ನಾಳೆ ಹೈದರಾಬಾದ್​ನಲ್ಲಿ ನಿರ್ಣಾಯಕ ಪಂದ್ಯ.. ಭಾರತ, ಆಸ್ಟ್ರೇಲಿಯಾಕ್ಕೆ ಬೌಲಿಂಗ್​ನದ್ದೇ ಚಿಂತೆ

author img

By

Published : Sep 24, 2022, 5:27 PM IST

Updated : Sep 24, 2022, 5:51 PM IST

decider-against-australia

ನಾಳೆ ಹೈದರಾಬಾದ್​ನಲ್ಲಿ ನಡೆಯುವ ಮೂರನೇ, ಅಂತಿಮ ಟಿ20 ಪಂದ್ಯದಲ್ಲಿ ಗೆಲ್ಲುವ ತಂಡ ಸರಣಿ ಜಯಿಸಲಿದೆ. ಉಭಯ ತಂಡಗಳಿಗೂ ಬೌಲಿಂಗ್​ನದ್ದೇ ಚಿಂತೆಯಿದ್ದು, ಇಲ್ಲಿ ಯಾವ ತಂಡದ ಬೌಲರ್​ಗಳು ಮಿಂಚುವರೋ ಆ ತಂಡ ಟ್ರೋಫಿಗೆ ಮುತ್ತಿಕ್ಕಲಿದೆ.

ಹೈದರಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ನಾಳೆ ಇಲ್ಲಿ ನಡೆಯುವ ಮೂರನೇ ಟಿ20 ಪಂದ್ಯ ಉಭಯ ತಂಡಗಳಿಗೆ ನಿರ್ಣಾಯಕ ಪಂದ್ಯವಾಗಿದೆ. ಇಲ್ಲಿ ಗೆಲ್ಲುವ ತಂಡಕ್ಕೆ ಸರಣಿ ಧಕ್ಕಲಿದೆ. ಬಲಿಷ್ಠ ಬ್ಯಾಟಿಂಗ್​ ಪಡೆ ಹೊಂದಿರುವ ಭಾರತಕ್ಕೆ ಬೌಲರ್​ಗಳದ್ದೇ ಚಿಂತೆಯಾಗಿದೆ.

ಮೊಹಾಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ 200 ಕ್ಕೂ ಅಧಿಕ ರನ್​ ಗಳಿಸಿದಾಗ್ಯೂ ಭಾರತ ಬೌಲರ್​ಗಳ ದಯನೀಯ ಪ್ರದರ್ಶನದಿಂದ ಹೀನಾಯ ಸೋಲು ಕಂಡಿತ್ತು. ನಾಗಪುರದಲ್ಲಿ ಮಳೆ ಕಾರಣಕ್ಕೆ 8 ಓವರ್​ಗಳಿಗೆ 2ನೇ ನಡೆದ ಪಂದ್ಯದಲ್ಲಿ ಬ್ಯಾಟರ್​ಗಳ ಪರಾಕ್ರಮದಿಂದ ತಂಡ ಗೆಲುವು ಸಾಧಿಸಿ ಸರಣಿಯನ್ನು 1-1 ರಲ್ಲಿ ಸಮಬಲ ಸಾಧಿಸಿದೆ. ಹೈದರಾಬಾದ್​ನಲ್ಲಿ ನಡೆಯುವ ಕೊನೆಯ, ಮೂರನೇ ಪಂದ್ಯ ನಿರ್ಣಾಯಕವಾಗಿದೆ.

ಹರ್ಷಲ್​, ಚಹಲ್​ ಮೇಲೆ ಕಣ್ಣು: ಟಿ20 ವಿಶ್ವಕಪ್​ಗೆ ಸಿದ್ಧತೆ ನಡೆಸುತ್ತಿರುವ ಭಾರತ, ತನ್ನ ಪಾಳಯದ ನಂಬಿಕಸ್ಥ ಬೌಲರ್​ಗಳಾದ ವೇಗಿ ಹರ್ಷಲ್​ ಪಟೇಲ್​, ಸ್ಪಿನ್​ ಅಸ್ತ್ರ ಯಜುವೇಂದ್ರ ಚಹಲ್​ ಆಟದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಆಸ್ಟ್ರೇಲಿಯಾ ವಿರುದ್ಧದ ಕಳೆದೆರಡು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಹರ್ಷಲ್​ ಪಟೇಲ್​ ದುಬಾರಿಯಾಗುತ್ತಿದ್ದಾರೆ.

