಶಾರ್ಜಾದಲ್ಲಿ ಬ್ಯಾಟಿಂಗ್ ಮಾಡುವುದಕ್ಕೆ ಕಷ್ಟ ಎಂದು ತಿಳಿದರೂ ಕೊಹ್ಲಿಯ ಈ ನಿರ್ಧಾರ ಅವರ ನಾಯಕತ್ವದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.

ಕೊನೆಗೆ ಆರ್​ಸಿಬಿ 20 ಓವರ್​ಗಳಲ್ಲಿ 138 ರನ್​ಗಳಿಸಿತ್ತು. ಈ ಮೊತ್ತವನ್ನು ಕೆಕೆಆರ್​ 6 ವಿಕೆಟ್​ ಕಳೆದುಕೊಂಡು ಯಾವುದೇ ಒತ್ತಡವಿಲ್ಲದೆ ಇನ್ನು 2 ಎಸೆತಗಳಿರುವಂತೆ ಗೆದ್ದು ಬೀಗಿತು. ಇದೀಗ ಕೊಹ್ಲಿ ನಾಯಕತ್ವ ಅಂತ್ಯವಾಗಿದೆ. ಅವರೇ ಕೇವಲ ಬ್ಯಾಟರ್​ ಆಗಿ ಆಡುತ್ತೇನೆಂದು ಈಗಾಗಲೇ ಘೋಷಿಸಿದ್ದಾರೆ. ಆದ್ದರಿಂದ ಮುಂದಿನ ಮೆಗಾ ಹರಾಜಿನಲ್ಲಿ ಉತ್ತಮ ಆಟಗಾರರನ್ನು ಖರೀದಿಸುವುದರ ಜೊತೆಗೆ ಒಬ್ಬ ಚಾಣಾಕ್ಷ್ಯ ನಾಯಕನ ಆಯ್ಕೆ ಮಾಡಿ, ಮುಂದಿನ ಮೂರು ಆವೃತ್ತಿಗಳಿಗೆ ಸಂಪೂರ್ಣ ಬಲಿಷ್ಠ ತಂಡ ಕಟ್ಟುವುದು ಫ್ರಾಂಚೈಸಿಯ ಮುಂದಿರುವ ದೊಡ್ಡ ಗುರಿ.

ವಿರಾಟ್ ಆರ್‌ಸಿಬಿಗೆ ಒಬ್ಬ ಬ್ಯಾಟರ್​ ಆಗಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದರೆ, ನಾಯಕನಾಗಿ ತಂಡಕ್ಕೆ ಒಂದೇ ಒಂದು ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. 2013ರಲ್ಲಿ ನ್ಯೂಜಿಲ್ಯಾಂಡ್ ಮಾಜಿ ನಾಯಕ ಡೇನಿಯಲ್ ವೆಟ್ಟೋರಿ ನಂತರ ತಂಡದ ನಾಯಕನಾಗಿ ನೇಮಕವಾಗಿದ್ದರು. ಅಂದಿನಿಂದ, ಅವರು 9 ಋತುಗಳಲ್ಲಿ ತಂಡದ ನಾಯಕತ್ವ ವಹಿಸಿದ್ದಾರೆ. ಇದು ಖಂಡಿತ ಭಾರತ ತಂಡದ ನಾಯಕನಾಗಿರುವ ವಿರಾಟ್​​ ಕೊಹ್ಲಿಗೂ ತಮ್ಮ ಫ್ರಾಂಚೈಸಿಗೆ ಟ್ರೋಫಿ ತಂದುಕೊಡದ ನೋವು ಕಾಡುತ್ತಿರುತ್ತದೆ.