ಏಷ್ಯಾಕಪ್​ನಲ್ಲಿಯೂ ಅಷ್ಟೇನೂ ಉತ್ತಮವಾಗಿ ಆಟವಾಡದ ಯಜುವೇಂದ್ರ ಚಹಲ್​ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ನಿನ್ನೆಯ ಪಂದ್ಯದಲ್ಲಿ ಇನ್ನೊಬ್ಬ ಸ್ಪಿನ್ನರ್​ ಅಕ್ಸರ್​ ಪಟೇಲ್​ 2 ವಿಕೆಟ್​ ಉರುಳಿಸಿದರೆ, ಚಹಲ್​ ಒಂದೇ ಒಂದ ವಿಕೆಟ್​ ಪಡೆದಿಲ್ಲ. ಪ್ರಮುಖ ಸ್ಪಿನ್ನರ್​ ಎಂದೇ ಗುರುತಿಸಿಕೊಂಡ ಚಹಲ್​ ಮೇಲೆ ಭಾರೀ ಒತ್ತಡವಿದೆ.

ಬೂಮ್ರಾ ರೆಡಿ, ಒತ್ತಡದಲ್ಲಿ ಭುವಿ: ಭಾರತದ ಮುಂಚೂಣಿ ವೇಗಿಗಳಲ್ಲಿ ಒಬ್ಬರಾದ ಭುವನೇಶ್ವರ್​ ಕುಮಾರ್​ ಏಷ್ಯಾಕಪ್​ನಲ್ಲಿ ದಂಡನೆಗೆ ಒಳಗಾಗಿದ್ದರು. ಅದಾದ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ದುಬಾರಿಯಾಗಿದ್ದರು. ಗಾಯಗೊಂಡು ತಂಡಕ್ಕೆ ವಾಪಸ್​​​ ಆಗಿರುವ ಜಸ್ಪ್ರೀತ್​ ಬೂಮ್ರಾ ಯಾರ್ಕರ್​ ಎಸೆದು ಬ್ಯಾಟ್ಸಮನ್​ಗಳ ದಿಕ್ಕೆಡಿಸಿದ್ದರು.

ಜಸ್ಪ್ರೀತ್​ ಬೂಮ್ರಾ ಬೌಲಿಂಗ್​ ನೇತೃತ್ವವನ್ನು ವಹಿಸಿಕೊಂಡರೂ, ಡೆತ್​ಓವರ್​ಗಳಲ್ಲಿ ಭುವನೇಶ್ವರ್​ ಕುಮಾರ್​ ಬೂಮ್ರಾಗೆ ಸಾಥ್​ ನೀಡಬೇಕಿದೆ. ಅವರ ಭರ್ಜರಿ ಕಮ್​ಬ್ಯಾಕ್​ಗಾಗಿ ಅಭಿಮಾನಿಗಳೂ ಎದುರು ನೋಡುತ್ತಿದ್ದಾರೆ. ಆಸೀಸ್​ ವಿರುದ್ಧ 2 ಪಂದ್ಯಗಳಾಡಿದರೂ ಹರ್ಷಲ್​ ಪಟೇಲ್​ ಒಂದು ವಿಕೆಟ್​ ಕೂಡ ಸಂಪಾದಿಸಿಲ್ಲ. ಇದು ತಂಡದ ತಲೆನೋವಿಗೆ ಕಾರಣವಾಗಿದೆ.

ಭಾರತದ ಬ್ಯಾಟರ್​ಗಳಿಗೆ ಅಡ್ಡಿ ಯಾರು?: ಭಾರತದ ಬ್ಯಾಟಿಂಗ್​ ವಿಭಾಗದ ಸಾಮರ್ಥ್ಯ ಪ್ರಶ್ನಿಸುವಂತಿಲ್ಲ. ಆಸೀಸ್​ ವಿರುದ್ಧದ ಮೊದಲ ಪಂದ್ಯದಲ್ಲಿ ನಾಯಕ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ಫೇಲ್​ ಆದರೂ, ಕೆ ಎಲ್​ ರಾಹುಲ್​, ಸೂರ್ಯಕುಮಾರ್​ ಯಾದವ್​, ಹಾರ್ದಿಕ್​ ಪಾಂಡ್ಯಾ ಬ್ಯಾಟ್​ ಸದ್ದು ಮಾಡಿತ್ತು.

2ನೇ ಪಂದ್ಯದಲ್ಲಿ ರೋಹಿತ್​ ಶರ್ಮಾ, ರಾಹುಲ್​, ವಿರಾಟ್​, ಕೊನೆಯಲ್ಲಿ ದಿನೇಶ್​ ಕಾರ್ತಿಕ್​ ಸಿಡಿದು ತಾವು ಯಾರಿಗೂ ಬಗ್ಗಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದರು. ಭಾರತ ತಂಡಕ್ಕೆ ಬ್ಯಾಟಿಂಗ್​ ವಿಭಾಗವೇ ಬಲ ಎಂಬುದನ್ನು ಸಾಬೀತು ಮಾಡಿದ್ದರು.

ರಿಷಬ್​ ಪಂತ್​ಗೆ ದಿನೇಶ್​ ಅಲ್ಲ, ಅಕ್ಸರ್ ಪೈಪೋಟಿ: ಆಲ್​ರೌಂಡರ್​ ರವೀಂದ್ರ ಜಡೇಜಾ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿರುವ ಅಕ್ಸರ್​ ಪಟೇಲ್​ ಬೌಲಿಂಗ್​ನಲ್ಲಿ ಯಶಸ್ವಿಯಾಗಿದ್ದು, ಬ್ಯಾಟಿಂಗ್​ ಮಾಡಿದರೆ ಅವರನ್ನು ವಿಶ್ವಕಪ್​ನಲ್ಲಿ ಆಡುವ 11ರಲ್ಲಿ ಸ್ಥಾನ ಪಡೆಯುವುದು ಖಚಿತ.

ಫಿನಿಷರ್​ ಆಗಿ ದಿನೇಶ್​ ಕಾರ್ತಿಕ್​​ ಗುರುತಿಸಿಕೊಂಡಿದ್ದು, ಇದನ್ನು ನಿನ್ನೆಯ ಪಂದ್ಯದಲ್ಲಿ ಅವರು ಸಾಬೀತು ಕೂಡ ಮಾಡಿದ್ದಾರೆ. ಎಡಗೈ ದಾಂಡಿಗ ರಿಷಬ್​ ಪಂತ್​ಗೆ ನಿಜವಾಗಿಯೂ ಸವಾಲಾಗಿರುವುದು ಅಕ್ಸರ್​ ಪಟೇಲ್​. ಪಟೇಲ್​ ಎಡಗೈ ಸ್ಪಿನ್ನರ್​ ಅಲ್ಲದೇ ಎಡಗೈ ದಾಂಡಿಗ ಕೂಡ. ತಂಡ ವಿಭಿನ್ನ ಬ್ಯಾಟಿಂಗ್​ಗೆ ಮೊರೆ ಹೋದರೆ ಅಕ್ಸರ್​ ಪಟೇಲ್​ಗೆ ಸ್ಥಾನ ಸಿಗುವುದು ಪಕ್ಕಾ.