2016ರಲ್ಲಿ ವಿರಾಟ್​ ಕೊಹ್ಲಿ ನೇತೃತ್ವದಲ್ಲಿ ಆರ್​ಸಿಬಿ ಅಮೋಘ ಪ್ರದರ್ಶನ ತೋರಿ ಫೈನಲ್ ಪ್ರವೇಶಿಸಿತ್ತು. ಸ್ವತಃ ಕೊಹ್ಲಿ 900+ರನ್​ ಬಾರಿಸಿದ್ದರು. ಆದರೆ, ಆ ವರ್ಷವೂ ರನ್ನರ್​ ಅಪ್ ಆಗಿತ್ತು. ಇನ್ನು, ಕೊಹ್ಲಿ ನೇತೃತ್ವದಲ್ಲಿ ಆರ್​ಸಿಬಿ 140 ಪಂದ್ಯಗಳನ್ನಾಡಿದ್ದು, 64ರಲ್ಲಿ ಜಯ ಮತ್ತು 69ರಲ್ಲಿ ಸೋಲುಂಡಿದೆ.

ಕೊಹ್ಲಿ ದುರಾದೃಷ್ಟವೂ ಕೇವಲ ಐಪಿಎಲ್​ಗೆ ಮಾತ್ರ ಸೀಮಿತವಾಗಿಲ್ಲ. ಅವರ ನೇತೃತ್ವದಲ್ಲಿ ಭಾರತ ತಂಡ 2017ರ ಚಾಂಪಿಯನ್​ ಟ್ರೋಫಿ ಫೈನಲ್ ಮತ್ತು 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ಮತ್ತು 2021ರ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ ಫೈನಲ್​ನಲ್ಲೂ ಸೋಲು ಕಂಡಿದೆ. ಭಾರತ ತಂಡ ತನ್ನ ಕೊನೆಯ ಐಸಿಸಿ ಟ್ರೋಫಿ ಗೆದ್ದಿರೋದು 2013ರಲ್ಲಿ. ಅಂದು ಭಾರತ ತಂಡದ ನೇತೃತ್ವ ವಹಿಸಿದ್ದವರು ಎಂ ಎಸ್​ ಧೋನಿ.

ಇದೀಗ ವಿರಾಟ್​ ಕೊಹ್ಲಿ ನೇತೃತ್ವದಲ್ಲಿ ಭಾರತ ತಂಡ ಟಿ20 ವಿಶ್ವಕಪ್​ ಮೂಲಕ ಮತ್ತೊಂದು ಐಸಿಸಿ ಇವೆಂಟ್​ನಲ್ಲಿ ಅದೃಷ್ಟ ಪರೀಕ್ಷೆಗಿಳಿಯಲಿದೆ. ಇದು ಕೊಹ್ಲಿಗೆ ನಾಯಕನಾಗಿ ಕೊನೆಯ ವಿಶ್ವಕಪ್​ ಆಗಿದೆ. ಇದರಲ್ಲಾದರೂ ಭಾರತಕ್ಕೆ ಟ್ರೋಪಿ ಎತ್ತಿ ಹಿಡಿಯುವ ಮಹದಾಸೆ ಹೊಂದಿದ್ದಾರೆ. ಸಮಾಧಾಕರ ಸಂಗತಿಯೆಂದರೆ ಕೊಹ್ಲಿ ಟಿ20 ನಾಯಕತ್ವ ಧೋನಿಗಿಂತ ಉತ್ತಮವಾಗಿದೆ. ಹಾಗಾಗಿ, ಅವರು ಭಾರತಕ್ಕೆ ಈ ಬಾರಿ ವಿಶ್ವಕಪ್ ತಂದು ಕೊಡಬಹುದು ಎಂದು ಕೋಟ್ಯಂತರ ಭಾರತೀಯರು ಎದುರು ನೋಡುತ್ತಿದ್ದಾರೆ.

ಇದನ್ನು ಓದಿ:ಸೋಲಿನ ಬಳಿಕ ಆರ್​​ಸಿಬಿ ಅಭಿಮಾನಿಗಳ ಮೇಲೆ ಕೆಂಡವಾದ ಮ್ಯಾಕ್ಸಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.