ಮತ್ತೊಂದೆಡೆ, ಆಸ್ಟ್ರೇಲಿಯನ್ನರ ಬೌಲಿಂಗ್ ಕೂಡ ಮೊನಚು ಕಳೆದುಕೊಂಡಿದೆ. ಮೊದಲ ಪಂದ್ಯದಲ್ಲಿ 200 ಕ್ಕೂ ಅಧಿಕ ರನ್​ ಬಿಟ್ಟುಕೊಟ್ಟಿದ್ದರು. 2ನೇ ಪಂದ್ಯದಲ್ಲಿ 8 ಓವರ್​ಗಳಲ್ಲಿ 92 ರನ್​ ದಂಡಿಸಿಕೊಂಡರು. ಇದು ತಂಡಕ್ಕೆ ಅಲ್ಪ ಹಿನ್ನಡೆ ಉಂಟು ಮಾಡಿದೆ. ಕ್ಯಾಮರೂನ್​ ಗ್ರೀನ್​, ನಾಯಕ್​ ಆ್ಯರೋನ್​ ಫಿಂಚ್​, ಮ್ಯೂಥ್ಯೂ ವೇಡ್​ ಬ್ಯಾಟಿಂಗ್​ನಲ್ಲಿ ಯಶಸ್ವಿಯಾಗಿರುವುದು ನೆಮ್ಮದಿಯ ವಿಚಾರ.

2 ಪಂದ್ಯಗಳಲ್ಲಿ ವಿಫಲವಾಗಿರುವ ತಂಡದ ಪ್ರಮುಖ ಅಸ್ತ್ರವಾದ ಆಲ್​ರೌಂಡರ್​ ಗ್ಲೆನ್​ ಮ್ಯಾಕ್ಸ್​ವೆಲ್​ ವೈಫಲ್ಯ ತಂಡಕ್ಕೆ ತಲೆನೋವಾಗಿದೆ. ಮ್ಯಾಕ್ಸಿ 2 ಪಂದ್ಯಗಳಲ್ಲಿ 1 ರನ್​ ಮಾತ್ರ ಗಳಿಸಿದ್ದಾರೆ. ನಾಳೆ(ಭಾನುವಾರ) ನಡೆಯುವ ಪಂದ್ಯದಲ್ಲಿ ಅವರ ಸಾಮರ್ಥ್ಯವನ್ನು ಪ್ರದರ್ಶಿಸುವ ಒತ್ತಡದಲ್ಲಿದ್ದಾರೆ.

ತಂಡಗಳು: ಆಸ್ಟ್ರೇಲಿಯಾ: ಆ್ಯರೋನ್​ ಫಿಂಚ್ (ನಾಯಕ), ಸೀನ್ ಅಬ್ಬಾಟ್, ಆಸ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಕ್ಯಾಮರೂನ್​ ಗ್ರೀನ್, ಜೋಶ್ ಹೇಜಲ್​ವುಡ್, ​ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಕೇನ್ ರಿಚರ್ಡ್‌ಸನ್, ಡೇನಿಯಲ್ ಸ್ಯಾಮ್ಸ್, ಸ್ಟೀವ್ ಸ್ಮಿತ್, ಮ್ಯಾಥ್ಯೂ ವೇಡ್, ಆ್ಯಡಂ್​ ಜಂಪಾ.

ಭಾರತ: ರೋಹಿತ್ ಶರ್ಮಾ (ನಾಯಕ), ಕೆ ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯಾ, ರವಿಚಂದ್ರನ್ ಅಶ್ವಿನ್, ಯಜುವೇಂದ್ರ ಚಹಲ್, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ದೀಪಕ್ ಚಹರ್, ಜಸ್ಪ್ರೀತ್ ಬೂಮ್ರಾ, ಉಮೇಶ್ ಯಾದವ್.

ಪಂದ್ಯದ ಸಮಯ- ಸಂಜೆ 7 ಗಂಟೆಗೆ, ಹೈದರಾಬಾದ್​

ಓದಿ: 2007ರ ವಿಶ್ವಕಪ್​ ವಿಕ್ರಮಕ್ಕೆ ಇಂದಿಗೆ 15 ವಸಂತ.. ಪಾಸಾಗುತ್ತಾ ಮೆಲ್ಬೋರ್ನ್​ ಮಿಷನ್​?

Last Updated :Sep 24, 2022, 5:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.